Home ಅಂಕಣ ತೊಂಬತ್ತರ ದಶಕ ಮತ್ತು ಆ ನಂತರದ ಕನ್ನಡದ ಚಿಂತನೆಗಳ ಚಹರೆಗಳು  

ತೊಂಬತ್ತರ ದಶಕ ಮತ್ತು ಆ ನಂತರದ ಕನ್ನಡದ ಚಿಂತನೆಗಳ ಚಹರೆಗಳು  

0
  • ರಂಗನಾಥ ಕಂಟನಕುಂಟೆ

೧. ಸಮಾಜದಲ್ಲಿ ಸನಾತನ ವೈದಿಕ ವಿಚಾರಧಾರೆ ಮುಂಚೂಣಿಗೆ ಬಂದಿರುವ ಈ ಕಾಲಘಟ್ಟದಲ್ಲಿ ಅವೈದಿಕ ಮೂಲದ ತತ್ವಪದ ಸಾಹಿತ್ಯವನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಲಾಗಿದೆ. ಆ ಮೂಲಕ ಅವೈದಿಕ ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳಿಗೆ ಜೀವ ತುಂಬುವ ಕೆಲಸ ಮಾಡಲಾಗುತ್ತಿದೆ. ನೆಲಮೂಲ ಇಲ್ಲವೇ ದೇಸೀ ಚಿಂತನೆಗಳನ್ನು ಕಟ್ಟಿಕೊಳ್ಳುವ ಮೂಲಕ ವೈದಿಕರ ಮತ್ತು ಜಾಗತೀಕರಣದ ಸಾಂಸ್ಕೃತಿಕ ದಾಳಿಗಳನ್ನು ಎದುರಿಸಲು ಯತ್ನಿಸಲಾಗಿದೆ. ಈ ದಿಸೆಯಲ್ಲಿ ನಟರಾಜ್ ಬೂದಾಳ್, ರಹಮತ್ ತರೀಕೆರೆ, ಮೀನಾಕ್ಶಿ ಬಾಳಿ, ಕೆ. ಮರುಳಸಿದ್ದಪ್ಪ ಮತ್ತು ಕಾ. ತ. ಚಿಕ್ಕಣ್ಣ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದರು. ಇದರಿಂದ ತಳಸಮುದಾಯಗಳ ಅಧ್ಯಾತ್ಮ ಸಾಹಿತ್ಯಕ್ಕೆ ಜೀವ ಬಂದಿದ್ದು ಇದು ವ್ಯಾಪಕವಾದ ಚರ್ಚೆಗೆ ಒಳಪಡಬೇಕಿದೆ. ವೈದಿಕರ ವರ್ಣವ್ಯವಸ್ಥೆ ಮತ್ತು ದ್ವೇಶದ ನೀತಿಗಳಿಂದ ಜನರನ್ನು ರಕ್ಶಿಸಿದ್ದು ಅವೈದಿಕ ಚಿಂತನೆಗಳೇ. ಇವು ಧಾರ್ಮಿಕತೆಯ ಪ್ರಾಗ್ಮಾಯಿಂಟಿಕ್ ಆಶಯಗಳಿಂದ ರೂಪುಗೊಂಡಿದ್ದು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದವು. ಪ್ಯಾನ್ ಇಂಡಿಯನ್ ಆದ ವೈದಿಕ ಚಿಂತನೆ ಮತ್ತು ದಾಳಿಯನ್ನು ಈ ಸ್ಥಳೀಯ ಚಿಂತನೆಗಳು ದಿಟ್ಟವಾಗಿ ಎದುರಿಸಿದ್ದವು. ಇವುಗಳದು ನೆಲಮೂಲದಲ್ಲಿ ಬೇರುಬಿಟ್ಟ ವಿಕೇಂದ್ರೀಕೃತ ನೆಲೆ. ಇಂತಹ ನೆಲೆಗಳ ಕಡೆಗೆ ಕನ್ನಡ ಮನಸ್ಸು ಮುಖಮಾಡಿರುವುದು ಎದ್ದು ಕಾಣಿಸುತ್ತಿದೆ.

೨. ಕನ್ನಡ ಜಗತ್ತು ಹೊರಗಿನ ಚಿಂತನೆಗಳಿಂದ ಹೆಚ್ಚು ಪ್ರಭಾವಿತಗೊಂಡಿದ್ದು, ತನ್ನದೇ ಚಿಂತನೆಗಳನ್ನು ರೂಪಿಸಿಕೊಳ್ಳುವಲ್ಲಿ ಅದು ಹಿಂದೆ ಬಿದ್ದಿದೆ. ಅದರಲ್ಲಿಯೂ ಆಧುನಿಕ ಸಂದರ್ಭದಲ್ಲಿ ಪಶ್ಚಿಮದ ಚಿಂತನೆಗಳ ಮೇಲೆ ಅವಲಂಬನೆ ಹೆಚ್ಚು. ಅದಕ್ಕೆ ಬದಲಿಯಾಗಿ ಕನ್ನಡದ್ದೇ ಆದ ಚಿಂತನೆಯನ್ನು ರೂಪಿಸಿಕೊಳ್ಳಬೇಕು ಎಂಬ ಉಮೇದಿನಿಂದ ‘ಕರ್ನಾಟಕ ಓದು’ ಪರಿಕಲ್ಪನೆಯನ್ನು ಕಳೆದ ದಶಕದಲ್ಲಿ ಮುಂಚೂಣಿಗೆ ತರಲಾಗಿತ್ತು. ಅದರ ನೇತೃತ್ವವನ್ನು ಹೆಸರಾಂತ ಚಿಂತಕ ಕೆ. ವಿ. ನಾರಾಯಣ ಅವರು ವಹಿಸಿದ್ದರು. ಅವರ ನೇತೃತ್ವದಲ್ಲಿ ಹಲವು ಅಧ್ಯಯನ ಕಮ್ಮಟಗಳು ನಡೆದವು. ಆದರೆ ನಂತರ ಅದು ಹೆಚ್ಚು ಮುಂದುವರಿಯಲಿಲ್ಲ. ಇದೇ ಸಂದರ್ಭದಲ್ಲಿ ಡಿ. ಎನ್. ಶಂಕರ ಬಟ್ ಅವರು ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂಬ ಚಿಂತನೆಯನ್ನು ಮುಂದಿಟ್ಟರು. ನಂತರ ಅದೇ ತಾತ್ವಿಕತೆಯ ಆಧಾರದ ಮೇಲೆ ‘ಎಲ್ಲರ ಕನ್ನಡ’ದ ವಿಚಾರವನ್ನೂ ಮುಂದಿಟ್ಟರು. ಸಂಸ್ಕೃತಮಯವಾಗಿರುವ ಕನ್ನಡ ವ್ಯಾಕರಣ ಮತ್ತು ಲಿಪಿ ವ್ಯವಸ್ಥೆಯನ್ನು ಕನ್ನಡೀಕರಿಸುವ ಆಶಯದಿಂದ ‘ಎಲ್ಲರ ಕನ್ನಡ’ ಚಿಂತನೆಯನ್ನು ಮುಂದಿಟ್ಟಿದ್ದಾರೆ. ಶಂಕರ ಬಟ್ ಅವರ ಆಶಯವಾಗಿ ಹೊರಹೊಮ್ಮಿದ ಈ ಚಿಂತನೆ ಇಂದು ಕನ್ನಡದಲ್ಲಿ ದೊಡ್ಡ ವಾಗ್ವಾದವನ್ನು ಹುಟ್ಟಿಹಾಕಿದೆ. ಇದರ ನಂತರ ಶ. ಶೆಟ್ಟರ್ ಅವರು ವೈದಿಕರ ಪ್ಯಾನ್ ಇಂಡಿಯನ್ ಚರಿತ್ರೆಗೆ ಬದಲಿಯಾಗಿ ಕನ್ನಡದ ಮತ್ತು ದ್ರಾವಿಡ ಮೂಲದ ಚರಿತ್ರೆಯನ್ನು ಮುಂದಿಟ್ಟರು. ಅವರ ಶಂಗಂ ತಮಿಳಗಂ ನಿಂದ ಅವರ ಪ್ರಾಕೃತ ಜಗತ್ವಲಯಗಳವರೆಗೂ ಅದನ್ನು ವಿಸ್ತರಿಸಿ ಕನ್ನಡ-ಕರ್ನಾಟಕಗಳ ಬಹುತ್ವದ ಚರಿತ್ರೆಯನ್ನು ರೂಪಿಸಲು ಪ್ರಯತ್ನಿಸಿದರು. ಇದನ್ನು ಗಮನಿಸಿದರೆ ಕನ್ನಡದ್ದೇ ಚಿಂತನೆಯನ್ನು ಕಟ್ಟಿಕೊಳ್ಳುವ ಇಂಗಿತವನ್ನು ಕನ್ನಡ ಮನಸ್ಸು ಹೊಂದಿರುವುದು ಸ್ಪಶ್ಟವಾಗುತ್ತದೆ.

೩. ವೈದಿಕ ತಾತ್ವಿಕತೆಗೆ ಬದಲಿಯಾಗಿ ಬೌದ್ಧ ತಾತ್ವಿಕತೆಯನ್ನು ಕಟ್ಟಲು ಯತ್ನಿಸಲಾಗುತ್ತಿದೆ. ಇದನ್ನು ನಟರಾಜ್ ಬೂದಾಳ್ ಅವರು ಬಹಳ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಅವರ ಹಲವು ಕೃತಿಗಳು ಬೌದ್ಧ ತಾತ್ವಿಕತೆಯನ್ನು ಕಟ್ಟಿಕೊಳ್ಳುವುದರ ಭಾಗವಾಗಿ ಹುಟ್ಟಿವೆ. ಲಕ್ಷ್ಮೀಪತಿ ಕೋಲಾರ ಅವರು ದ್ರಾವಿಡ ಮೂಲದ ಚಿಂತನೆ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಅವರೂ ಬೌದ್ಧ, ಆಜೀವಿಕ, ದಕ್ಶಿಣ ದಂಡಾಜೀವಿಕ ಪಂಥಗಳ ಚಿಂತನೆಗಳನ್ನು ಮುಂಚೂಣಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಪದ್ಮಾಲಯ ನಾಗರಾಜ್ ಅವರು ಅಚಲ ಪರಂಪರೆ ಹಾಗೂ ತತ್ವಪದಕಾರರ ವಿಚಾರ ಧಾರೆಗಳನ್ನು ಮರುಶೋಧಿಸುವ ಕೆಲಸದಲ್ಲಿ ತೊಡಗಿದ್ದಾರೆ. ರಹಮತ್ ತರೀಕೆರೆ ಅವರು ಸೂಫಿ, ನಾಥ, ಶಾಕ್ತ ಮತ್ತು ಗುರುಪಂಥಗಳ ಮೇಲೆ ಅಧ್ಯಯನ ಮಾಡುವ ಮೂಲಕ ಅವೈದಿಕ ಚಿಂತನೆಗಳಿಗೆ ಸೈದ್ದಾಂತಿಕ ತಳಹದಿ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಈ ಕಾಲದಲ್ಲಿ ಮುಂಚೂಣಿಗೆ ಬಂದಿರುವ ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳ ದಾರ್ಶನಿಕ ಚಿಂತನೆಗಳ ಅಗತ್ಯವನ್ನು ಈಡೇರಿಸುವ ಸಲುವಾಗಿ ಬೌದ್ಧ ಚಿಂತನೆಯನ್ನು ಮುನ್ನೆಲೆಗೆ ತರಲಾಗುತ್ತಿದೆ. ದಲಿತ ಸಮುದಾಯ ‘ಬುದ್ಧಮಾರ್ಗ’ವನ್ನು ಸಂಸ್ಕೃತಿಯಾಗಿ ಸ್ವೀಕರಿಸುತ್ತಿದೆ.

ಇದರ ಮುಂದುವರಿಕೆಯಾಗಿ ಕನ್ನಡದ ಕವಿಗಳು ಮತ್ತು ಚಿಂತಕರು ತಮ್ಮ ಸಾಹಿತ್ಯ ದರ್ಶನದ ಭಾಗವಾಗಿ ಬುದ್ಧ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದೆ ತರುತ್ತಿದ್ದಾರೆ. ಸದ್ಯ ಬುದ್ಧ ಮತ್ತು ಅಂಬೇಡ್ಕರ್ ಸಾಹಿತ್ಯದಲ್ಲಿ ಸಾಂಕೇತಿಕವಾದ ಜಾಗ ಮಾತ್ರ ಪಡೆದಿದ್ದಾರೆ. ಮನೆಗಳ ಗೋಡೆಗಳಲ್ಲಿ ಚಿತ್ರಗಳನ್ನು ನೇತುಹಾಕಿದಂತೆ ಬುದ್ಧ-ಅಂಬೇಡ್ಕರ್ ಅವರ ‘ಚಿತ್ರಗಳನ್ನು ಕಾವ್ಯದಲ್ಲಿ ನೇತುಹಾಕಲಾಗುತ್ತಿದೆ. ಅವರ ಚಿಂತನೆಗಳು ಕವಿಗಳ ಜೀವನ ದರ್ಶನವಾಗಿ ಕನ್ನಡ ಕಾವ್ಯದಲ್ಲಿ ಆಳವಾಗಿ ಇನ್ನೂ ಬೇರೂರಿಲ್ಲ. ಬುದ್ಧ ಮತ್ತು ಅಂಬೇಡ್ಕರ್ ಕುರಿತ ಒಲವಿದೆ. ಆದರೆ ಈ ಬಗ್ಗೆ ಅಧ್ಯಯನಗಳು ಹೆಚ್ಚಿ ದಾರ್ಶನಿಕರ ವಿಚಾರಗಳು ಲೇಖಕರ ಅಂತಸ್ಥ ದರ್ಶನ ಸಾಮರ್ಥ್ಯವಾದಾಗ ಅದು ಸಾವಯವ ಅಭಿವ್ಯಕ್ತಿಯ ರೂಪ ಪಡೆದುಕೊಳ್ಳಬಹುದು. ಅದು ಮುಂದಿನ ದಿನಗಳಲ್ಲಿ ಇನ್ನಶ್ಟು ಆಳವಾಗಿ ಬೇರೂರುವ ಸಾಧ್ಯತೆಗಳು ಇವೆ. ಸನಾತನ ವೈದಿಕರ ಮೇಲಾಟ ಹೆಚ್ಚಿದಂತೆ ‘ಬುದ್ಧಮಾರ್ಗ’ ಹೆಚ್ಚು ಪ್ರಿಯವಾಗಿ ಸ್ವಾಗತವಾಗುತ್ತಿರುವಂತೆ ಕಾಣುತ್ತಿದೆ. ತಳಸಮುದಾಯಗಳು ಬೌದ್ಧಿಕವಾಗಿ ಕ್ರಿಯಾಶೀಲವಾಗುತ್ತಿರುವ ಹೊತ್ತಿನಲ್ಲಿ ಅಂಬೇಡ್ಕರ್ ಮತ್ತು ಬುದ್ಧನ ವಿಚಾರಧಾರೆಗಳು ಮುಂಚೂಣಿಗೆ ಬರುತ್ತಿರುವುದು ಗಮನಾರ್ಹ ಅಂಶ.

ಹೀಗೆ ಬುದ್ಧ-ಅಂಬೇಡ್ಕರ್ ಸ್ವಾಗತಾರ್ಹವಾಗಿದ್ದರೂ ನವೋದಯದ ಸಂದರ್ಭದಲ್ಲಿ ಗಾಂಧಿ, ನವ್ಯದ ಸಂದರ್ಭದಲ್ಲಿ ರಾಮಮನೋಹರ್ ಲೋಹಿಯಾ, ದಲಿತ ಬಂಡಾಯ ಸಾಹಿತ್ಯ ಚಳವಳಿಯ ಕಾಲಘಟ್ಟದಲ್ಲಿ ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ರ ಪ್ರಭಾವ ನಿಚ್ಚಳವಾಗಿ ಎದ್ದು ಕಾಣಿಸುತ್ತಿದ್ದಂತೆ ಇಂದು ಈ ಇಬ್ಬರ ಪ್ರಭಾರ ಎದ್ದು ಕಾಣಿಸುತ್ತಿಲ್ಲ. ಅಲ್ಲದೆ ಇಂದು ಯಾರೇ ಒಬ್ಬರ ಚಿಂತನೆಯನ್ನು ಸಾಹಿತ್ಯದ ದರ್ಶನವಾಗಿಸಿಕೊಳ್ಳುತ್ತಿರುವುದು ಕಾಣುತ್ತಿಲ್ಲ. ಬುದ್ಧ, ಅಂಬೇಡ್ಕರ್ ಮತ್ತು ಗಾಂಧಿಯವರ ನೆರಳು ಕಂಡರೂ ಅವರ ಚಿಂತನೆಗಳನ್ನು ಇಡಿಯಾಗಿ ಸಾಹಿತ್ಯ ದರ್ಶನವಾಗಿ ಅಳವಡಿಸಿಕೊಂಡಿರುವುದು ಕಡಿಮೆ. ಅಲ್ಲದೆ ತಮ್ಮದೇ ಆದ ಒಂದು ದರ್ಶನವನ್ನು ತಾತ್ವಿಕತೆಯನ್ನು ಕನ್ನಡದ ಕವಿಗಳು ನಿಚ್ಚಳವಾಗಿ ಮಂಡಿಸುತ್ತಲೂ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಮನೋನಿಶ್ಟವಾದ ವ್ಯಕ್ತಿಕೇಂದ್ರಿತವಾದ ಚಿಂತನೆಗಳೇ ಪ್ರಧಾನವಾಗಿವೆ. ಇಂದು ಸಾಮಾಜಿಕವಾಗಿ ಅಂಬೇಡ್ಕರ್ ಓದು ಮತ್ತು ಅಭಿಯಾನಗಳು ನಡೆದರೂ ಅದರ ಪ್ರಭಾವಗಳು ದಲಿತ ಸಮುದಾಯಗಳಿಂದ ಬಂದ ಲೇಖಕರನ್ನು ಹೊರತುಪಡಿಸಿ ಉಳಿದವರನ್ನು ದಟ್ಟವಾಗಿ ಆವರಿಸಿರುವುದು ಬಹಳ ಕಡಿಮೆ. ಹಾಗಾಗಿ ಅಂಬೇಡ್ಕರ್ ಕೂಡ ಕನ್ನಡ ಸಾಹಿತ್ಯವನ್ನು ವ್ಯಾಪಕವಾಗಿ ಆವರಿಸಿಕೊಂಡಿರುವುದು ಕಡಿಮೆ. ತಳಸಮುದಾಯಗಳಿಂದ ಬಂದವರಲ್ಲಿ ಮಾತ್ರ ಅಂಬೇಡ್ಕರ್ ಅವರ ವಿಚಾರಗಳ ಪ್ರಭಾವ ಕಾಣಿಸುತ್ತದೆ. ಉಳಿದಂತೆ ನಿರ್ದಿಶ್ಟ ವೈಚಾರಿಕತೆ ಮತ್ತು ಸೈದ್ದಾಂತಿಕ ನೆಲೆಗಳನ್ನು ಮೀರಿ ಸಂಕರ ಮತ್ತು ಸಂಕೀರ್ಣವಾದ ಮನೋನಿಶ್ಟವಾದ ಚಿಂತನಾಕ್ರಮವು ಇಂದು ಕನ್ನಡದಲ್ಲಿ ಹರಿಯುತ್ತಿದೆ. 

೪. ಕೆಲವರನ್ನು ಹೊರತುಪಡಿಸಿದರೆ ಇಂದು ಕನ್ನಡದ ಬೌದ್ಧಿಕ ಜಗತ್ತಿನಲ್ಲಿ ಗುರುತಿಸಿಕೊಂಡು ಕೆಲಸ ಮಾಡುವವರಿಗೆ ದೊಡ್ಡ ಕನಸುಗಳು ಮತ್ತು ಮಹತ್ವಾಕಾಂಕ್ಶೆಗಳು ಇದ್ದಂತೆ ಕಾಣುವುದಿಲ್ಲ. ಗೋವಿಂದ ಪೈ, ಬಿ.ಎಂ.ಶ್ರೀ., ಶಂ. ಬಾ. ಜೋಶಿ, ಶ. ಶೆಟ್ಟರ್ ಮುಂತಾದವರಿಗೆ ದೊಡ್ಡ ಕನಸುಗಳಿದ್ದವು. ‘ಕನ್ನಡ ಮಾತು ತಲೆಯೆತ್ತುವ ಬಗೆ’ಗೆ ಧ್ಯಾನಿಸಿ ದುಡಿದವರು. ನಂತರದಲ್ಲಿ ಯು. ಆರ್. ಅನಂತಮೂರ್ತಿ, ಡಿ.ಆರ್. ನಾಗರಾಜ್ ಅವರಿಗೆ ಆ ಬಗೆಯ ಮಹತ್ವಾಕಾಂಕ್ಶೆಗಳಿದ್ದವು. ಕಿರಂ ನಾಗರಾಜ್ ಅವರು ಗೆದ್ದಲು ಹುತ್ತಗಟ್ಟಿದಂತೆ ಚಿಂತನೆಗಳನ್ನು ಕಟ್ಟುತ್ತಿದ್ದರು. ಅವರಿಗೆ ಜ್ಞಾನ ರೂಪಿಸುವಲ್ಲಿ ಮಹತ್ವದ ಬಯಕೆಗಳಿದ್ದವು. ಸದ್ಯ ಕನ್ನಡ ನುಡಿಯರಿಮೆ ವಿಚಾರದಲ್ಲಿ ಡಿ.ಎನ್. ಶಂಕರ ಬಟ್ ಅವರಿಗೆ ಅಂತಹ ಗುರಿಗಳಿವೆ. ನಂತರದಲ್ಲಿ ಎಚ್. ಎಸ್. ಶ್ರೀಮತಿ ಅವರಿಗೆ ಆ ಬಗೆಯ ಗುರಿಗಳಿವೆ. ಶ್ರೀಮತಿ ಅವರು ಅನುವಾದಗಳ ಮೂಲಕ ಕನ್ನಡದಲ್ಲಿ ಸ್ತ್ರೀವಾದಕ್ಕೆ ಬೇಕಾದ ಗಟ್ಟಿಯಾದ ತಳಹದಿ ರೂಪಿಸುತ್ತಿದ್ದಾರೆ. ಆದರೆ ಇಂತಹವರ ಸಂಖ್ಯೆ ಬೆರಳೆಣಿಕೆಯಶ್ಟು ಮಾತ್ರ. ಇವರ ನಂತರದ ಕಿರಿಯ ತಲೆಮಾರಿನಲ್ಲಿ ಹೊಸ ಚಿಂತನೆಗಳನ್ನು, ಆಕರಗಳನ್ನು ಸೃಶ್ಟಿಸುವಂತಹ ಮಹತ್ವದ ಸಂಶೋಧನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕಿಕೊಳ್ಳಬೇಕಿದೆ. ಯಾಕೆಂದರೆ ಇಪ್ಪತ್ತೊಂದನೆಯ ಶತಮಾನವನ್ನು ಜ್ಞಾನದ ಶತಮಾನ ಎನ್ನಲಾಗುತ್ತದೆ. ಅಂತಹ ಶತಮಾನದಲ್ಲಿ ನಾವು ಕನ್ನಡದಲ್ಲಿ ಹೊಸ ಜ್ಞಾನವನ್ನು ಸೃಶ್ಟಿಸದಿದ್ದರೆ ಕನ್ನಡ ಈ ಕಾಲದಲ್ಲಿ ತಲೆಯೆತ್ತಿ ನಿಲ್ಲುವುದಾದರೂ ಹೇಗೆ? ಕನ್ನಡ ಸದಾ ಅನ್ಯ ಭಾಶೆಗಳಿಂದ ಅರಿವು ಪಡೆವ ಭಾಶೆಯಾಗಿಯೇ ಉಳಿಯಬೇಕೆ? ನೀಡುವ ನುಡಿಯಾಗಿ ಬೆಳೆಯಬಾರದೇ? ಅದನ್ನು ಈ ಕಾಲದಲ್ಲಿ ಬೆಳೆಸಬಾರದೇ? ಕನ್ನಡದಲ್ಲಿ ಒರಿಜಿನಲ್ ಆದ ಚಿಂತನೆಗಳು ಹುಟ್ಟಬಾರದೇ? ಈ ಬಿಕ್ಕಟ್ಟುಗಳನ್ನು ಮೀರುವ ಬಗೆಗೆ ಅಲ್ಲಲ್ಲಿ ಮಾತುಗಳು ಕೇಳಿ ಬಂದರೂ ಮೀರಿದ ಬಗೆಗೆ ದಾಖಲೆಗಳಿಲ್ಲ. ಕನ್ನಡ ಸಂಶೋಧನೆ ಮತ್ತು ವಿಮರ್ಶೆ ವಲಯ ದುರ್ಬಲವಾಗಿರುವುದರ ಬಗ್ಗೆ ಬಹುತೇಕರು ಪ್ರಸ್ತಾಪಿಸುವುದನ್ನು ಇಲ್ಲಿ ನೆನಪಿಡಬೇಕು. ಇಂತಹ ದುಸ್ಥಿತಿಗೆ ಕಾರಣ ನಮ್ಮ ನೆಲದಲ್ಲಿರುವ ವಿಶ್ವವಿದ್ಯಾಲಯಗಳ ಅವನತಿಯೂ ಒಂದು ಕಾರಣ.

೫. ಇಪ್ಪತ್ತನೆಯ ಶತಮಾನದಲ್ಲಿ ಮುಂಚೂಣಿಗೆ ಬಂದಿದ್ದ ನವೋದಯ ಮತ್ತು ನವ್ಯ ಸಾಹಿತ್ಯಗಳ ಸಂದರ್ಭದಲ್ಲಿ ಪಶ್ಚಿಮದ ಸಾಹಿತ್ಯ ಚಿಂತನೆಗಳ ಪ್ರಭಾವ ಹೆಚ್ಚಿತ್ತು. ಇಂದು ಅಂತಹ ಚಿಂತನೆಗಳ ಪ್ರಭಾವ ಇಲ್ಲ. ಅನುವಾದಗಳ ಪ್ರಮಾಣ ಹೆಚ್ಚಿದ್ದರು ಹೊರಗಿನ ಚಿಂತನೆಗಳನ್ನು ಹೆಚ್ಚಾಗಿ ಆವಾಹಿಸಿಕೊಳ್ಳುವ ಅವುಗಳ ಭಾರ ಹೊರುವ ಉಮೇದು ಕಾಣುತ್ತಿಲ್ಲ. ಬದಲಿಗೆ ಬುದ್ಧ, ಅಂಬೇಡ್ಕರ್, ಬಸವಣ್ಣ, ಕುವೆಂಪು ಮುಂತಾದ ದೇಸೀ ಮೂಲಗಳ ಚಿಂತನೆಗಳಿಂದ ಪ್ರಭಾವಗೊಳ್ಳುತ್ತಿದೆ. ಕತೆ, ಕಾವ್ಯ, ವಿಮರ್ಶೆ, ಸಂಶೋಧನೆ ಎಲ್ಲ ಪ್ರಕಾರಗಳಲ್ಲಿಯೂ ಇದು ಕಾಣಿಸುತ್ತಿದೆ. ಡಿ. ಆರ್. ನಾಗರಾಜ್ ಪಶ್ಚಿಮದ ಚಿಂತನೆಗಳನ್ನು ಎದುರುಗೊಂಡು ದೇಸಿ ಚಿಂತನೆಗಳನ್ನು ಮಂಡಿಸುತ್ತಿದ್ದರು. ಈಗ ಕನ್ನಡ ವಿಮರ್ಶೆಯಲ್ಲಿ ಹಾಗೆ ಪಶ್ಚಿಮದ ಚಿಂತನೆಗಳನ್ನು ಮುಖಾಮುಖಿಗೊಳ್ಳುವ ಸಂದರ್ಭಗಳು ಬಹಳ ಕಡಿಮೆ. ಇಂಗ್ಲಿಶ್ ಸಾಹಿತ್ಯದ ವಿದ್ಯಾರ್ಥಿಗಳು ಕನ್ನಡದಲ್ಲಿ ವಿಮರ್ಶೆಗೆ ತೊಡಗುವ ಪ್ರಯತ್ನ ನಿಲ್ಲಿಸಿದ ಪರಿಣಾಮವಾಗಿ ಇಂತಹ ಪಲ್ಲಟ ಸಂಭವಿಸಿರಬಹುದು. ಹಾಗೆಯೇ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಏಕಭಾಶಿಕ ವಿದ್ಯಾರ್ಥಿಗಳಾಗಿದ್ದು ಅವರು ಇಂಗ್ಲಿಶ್ ಓದಿನಿಂದ ದೂರಾಗಿರುವುದು ಈ ಪಲ್ಲಟಕ್ಕೆ ಕಾರಣವಾಗಿರಬಹುದು. ಈ ನಡುವೆ ಗಾಂಧಿ, ಲೋಹಿಯಾ ಮತ್ತು ಕಾರ್ಲ್ ಮಾರ್ಕ್ಸ್ ಅವರ ಪ್ರಭಾವಗಳು ಕಡಿಮೆಯಾಗಿವೆ. ಜನಚಳವಳಿಗಳ ಕಾವು ತಗ್ಗಿ ಸೈದ್ಧಾಂತಿಕ ಚರ್ಚೆಗಳು ಕ್ಶೀಣವಾದ ಪರಿಣಾಮ ಇವರ ವಿಚಾರಗಳು ಹಿಂದೆ ಸರಿದಂತೆ ಕಾಣುತ್ತಿವೆ. ಅಲ್ಲದೆ ಇಂದು ಯಾವುದೋ ಒಂದು ಸಿದ್ಧಾಂತ ಇಡಿಯಾಗಿ ಎಲ್ಲರನ್ನೂ ಪ್ರಭಾವಿಸುವ ಸ್ಥಿತಿಯಲ್ಲಿಲ್ಲ. ಇದಕ್ಕೆ ನಮ್ಮ ಸಾಮಾಜಿಕ ವಿನ್ಯಾಸವೂ ಬಹುಮುಖ್ಯ ಕಾರಣ. ವಿವಿಧ ಜಾತಿ ಸಮುದಾಯಗಳ ನೆಲೆಗಳಿಂದ ಬಂದಿರುವ ಲೇಖಕರು ತಮಗೆ ಹೊಂದಿಕೆಯಾಗುವ ಚಿಂತನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂದಿನ ಚಿಂತನೆಗಳಲ್ಲಿ ಏಕರೂಪಿತನವಿಲ್ಲ. ಬಹುತ್ವವಿದೆ. ಆದರೆ ಈ ಬಹುತ್ವದ ನಡುವೆ ಸಹಯಾನವಿರದೆ ಸಂಘರ್ಶದ ಗುಣವಿದೆ. ಈ ಸಂಘರ್ಶ ಸಮುದಾಯಗಳ ಅಸ್ಮಿತೆಯ ಹುಡುಕಾಟದ ಭಾಗವೇ ಆಗಿದೆ.

೬. ಇಂದು ಸಾಹಿತ್ಯ ಸಿದ್ಧಾಂತಗಳ ಚರ್ಚೆ ನಡೆಯುತ್ತಿಲ್ಲ. ಹೊಸ ಚಿಂತನೆಗಳನ್ನು ಕಟ್ಟಿಕೊಳ್ಳುವ ಉಮೇದು ನಿಚ್ಚಳವಾಗಿ ಕಾಣಿಸುತ್ತಿಲ್ಲ. ಮೇಲೆ ಚರ್ಚಿಸಿದಂತೆ ಕನ್ನಡ ಸಾಹಿತ್ಯ ಮೀಮಾಂಸೆಯ ಮತ್ತು ಅವೈದಿಕ ಚಿಂತನೆಗಳನ್ನು ಕಟ್ಟಿಕೊಳ್ಳುವ ಪ್ರಯತ್ನಗಳು ಅಲ್ಲಲ್ಲಿ ಕಾಣಿಸಿದರೂ ಅಂತಹ ಪ್ರಯತ್ನಗಳನ್ನು ಸೋಲಿಸುವ ಪ್ರಯತ್ನಗಳೂ ಜೋರಾಗಿವೆ. ಇಂತಹ ಹೊತ್ತಿನಲ್ಲಿ ಬೌದ್ಧಿಕ ವಾಗ್ವಾದಗಳು ನಡೆಯದೆ ಪರಸ್ಪರ ದೂಶಣೆಗಳೇ ಹೆಚ್ಚಿರುತ್ತವೆ. ಕುವೆಂಪು ಮಾಸ್ತಿಯವರ ನಡುವೆ ನಡೆದಂತಹ ಆರೋಗ್ಯಕರ ವಾಗ್ವಾದಗಳು ಇಂದು ನಡೆಯುವುದಿಲ್ಲ. ಯಾವುದೇ ಹೊರ ವಿಚಾರ ಸೃಶ್ಟಿಗೆ ವಾಗ್ವಾದಗಳು ಅಗತ್ಯ. ವೈಚಾರಿಕ ಚಕಮಕಿ ನಡೆಸಿ ಹೊಸ ಚಿಂತನೆಗಳನ್ನು ಕಟ್ಟಿಕೊಳ್ಳಲು ಸಾಧ್ಯ. ಅಲ್ಲದೆ ಬೌದ್ಧಿಕ ವಾಗ್ವಾದಕ್ಕೆ ಬೇಕಾದ ದಿಟ್ಟತೆ ಮತ್ತು ಧೀಮಂತಿಕೆಗಳನ್ನು ತೋರಿಸುತ್ತಿಲ್ಲ. ಕಂಫರ್ಟ್ ಜೋನಿನ ಒಳಗೆ ಜೀವಿಸುತ್ತ ಅನುಕೂಲಕರ ಚಿಂತನೆಗಳನ್ನು ಮಂಡಿಸುವುದೇ ಹೆಚ್ಚು ನಡೆದಿದೆ. ಇದರ ಇನ್ನೊಂದು ತುದಿಯಲ್ಲಿ ಅಂಬೇಡ್ಕರ್‌ವಾದಿಗಳು ಗಾಂಧಿಯನ್ನು ನಿಂದಿಸುವ, ಲೋಹಿಯಾವಾದಿಗಳು ಮಾರ್ಕ್ಸ್ವಾದಿಗಳನ್ನು ಟೀಕಿಸುವ, ಮಾರ್ಕ್ಸ್ವಾದಿಗಳು ಎಲ್ಲರನ್ನೂ ನಿರಾಕರಿಸುವ ಮೂಲಕ ಚರ್ಚೆಗಳು ನಂದಿ ಹೋಗುತ್ತಿವೆ. ಸೈದ್ಧಾಂತಿಕ ದ್ವೇಶ ಎದ್ದು ಕಾಣುತ್ತದೆಯೇ ಹೊರತು ಸೈದ್ಧಾಂತಿಕ ಮಂಥನ ಮತ್ತು ಒಳಗೊಳ್ಳುವಿಕೆ ಹಾಗೂ ತಮ್ಮ ಚಿಂತನೆಗಳನ್ನು ಸರಿದಾರಿಯಲ್ಲಿ ಬದಲಿಸಿಕೊಳ್ಳುವ ಬಗೆ ಎದ್ದು ಕಾಣಿಸುತ್ತಿಲ್ಲ. ಶರಣರು ನಡೆಸಿದ ಹಾಗೆ ಹೊಸ ವಿಚಾರಗಳನ್ನು ಕಟ್ಟಿಕೊಳ್ಳುವಲ್ಲಿ ಸಾಂಘಿಕ ಪ್ರಯತ್ನಗಳಿಲ್ಲ. ವೈಯಕ್ತಿಕವಾಗಿ ಕಾಣಿಸಿಕೊಳ್ಳುವ ಆಶಯಗಳು ಅಲ್ಲಲ್ಲಿಯೇ ಬತ್ತಿ ಹೋಗುತ್ತಿವೆ. ಸಾಹಿತ್ಯ ಚಿಂತನೆಗಳೇ ಸಮಾಜದ ಬಹುದೊಡ್ಡ ವೈಚಾರಿಕ ಸಂಗತಿಗಳಾಗಿವೆ. ಸಮಾಜವಿಜ್ಞಾನಗಳನ್ನು ಕಡೆಗಣಿಸಿರುವ ಪರಿಣಾಮವಾಗಿ ಆ ಜ್ಞಾನಶಾಖೆಗಳ ಅರಿವು ಸಮಾಜದ ಮುಖ್ಯವಾಹಿನಿಗೆ ಸರ‍್ಪಡೆಗೊಳ್ಳುತ್ತಿಲ್ಲ. ಇದರಿಂದ ಸಾಹಿತ್ಯ ಚಿಂತನೆಗಳ ಮಿತಿಗಳೂ ಗೊತ್ತಾಗುತ್ತಿಲ್ಲ.

೭. ಸದ್ಯ ಕನ್ನಡದಲ್ಲಿ ವ್ಯಕ್ತಿ ಇಲ್ಲವೇ ಕರ್ತೃಕೇಂದ್ರಿತ ಓದು ವಿಮರ್ಶೆಗಳು ಮಾತ್ರ ನಡೆದಿವೆ. ಉದಾಹರಣೆಗೆ ಕುವೆಂಪು, ಲಂಕೇಶ್, ತೇಜಸ್ವಿ, ದೇವನೂರು ಮಹಾದೇವ ಮುಂತಾದವರ ಬರೆಹಗಳ ಓದು. ಇವರ ಸುತ್ತಲೇ ಹೆಚ್ಚು ಚರ್ಚೆಗಳು ಕೇಂದ್ರೀಕೃತವಾಗಿರುತ್ತವೆ. ಹಾಗೆಯೇ ಹೊಸದಾಗಿ ಬರೆಯುತ್ತಿರುವ ಕೆಲವೇ ಲೇಖಕರನ್ನು ಮೆಚ್ಚುವ ಹೊಗಳುವ ಪ್ರಶಸ್ತಿ ಪುರಸ್ಕೃತರನ್ನಾಗಿ ಮಾಡಿ ಅವರಶ್ಟನ್ನೇ ಮುಂದುಮಾಡುವ ಪ್ರಯತ್ನ ನಡೆದಿದೆ. ಅಂದರೆ ಈ ಕಾಲದ ಧರ್ಮದಂತೆ ವ್ಯಕ್ತಿ ಪ್ರಧಾನವಾದ ಸಾಹಿತ್ಯವನ್ನು ಮುಂದೆ ತರುವುದು ಎದ್ದು ಕಾಣಿಸುತ್ತದೆ. ಇದು ಲೇಖಕರಲ್ಲಿಯೂ ಎದ್ದು ಕಾಣಿಸುವ ಸೆಲ್ಫ್ ಪ್ರೊಜೆಕ್ಶನ್ನಿನ ಪರಿಣಾಮ ಕೂಡ ಹೌದು. ಅಂದರೆ ಸಮುದಾಯ ಕೇಂದ್ರಿತ ಕಾಳಜಿಯುಳ್ಳ ಸಾಹಿತ್ಯ ಸೃಶ್ಟಿಗಿಂತ ವ್ಯಕ್ತಿನಿಶ್ಟ ಸಾಹಿತ್ಯ ಸೃಶ್ಟಿಯೇ ಪ್ರಧಾನವಾಗಿದೆ. ‘ಪ್ರಶಸ್ತಿ ಸಾಹಿತ್ಯ’ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಂಡಿದೆ. ಲೇಖಕರ ಐಡೆಂಟಿಟಿಯೇ ಇಲ್ಲಿ ಪ್ರಧಾನ. 

