ಇದೊಂದು ಟೆಸ್ಟ್ ಡೋಜ್ ಅಷ್ಟೇ. ಸಂವಿಧಾನದ ಅಂಗಗಳೇ ಆದ ಸಮಾಜವಾದ, ಜಾತ್ಯತೀತ ಹಾಗೂ ಸಮಗ್ರತೆ ಪದಗಳನ್ನು ತೆಗೆದು ಹಾಕಿದರೆ ಎಲ್ಲಿ ಏನು ಪ್ರತಿರೋಧ ಬರುತ್ತದೆ ಎಂದು ಗುರುತಿಸಿ, ಆ ಪ್ರತಿರೋಧಕ್ಕೆ ತಕ್ಕಂತೆ ಪ್ರತಿತಂತ್ರಗಳನ್ನು ಹೂಡುವ ಪ್ರಯತ್ನದ ಭಾಗವಾಗಿಯೇ ಈ ಸಂವಿಧಾನ ಪೀಠಿಕೆ ವಿರೂಪ ಪ್ರಕ್ರಿಯೆ ಮಾಡಲಾಗಿದೆ. ಹಿಂದುತ್ವಕ್ಕೆ ಮಾರಕವಾಗಿರುವ ಈ ಪದಗಳನ್ನು ಪೀಠಿಕೆಯಿಂದ ತೆಗೆದು ಹಾಕಲು ಈಗಲೇ ಪೂರ್ವಭಾವಿ ಸಿದ್ದತೆಯನ್ನು ಬಿಜೆಪಿ ಮಾಡಿದೆ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು
ಸಂವಿಧಾನದ ಮೇಲೆ ಬಿಜೆಪಿ ನೇತೃತ್ವದ ಸರಕಾರ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಮಾಜವಾದ, ಜಾತ್ಯತೀತ ಹಾಗೂ ಸಮಗ್ರತೆ ಪದಗಳನ್ನೇ ತೆಗೆದು ಹಾಕಿ ವಿರೂಪಗೊಳಿಸಿದೆ.
ಹೊಸ ಸಂಸತ್ ಭವನದಲ್ಲಿ ನಡೆದ ಮೊದಲ ಅಧಿವೇಶನದಲ್ಲಿ ಹೀಗೆ ತಿರುಚಿದ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ಸಂಸದರಿಗೆ ಹಂಚಲಾಗಿದೆ. ಪ್ರಜಾಪ್ರಭುತ್ವದ ತಳಪಾಯವಾದ ಸಂವಿಧಾನವನ್ನು ಒಂದೇ ಸಲ ಬದಲಾಯಿಸಿದರೆ ಜನ ದಂಗೆ ಎದ್ದಾರೆಂಬ ಆತಂಕದಿಂದಾಗಿ ತಮ್ಮ ಹಿಂದುತ್ವವಾದಿ ಸಿದ್ದಾಂತಕ್ಕೆ ಸರಿಹೊಂದದ ಅಂಶಗಳನ್ನು ಹಂತ ಹಂತವಾಗಿ ಸಂವಿಧಾನದಿಂದ ಕಿತ್ತು ಹಾಕಿ ಕೊನೆಗೊಮ್ಮೆ ಹಿಂದೂರಾಷ್ಟ್ರ ಎಂದು ಘೋಷಿಸಿ ಮನುಸ್ಮೃತಿ ಪ್ರಣೀತ ಸಂವಿಧಾನವನ್ನು ಜಾರಿಗೆ ತರುವುದೇ ಬಿಜೆಪಿ ಪಕ್ಷ ಹಾಗೂ ಅದರ ಹಿಂದಿರುವ ಆರೆಸ್ಸೆಸ್ ಸಂಘಟನೆಯ ಉದ್ದೇಶವಾಗಿದೆ.
