Saturday, June 21, 2025

ಸತ್ಯ | ನ್ಯಾಯ |ಧರ್ಮ

ಕನ್ನಡದ  ʼದೊಡ್ಡʼ ಕೂಗು ಮತ್ತು ಕರ್ನಾಟಕದ  ಸಂಕಟದ ಕೂಗು

ಹಾವೇರಿಯ  ಸಾಹಿತ್ಯ ಸಮ್ಮೇಳನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಎರಡು ಮೂರು ಆಯಾಮಗಳಿಂದ ನೋಡಬೇಕಿದೆ ಎಂದು ಹೇಳುವ ಚಿಂತಕ ಕೆ.ಪಿ ಸುರೇಶ, ಕರ್ನಾಟಕದ ವಾಸ್ತವಗಳು ಪ್ರತಿದಿನವೂ ನಮ್ಮ ಕಣ್ಣೆದುರು ಹತ್ತು ಹಲವು ಸಂಕಟಗಳ ಮೂಲಕ ಅನಾವರಣಗೊಳ್ಳುತ್ತಿರುವಾಗ ಈ ಕಸಾಪವಾಗಲೀ, ಸಮ್ಮೇಳನವಾಗಲೀ ಅವುಗಳನ್ನು ಕ್ರೋಢೀಕರಿಸಿ ನುಡಿಯೆಂಬುದು ನಾಡಿನ ಸುಖ-ದುಃಖಗಳ ಮೊತ್ತವೆಂಬ ಅರಿವಿನಲ್ಲಿ  ಮುಂದಿಟ್ಟಿಲ್ಲ ಎಂದು ವಿಶ್ಲೇಷಿಸುತ್ತಾರೆ. ಈ ವಿಶೇಷ ಲೇಖನ ನಿಮ್ಮ ಓದಿಗೆ.

ಹಾವೇರಿಯ  ಸಾಹಿತ್ಯ ಸಮ್ಮೇಳನಕ್ಕೆ ಬಂದ ಪ್ರತಿಕ್ರಿಯೆ ಕರ್ನಾಟಕದ ನೆಲದ ಸಂಕಟಗಳ ಕುರಿತಾದ ಎಚ್ಚರದ  ಮೂಲದಿಂದ ಬಂದಿದೆ. ಇದನ್ನು ಎರಡು ಮೂರು ಆಯಾಮಗಳಿಂದ ನೋಡಬೇಕಿದೆ.

ಮೂಲತಃ ಇಂಥಾ ಸಮ್ಮೇಳನಗಳು ಕನ್ನಡದ ಅವಗಣನೆ ಬಗ್ಗೆ ಅದರ ಸ್ಥಾನಾಂತರದ ಬಗ್ಗೆ ವೈಯ್ಯಾರದ ಸಿಟ್ಟು ಪ್ರದರ್ಶಿಸಿ ಆಳುವವರಲ್ಲಿ ,” ಹೇಗಿತ್ತು ನನ್ನ ಪ್ರಸ್ತುತಿ?” ಎಂದು ಕೇಳುವಷ್ಟು ಅಶಕ್ತವಾಗಿವೆ. ಆಳುವವರೂ  ಸಾಂವಿಧಾನಿಕವಾಗಿಯೂ ಸಲ್ಲದ, ಅಂಥಾ ಬದಲಾವಣೆಗಳಿಗೆ ಬೇಕಾದ ಇಚ್ಛಾಶಕ್ತಿಯನ್ನು ಅನುಷ್ಠಾನದಲ್ಲಿ ತೋರದೇ ಅಲ್ಲಿ ವೇದಿಕೆಯಲ್ಲಿ ಟೊಳ್ಳು ಮಾತಾಡುತ್ತಾರೆ.  ಹೋಗಲಿ ಆಡಳಿತಾತ್ಮಕವಾಗಿ ಮಾಡಬಹುದಾದದ್ದನ್ನೂ ಮಾಡದೇ ಇದ್ದಾಗಲೂ ಇಂಥಾ ಸಮ್ಮೇಳನಗಳು ಒಂದು ಆರೋಪ ಪಟ್ಟಿಯನ್ನಾಗಲೀ, ಶೊ ಕಾಸ್‌ ನೋಟೀಸನ್ನಾಗಲೀ ಆಳುವವರಿಗೆ ಕೊಟ್ಟ ಉದಾಹರಣೆಗಳಿಲ್ಲ. ಈ ಕಾರಣಗಳಿಗಾಗಿಯೇ ಸಮ್ಮೇಳನವೊಂದು ರಾಜ ಸಭೆಯ ನರ್ತನದ ಹಾಗೆ ಭಾಸವಾಗುವುದು.

ಕರ್ನಾಟಕದ ವಾಸ್ತವಗಳು ದಿನ ದಿನಾ ನಮ್ಮ ಕಣ್ಣೆದುರು ಹತ್ತು ಹಲವು ಸಂಕಟಗಳ ಮೂಲಕ  ಅನಾವರಣಗೊಳ್ಳುತ್ತಿರುವಾಗ ಈ ಕಸಾಪವಾಗಲೀ, ಸಮ್ಮೇಳನವಾಗಲೀ ಅವುಗಳನ್ನು ಕ್ರೋಢೀಕರಿಸಿ ನುಡಿಯೆಂಬುದು ನಾಡಿನ ಸುಖ-ದುಃಖಗಳ ಮೊತ್ತವೆಂಬ ಅರಿವಿನಲ್ಲಿ  ಮುಂದಿಟ್ಟಿಲ್ಲ. ಆದ್ದರಿಂದಲೇ ಮತ್ತೆ  ಶಿಕ್ಷಣ, ಭಾಷಾವಲಯ, ಸಾಮರಸ್ಯ, ಭೌತಿಕ ಅಭಿವೃದ್ಧಿಯ  ನೆಲೆಗಳಲ್ಲಿ ಈ ಸಂಕಟಗಳನ್ನು ನೋಡಬೇಕು.

ಕರ್ನಾಟಕದಲ್ಲಿ ಈಗಲೂ ಸರಕಾರಿ ಶಾಲೆಗಳ ಬಾಹುಳ್ಯ ಹೆಚ್ಚಿದೆ. ಅವುಗಳ ದೈನೇಸಿ ಸ್ಥಿತಿಬಗ್ಗೆ ಸರಕಾರ ತೋರುತ್ತಿರುವ ಉದ್ದೇಶಪೂರ್ವಕ ಅವಜ್ಞೆ ಬಗ್ಗೆ ಕ್ರೋಧ ಹುಟ್ಟಬೇಕು. ಬಡವರ ಮಕ್ಕಳಷ್ಟೇ ಸರಕಾರಿ ಶಾಲೆಗೆ ಎಂಬುದು ದುರಂತ ಸತ್ಯವಾಗಿದೆ.  ಈ ಕಾರಣಕ್ಕೇ ಈ ಮಕ್ಕಳೂ ಸತತವಾಗಿ ಸ್ಪರ್ಧಾತ್ಮಕ ಉದ್ಯೋಗ ತಾಣಗಳಲ್ಲಿ ಹಿಂದೆ ಬೀಳುತ್ತಿದ್ದಾರೆ. ದಲಿತ, ಅಲ್ಪಸಂಖ್ಯಾತ ಹಿಂದುಳಿದ ಬಡವರೇ ಇಲ್ಲಿರುವುದು. ಆದ್ದರಿಂದಲೇ ಶಿಕ್ಷಣದ ನಿರ್ಲಕ್ಷ್ಯ ಸಾಮಾಜಿಕ ನ್ಯಾಯದ ನಿರ್ಲಕ್ಷ್ಯವಾಗಿ ರೂಪಾಂತರಗೊಳ್ಳುತ್ತಿದೆ.

ಕರ್ನಾಟಕ ಏಕೀಕರಣವಾದ ಅಂಶಗಳನ್ನು ಗುರುತಿಸಿದರೆ ಹಳೇ ಮೈಸೂರು ಪ್ರಾಂತ್ಯ ಬಿಟ್ಟು ಬಹುತೇಕ ಉಳಿದ ಭಾಗಗಳು ಬಹುಭಾಷಾ ವಲಯಗಳೇ. ಈ ಭಾಷೆಯ ಪದಭಂಡಾರ ಕ್ಲಾಸಿನೊಳಗೂ ನುಸುಳದಂತೆ ನಮ್ಮ ಶಿಕ್ಷಣ ನೋಡಿಕೊಂಡಿದೆ. ಉದಾಹರಣೆಗೆ ನನಗೆ ಗೊತ್ತಿರುವ  ಮಲೆನಾಡಿನ ಭಾಷಾ ವಲಯದ ಸ್ಥಳೀಯ ಪದಗಳೆಲ್ಲಾ ದೊಡ್ಡ ಜ್ಞಾನ ಭಂಡಾರವನ್ನು ಸೂಚಿಸುವ ಕೈಮರ. ಇವುಗಳನ್ನೆಲ್ಲಾ ಜತನದಿಂದ ಪೋಷಿಸುವ ಹೊಣೆ ಪ್ರಭುತ್ವಕ್ಕಿದೆ. ಬಹಳ ಹಿಂದೆಯೇ ಶಿವರಾಮ ಕಾರಂತರು ಕ್ಲಾಸಲ್ಲಿ ಅಳಿಲು ಎಂದು ಓದುವ ಹುಡುಗ ಹೊರಗೆ ಬಂದು ಅದನ್ನೇ ಕುಂಡಚ್ಚ ಎಂದು ಕರೆಯುವ ವ್ಯಂಗ್ಯವನ್ನು ದಾಖಲಿಸಿದ್ದರು.

ಕರ್ನಾಟಕದ ಬಹು ಭಾಗ ಮುಸ್ಲಿಂ, ಪರಿಶಿಷ್ಟ ಪಂಗಡ, ಆದಿವಾಸಿ ಸಮುದಾಯಗಳ ವಿಶಿಷ್ಟ ಸಂಸ್ಕೃತಿ, ಬದುಕು, ಭಾಷೆಗಳ ತೊಟ್ಟಿಲು. ಅವರೆಲ್ಲಾ ಕನ್ನಡದೊಳಗೇ ಸೇರಿದ್ದಾರೆ. ಆದರೆ ಆ ಶ್ರೀಮಂತಿಕೆಯನ್ನು ಕನ್ನಡದೊಳಗೆ ಸೇರಿಸಲು ಭೌತಿಕವಾದ ಒಂದು ಅಭಿವೃದ್ಧಿ ಪರಿಕಲ್ಪನೆ ಬೇಕು. ಈ  ಪರಿಕಲ್ಪನೆ ಸರಕಾರಕ್ಕೆ ಇದ್ದಂತಿಲ್ಲ. ಅದರ ಬದಲು ಸದ್ಯದ ಆಳುವ ವರ್ಗ ಸತತವಾಗಿ ಅವರ ಬಗ್ಗೆ ದ್ವೇಷ ತಾತ್ಸಾರ ಪ್ರದರ್ಶಿಸುತ್ತಿದೆ. ಯಾವುದೇ ಪುಟ್ಟ ಸಮುದಾಯಕ್ಕೂ ಅನಾಥ ಪ್ರಜ್ಞೆ  ಮೂಡಲು ಬಿಡಬಾರದೆಂಬುದೇ ಪ್ರಜಾಸತ್ತೆಯ ಮೂಲ ಮಂತ್ರ.

ಆರೆಸ್ಸೆಸ್ಸಿನ ನಾಯಕರಾಗಿದ್ದ ಹೊ.ವೆ.ಶೇಷಾದ್ರಿ ಒಂದು ಸಾಮಿತಿ ನೀಡುತ್ತಿದ್ದರು. ದೇಹದ ಯಾವುದೇ ಭಾಗಕ್ಕೆ ಪುಟ್ಟ ಸೂಜಿ ಚುಚ್ಚಿದರೂ ಇಡೀ ದೇಹವೇ ಜಿಗಿಯುತ್ತದೆ.  ಅದೇ ರೀತಿ ರಾಷ್ಟ್ರ ಪುರುಷ ಕೂಡಾ. ಯಾವುದೇ ಭಾಗದ ಒಬ್ಬನಿಗೆ ಚುಚ್ಚಿದರೂ ಇಡೀ ದೇಶ ಸ್ಪಂದಿಸಬೇಕು ಎನ್ನುತ್ತಿದ್ದರು! ಅದು ಹಿಂದೂ  ಚೌಕಟ್ಟಿನೊಳಗಿನ ಸ್ಪಂದನೆ ಎಂಬುದು ಬೇರೆ ಮಾತು. ಅದನ್ನೇ ಅವರಿಗೆ ತಿರುಗುಬಾಣವಾಗಿಸಿ ಕೇಳಿದವರಿದ್ದರು.  ಈ ಅನಾಲಜಿ ಮುಖ್ಯ. ಸಂವಿಧಾನದ ಹೆಸರಿನಲ್ಲಿ  ಚುನಾವಣೆಗೆ ನಿಂತು ಗೆದ್ದು, ಪ್ರತಿಜ್ಞಾವಿಧಿ ಸ್ವೀಕರಿಸುವ ಒಬ್ಬೊಬ್ಬನೂ ಈ ಅನಾಲಜಿಗೆ ಬದ್ಧನಾಗಿರಬೇಕು. ಭಾಜಪಕ್ಕೆ ಈ ಬದ್ಧತೆಯೇ ಇಲ್ಲ! ಆದ್ದರಿಂದಲೇ ನಾಡಿನ ನಾಗರೀಕರು ಕಾಲಕಾಲಕ್ಕೆ ನಡೆವ ದಮನ, ಬೆದರಿಕೆಗಳ ವಿರುದ್ಧ ಕೂಗು ಹಾಕಬೇಕಾಗಿ ಬಂದಿದೆ.

ಅಭಿವೃದ್ಧಿಯ ಮಾನದಂಡ ನೋಡಿದರೆ, ನಮ್ಮ ಹಳ್ಳಿಗಳ ರೈತರನ್ನು ಮಹಿಳೆಯರನ್ನು ಮಾತಾಡಿಸಿದರೆ ಅಚ್ಚಗನ್ನಡದಲ್ಲೇ ಮಹಾ ಸಂಕಟದ ಸ್ವರೂಪವೊಂದನ್ನು ಅವರು  ಮುಂದಿಡುತ್ತಾರೆ. ನೀರಿಲ್ಲ, ಬೆಳೆದದ್ದಕ್ಕೆ ಬೆಲೆ ಇಲ್ಲ; ಆಸ್ಪತ್ರೆ ಇಲ್ಲ,  ನಿತ್ಯ ಕಾಡುವ ರೋಗಗಳ ಬಾಧೆಗೂ ಪರಿಹಾರವಿಲ್ಲ ಎಂಬ ಸತ್ಯ ಭೂಕಂಪದ ಮೊರೆತದ ತರ ಕೇಳಿಸುತ್ತಿರುತ್ತದೆ.

ಇದು  ನಮ್ಮನ್ನು  ನೈತಿಕ ಒತ್ತಡಕ್ಕೆ ದೂಡಿ ಅವರ ಪರವಾಗಿ ಪ್ರಭುತ್ವಕ್ಕೂ ಪ್ರಾತಿನಿಧಿಕ  ಸಂಸ್ಥೆಗಳಿಗೂ ಮುಖಾಮುಖಿಯಾಗುವುದನ್ನು ಕಲಿಸದಿದ್ದರೆ ಏನು ಬಂತು?

ಈ ಜನಸಾಹಿತ್ಯವೂ ಸಾಹಿತ್ಯದ ಕುರಿತಾಗಿ ಇದೆ ಎಂದು ನಾನು ನಂಬಲು ಸಿದ್ಧವಿಲ್ಲ. ಅಷ್ಟೇ ಅಲ್ಲ; ಕ್ರಿಯಾಶೀಲವಾಗಿ ಜಿಲ್ಲೆ , ತಾಲೂಕು ಮಟ್ಟದಲ್ಲಿ ನಾವಿದರ ಕುರಿತು ಮಾತಾಡದಿದ್ದರೆ ಇದಕ್ಕೂ ಅರ್ಥವಿಲ್ಲ. ಸಾಹಿತ್ಯವೆಂಬುದು ಜನರ  ಸಂಕಟವನ್ನಾಧರಿಸಿದ  ಮಾರ್ಕೆಟಿಂಗ್ ಕಮೋಡಿಟಿ ಆಗಬಾರದು.

ಈ ಹಾವೇರಿ ಸಮ್ಮೇಳನ ಕಾಲದ  ಕುರದ ಕೀವು ಸೂಸುತ್ತಿರುವ ಸೂಚನೆ. 

ಸುರೇಶ ಕಂಜರ್ಪಣೆ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page