ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೃಹತ್ ಉದ್ಯೋಗ ಮೇಳಕ್ಕೆ (ರೋಜ್ಗಾರ್) ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿ, 75 ಸಾವಿರ ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯೋಗ ಮೇಳದ ಕುರಿತು ಮಾತನಾಡಿದ ಅವರು, ದೇಶದ ಅಮೃತ ಮಹೋತ್ಸವದ ಸಮಯದಲ್ಲಿ 75 ಸಾವಿರ ಸರ್ಕಾರಿ ಉದ್ಯೋಗಿಗಳ ನೇಮಕಾತಿ ನಡೆಯುತ್ತಿದೆ. ಹೀಗಾಗಿ ಹತ್ತು ಲಕ್ಷ ಉದ್ಯೋಗಗಳನ್ನು ಸೃಷ್ಠಿಸಲು ಕೇಂದ್ರ ಸರ್ಕಾರ ಕಾರ್ಯಕ್ರಮ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ನೇಮಕಾತಿ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹೆಜ್ಜೆ ಹಾಕಲಾಗುತ್ತಿದ್ದು, ಉದ್ಯಮ, ಉದ್ಯೋಗ, ಸೇವಾ ಕ್ಷೇತ್ರ, ಕಾರ್ಮಿಕ ವರ್ಗ, ಯುವಕರು ಸೇರಿದಂತೆ ಎಲ್ಲರ ಪಾತ್ರ ಮಹತ್ವದ್ದಾಗಿದೆ. ಮೂಲಸೌಕರ್ಯಗಳು ಉತ್ತಮವಾಗಿದ್ದರೆ ಈ ಭಾವನೆ ಜಾಗೃತವಾಗುತ್ತದೆ ಎಂದು ಹೇಳಿದರು.
ಕಳೆದ 8 ವರ್ಷಗಳಲ್ಲಿ ದೇಶದ ಅರ್ಥವ್ಯವಸ್ಥೆ ವೃದ್ಧಿಯಾಗುತ್ತಿದೆ. ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಜಾಗತಿಕವಾಗಿ ಭಾರತ 5ನೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯಾಗಿ ರೂಪುಗೊಂಡಿದೆ. ಆರ್ಥಿಕ ಪ್ರಗತಿಗೆ ಅಡೆತಡೆಗಳನ್ನು ನಿವಾರಿಸಲಾಗಿದೆ. ಈ ಹಿನ್ನಲೆಯಲ್ಲಿ ಉದ್ಯೋಗಾವಕಾಶದ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಕೌಶಲ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದ್ದು, ಕೌಶಲಾಭಿವೃದ್ಧಿ ಅಭಿಯಾನದ ಮೂಲಕ ಲಕ್ಷಾಂತರ ಜನರಿಗೆ ತರಬೇತಿ ನೀಡಲಾಗಿದೆ. ದೇಶದೆಲ್ಲೆಡೆ ಕೌಶಲ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂದು, ಬಾಹ್ಯಾಕಾಶ ವಲಯದಲ್ಲಿ ಹಲವು ಅವಕಾಶಗಳು ಲಭ್ಯ ಇವೆ. ಯುವಕರಿಗೆ ಇದನ್ನು ತೆರೆಯಲಾಗಿದ್ದು. ಅಪಾರ ಉದ್ಯೋಗ ಸಾಧ್ಯತೆ ನಿರ್ಮಾಣವಾಗಿದೆ ಎಂದರು.
ಬ್ಯಾಂಕಿಂಗ್ ವ್ಯವಸ್ಥೆಯ ಲಾಭ ಹಿಂದೆ ಸೀಮಿತ ಜನರಿಗೆ ಸಿಗುತ್ತಿತ್ತು. ಈ ಅಡೆತಡೆ ನಿವಾರಣೆಗೆ ಮುದ್ರಾ ಯೋಜನೆಯಂತಹ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ಉದ್ಯಮಶೀಲತೆ ವಿಸ್ತರಿಸಲು ನೆರವಾಗುತ್ತಿದೆ. ಇದರ ಅಡಿ ಈಗಾಗಲೇ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಇದರಿಂದ ಯುವಕರು ಸ್ವ ಉದ್ಯೋಗ ನಡೆಸಲು ಸಾಧ್ಯವಾಗಿದೆ. ಈ ಯೋಜನೆಯ ಶೇಕಡ 70ರಷ್ಟು ಲಾಭಾರ್ಥಿಗಳು ಮಹಿಳೆಯರಾಗಿದ್ದಾರೆ ಎನ್ನುವುದು ವಿಶೇಷ. ಇದಲ್ಲದೆ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, 8 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದರು.
ಡಿಜಿಟಲ್ ಇಂಡಿಯಾ ಕೂಡ ಲಕ್ಷಾಂತರ ಯುವಕರಿಗೆ ಅವಕಾಶ ನೀಡಿದ್ದು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸ್ಥಳೀಯ ಉದ್ಯೋಗ ನಿರ್ಮಾಣವಾಗಿದೆ. ಬರುವ ದಿನಗಳಲ್ಲಿ 5ಜಿ ತಂತ್ರಜ್ಞಾನದಿಂದ ಅಪಾರ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಲಿವೆ. ಭಾರತ ಸರ್ಕಾರ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದು, 100 ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಇದರಿಂದಾಗಿ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಹೆಚ್ಚಿದೆ. ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದರು.