ಬೆಂಗಳೂರು: ಕಾವೇರಿ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿರುವಾಗಲೇ ರಾಜ್ಯದೆಲ್ಲೆಡೆ ನದಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆಗಳೂ ಕಾವು ಪಡೆದುಕೊಳ್ಳುತ್ತಿವೆ.
ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಈ ಕುರಿತು ಈಗಾಗಲೇ ಸಾಕಷ್ಟು ಹೋರಾಟಗಳು ನಡೆಯುತ್ತಿದ್ದ, ರೈತರು ಬೀದಿಗಿಳಿದಿದ್ದಾರೆ. ಅದನ್ನು ಬೆಂಬಲಿಸಿ ಕನ್ನಡಪರ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆಯೂ ರೈತರನ್ನು ಬೆಂಬಲಿಸಿ ಹೋರಾಟಕ್ಕಿಳಿದಿದೆ.
ತಮಿಳುನಾಡಿಗೆ ನೀರು ಹರಿಸುವುದನ್ನು ಈ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಯಾದ ನಾರಾಯಣ ಗೌಡ ನೇತ್ರತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಇಂದು ವಿಧಾನಸೌಧ ಮುತ್ತಿಗೆಯನ್ನು ಹಮ್ಮಿಕೊಂಡಿದೆ.
ಕರವೇ ಅಧ್ಯಕ್ಷ ನಾರಾಯಣ ಗೌಡರ ನೇತ್ರತ್ವದಲ್ಲಿ ಗಾಂಧಿನಗರದಲ್ಲಿರುವ ಸಂಘಟನೆಯ ಕಛೇರಿಯಿಂದ ಮೆರವಣಿಗೆ ಹೊರಡಲಿದ್ದು, ಇಂದು (ಸೆ.21) ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮೆರವಣಿಗೆ ವಿಧಾನಸೌಧ ತಲುಪಲಿದೆ ಎಂದು ತಿಳಿಸಲಾಗಿದೆ.
ಈ ವರ್ಷ ಮಳೆ ಕೊರತೆಯಾಗಿದ್ದು ಕಾವೇರಿ ಕೊಳ್ಳದ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಅಲ್ಲದೆ ಹೀಗೇ ನೀಋಉ ಬಿಡುತ್ತಿದ್ದರೆ ಹಳೆ ಮೈಸೂರು ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆಯೂ ಎದುರಾಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಈ ಪ್ರತಿಭಟನಾ ಮೆರವಣಿಗೆ ಹಾಗೂ ಮುತ್ತಿಗೆ ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ.