ಮಂಗಳೂರು: ಕಾಂತಾರ ಸಿನೇಮಾದ ನಂತರ ಕರಾವಳಿಯ ದೈವಗಳನ್ನು ಅವಮಾನಿಸುವ, ತಿರುಚಿ ಸಿನೆಮಾಗಳಲ್ಲಿ ಬಳಸುವ ಪರಿಪಾಠ ಆರಂಭವಾಗಿದೆ ಎಂದು ಕರಾವಳಿಯಲ್ಲಿ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು.
ಈಗ ʼಕಲ್ಜಿಗʼ ಎಂಬ ಕನ್ನಡ ಸಿನೇಮಾ ತೆರೆಕಂಡಿದ್ದು, ಚಿತ್ರದಲ್ಲಿ ದೈವಕ್ಕೆ ಅಪಚಾರ ಎಸಗಿದ್ದಾರೆ ಎಂದು ಸಿನೆಮಾದ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವಿರೋಧ ಬರಹಗಳು ಬರಲಾರಂಭಿಸಿದೆ.
ಕರಾವಳಿಯವರೇ ಅಧಿಕ ಸಂಖ್ಯೆಯಲ್ಲಿ ನಟಿಸಿರುವ ಈ ಚಿತ್ರದ ಕೊರಗಜ್ಜ ದೈವದ ಅನುಕರಣೆಯು ಕರಾವಳಿಯ ದೈವಾರಾಧಕರ ಆಕ್ರೋಶಕ್ಕೆ ಗುರಿಯಾಗಿದೆ. ಜನಪ್ರಿಯ ತುಳು ನಟ ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಕಾಪಿಕಾಡ್ ಅವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗಿದೆ.
ಈ ಚಿತ್ರಕ್ಕೆ ಬಿಡುಗಡೆಯಾದ ತಕ್ಷಣ ತುಳುನಾಡಿನಾದ್ಯಂತ ವಿರೋಧ ವ್ಯಕ್ತವಾಗಿದೆ. ಸಿನಿಮಾದಲ್ಲಿರುವ ಕೊರಗಜ್ಜನ ಪಾತ್ರ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಚಿತ್ರದಲ್ಲಿ ಕೊರಗಜ್ಜನ ವೇಷ ತೊಟ್ಟು ಕಲಾವಿದರೊಬ್ಬರು ನರ್ತನ ಮಾಡಿದ್ದಾರೆ. ಇದಕ್ಕೆ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಲಿಗ ಅಭಿಯಾನ ಆರಂಭವಾಗಿದೆ. ಕಲ್ಜಿಗ ಚಿತ್ರ ಸೆಪ್ಟೆಂಬರ್ 14 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಸಿನಿಮಾ ವಿರುದ್ಧ ಕಾನೂನು ಹೋರಾಟ ನಡೆಸಲು ವೇದಿಕೆ ಮುಂದಾಗಿದೆ.