ದೆಹಲಿ: ಕಾವೇರಿ ಬಿಕ್ಕಟ್ಟು ಪರಿಹಾರಕ್ಕಾಗಿ ಸುಪ್ರೀಂ ಮೊರೆ ಹೋಗಿದ್ದ ಕರ್ನಾಟಕ ಸರ್ಕಾರಕ್ಕೆ ಅಲ್ಲಿಯೂ ಹಿನ್ನೆಡೆಯಾಗಿದೆ. ಕೋರ್ಟ್ ಹದಿನೈದು ದಿನಗಳ ಕಾಲ 5,000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶ ನೀಡಿದೆ.
ಇಂದಿನ ಸುಪ್ರೀಂ ತೀರ್ಪಿನ ಮೇಲೆ ಕಾವೇರಿ ಕೊಳ್ಳದ ಜನರ ದೃಷ್ಟಿ ನೆಟ್ಟಿತ್ತು. ಇದೀಗ ಕೋರ್ಟ್ ನದಿ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಹೇಳಿರುವುದರಿಂದ ಸರ್ಕಾರವು ಇಕ್ಕಟ್ಟಿಗೆ ಸಿಲುಕಿದೆ.
ಅತ್ತ ದಿನದಿಂದ ದಿನಕ್ಕೆ ಕಾವೇರಿ ಹೋರಾಟ ಕಾವೇರುತ್ತಿದ್ದು, ರೈತರು, ಕನ್ನಡಪರ ಸಂಘಟನೆಗಳು ಹಾಗೂ ಇತರ ಸಂಘಟನೆಗಳು ರಸ್ತೆಗಿಳಿದಿವೆ. ಈಗ ತೀರ್ಪಿನ ನಂತರ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ರಾಜ್ಯದೆಲ್ಲೆಡೆ ಮಳೆ ಕೊರತೆಯಿಂದಾಗಿ ಬರದ ಛಾಯೆ ಮೂಡಿದ್ದು, ಎಲ್ಲೆಡೆ ನೀರಿನ ಕೊರತೆ ಕಂಡುಬರುತ್ತಿದೆ, ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಹೇಳಿರುವುದು ಮೈಸೂರು, ಮಂಡ್ಯ, ಬೆಂಗಳೂರು ಭಾಗದ ಜನರನ್ನು ಚಿಂತೆಗೆ ದೂಡಿದೆ.
ಕಾವೇರಿಗೆ ನೀರು ಹರಿಸುವ ಕೊಡಗು ಪ್ರದೇಶಲ್ಲಿ ಈ ಬಾರಿ ಮಳೆ ಕೊರತೆಯಾಗಿರುವುದು ಈ ನೀರಿನ ಹಾಹಾಕಾರಕ್ಕೆ ಕಾರಣವಾಗಿವೆ. ಜೊತೆಗೆ ಮಲೆನಾಡು ಪ್ರದೇಶದಲ್ಲೂ ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಈಗಾಗಲೇ ಜನರು ತಮ್ಮ ಭತ್ತದ ಗದ್ದೆಗಳಿಗೆ ಬಾವಿಗಳಿಂದ ನೀರು ಪಂಪ್ ಮಾಡುತ್ತಿದ್ದು, ಜನವರಿ ವೇಳೆಗೆ ಬಾವಿಗಳು ಬತ್ತುವ ಆತಂಕದಲ್ಲಿದ್ದಾರೆ.
ಇನ್ನೊಂದೆಡೆ ಅಣೆಕಟ್ಟುಗಳು ತುಂಬದ ಕಾರಣ ವಿದ್ಯುತ್ ಉತ್ಪಾದನೆಯಲ್ಲೂ ಕೊರತೆಯಾಗುವ ಸಾಧ್ಯಗಳಿವೆ.