ಹೀಗೆ ವ್ಯಕ್ತಿ ಕೇಂದ್ರಿತವಾಗಿ ಹುಟ್ಟುತ್ತಿರುವ ಸಾಹಿತ್ಯದಲ್ಲಿ ಹೆಚ್ಚಿನದು ‘ಬೂಸಾ ಸಾಹಿತ್ಯ’ ಆಗಿರಲು ಸಾಧ್ಯವಿದೆ. ಯಾಕೆಂದರೆ ಗೋಳೀಕರಣಕ್ಕೆ ತೆರೆದುಕೊಂಡ ನಂತರ ನಮ್ಮ ಸಮಾಜದಲ್ಲಿ ಇಲ್ಲವೇ ಮನುಶ್ಯರ ಆಲೋಚನೆ ಮತ್ತು ವರ್ತನೆಯಲ್ಲಿ ಸಂಭವಿಸುತ್ತಿರುವ ತೀವ್ರ ಪಲ್ಲಟಗಳನ್ನು ಸೃಜನಶೀಲವಾಗಿ ಗುರುತಿಸಿ ಅವನ್ನು ದಾಖಲಿಸಲು ಬೇಕಾದ ಬೌದ್ಧಿಕ ಸಿದ್ದತೆ ನಡೆಸಿದಂತೆ ಕಾಣುತ್ತಿಲ್ಲ. ಬದಲಾಗಿ ಮೇಲುಸ್ತರದ ಇಲ್ಲವೇ ತೋರಿಕೆಯ ಸಂಗತಿಗಳನ್ನು ಮಾತ್ರ ಸಾಹಿತ್ಯದಲ್ಲಿ ದಾಖಲಿಸಲಾಗುತ್ತಿದೆ. ಈಗಾಗಲೇ ಜನಪ್ರಿಯವಾಗಿರುವ ಎಲ್ಲರಿಗೂ ಗೊತ್ತಿರುವ ವಿಚಾರಗಳನ್ನೇ ಮತ್ತೊಂದು ರೂಪದಲ್ಲಿ ಮಂಡಿಸಲಾಗುತ್ತಿದೆ. ಇಂತಹ ಸಾಹಿತ್ಯದಲ್ಲಿ ಹೊಸ ಒಳನೋಟಗಳೇ ಇಲ್ಲವಾಗಿದೆ. ರ‍್ತಮಾನದಿಂದ ದೂರವಿರುವ ಸಾಹಿತ್ಯದಂತೆ ಕಂಡರೂ ಅಚ್ಚರಿಯಿಲ್ಲ. ಹಾಗಾಗಿ ಈ ಕಾಲವನ್ನು ಸರಿಯಾಗಿ ಎದುರುಗೊಳ್ಳಲಾಗದ ಸಾಹಿತ್ಯಕ್ಕೆ ಸಮಾಜದ ಅರಿವಿನ ಎಲ್ಲೆಯನ್ನು ವಿಸ್ತರಿಸಲಾಗದೆ ದುರ್ಬಲವಾದಂತೆ ಕಾಣುತ್ತದೆ. ಹೊಸ ಒಳನೋಟಗಳಿಲ್ಲದೆ ಸಮಾಜದ ಪರಿರ‍್ತನೆಯನ್ನು ಗ್ರಹಿಸಿ ಅದನ್ನು ಸಮಾಜದ ಅರಿವನ್ನಾಗಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ವೈಚಾರಿಕವಾಗಿ ಉನ್ನತಿ ಸಾಧಿಸಲು ನೆರವಾಗದ ಯಾವುದೇ ಸಾಹಿತ್ಯ ಬೂಸಾ ಸಾಹಿತ್ಯವಲ್ಲವೇ? ಇಂತಹ ಸಾಹಿತ್ಯದ ಸೃಶ್ಟಿ ಹೇರಳವಾಗಿಯೇ ಉತ್ಪಾದನೆಗೊಳ್ಳುತ್ತಿದೆ. ಅಲ್ಲದೆ ಈ ಕಾಲದ ಇನ್ನೊಂದು ಸಮಸ್ಯೆಯೆಂದರೆ ಕಸುಬುದಾರಿಕೆಯ ಕೊರತೆ. ಅಂದರೆ ಕೃತಿಯೊಂದನ್ನು ಕಟ್ಟಲು ಅಗತ್ಯವಿರುವ ಕಸುಬುದಾರಿಕೆಯನ್ನು ತಾದಾತ್ಮö್ಯದಿಂದ ಸಾಧಿಸಿಕೊಳ್ಳದೆ ಬರವಣಿಗೆ ಮಾಡುತ್ತಿರುವುದರಿಂದ ಇಂದಿನ ಹೆಚ್ಚಿನ ಬರೆಹಗಳು ಪೇಲವವಾಗಿ ಕಾಣಿಸುತ್ತವೆ.

೮. ಇಂದು ಕನ್ನಡದಲ್ಲಿ ‘ದೀಪ’ ಸಾಹಿತ್ಯವಿಲ್ಲ. ದ್ವೀಪ ಸಾಹಿತ್ಯವೇ ಹೆಚ್ಚು ಪ್ರಧಾನವಾಗಿದೆ. ಅಂದರೆ ಕನ್ನಡದಲ್ಲಿ ಇಂದು ಕೆಲವು ಪ್ರಕಾರಗಳಲ್ಲಿ ಸಾಕಶ್ಟು ಸಾಹಿತ್ಯ ಸೃಶ್ಟಿಯಾಗುತ್ತಿದ್ದರೂ ಅದು ಕನ್ನಡದ ಎಲ್ಲ ಓದುಗರನ್ನು ತಲುಪುವುದಿಲ್ಲ. ಅಲ್ಲಿ ಗಡಿಗಳಿವೆ. ತಮ್ಮ ಜಾತಿ, ಪ್ರದೇಶ, ಧರ್ಮ, ಸಿದ್ಧಾಂತ, ಎಡ-ಬಲ ಮುಂತಾದ ಅಸ್ಮಿತೆಗಳ ಜೊತೆಗೆ ತಮ್ಮ ಸ್ನೇಹದ ಗುಂಪಿನ ಗಡಿಗಳಲ್ಲಿ ಇರುವವರಿಗೆ ಮಾತ್ರ ತಲುಪುತ್ತದೆ ಮತ್ತು ಗಡಿಗಳ ಒಳಗಿರುವವರನ್ನು ಮಾತ್ರ ಓದಲಾಗುತ್ತದೆ. ತಮ್ಮ ದ್ವೀಪದ ಆಚೆಗೆ ಇರುವವರನ್ನು ಓದುವ ಇಚ್ಚೆಯೇ ಹುಟ್ಟುವುದಿಲ್ಲ ಮತ್ತು ಅವುಗಳನ್ನು ಚರ್ಚಿಸುವುದಿಲ್ಲ. ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲು ಬಯಸದ ಮನೋವೃತ್ತಿಯೊಂದು ಢಾಳಾಗಿ ಕಾಣಿಸುತ್ತಿದೆ. ಕನ್ನಡ ಸಾಹಿತ್ಯವಾಗಿ ಇಂದು ಚರ್ಚೆ ಓದುಗಳು ನಡೆಯದೇ ವ್ಯಕ್ತಿಕೇಂದ್ರಿತವಾದ ಇಲ್ಲವೇ ಗುಂಪುಕೇAದ್ರಿತವಾದ ಓದುಗಳು ಮಾತ್ರ ನಡೆಯುತ್ತಿವೆ. ಇದರಿಂದ ಕನ್ನಡದಲ್ಲಿ ಒಡಕಲು ಬಿಂಬಗಳ ರೂಪಗಳೇ ಎದ್ದು ಕಾಣಿಸುತ್ತಿವೆ. ಇಲ್ಲಿ ಒಳಗೊಳ್ಳುವುದಕ್ಕಿಂತ ಆಚೆಗಿಡುವ ಪ್ರಯತ್ನಗಳೇ ಹೆಚ್ಚು. ಇದು ಕನ್ನಡ ಪ್ರಜ್ಞೆ ಒಂದು ಸಾಮುದಾಯಿಕ ಪ್ರಜ್ಞೆಯಾಗಿ ರೂಪುಗೊಳ್ಳುವುದನ್ನು ತಡೆದು ವ್ಯಕ್ತಿವಾದ ಮತ್ತು ಗುಂಪುವಾದಗಳನ್ನೇ ಬೆಳೆಸುತ್ತ ಕನ್ನಡದ ಅಸ್ಮಿತೆಯನ್ನು ಟೊಳ್ಳಾಗಿಸುತ್ತದೆ. ವಿಭಜಕ ಮನೋವೃತ್ತಿ ಸಾಹಿತ್ಯ ವಲಯದಲ್ಲಿಯೂ ಆಳವಾಗಿ ನೆಲೆಯೂರುತ್ತಿದೆ.

೯. ಇಂದು ಸಮಾಜ ಎಡಬಲಗಳ ನಡುವೆ ವಿಭಜನೆಗೊಂಡಿರುವುದು ನಿಚ್ಚಳವಾಗಿ ಕಾಣಿಸುತ್ತದೆ. ರಾಜಕಾರಣ, ಸಿನೆಮಾ, ಚಲನಚಿತ್ರ, ಕ್ರೀಡೆ ಎಲ್ಲ ಕ್ಶೇತ್ರಗಳಲ್ಲಿಯೂ ಎಡಬಲಗಳ ಒಡಕು ವಿಭಜನೆ ಎದ್ದು ಕಾಣಿಸುತ್ತದೆ. ಇದು ಸಾಹಿತ್ಯ ಕ್ಶೇತ್ರದಲ್ಲಿಯೂ ಹೆಚ್ಚೇ ನಡೆದಿದೆ. ಬಲಪಂಥೀಯ ವಿಚಾರಗಳ ಪ್ರಭಾವ ಈ ಹಿಂದಿಗಿಂತ ಹೆಚ್ಚು ಬಲಗೊಂಡಿದೆ. ಹಾಗಾಗಿ ಬಲಪಂಥೀಯವಾದದ ಜೊತೆಗೆ ಅಸಂಖ್ಯ ಲೇಖಕರು ಗುರುತಿಸಿಕೊಂಡಿರುವುದು ನಿಜ. ಇದರ ಪರಿಣಾಮವಾಗಿ ಕನ್ನಡದಲ್ಲಿ ಬಲಪಂಥೀಯ ವಿಚಾರಧಾರೆಗಳ ಸಾಹಿತ್ಯ ಸೃಶ್ಟಿಯಾಗಿರುವುದು ನಿಜ. ಆ ಮೂಲಕ ದೊಡ್ಡ ಲೇಖಕರ ಪಡೆ ಹುಟ್ಟಿಕೊಂಡಿದ್ದು ಇದು ಸಾಹಿತ್ಯವನ್ನು ಸೃಶ್ಟಿಸುತ್ತಿದೆ. ಇದು ಗ್ರಂಥಾಲಯಗಳನ್ನು ಪುಸ್ತಕ ಮಳಿಗೆಗಳನ್ನು ಮನೆಗಳನ್ನು ಆವರಿಸಿಕೊಂಡಿದೆ. ಮಕ್ಕಳ ಮನಸ್ಸಿಗೂ ಇಳಿಯುತ್ತಿದೆ. ಕನ್ನಡದ ಮುಖ್ಯವಾಹಿನಿಯ ಸಾಹಿತ್ಯದ ಜೊತೆಗೆ ಇದು ಸ್ಪರ್ಧೆಗೆ ಇಳಿದಿರುವುದೂ ಇದೆ. ಈ ಸಾಹಿತ್ಯ ಪ್ರಭುತ್ವವನ್ನು ಸಮರ್ಥಿಸುವ, ಚರಿತ್ರೆಯನ್ನು ತಿರುಚುವ ಹಾಗೂ ವೈದಿಕ ಪರಂಪರೆಯೇ ಶ್ರೇಶ್ಟವಾದುದು ಎಂದು ಬಿಂಬಿಸುವ ಕೆಲಸ ಮಾಡುತ್ತಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಪಲ್ಲಟ ಉಂಟು ಮಾಡಿ ಕನ್ನಡ ಪ್ರಜ್ಞೆಯನ್ನು ಇನ್ನಶ್ಟು ದುರ್ಬಲಗೊಳಿಸಬಹುದು. ಇದುವರೆಗೂ ಕನ್ನಡ ಪ್ರಜ್ಞೆ ಕಟ್ಟಿಕೊಟ್ಟಿರುವ ಉದಾತ್ತ ಚಿಂತನೆಗಳ ಕರುಳು ಬಗೆವ ಅಪಾಯವಿದೆ. ಕನ್ನಡದ ಓದುಗರ ಮನಸ್ಸನ್ನು ಮತ್ತಶ್ಟು ಮತೀಕರಣಗೊಳಿಸುವ ಅಪಾಯ ಕಾಣಿಸುತ್ತಿದೆ. ಇದು ಈ ತಲೆಮಾರಿನಲ್ಲಿ ನಡೆದಿರುವ ಬಹುದೊಡ್ಡ ಪ್ರತಿಗಾಮಿ ನಡೆ. ಮತೀಯವಾದಿ ಚಿಂತನೆಗಳನ್ನು ಮುಕ್ತವಾಗಿ ಮತ್ತು ಗುಪ್ತವಾಗಿ ಅನುಸರಿಸುವ ಅಸಂಖ್ಯ ಜನ ಹಿರಿಕಿರಿಯ ಬರೆಹಗಾರರು ಇದ್ದಾರೆ. ಇವರು ಶಿಕ್ಶಣ ಸಂಸ್ಥೆಗಳಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ. ಕನ್ನಡದ ಮನಸ್ಸುಗಳನ್ನು ಕೊಲ್ಲುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಪರಿಣಾಮವಾಗಿ ಮತೀಯವಾದಿ ಚಿಂತನೆಗಳನ್ನು ವೈಭವೀಕರಿಸುವ ಸಾಹಿತ್ಯ ಸೃಷ್ಟಿ ಮತ್ತು ಪ್ರಸಾರ ಕರ‍್ಯದಲ್ಲಿ ಯುವಕರು ವಿದ್ಯಾರ್ಥಿಗಳು ತೊಡಗಿದ್ದಾರೆ. 

೧೦. ಎಡವೂ ಅಲ್ಲದ ಬಲವೂ ಅಲ್ಲದ ನಡುಪಂಥೀಯ ಎಂದುಕೊಳ್ಳುವ ‘ಸಾಹಿತ್ಯ ಪಂಥೀಯ’ರ ಸಾಹಿತ್ಯ ಪಂಥವೊಂದು ಕನ್ನಡದಲ್ಲಿ ಹುಟ್ಟಿಕೊಂಡಿದೆ. ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಭ್ರಮದ ಕಾರ್ಯಕ್ರಮವು ಇಂತಹ ನಡುಪಂಥದ ಚರ್ಚೆಯನ್ನು ಹುಟ್ಟಿಹಾಕಿತ್ತು. ಇಂದು ಸಂಭ್ರಮದ ಕಾರ್ಯಕ್ರಮ ನಡೆಯದಿದ್ದರೂ ನಾವು ನಡುಪಂಥೀಯರು ಎಂದು ಹೇಳಿಕೊಳ್ಳುವ ಜನರ ಸಂಖ್ಯೆ ದೊಡ್ಡದಿದೆ. ಇದಲ್ಲದೆ ಬೆಂಗಳೂರು ಸಾಹಿತ್ಯ ಹಬ್ಬ, ಮೈಸೂರು ಸಾಹಿತ್ಯ ಹಬ್ಬ ನಡೆಸುವವರು ನಡುಪಂಥದ ಬಗೆಗೆ ಮಾತನಾಡುತ್ತಾರೆ. ಆದರೆ ಸನಾತನವಾದಿ ವೈದಿಕರ ದಬ್ಬಾಳಿಕೆ ಮೇರೆ ಮೀರಿದಾಗ; ಪ್ರಭುತ್ವ ಸರ್ವಾಧಿಕಾರಿ ಧೋರಣೆ ತೋರುವಾಗ, ನಡುಪಂಥೀಯರ ಮೌನ ಅಸಹ್ಯಕರವಾಗಿರುತ್ತದೆ. ಅವರಿಗೆ ಪ್ರಭುತ್ವದ ಹೊಲಸನ್ನು ಕುರಿತು ಮಾತಾಡುವುದು ರಾಜಕೀಯ ಚರ್ಚೆಯಾಗಿ ಕಾಣುತ್ತದೆ. ಅಂತಹ ಹೊತ್ತಿನಲ್ಲಿ ಇವರು ‘ಶುದ್ಧ ಸಾಹಿತ್ಯ’ದ ಚರ್ಚೆಯನ್ನು ಮುಂದು ಮಾಡುತ್ತಾರೆ.  ಅಂದರೆ ಎಡಪಂಥ, ಬಲಪಂಥ ಮತ್ತು ನಡುಪಂಥಗಳೆAಬ ಸೈದ್ದಾಂತಿಕ ವಿಭಜನೆಯಾಗಿರುವುದು ಈ ಕಾಲದಲ್ಲಿ ಎದ್ದು ಕಾಣಿಸುತ್ತದೆ. 

೧೧. ಕಾವ್ಯ ಮತ್ತು ಸಣ್ಣ ಕತೆಗಳ ಪ್ರಕಾರಗಳಲ್ಲಿ ಹುಲುಸಾದ ಬೆಳೆ ಬರುತ್ತಿದೆ. ಕಾದಂಬರಿಗಳು, ಅಂಕಣ ಬರೆಹಗಳು ಸಾಕಶ್ಟು ಸೃಶ್ಟಿಯಾಗಿವೆ. ಮಾರುಕಟ್ಟೆಯ ಸರ್ವಾಧಿಕಾರಿ ಆಕ್ರಮಣ ಮತ್ತು ಮತೀಯವಾದಿ ಭಯೋತ್ಪಾದನೆ ಉಂಟು ಮಾಡುತ್ತಿರುವ ಹಿಂಸೆಯನ್ನು ಸಾಹಿತ್ಯದ ಹೂರಣವಾಗಿಸುವ ಪ್ರಯತ್ನ ನಡೆದಿದೆ. ಈಚಿನ ದಶಕಗಳಲ್ಲಿ ಅಂಕಣ ಸಾಹಿತ್ಯ ವಿಚಾರ ಸಾಹಿತ್ಯದ ಸ್ವರೂಪ ಪಡೆದು ಈ ಕಾಲದ ಸಂಕಟಗಳಿಗೆ ದನಿಯಾಗಿದೆ. ಇದು ಹಿರಿಕಿರಿಯ ಲೇಖಕರಿಂದ ಸಾಧ್ಯವಾಗಿದೆ. ಜಾಗತೀಕರಣ ಕಾಲದ ಸಾಂಸ್ಕೃತಿಕ ಪಲ್ಲಟಗಳನ್ನು ದಾಖಲಿಸುವ ಕೆಲಸ ಮಾಡಲಾಗಿದೆ. ಇವುಗಳಲ್ಲಿ ಸಾಕಶ್ಟು ಸಮಸ್ಯೆಗಳು ಕಂಡು ಬಂದರೂ ಬದಲಾವಣೆಯ ಕುರುಹುಗಳನ್ನು ದಾಖಲಿಸಲು ಯತ್ನಿಸಲಾಗಿದೆ. ಇದರಲ್ಲಿ ಹೊಸತಲೆಮಾರು ಸಕ್ರ‍್ರಿಯವಾಗಿ ತೊಡಗಿಕೊಂಡಿದೆ. ಆದರೆ ಕನ್ನಡದಲ್ಲಿ ಸಂಶೋಧನೆ, ವಿಮರ್ಶೆ ಮತ್ತು ವಿಚಾರ ಸಾಹಿತ್ಯ ಅತ್ಯಂತ ಕಡಿಮೆ ಸೃಶ್ಟಿಯಾಗುತ್ತಿದೆ. ಈ ಪ್ರಕಾರಗಳಲ್ಲಿ ನಮ್ಮ ಹಿರಿಯರಿಂದ ಒಂದಶ್ಟು ಬರೆಹಗಳು ಬಂದಿವೆ. ತೊಂಬತ್ತರ ದಶಕದ ಕೊನೆಯಲ್ಲಿ ಪ್ರಕಟವಾದ ಡಿ. ಆರ್. ನಾಗರಾಜ ‘ಸಾಹಿತ್ಯ ಕಥನ’, ಯು.ಆರ್. ಅನಂತಮೂರ್ತಿ ಅವರ ‘ಮಾತುಸೋತ ಭಾರತ’, ಕೆ.ವಿ. ನಾರಾಯಣ ಅವರ ‘ಕನ್ನಡ ಜಗತ್ತು: ಅರ್ಧ ಶತಮಾನ’, ಶ. ಶೆಟ್ಟರ್ ಅವರ ‘ಶಂಗಂ ತಮಿಳಗಂ ಮುಂತಾದ ಚರಿತ್ರೆಯ ಕಥನಗಳು ಕೆಲವು ಉದಾಹರಣೆಗಳು. ಉಳಿದಂತೆ ಸಾಹಿತ್ಯ ಮೀಮಾಂಸೆ, ವಿಮರ್ಶೆ, ಸಂಶೋಧನೆ ಮತ್ತು ವೈಚಾರಿಕ ಬರೆಹಗಳು ಹಾಗೂ ಸಮಾಜ ವಿಜ್ಞಾನಗಳಿಗೆ ಸಂಬAಧಿಸಿದ ಬರೆಹಗಳು ಹೆಚ್ಚು ಪ್ರಕಟಗೊಳ್ಳುತ್ತಿಲ್ಲ. ಅಲ್ಲದೆ ಇದೇ ಸಂದರ್ಭದಲ್ಲಿ ಸಬ್ ಸ್ಟಾö್ಯಂಡರ್ಡ್ ಆದ ಬರೆಹಗಳ ಹಾವಳಿ ಹೆಚ್ಚಿದೆ. ಇದಕ್ಕೆ ಕಾರಣವಾದದ್ದು ವಿಶ್ವವಿದ್ಯಾಲಯಗಳ ಮತ್ತು ಪದವಿ ಕಾಲೇಜುಗಳ ಅಧ್ಯಾಪಕರಲ್ಲಿ ಸಂಶೋಧನಾ ಬರೆಹಗಳನ್ನು ಹೆಚ್ಚೆಚ್ಚು ಮಾಡುವಂತೆ ಪ್ರೋತ್ಸಾಹಿಸಲು ಯುಜಿಸಿ ನಿಯಮಗಳನ್ನು ರೂಪಿಸಿದ್ದು ಕಳಪೆ ಬರೆಹಗಳು ಹೆಚ್ಚಲು ಕಾರಣವಾಗಿದೆ. ಇವೇ ಬರೆಹದ ಮಾದರಿಗಳೂ ಆಗಿ ಕನ್ನಡದ ವಿದ್ವತ್ ಜಗತ್ತನ್ನು ಮಲಿನಗೊಳಿಸಿವೆ. ಕನ್ನಡ ಜ್ಞಾನದ ಎಲ್ಲೆಗಳನ್ನು ಹಿಗ್ಗಿಸುವ ಸಂಶೋಧನೆ ಮತ್ತು ವಿಮರ್ಶೆಗಳಿಗಿಂತ ಶೈಕ್ಶಣಿಕ ‘ಲಾಭ’ದ ಗುಪ್ತ ಸಾಹಿತ್ಯದ ಹಾವಳಿ ಹೆಚ್ಚಿದೆ. ಹಾಗಾಗಿ ಸಂಶೋಧನೆ ಮತ್ತು ವಿಮರ್ಶೆಯಲ್ಲಿ ಕಿರಿಯ ತಲೆಮಾರಿನ ಗೈರುಹಾಜರಿ ಎದ್ದು ಕಾಣುತ್ತಿದೆ. ಕಳಪೆ ಸಂಶೋಧನೆ ಮತ್ತು ವಿಮರ್ಶೆಯ ಬರೆಹಗಳ ಹಾವಳಿ ಹೆಚ್ಚಿದೆ.

೧೨. ಜಾಗತೀಕರಣದ ಕಾಲದಲ್ಲಿ ಕನ್ನಡದ್ದೇ ಜ್ಞಾನ ರೂಪಿಸುವ ಪ್ರಯತ್ನದ ಭಾಗವಾಗಿ ಕಟ್ಟಿದ್ದು ಕನ್ನಡ ವಿಶ್ವವಿದ್ಯಾಲಯ. ಇದು ಕನ್ನಡದ ಅಸ್ಮಿತೆಯನ್ನು ಜ್ಞಾನರೂಪಿಯಾಗಿ ಕಟ್ಟಿಕೊಳ್ಳಲು ನಡೆಸಿದ ವಿಶಿಶ್ಟ ಪ್ರಯತ್ನವಾಗಿತ್ತು. ಹಿಂದಣ ಅನಂತವನ್ನು ಮುಂದಣ ಅನಂತವನ್ನು ಒಳಗೊಳ್ಳುವ ಮಹತ್ವಾಕಾಂಕ್ಶೆಯನ್ನು ಹೊಂದಿತ್ತು. ಆದರೆ ಇಂದು ಅದು ಕೂಡ ಇತರ ವಿಶ್ವವಿದ್ಯಾಲಯಗಳಂತೆ ಜಡ ಸಂಸ್ಥೆಯಾಗಿ ಬದಲಾಗಿದೆ. ಆರಂಭದ ಕೆಲವು ವರ್ಶಗಳ ಕಾಲ ಚುರುಕಾಗಿ ಕೆಲಸ ಮಾಡಿದ ವಿಶ್ವವಿದ್ಯಾಲಯ ನಂತರ ತನ್ನ ಫೋಕಸ್ ಕಳೆದುಕೊಂಡಿದೆ. ಜ್ಞಾನ ಸೃಶ್ಟಿಸುವ ಕನಸು ಹೊತ್ತು ಆರಂಭಗೊಂಡಿದ್ದ ವಿಶ್ವವಿದ್ಯಾಲಯ ಇಂದು ನಿಸ್ತೇಜಗೊಂಡಿದೆ. ಸಾವಿರಾರು ಜನರಿಗೆ ಪಿಎಚ್.ಡಿ. ಪದವಿ ನೀಡಿದರೂ ಜ್ಞಾನದ ದಿಗಂತಗಳನ್ನು ವಿಸ್ತರಿಸುವಲ್ಲಿ ವಿಫಲಗೊಂಡಿದೆ. ಸಂಶೋಧಕರಿಗೆ ಪದವಿ ನೀಡುವ ಸಂಸ್ಥೆಯಾಗಿದ್ದರೂ ಕನ್ನಡ ಜ್ಞಾನದ ವಲಯಕ್ಕೆ ಹೊಸ ತಿಳುವಳಿಕೆಯನ್ನು ನೀಡುವ ಸಂಸ್ಥೆಯಾಗಿ ಉಳಿದಿಲ್ಲ. ಇದರಿಂದಾಗಿ ಕನ್ನಡದ ಕರ್ನಾಟಕದ ಜನತೆಯ ಜ್ಞಾನ ರೂಪಿಸಲು ನಡೆಸಿದ ವಿಶಿಶ್ಟ ಪ್ರಯತ್ನವೊಂದು ಬಹಳ ಬೇಗ ನಿಸ್ತೇಜಗೊಂಡಿದ್ದು ಕನ್ನಡಕ್ಕಾದ ನಶ್ಟವೇ ಸರಿ. ಇದರಂತೆಯೇ, ಜ್ಞಾನದ ಉತ್ಪಾದನೆಯ ಕೇಂದ್ರಗಳಾಗಬೇಕಿದ್ದ ರಾಜ್ಯದ ಇತರೆ ವಿಶ್ವವಿದ್ಯಾಲಯಗಳು ಗತಿಸಿಹೋಗಿವೆ. ಇದರಿಂದ ಸಾರಸ್ವತಲೋಕದಲ್ಲಿ ಹೊಸ ಚಿಂತನೆಗಳು ಮೂಡಲು ಸಾಧ್ಯವಾಗದೆ ಕನ್ನಡ ಬೌದ್ಧಿಕ ಜಗತ್ತು ಬಡವಾಗಿದೆ. ಸಾಹಿತ್ಯ ಮಾತ್ರವಲ್ಲದೆ ಸಮಾಜ ವಿಜ್ಞಾನಗಳ ವಿಶಯದಲ್ಲಿಯೂ ಇದೆ ಪರಿಸ್ಥಿತಿಯಿದೆ. ಸಾಹಿತ್ಯ, ಸಂಶೋಧನೆಗಳು ಗೌಣಗೊಳ್ಳುವುದಕ್ಕೂ ವಿಶ್ವವಿದ್ಯಾಲಯಗಳ ಅವಸಾನಕ್ಕೂ ನೇರ ಸಂಬಂಧವಿದೆ.

