ದೆಹಲಿ: ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಮುಡಾ ಹಗರಣ ಇಂದು ದೆಹಲಿಯ ಸಂಸತ್ ಭವನದ ಎದುರೂ ಕಾಣಿಸಿಕೊಂಡಿತು.
ಕರ್ನಾಟಕ ಬಿಜೆಪಿಗೆ ಸೇರಿದ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಇಂದು ಸಂಸತ್ ಭವನದ ಎದುರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕರ್ನಾಟಕವನ್ನು ಊಟಿ ಮಾಡುತ್ತಿರುವ ಕರ್ನಾಟಕ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಸಂಸದರು ಒಕ್ಕೊರಲಿನಿಂದ ಘೋಷಣೆ ಕೂಗಿದರು. ಜೊತೆಗೆ ಕರ್ನಾಟಕದಲ್ಲಿ ಲೂಟಿ ನಡೆಯುತ್ತಿದೆ ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂದೂ ಸಂಸದರು ಘೋಷಣೆ ಕೂಗಿದರು.
ಕರ್ನಾಟಕದಲ್ಲಿ ದಲಿತರ ಹಣವನ್ನು ಲೂಟಿ ಮಾಡಲಾಗುತ್ತಿದೆ, ಹಾಗೂ ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಈ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಸಂಸದರೆಲ್ಲರೂ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಸದರಾದ ಡಾ. ಮಂಜುನಾಥ್, ಯದುವೀರ್ ಕೆಸಿ ಒಡೆಯರ್, ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸದಸ್ಯ ಜಗ್ಗೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.