ಮುಸ್ಲಿಂ ಸಮುದಾಯದ ಅವಹೇಳನ | ಸಂಸದೆ ಕಂಗನಾ ರಣಾವತ್ ವಿರುದ್ಧ ರಾಷ್ಟ್ರಪತಿಗೆ ವಕೀಲೆ ದೀಪಿಕಾ ಪುಷ್ಕರ್ ನಾಥ್ ದೂರು: ಸಾಂವಿಧಾನಿಕ ತನಿಖೆಗೆ ಆಗ್ರಹ

ದೆಹಲಿ: ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರು ಸಾರ್ವಜನಿಕವಾಗಿ ನೀಡಿರುವ ವಿವಾದಾತ್ಮಕ ಹೇಳಿಕೆಗಳು, ನಿರ್ದಿಷ್ಟ ಸಮುದಾಯದ ವಿರುದ್ಧದ ಪ್ರಚೋದನಾತ್ಮಕ ಭಾಷಣ ಹಾಗೂ ನಡವಳಿಕೆಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ಸಾಂವಿಧಾನಿಕ, ಸಂಸದೀಯ ಹಾಗೂ ಕಾನೂನು ಪರಿಶೀಲನೆ ನಡೆಸುವಂತೆ ಕೋರಿ ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲೆ ದೀಪಿಕಾ ಪುಷ್ಕರ್ ನಾಥ್ ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆರು ಪುಟಗಳ ವಿಸ್ತೃತ ಮನವಿ ಸಲ್ಲಿಸಿದ್ದಾರೆ.

ಈ ಮನವಿಯು ಯಾವುದೇ ರಾಜಕೀಯ ಭಿನ್ನಾಭಿಪ್ರಾಯ, ಸೈದ್ಧಾಂತಿಕ ವಿರೋಧ, ವೈಯಕ್ತಿಕ ದ್ವೇಷ ಅಥವಾ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಸಲ್ಲಿಸಿದ್ದಲ್ಲ ಎಂದು ಅರ್ಜಿದಾರರಾದ ವಕೀಲೆ ದೀಪಿಕಾ ಪುಷ್ಕರ್ ನಾಥ್ ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಒಬ್ಬ ಚುನಾಯಿತ ಜನಪ್ರತಿನಿಧಿ ನಿರ್ದಿಷ್ಟ ಧಾರ್ಮಿಕ ಸಮುದಾಯದ ವಿರುದ್ಧ ಅವಹೇಳನಕಾರಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದು ಸಂಸದೀಯ ಘನತೆ, ಸಾಂವಿಧಾನಿಕ ನೈತಿಕತೆ ಮತ್ತು ಜವಾಬ್ದಾರಿಯ ಗಡಿಯನ್ನು ಮೀರಿದೆಯೇ ಎಂಬುದನ್ನು ಸಾಂಸ್ಥಿಕವಾಗಿ ಪರಿಶೀಲಿಸಬೇಕಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಇತ್ತೀಚೆಗೆ ಪತ್ರಕರ್ತ ಸುಧೀರ್ ಚೌಧರಿ ಅವರೊಂದಿಗಿನ ‘ಡಿಕೋಡ್’ ಸಂದರ್ಶನದಲ್ಲಿ ನಟಿ ಕೃತಿ ಸನೋನ್ ಅವರ ರಕ್ಷಾಬಂಧನ್ ಆಭರಣ ಜಾಹೀರಾತಿನ ಕುರಿತ ಚರ್ಚೆಯ ಸಂದರ್ಭದಲ್ಲಿ ಕಂಗನಾ ರಣಾವತ್ ನೀಡಿದ ಹೇಳಿಕೆಯನ್ನು ಮನವಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಈದ್ ಹಬ್ಬದ ಜಾಹೀರಾತಿನಲ್ಲಿ ಕೃತಿ ಸನೋನ್ ಇದೇ ರೀತಿ ಕಾಣಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಮುಸ್ಲಿಂ ಸಮುದಾಯದ ಕೌಟುಂಬಿಕ ಹಾಗೂ ವೈವಾಹಿಕ ಪದ್ಧತಿಗಳ ಕುರಿತು ಕಂಗನಾ ಮಾತನಾಡಿದ್ದರು. ಜಾಹೀರಾತಿನ ಉಡುಪಿನ ವಿಷಯಕ್ಕೆ ಸಂಬಂಧಿಸಿದಂತೆ ಇಡೀ ಧಾರ್ಮಿಕ ಸಮುದಾಯವನ್ನು ಅವಹೇಳನಕಾರಿಯಾಗಿ ಬಿಂಬಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಲಾಗಿದೆ.

