Saturday, April 27, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ

ಬೆಳಗಾವಿ : ಕರ್ನಾಟಕ – ಮಹಾರಾಷ್ಟ್ರ ಗಡಿವಿವಾದವು ತಾರಕಕ್ಕೇರಿದ್ದು, ಕರ್ನಾಟಕದ ಸರ್ಕಾರಿ ಬಸ್ಸುಗಳಿಗೆ ಮಸಿ, ಮತ್ತು ಕಲ್ಲು ತೂರಾಟ ಮಾಡಿರುವ ಹಿನ್ನಲೆಯಲ್ಲಿ, ಪ್ರತಿರೋಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹರಾಷ್ಟ್ರದ ವಾಹನಗಳಿಗೆ ಮಸಿ ಬಳಿಯುವುದರ ಜೊತೆಗೆ ಮಹರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ಹಲವು ಬಸ್‌ಗಳಿಗೆ ಅಖಿಲ ಮಹಾರಾಷ್ಟ್ರ ಮರಾಠಿಗರ ಸಂಘದ ಕಾರ್ಯಕರ್ತರು ಶುಕ್ರವಾರ ಕಪ್ಪು ಮಸಿ ಬಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಷ್ಟಲ್ಲದೆ, ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಭಾನುವಾರದಂದು ಬೆಳಗಾವಿ ಗಡಿ ಭಾಗದಲ್ಲಿನ ಮಹಾರಾಷ್ಟ್ರ ವಾಹನಗಳಿಗೆ ಕಪ್ಪು ಮಸಿ ಬಳಿದಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪ್ರತಿಕೃತಿಯನ್ನು ದಹನಗೊಳಿಸುವುದರ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ್‌ ಗುಡಗನಟ್ಟಿ,ʼಮಹಾರಾಷ್ಟ್ರಿಗರ ಪುಂಡಾಟದಿಂದ ನಮಗೆಲ್ಲ ಬೇಸರವಾಗಿದ್ದು, ಈ ಹಿನ್ನೆಲೆಯಲ್ಲಿ ಕರವೇ ವತಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಪ್ರತಿಕೃತಿಯನ್ನು ದಹನ ಮಾಡುವುದರ ಮುಖಾಂತರ ನಮ್ಮ ಹೋರಾಟವನ್ನು ಮುಂದುವರೆಸಿ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆʼ ಎಂದರು.

ಮುಂದುವರೆದು ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಇಲ್ಲಿನ ಜನರು ಯಾರು ತುಟಿ ಬಿಚ್ಚುತ್ತಿಲ್ಲ. ನೀವು ಕನ್ನಡಿಗರ ಮತವನ್ನು ಪಡೆದುಕೊಂಡು ಕರ್ನಾಟಕ ಸರ್ಕಾರದ ಅಧಿಕಾರವನ್ನು ಅನುಭವಿಸುತ್ತಿದ್ದೀರಿ. ಹಾಗಾಗಿ ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ನೀವೆಲ್ಲ ನಾಡಿನ ಪರವಾಗಿ ಮಾತನಾಡಬೇಕು. ಅದನ್ನು ಬಿಟ್ಟು, ನಾಡಿನ ಪರವಾಗಿ ಮಾತನಾಡಿದಾಗ ಬೇರೆ ಭಾಷಿಗರು ಮತವನ್ನು ಹಾಕುವುದಿಲ್ಲ ಎಂದು ತಿಳಿದುಕೊಂಡಿದ್ದರೆ, ನಾವು ಸಹ ಜಾಗೃತಿ ವಹಿಸಬೇಕಾಗುತ್ತದೆ. ಯಾವ ಪ್ರತಿನಿಧಿಗಳು ಕನ್ನಡ, ಕರ್ನಾಟಕ ಪರವಾಗಿ ಕಾರ್ಯ ನಿರ್ವಹಿಸುತ್ತಾರೋ ಅಂತಹವರಿಗೆ ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಕನ್ನಡಿಗರು ಹಾಗೂ ಕರವೇಯವರು ಮನೆಮನೆಗೂ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಕಾರಣ ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆದು, ದೆಹಲಿಗೆ ವಿಶೇಷ ನಿಯೋಗವನ್ನು ತೆಗೆದುಕೊಂಡು ಹೋಗಿ ಪ್ರಧಾನಿ ಮೋದಿಯವರಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಕಿವಿ ಹಿಂಡುವಂತಹ ಕೆಲಸ ಮಾಡಬೇಕು.ಮಹಾರಾಷ್ಟ್ರ ಸರ್ಕಾರ ಇಂತಹ ಗೂಂಡಾಗಳನ್ನು ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವ ಕೆಲಸವನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ದೀಪಕ್‌ ಗುಡಗನಟ್ಟಿ ಒತ್ತಾಯಿಸಿದ್ದಾರೆ.

https://www.facebook.com/PeepalMediaKannada/videos/664519368672565

Related Articles

ಇತ್ತೀಚಿನ ಸುದ್ದಿಗಳು