ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಬೆದರಿಕೆಯೊಡ್ಡಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆಂದು ಆರೋಪಿಸಿ ಆರ್ ಆರ್ ನಗರ ಬಿಜೆಪಿ ಶಾಸಕ ಎಂ.ಮುನಿರತ್ನ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಲಕ್ಷ್ಮಿ ದೇವಿನಗರದ ಪೇಂಟರ್ ಸ್ಯಾಮ್ಯುಯೆಲ್ ಎಂಬವರು ಈ ಆರೋಪವನ್ನು ಶಾಸಕರ ಮೇಲೆ ಹೊರಿಸಿದ್ದು, ದೂರುದಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮುನಿರತ್ನ ಮತ್ತು ಬೆಂಬಲಿಗರಾದ ಸುರೇಶ್, ವಸಂತ್, ವಾಸಿಂ ಮತ್ತು ಸೀನಾ ಎನ್ನುವವರ ವಿರುದ್ಧ ಅಪಹರಣದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಎರಡು ದಿನಗಳ ಕೆಳಗೆ ಮಾತನಾಡುವ ನೆಪದಲ್ಲಿ ಅವರನ್ನು ಶಾಸಕ ಮುನಿರತ್ನ ಅವರ ಕಚೇರಿಗೆ ಬಲವಂತವಾಗಿ ಶಾಸಕರ ಹಿಂಬಾಲಕರು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಬಿಜೆಪಿ ಸೇರಿಸಿದ್ದಾರೆ ಎಂದು ಸಂತ್ರಸ್ಥ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಶಾಸಕ ಮುನಿರತ್ನ ನಿರಾಕರಿಸಿದ್ದಾರೆ.
ನಾನು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಏ.1ರಂದು ಶಾಸಕ ಮುನಿರತ್ನ ಮಾತನಾಡುವುದಿದೆ ಎಂದು ತಮ್ಮ ಹಿಂಬಾಲಕರಾದ ಸುರೇಶ್, ವಸಂತ್, ವಾಸಿಂ, ಸೀನಾ ಅವರನ್ನು ರಾಜ್ಕುಮಾರ್ ಸಮಾಧಿ ಬಳಿ ನನ್ನನ್ನು ಕರೆಸಲು ಕಳಿಸಿದ್ದರು. ಬಳಿಕ ವೈಯಾಲಿಕಾವಲ್ನಲ್ಲಿರುವ ಶಾಸಕರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಶಾಸಕ ಮುನಿರತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ಯಾಮುಯಲ್ ದೂರಿದ್ದಾರೆ.