ಆ ಉದ್ದೇಶದ ಅನುಷ್ಟಾನಕ್ಕೆ ಮೊದಲು ಅಡ್ಡಿಯಾಗಿರುವುದೇ ಈ ಸಮಾಜವಾದ ಹಾಗೂ ಜಾತ್ಯತೀತತೆ. ಹಿಂದುತ್ವ ನಿಂತಿರುವುದೇ ಚಾತುರ್ವಣ್ಯದ ಜಾತಿ ಆಧಾರದ ವ್ಯವಸ್ಥೆಯ ಮೇಲೆ. ಈ ವ್ಯವಸ್ಥೆಯನ್ನು ಅಲ್ಲಗಳೆಯುವ ಜಾತ್ಯತೀತವಾದವನ್ನು ಹೇಗೆ ತಾನೇ ಈ ಹಿಂದುತ್ವವಾದಿಗಳು ಒಪ್ಪಿಕೊಳ್ಳಲು ಸಾಧ್ಯ? ಅದೇ ರೀತಿ ಸಮಾಜವಾದ ಎನ್ನುವುದು ಹಿಂದುತ್ವವಾದದ ವಿರುದ್ದವಾಗಿರುವಂತಹುದು. ಸಮಸಮಾಜ ಸ್ಥಾಪನೆಯೇ ಸಮಾಜವಾದದ ಮೂಲ ಆಶಯ. ಅಸಮಾನತೆಯನ್ನು ಖಾಯಂಗೊಳಿಸುವ ಸರ್ವಾಧಿಕಾರವೇ ಹಿಂದುತ್ವವಾದ. ಹೀಗಾಗಿ ಜಾತ್ಯತೀತದ ಜೊತೆಗೆ ಈ ಸಮಾಜವಾದ ಎನ್ನುವ ಪದವನ್ನೇ ಸಂವಿಧಾನದ ಪ್ರಸ್ತಾವನೆಯಿಂದ ತೆಗೆದು ಹಾಕಲು ಅಧಿವೇಶನದಲ್ಲಿ ಪ್ರಯತ್ನಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಎನ್ನುವುದನ್ನೂ ಬದಲಿಸಲಾಗಿದ್ದು ಸಮಗ್ರತೆ ಪದವನ್ನು ತೆಗೆದುಹಾಕಿ ರಾಷ್ಟ್ರೀಯ ಏಕತೆಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಯಾಕೆಂದರೆ ಹುಸಿ ರಾಷ್ಟ್ರೀಯವಾದದ ಭಾವನಾತ್ಮಕ ಪ್ರಚೋದನೆಯು ಜನರನ್ನು ಆಕರ್ಷಿಸಲು ಈ ಬಿಜೆಪಿಗೆ ಇರುವ ಸಮ್ಮೋಹನಾಸ್ತ್ರವಾಗಿದೆ. ದೇಶದ ಒಕ್ಕೂಟ ವ್ಯವಸ್ಥೆಯ ಸಮಗ್ರತೆಯನ್ನು ಒಡೆದು ಹಾಕಿ ಕೇಂದ್ರೀಕೃತ ಆಡಳಿತ ವ್ಯವಸ್ಥೆ ತರುವುದೇ ಬಿಜೆಪಿಯ ಏಕತೆ ಮಂತ್ರದ ಹಿಂದಿರುವ ಶಡ್ಯಂತ್ರವಾಗಿದೆ. ಏಕ ದೇಶ, ಏಕ ಚುನಾವಣೆ, ಏಕ ಸಂಸ್ಕೃತಿ, ಏಕ ಭಾಷೆ ಹೀಗೆ ಅನೇಕ ಏಕ ಗಳನ್ನು ಅನುಷ್ಟಾನಕ್ಕೆ ತರುವ ಹಾಗೂ ಏಕತೆಯನ್ನು ರಾಷ್ಟ್ರೀಯ ಹೆಸರಲ್ಲಿ ರಾಜ್ಯಗಳ ಮೇಲೆ, ರಾಜ್ಯಗಳ ಜನತೆಯ ಮೇಲೆ ಹೇರಲು ಈ ರಾಷ್ಟ್ರೀಯ ಏಕತೆ ಪದವನ್ನು ಉಳಿಸಿಕೊಂಡು ಸಮಗ್ರತೆಯನ್ನು ತೆಗೆದು ಹಾಕಲಾಗಿದೆ.

ಯಾಕೆ ಹೀಗೆ ಸಂವಿಧಾನಕ್ಕೆ ಅಪಚಾರ ಮಾಡಿದ್ದೀರಿ? ಎಂದು ವಿರೋಧ ಪಕ್ಷಗಳು ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ವಿರೋಧಿಸಿದಾಗ “ಸಂವಿಧಾನದ ಮೂಲ ಪ್ರಸ್ತಾವನೆ ಇರುವ ಪ್ರತಿಯನ್ನು ಸಂಸದರಿಗೆ ನೀಡಲಾಗಿದೆ” ಎಂದು ಕಾನೂನು ಸಚಿವರು ಉತ್ತರಿಸಿದರು. ಹೌದು.. 1949 ರಲ್ಲಿ ಅಂಗೀಕರಿಸಲಾದ ಸಂವಿಧಾನದ ಮೂಲ ಪ್ರತಿಯಲ್ಲಿ ಸಮಾಜವಾದ, ಜಾತ್ಯತೀತ ಹಾಗೂ ಸಮಗ್ರತೆ ಪದಗಳಿರಲಿಲ್ಲ. ಆದರೆ 1976 ರಲ್ಲಿ ಅಧಿಕೃತವಾಗಿ ಸಂವಿಧಾನಕ್ಕೆ 42 ನೇ ತಿದ್ದುಪಡಿ ತಂದು ಅಗತ್ಯವೆನಿಸುವ ಈ ಶಬ್ದಗಳನ್ನು ಸೇರಿಸಲಾಗಿತ್ತು. ಅವತ್ತಿನಿಂದಲೂ ಈ ಶಬ್ದಗಳು ಸಂವಿಧಾನದ ಪೀಠಿಕೆಯ ಭಾಗವಾಗಿದ್ದಷ್ಟೇ ಅಲ್ಲಾ ಈ ದೇಶದ ಆಶಯವನ್ನೂ ಸಾರುತ್ತಾ ಬಂದವು. ಮತ್ತೆ ತಿದ್ದುಪಡಿ ತಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಹುಮತದ ಒಪ್ಪಿಗೆ ಪಡೆದು ಬದಲಾಯಿಸುವವರೆಗೂ 1976 ರ ತಿದ್ದುಪಡೆಯೇ ಅಧಿಕೃತವಾಗಿ ಜಾರಿಯಲ್ಲಿರುತ್ತದೆ ಎನ್ನುವ ಕನಿಷ್ಟ ಪರಿಜ್ಞಾನವೂ ಈ ಮೋದಿ ಸರಕಾರಕ್ಕೆ ಇಲ್ವಾ?
ಇದೆ, ಇದ್ದರೂ ಅಧಿಕೃತವಾಗಿ ತಿದ್ದುಪಡಿಯಾದ ಪ್ರಸ್ತುತ ಚಾಲ್ತಿಯಲ್ಲಿರುವ ಪೀಠಿಕೆಯ ಬದಲಾಗಿ ಹಳೆಯ ಸಂವಿಧಾನದ ಪ್ರತಿಯನ್ನು ಉದ್ದೇಶಪೂರ್ವಕವಾಗಿಯೇ ಅಧಿವೇಶನದಲ್ಲಿ ಕೊಡಲಾಗಿದೆ.
ಇದೊಂದು ಟೆಸ್ಟ್ ಡೋಜ್ ಅಷ್ಟೇ. ಸಂವಿಧಾನದ ಅಂಗಗಳೇ ಆದ ಈ ಪದಗಳನ್ನು ತೆಗೆದು ಹಾಕಿದರೆ ಎಲ್ಲಿ ಏನು ಪ್ರತಿರೋಧ ಬರುತ್ತದೆ ಎಂದು ಗುರುತಿಸಿ, ಆ ಪ್ರತಿರೋಧಕ್ಕೆ ತಕ್ಕಂತೆ ಪ್ರತಿತಂತ್ರಗಳನ್ನು ಹೂಡುವ ಪ್ರಯತ್ನದ ಭಾಗವಾಗಿಯೇ ಈ ಸಂವಿಧಾನ ಪೀಠಿಕೆ ವಿರೂಪ ಪ್ರಕ್ರಿಯೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಬಹುಮತದಿಂದ ಸರಕಾರ ರಚಿಸಿ, ಅಧಿಕೃತವಾಗಿಯೇ ತಿದ್ದುಪಡಿ ತಂದು ಹಿಂದುತ್ವಕ್ಕೆ ಮಾರಕವಾಗಿರುವ ಈ ಪದಗಳನ್ನು ಪೀಠಿಕೆಯಿಂದ ತೆಗೆದು ಹಾಕಲು ಈಗಲೇ ಪೂರ್ವಭಾವಿ ಸಿದ್ದತೆಯನ್ನು ಬಿಜೆಪಿ ಮಾಡಿದೆ. ಅದಕ್ಕಾಗಿಯೇ ಅನಧಿಕೃತವೆಂದು ಗೊತ್ತಿದ್ದರೂ ಹಳೆಯ ಪ್ರಸ್ತಾವನೆಯನ್ನು ಅಧಿವೇಶನದಲ್ಲಿ ಹಂಚುವ ದುಸ್ಸಾಹಕ್ಕೆ ಮೋದಿ ಸರಕಾರ ಚಾಲನೆ ಕೊಟ್ಟಿದೆ.
ನಾವು ಆಡಳಿತಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಬಿಜೆಪಿ ಸಂಸದರು ಬಹಿರಂಗವಾಗಿ ಹೇಳಿದಂತೆಯೇ ಬಿಜೆಪಿ ಸರಕಾರ ನಡೆದುಕೊಳ್ಳುತ್ತಿದೆ. ಬಹುತ್ವದ ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸುವ ಪ್ರಯತ್ನದ ಭಾಗವಾಗಿಯೇ ಈಗ ಸಂವಿಧಾನ ಪೀಠಿಕೆಯ ಶಬ್ದಗಳ ನಿವಾರಣೆ. ಮತ್ತೆ ದೇಶವಾಸಿಗಳಲ್ಲಿ ಭಾವನಾತ್ಮಕ ಭ್ರಮೆಗಳನ್ನು ಹುಟ್ಟಿಸಿ ಮತ್ತೊಮ್ಮೆ ಬಹುಮತದ ಅಧಿಕಾರವನ್ನು ಬಿಜೆಪಿ ಸರಕಾರ ಪಡೆದಿದ್ದೇ ಆದರೆ ಸಂವಿಧಾನದ ಸಮಗ್ರ ಬದಲಾವಣೆ ಶತಸಿದ್ದ. ಚಾತುರ್ವರ್ಣ ಆಧಾರಿತ ಹಿಂದುತ್ವವಾದಿ ಸರ್ವಾಧಿಕಾರಿ ಪ್ರಭುತ್ವ ಸ್ಥಾಪನೆಗೆ ಮೋದಿ ಬದ್ದ. ಹಾಗೇನಾದರೂ ಆದರೆ ಸಮಾನತೆ ಜಾತ್ಯತೀತತೆ ಈ ದೇಶದಲ್ಲಿ ನಿಷಿದ್ಧ.
ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ: ಸಂಭ್ರಮದ ನಡುವೆಯೇ ನೂರೆಂಟು ಅನುಮಾನಗಳು
ಈಗ ದೇಶದಲ್ಲಿ ಸಂವಿಧಾನ ಉಳಿಸಲು ಮಾಡು ಇಲ್ಲವೇ ಮಡಿ ಪರಿಸ್ಥಿತಿ ಇದೆ. ಇದನ್ನು ಮುಂಬರುವ ಲೋಕಸಭಾ ಚುನಾವಣೆ ನಿರ್ಧರಿಸಲಿದೆ. ಸಮಾನತೆಯನ್ನು ಸಾರುವ, ಎಲ್ಲರಿಗೂ ಒಂದೇ ಕಾನೂನನ್ನು ಹೊಂದಿರುವ ನಮ್ಮ ಹೆಮ್ಮೆಯ ಸಂವಿಧಾನವನ್ನು ಉಳಿಸಲು ವಿರೋಧ ಪಕ್ಷಗಳು ತಮ್ಮೊಳಗಿನ ಸ್ವಾರ್ಥ ಹಾಗೂ ಅಸಮಾಧಾನಗಳನ್ನು ಬಿಟ್ಟು ಒಂದಾಗಿ ಫ್ಯಾಸಿಸ್ಟ್ ಪ್ರಭುತ್ವವನ್ನು ಸೋಲಿಸಲೇ ಬೇಕಿದೆ. ಗೋದಿ ಮಾಧ್ಯಮಗಳಿಗೆ ಪರ್ಯಾಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನ ಉಳಿಸಿ ಚಳುವಳಿ ಶುರುವಾಗಬೇಕಿದೆ. ಪ್ರಜ್ಞಾವಂತರು, ಫ್ಯಾಸಿಸಂ ವಿರೋಧಿಗಳು, ಬರಹಗಾರರು, ಕಲಾವಿದರು, ಹೋರಾಟಗಾರರು, ನಿಜವಾದ ದೇಶಪ್ರೇಮಿಗಳು ಸಂವಿಧಾನ ಉಳಿಸಲು ಜನಾಂದೋಲನವನ್ನು ಹುಟ್ಟು ಹಾಕಿ ಮುನ್ನಡೆಸಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಇಲ್ಲದೇ ಹೋದರೆ, ನಿರ್ಲಕ್ಷ ತೋರಿದರೆ, ಆತಂಕ ಭಯದಿಂದ ಹಿಂಜರಿದರೆ ಈ ಸಂವಿಧಾನದ ಸಮಗ್ರ ಬದಲಾವಣೆಯನ್ನು ತಡೆಯಲು ಸಾಧ್ಯವೇ ಇಲ್ಲ. ಹಿಂದುತ್ವವಾದಿಗಳ ಮನುಸ್ಮೃತಿ ಆಧಾರದ ಸಂವಿಧಾನ ಈ ದೇಶವನ್ನು ಆಳುವುದರಲ್ಲಿ ಸಂದೇಹವೇ ಇಲ್ಲ. ಸರ್ವಾಧಿಕಾರಿ ಫ್ಯಾಸಿಸ್ಟ್ ಪ್ರಭುತ್ವವು ಪ್ರಜಾಪ್ರಭುತ್ವವನ್ನು ಸರ್ವನಾಶಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗೇನಾದರೂ ಆದರೆ ಅಸಮಾನತೆಯಲ್ಲಿ ನರಳುವ ಮುಂದಿನ ತಲೆಮಾರು ಇಂತಹ ನಕಾರಾತ್ಮಕ ಬದಲಾವಣೆಗೆ ಅವಕಾಶ ಮಾಡಿಕೊಟ್ಟವರನ್ನು ಎಂದೂ ಕ್ಷಮಿಸಲು ಸಾಧ್ಯವೇ ಇಲ್ಲ.
- ಶಶಿಕಾಂತ ಯಡಹಳ್ಳಿ, ಪತ್ರಕರ್ತರು
- ಈ ವಿಡಿಯೋ ನೋಡಿ : ಸಂವಿಧಾನ ತಿರುಚಿದ ಮೋದಿ ಬಿಜೆಪಿ ಸರ್ಕಾರದ ನೀಚ ನಡೆ https://youtu.be/cQyCM7SyicA