ಸಂವಿಧಾನದ 19(1)(ಎ) ಅಡಿಯಲ್ಲಿ ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, 19(2)ನೇ ವಿಧಿಯ ಪ್ರಕಾರ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸಮಂಜಸವಾದ ನಿರ್ಬಂಧಗಳಿವೆ ಎಂಬುದನ್ನು ಅರ್ಜಿದಾರರು ಎತ್ತಿ ತೋರಿಸಿದ್ದಾರೆ. ಸಮಾಜದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದನೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಸಂಸದರ ಮಾತುಗಳು ಮಾಧ್ಯಮಗಳು ಮತ್ತು ಜಾಲತಾಣಗಳ ಮೂಲಕ ಕ್ಷಣಾರ್ಧದಲ್ಲಿ ಲಕ್ಷಾಂತರ ಜನರನ್ನು ತಲುಪುವುದರಿಂದ, ಸಾಮಾನ್ಯ ನಾಗರಿಕರಿಗಿಂತ ಜನಪ್ರತಿನಿಧಿಗಳಿಗೆ ಹೆಚ್ಚಿನ ಸಾರ್ವಜನಿಕ ಹೊಣೆಗಾರಿಕೆ ಇರುತ್ತದೆ ಎಂದು ತಿಳಿಸಲಾಗಿದೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಆಯ್ದ ತುಣುಕುಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರುವ ಬದಲು, ಸಂಬಂಧಪಟ್ಟ ಸಂದರ್ಶನದ ಸಂಪೂರ್ಣ ವಿಡಿಯೋ, ಸಂಭಾಷಣೆಯ ಅಧಿಕೃತ ಪ್ರತಿ (transcript), ಭಾಷಣಗಳು ಹಾಗೂ ಸಾರ್ವಜನಿಕ ಹೇಳಿಕೆಗಳನ್ನು ವಶಕ್ಕೆ ಪಡೆದು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಕೋರಲಾಗಿದೆ. ಹೇಳಿಕೆಗಳು ಕಾನೂನುಬಾಹಿರವೇ, ಸಂಸದೀಯ ಹಕ್ಕುಚ್ಯುತಿ ಅಥವಾ ನಡವಳಿಕೆಯ ಮಾನದಂಡಗಳನ್ನು ಉಲ್ಲಂಘಿಸುತ್ತವೆಯೇ ಎಂಬುದನ್ನು ನಿರ್ಧರಿಸಿ, ಅಗತ್ಯವಿದ್ದಲ್ಲಿ ಸಂವಿಧಾನ ಮತ್ತು ಕಾನೂನಿನ ಪ್ರಕಾರ ಅನರ್ಹತೆ ಸೇರಿದಂತೆ ಸೂಕ್ತ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದೆ. ಅದೇ ವೇಳೆ, ನೈಸರ್ಗಿಕ ನ್ಯಾಯದ ತತ್ವದಂತೆ ಸಂಬಂಧಪಟ್ಟ ಸಂಸದೆಗೆ ತಮ್ಮ ವಿವರಣೆ ನೀಡಲು ಸೂಕ್ತ ಅವಕಾಶ ನೀಡಬೇಕು ಎಂದೂ ಉಲ್ಲೇಖಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು