ಉಡುಪಿ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ ರೂ 5 ಲಕ್ಷ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ತಾಲ್ಲೂಕಿನ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಚೈತ್ರಾ ಕುಂದಾಪುರಳನ್ನು ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಗಳನ್ನು ಹಾಕಲು ನೆರವು ನೀಡುತ್ತೇನೆ ಎಂದು 2018ರಿಂದ 2022ರವರೆಗೆ ಹಂತ ಹಂತವಾಗಿ 5 ಲಕ್ಷ ಪಡೆದಿದ್ದಾರೆ ಎಂದು ಕೋಡಿ ಕನ್ಯಾನದ ಸುದಿನ ಎಂಬವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸುದಿನ ನೀಡಿದ ದೂರಿನ ಮೇರೆಗೆ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಮೂಲಕ ಚೈತ್ರ ವಿಚಾರಣೆಗೆ ಕೋಟ ಪೊಲೀಸರು ಮನವಿ ಮಾಡಿದ್ದು ಬಾಡಿವಾರೆಂಟ್ ನೀಡುವಂತೆ ಬೆಂಗಳೂರು 1st ACMM (ಒಂದನೇ ಮುಖ್ಯ ಅಪರ ಮುಖ್ಯ ದಂಡಾಧಿಕಾರಿಗಳ ನ್ಯಾಯಾಲಯ) ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಬೆಂಗಳೂರು 1st ACMM ಕೋರ್ಟಿಗೆ ಮನವಿ ರವಾನೆ ಮಾಡಲಾಗಿದ್ದು ಸಿಸಿಬಿ ವಿಚಾರಣೆ ಮುಗಿದ ಬಳಿಕ ಬಾಡಿವಾರೆಂಟ್ ಪಡೆಯುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಸಿಸಿಬಿ ವಶದಲ್ಲಿರುವ ಚೈತ್ರಾ ಮತ್ತು ಸಂಗಡಿಗರ ವಿಚಾರಣೆ ಮುಂದುವರೆದಿದೆ.