೧೩. ಅಕ್ಶರಸ್ಥರ ಪ್ರಮಾಣ ಹೆಚ್ಚಿದಂತೆ ಓದುಗರ ಸಂಖ್ಯೆ ಹೆಚ್ಚಬೇಕಿತ್ತು. ಆದರೆ ಯಾವುದೇ ಬಗೆಯ ಬರೆಹಗಳ ಓದುಗರ ಸಂಖ್ಯೆ, ಓದಿನ ಆಸಕ್ತಿಗಳು ಈಚಿನ ದಶಕಗಳಲ್ಲಿ ಕಡಿಮೆಯಾಗಿವೆ. ಅದೇ ಹೊತ್ತಿನಲ್ಲಿ ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಅಂದರೆ ಮಾಧ್ಯಮಗಳ ಪ್ರಭಾವ ಓದಿನ ಮೇಲೆ ಆಗಿರುವುದು ನಿಜ. ಈ ಅಪಾಯವನ್ನು ಅರಿತು ಶೈಕ್ಶಣಿಕ ಸಂಸ್ಥೆಗಳಲ್ಲಿ ಭಾಶೆ ಮತ್ತು ಬೋಧನೆಗಳನ್ನು ಪರಿಣಾಮಕಾರಿಯಾಗಿಸಬೇಕಿತ್ತು. ಆದರೆ ಭಾಶೆ ಮತ್ತು ಸಾಹಿತ್ಯಗಳ ಬೋಧನೆಯನ್ನು ಒಂದು ರಿಚುವಲ್ ಆಗಿಸಿದ್ದು ಮತ್ತು ಅದನ್ನು ಕೇವಲ ಪರೀಕ್ಶೆಗೆ ಸಂಬAಧಿಸಿದ ಒಂದು ವಿಶಯವಾಗಿ ಮಾತ್ರ ನೋಡಲಾಗಿದೆ. ಅಲ್ಲದೆ ಜಾಗತೀಕರಣದ ಕಾಲಘಟ್ಟದಲ್ಲಿ ರೂಪುಗೊಂಡ ಗ್ರಾಹಕ ಮನೋಭಾವದ ಮಧ್ಯಮ ವರ್ಗದ ಬೆಳವಣಿಗೆ ಸಾಹಿತ್ಯದ ಅವಗಣನೆಗೆ ಕಾರಣವಾಗಿದೆ. ಬ್ರಿಟಿಶ್ ಭಾರತ ಮತ್ತು ಆ ನಂತರದ ಕೆಲವು ದಶಕಗಳ ಭಾರತದಲ್ಲಿ ಮಧ್ಯಮ ವರ್ಗ ಜ್ಞಾನಕ್ಕೆ ಮತ್ತು ಸಾಹಿತ್ಯಕ್ಕೆ ತೆರೆದುಕೊಳ್ಳುತ್ತಿತ್ತು. ಈಚಿನ ವರ್ಶಗಳಲ್ಲಿ ಹುಟ್ಟಿಕೊಂಡ ಈ ವರ್ಗಕ್ಕೆ ಸಾಹಿತ್ಯ ಮತ್ತು ಜ್ಞಾನ ಮುಖ್ಯವಾಗಿ ಕಾಣುತ್ತಿಲ್ಲ. ಈ ವರ್ಗಕ್ಕೆ ತಮ್ಮ ಭಾಶೆಗಳಿಗಿಂತ ಮಾರುಕಟ್ಟೆಯ ಭಾಶೆಯಾದ ಇಂಗ್ಲಿಶ್ ಪ್ರತಿಶ್ಟೆಯ ಭಾಶೆಯಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಕನ್ನಡ ನುಡಿಯಲ್ಲಿ ರೂಪುಗೊಳ್ಳುವ ಸಾಹಿತ್ಯದ ಓದಿಲ್ಲಿ ಹೆಚ್ಚಳವಾಗಿಲ್ಲ. ಓದುಗರೇ ಇಲ್ಲದ ಕಾಲದಲ್ಲಿ ದೊಡ್ಡ ಸಾಹಿತ್ಯ ದೊಡ್ಡ ಲೇಖಕರು ಹುಟ್ಟಲು ಸಾಧ್ಯವೇ?

ಹೀಗೆ ಸಂಭವಿಸುವ ಓದಿನ ಸಾವಿನಿಂದ ಹೊಸದಾಗಿ ಅಕ್ಶರ ಲೋಕಕ್ಕೆ ತೆರೆದುಕೊಂಡು ತಮ್ಮ ಸಂಕಟಗಳನ್ನು ಹೇಳಿಕೊಳ್ಳುವ ಸಮುದಾಯಗಳ ನೋವನ್ನು ಕೇಳಿಸಿಕೊಳ್ಳುವವರು ಯಾರು? ನೋವನ್ನು ಕೇಳಿಸಿಕೊಳ್ಳುವವರೇ ಇಲ್ಲದೇ ಆ ನೋವು ಸಂಕಟ ಮೂಲೆಗೆ ಒತ್ತಲ್ಪಡುವುದಿಲ್ಲವೇ? ಅವರದು ಅರಣ್ಯ ರೋಧನವಲ್ಲವೇ? ಹಾಗಾಗಿ ಕನ್ನಡ ಸಾಹಿತ್ಯದ ಜಗತ್ವಲಯ ಹಿಗ್ಗಲು ತೊಡಕಾಗಿರುವುದು ನಮ್ಮ ಶೈಕ್ಶಣಿಕ ವಲಯದಲ್ಲಿ ಭಾಶೆಗಳ ಕಡೆಗಣನೆ ಮತ್ತು ಬೋಧನೆಯಲ್ಲಿನ ಹೊಣೆಗೇಡಿತನಗಳು ಪ್ರಮುಖವಾಗಿವೆ. ಎಲ್ಲ ವಿಶಯಗಳ ಬೋಧಕರ ಹೊಣೆಗೇಡಿತನವು ಕನ್ನಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಹೊಸತಲೆಮಾರಿನಲ್ಲಿ ಸಾಹಿತ್ಯದ ಬಗೆಗೆ ಕುತೂಹಲ ಮೂಡಿಸಲಾಗದ ಕಾರಣಕ್ಕೆ ಕನ್ನಡ ಸಾಹಿತ್ಯದ ಓದುಗರಲ್ಲಿ ತೀವ್ರ ಕುಸಿತವಾಗಿದೆ. ಹೊಸ ಓದುಗರೇ ಸೃಶ್ಟಿಯಾಗದ ಕಾರಣ ಸಾಹಿತ್ಯದ ಪ್ರಸಾರವೇ ಕುಂಟಿತವಾಗುವ ಹಂತಕ್ಕೆ ಬಂದು ನಿಂತಿದೆ. ಇಂದಿನ ಅಕ್ಶರಸ್ಥ ವರ್ಗ ಇಂಗ್ಲಿಶ್ ಶಿಕ್ಶಣ ಮಾಧ್ಯಮ ಮತ್ತು ಹೊಸ ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚು ತೆರೆದುಕೊಂಡ ಪರಿಣಾಮದಿಂದಾಗಿಯೂ ಕನ್ನಡದ ಓದುಗರು ಸೃಶ್ಟಿಯಾಗುತ್ತಿಲ್ಲ. ಇದರಿಂದ ಸಾಹಿತ್ಯಕ ಪರಿಸರ ತೀವ್ರ ಬಿಕ್ಕಟ್ಟಿನಿಂದ ಬಳಲುತ್ತಿದೆ.

ಅಂದರೆ ತೊಂಬತ್ತರ ದಶಕದ ನಂತರದಲ್ಲಿ ಒಟ್ಟು ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಪರಿಸರಗಳೇ ಪಲ್ಲಟಿಸಿ ಹೋಗಿವೆ. ಅದನ್ನು ಶುರುವಿಗೆ ಸ್ಪಶ್ಟಪಡಿಸಲಾಯಿತು. ಈ ಬದಲಾವಣೆ ಮತ್ತು ಅದರೊಳಗೆ ಹುದುಗಿರುವ ಹಿಂಸೆಯನ್ನು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಚರ್ಚೆಗಳಲ್ಲಿ ಮುಂಚೂಣಿಗೆ ತರುವ ಅಗತ್ಯವಿದೆ. ಈ ದಿಸೆಯಲ್ಲಿ ಅಗತ್ಯವಿರುವಶ್ಟು ಕೆಲಸ ನಡೆದಿಲ್ಲವೆಂದೇ ಹೇಳಬೇಕು. ಲೋಕದ ಗ್ರಹಿಕೆಯ ಬಗೆಯಲ್ಲಿಯೇ ಮೂಲಭೂತ ದೋಶ ಇರುವುದರಿಂದ ತೊಂಬತ್ತರ ನಂತರದ ದಶಕಗಳ ಬದಲಾವಣೆಯ ದುರಂತವನ್ನು, ಸಂಕೀರ್ಣತೆಯನ್ನು ಇಡಿಯಾಗಿ ಸಾಹಿತ್ಯದ ಒಡಲೊಳಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಇಂದಿನ ಹೆಚ್ಚಿನ ಸಾಹಿತ್ಯ ದುರ್ಬಲ ಅಭಿವ್ಯಕ್ತಿಯಾಗಿ ಕಾಣಿಸುತ್ತದೆ. ರ‍್ತಮಾನವನ್ನು ಅದು ಇರುವ ಸ್ವರೂಪದಲ್ಲಿಯೇ ಗ್ರಹಿಸಿ ನಿರೂಪಿಸಲು ಸಾಧ್ಯವಾಗದ ಕಾರಣ ಈ ಕಾಲದ ಸಾಹಿತ್ಯ ದರ್ಶನ ತಾಜಾತನದಿಂದ ಕೂಡಿದೆ ಎನ್ನಿಸುವುದಿಲ್ಲ.  ಇಶ್ಟೆಲ್ಲ ಸಮಸ್ಯೆ ಇದ್ದಾಗಲೂ ಒಟ್ಟು ಕನ್ನಡ ಚಿಂತನೆಯನ್ನು ಅವೈದೀಕಿಕರಣಗೊಳಿಸುವ ಮತ್ತು ನಿರ್ವಸಾಹತೀಕರಣಗೊಳಿಸುವ ಪ್ರಯತ್ನವೊಂದು ಗುಪ್ತಗಾಮಿನಿಯಾಗಿ ನಡೆಯುತ್ತಿದೆ ಎಂದೆನಿಸುತ್ತದೆ.

-ರಂಗನಾಥ ಕಂಟನಕುಂಟೆ

You cannot copy content of this page

Exit mobile version