ಬೆಂಗಳೂರು: ಸರ್ಕಾರಕ್ಕೆ ಕನಿಷ್ಠ ವೇತನ ಕೇಳುವಂತಿದ್ದರೆ 9 ಗಂಟೆಗಳ ಕಾಲ ಕೆಲಸ ಮಾಡುವಂತಿರಬೇಕು. ಇಲ್ಲದಿದ್ದಲ್ಲಿ ಕನಿಷ್ಠ ವೇತನ ನಿಯಮಗಳ ಅನುಸಾರ ವೇತನ ಕೇಳಲು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಮಕ್ಕಳಿಗೆ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದು, ಬಿಸಿಯೂಟ ಯೋಜನೆ ಅಡಿ ಗುತ್ತಿಗೆ ಆಧಾರದಲ್ಲಿ ಅಡುಗೆ ತಯಾರಕರು ಹಾಗೂ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕಗೊಂಡ ಬಿಸಿಯೂಟ ತಯಾರಕರು ತಮಗೆ ನೀಡುತ್ತಿರುವ ವೇತನ ಹಾಗೂ ಸವಲತ್ತುಗಳು ಸೂಕ್ತವಾಗಿಲ್ಲ ಎಂದು ಆರೋಪಿಸಿ 2018ರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಸರ್ಕಾರ ಬೇಡಿಕೆ ಈಡೇರಿಸದ ಕಾರಣ ಅಡುಗೆ ತಯಾರಕರ ಪರವಾಗಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿಲಾಗಿತ್ತು.
ಈ ಅರ್ಜಿ ಕುರಿತು ತೀರ್ಪು ನೀಡಿರುವ ಹೈಕೋರ್ಟ್, ʼ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಅನ್ವಯ ಆಗುತ್ತದೆ. ಕರ್ನಾಟಕ ಕನಿಷ್ಠ ವೇತನ ನಿಯಮಗಳು 1958ರ ಪ್ರಕಾರ ಕೆಲಸದ ಅವಧಿ 9 ಗಂಟೆ ಇರಬೇಕು. ಆದ್ದರಿಂದ ಅಡುಗೆ ತಯಾಕರು ಮತ್ತು ಸಹಾಯಕರ ಕೆಲಸದಲ್ಲಿ ಪಾಲನೆಯಾಗಿಲ್ಲ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುವವರು ದಿನಕ್ಕೆ 4 ಗಂಟೆಗಳ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಡುಗೆ ತಯಾರಿಸುವವರಿಗೆ ಕನಿಷ್ಠ ವೇತನ ಕಾಯ್ದೆ ಅಡಿ ವೇತನ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಲು ಸಾಧ್ಯವಿಲ್ಲʼ ಎಂದು ತಿಳಿಸಿದೆ.