Monday, June 23, 2025

ಸತ್ಯ | ನ್ಯಾಯ |ಧರ್ಮ

ಅಬ್ಬರಿಸಿದ ಮಳೆ, ಉತ್ತರ ಕರ್ನಾಟಕ ಈಗ ತಂಪು ತಂಪು ಕೂಲ್‌ ಕೂಲ್‌

ಬೆಳಗಾವಿ, ಬಾಗಲಕೋಟೆ, ಬೀದರ್ ಮತ್ತು ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಸುರಿದ ಮಳೆಯು ಅಲ್ಲಿನ ಜನರಿಗೆ ಬಿಸಿಲಿನ ಬೇಗೆಯಿಂದ ವಿಶ್ರಾಂತಿ ನೀಡಿತು.

ನಿನ್ನೆ ಸುರಿದ ತುಂತುರು ಮಳೆ ಬಾಗಲಕೋಟೆ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಬಕವಿ-ಬನಹಟ್ಟಿ, ಬಾಗಲಕೋಟ ಪಟ್ಟಣ, ಹುನಗುಂದ, ಇಳಕಲ್, ಕೂಡಲಸಂಗಮ, ಬಿಳಗಿ, ಮಹಾಲಿಂಗಪುರ, ತೇರದಾಳ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಬಸವಕಲ್ಯಾಣ, ಹುಲಸೂರು, ಹುಮನಾಬಾದ್, ಬೀದರ್ ತಾಲೂಕುಗಳಲ್ಲೂ ಮಳೆಯಾಗಿದೆ. ಚಿತ್ರದ್ರುಗ ಪಟ್ಟಣದಲ್ಲಿ ಸಂಜೆ ಗುಡುಗು ಮಿಂಚು ಸಹಿತ ತುಂತುರು ಮಳೆ ಸುರಿದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಪರಿಣಾಮ ಸೋಲಿಕಟ್ಟಿ ಗ್ರಾಮದಲ್ಲಿ 20 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಉತ್ತರ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಸುರಿದ ಮಳೆಗೆ ಪಪ್ಪಾಯಿ ಮರಗಳು ಧರೆಗುರುಳಿವೆ. ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಸಿಡಿಲು ಬಡಿದು ಐದು ಜಾನುವಾರುಗಳು ಸಾವನ್ನಪ್ಪಿವೆ.

ಬೆಳಗಾವಿಯಲ್ಲಿ ತುಂತುರು ಮಳೆ ವಾತಾವರಣವನ್ನು ತಂಪಾಗಿಸಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ರಾಮದುರ್ಗ, ರಾಯಬಾಗ, ಹುಕ್ಕೇರಿ ತಾಲೂಕುಗಳಲ್ಲೂ ಮಳೆಯಾಗಿದೆ.

ವಿಜಯಪುರದಲ್ಲಿ ತುಂತುರು ಮಳೆಯಿಂದ ಪಾದರಸದ ಪ್ರಮಾಣ ತಗ್ಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಭರಂತಿ ಹನುಮಂತ ಕೆಂಗನಾಳ (40) ಶುಕ್ರವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ಮಧ್ಯಾಹ್ನ ಮತ್ತು ಸಂಜೆ ವಾಡಿಕೆ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ಸೋಗಿ ಗ್ರಾಮದ ಒಂದೂವರೆ ಎಕರೆ ಬಾಳೆ ತೋಟ ಹಾಗೂ ಹೂವಿನ ಹಡಗಲಿಯ ಬಾವಿಹಳ್ಳಿಯಲ್ಲಿ ಎರಡು ಎಕರೆ ಹಲಸಿನ ತೋಟ ನಾಶವಾಗಿದೆ. ಸೋಗಿ ಗ್ರಾಮದ ಶಾಲೆಯೊಂದರ ಬಳಿ ಮಳೆಯಿಂದಾಗಿ ಎರಡು ವಿದ್ಯುತ್ ಕಂಬಗಳು ಹಾಗೂ ಕೆಲವು ಮರಗಳು ಧರೆಗುರುಳಿವೆ.

ಜಿಲ್ಲೆಯ ಉತ್ತಂಗಿ, ತಳಕಲ್ಲು, ಮಹಾಜನದಳ್ಳಿ, ಇಟ್ಟಿಗಿ, ಹೊಳಹುಂಡಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ತಾಪಮಾನದ ಮಟ್ಟ ತಗ್ಗಿದ್ದು, ಈ ಸ್ಥಳಗಳಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಸಂಜೆ ಒಂದು ಗಂಟೆ ಕಾಲ ಸಿಡಿಲು, ಬಿರುಗಾಳಿ ಸಹಿತ ಮಳೆ ಸುರಿದಿದೆ. ಬೇಸಿಗೆಯಲ್ಲಿ ಇದು ಮೊದಲ ಮಳೆಯಾಗಿತ್ತು. ಮಳೆಯ ನೀರು ರಸ್ತೆ ಹಾಗೂ ಚರಂಡಿಗಳಿಗೆ ಹರಿದಿದೆ. ಪಟ್ಟಣದ ತರಳಬಾಳು ಲೇಔಟ್‌ನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಅಲೆಮಾರಿ ಹೆಳವರು ಸಂಕಷ್ಟ ಅನುಭವಿಸಿದರು.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ನಾಪೋಕ್ಲು ಸಮೀಪದ ಹೊದ್ದೂರಿನ ಶ್ರೀ ಮಾರಿಯಮ್ಮ ಹಾಗೂ ಕೊರಗಜ್ಜ ವಾರ್ಷಿಕ ಜಾತ್ರೆಯಲ್ಲಿ ಭಗವತಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಧಾರಾಕಾರವಾಗಿ ಮಳೆ ಸುರಿದಾಗ ಭಕ್ತರು ಕುಣಿದು ಕುಪ್ಪಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page