ಬೆಂಗಳೂರು: ಕೆಪಿಎಸ್ಸಿ ಅಧ್ಯಕ್ಷ ಮತ್ತು ಕೆಲವು ಸದಸ್ಯರು ಹಾಗೂ ಕೆಪಿಎಸ್ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರ ಕೆಲವು ದಿನಗಳಿಂದ ಜಟಾಪಟಿ ನಡೆಯುತ್ತಿದೆ, ಇದರ ಮಧ್ಯೆಯೇ, ಸರ್ಕಾರ ಪ್ರಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಲತಾ ಕುಮಾರಿ ಅವರಿಗೆ 10 ದಿನ ಗಳಿಕೆ ರಜೆ ನೀಡಿ ಮನೆಗೆ ಕಳುಹಿಸಿದೆ.
ಈ ಕುರಿತು ಡಿಪಿಎಆರ್ ಇಲಾಖೆಯು ಬುಧವಾರ ಕೆ.ಎಸ್. ಲತಾ ಕುಮಾರಿ ಅವರಿಗೆ ಫೆಬ್ರುವರಿ 7 ರಿಂದ ಫೆಬ್ರುವರಿ 17ರವರೆಗೆ ಗಳಿಕೆ ರಜೆ ನೀಡಿ ಆದೇಶ ಹೊರಡಿಸಿದೆ. ಅವರ ರಜೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಕೆ ಅವರನ್ನು ಕೆಪಿಎಸ್ಸಿ ಪ್ರಭಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಲಾಗಿದೆ.
ಕೆಪಿಎಸ್ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಕೆಲ ಸದಸ್ಯರು ಮತ್ತು ಲತಾಕುಮಾರಿ ಅವರ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ಮಧ್ಯೆಯೇ ಪ್ರಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಲತಾ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಯೋಗದ ಆಯ್ಕೆ ಸಮಿತಿ ಸೂಚಿಸಿದ್ದ ಅಭ್ಯರ್ಥಿಯನ್ನು ಕಾನೂನು ಕೋಶದ ಮುಖ್ಯಸ್ಥ ಹುದ್ದೆಗೆ ನೇಮಿಸಿ ತಕ್ಷಣ ಆದೇಶ ಹೊರಡಿಸಬೇಕು ಎಂದು ಅಧ್ಯಕ್ಷರಿಂದ ಒತ್ತಡ ಇತ್ತು ಎಂಬುದು ತಿಳಿದು ಬಂದಿದೆ. ಅದು ಸಾಧ್ಯವಾಗದೇ ಇದ್ದರೆ ರಜೆ ಮೇಲೆ ತೆರಳಬೇಕು’ ಎಂದು ಅಧ್ಯಕ್ಷರು ಮತ್ತು ಸದಸ್ಯರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಅವರ ರಜೆಯ ಹಿಂದೆ ಈ ಒತ್ತಡವೇ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.