ಹೊಸದೆಹಲಿ: ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡಿದ ‘ದೇಶದ್ರೋಹ’ದ ಹೇಳಿಕೆಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಶುಕ್ರವಾರ ತಕ್ಕ ತಿರುಗೇಟು ನೀಡಿದ್ದಾರೆ.
2014 ರಿಂದ ದೇಶದ ಜನರನ್ನು ವಿಭಜಿಸಲು ಯತ್ನಿಸುತ್ತಿರುವವರೇ ನಿಜವಾದ ದೇಶದ್ರೋಹದ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಹಾತ್ಮ ಗಾಂಧಿಯವರು ಬೆಂಬಲಿಸಿದ್ದರು ಮತ್ತು ಇಡೀ ಸಂವಿಧಾನ ರಚನಾ ಸಭೆಯು ಕೂಡ ಆ ಮೊದಲ ಎರಡು ಚರಣಗಳನ್ನೇ ರಾಷ್ಟ್ರಗೀತೆಯಾಗಿ (ರಾಷ್ಟ್ರೀಯ ಗೀತೆಯಾಗಿ) ಅಂಗೀಕರಿಸಿತ್ತು; ಅಮಿತ್ ಶಾ ಅವರ ಮಾತಿನ ಪ್ರಕಾರ ನೋಡಿದರೆ, ಮಹಾತ್ಮ ಗಾಂಧಿ ಅವರೊಂದಿಗೆ ಇಡೀ ಸಂವಿಧಾನ ರಚನಾ ಸಭೆಯ ಸದಸ್ಯರೆಲ್ಲರೂ ದೇಶದ್ರೋಹಿಗಳಾಗುತ್ತಾರೆ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
