Home ಬ್ರೇಕಿಂಗ್ ಸುದ್ದಿ ಕೆಪಿಟಿಸಿಎಲ್ ನೇಮಕಾತಿ ಅಕ್ರಮ: ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ

ಕೆಪಿಟಿಸಿಎಲ್ ನೇಮಕಾತಿ ಅಕ್ರಮ: ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ

0

ಬೆಂಗಳೂರು: ಕೆಪಿಟಿಸಿಎಲ್ ನೇಮಕಾತಿ ಅಕ್ರಮಕ್ಕೆ ಸಂಬಂದಿಸಿ ಪ್ರಶ್ನೆಗಳ ಸುರಿಮಳೆ ಹಾಕಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಬೆವರಿಳಿಸಿದ್ದಾರೆ.

ಪಿಎಸ್‌ಐ ಹಗರಣದ ತನಿಖೆಯೇ ಮುಗಿದಿಲ್ಲ, ಅಷ್ಟರಲ್ಲೇ ಕೆಪಿಟಿಸಿಎಲ್ ನೇಮಕಾತಿಯಲ್ಲಿ ಅಕ್ರಮ ನಡೆದು, ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಧಾರಾವಾಹಿಯ ಕಂತುಗಳಂತೆ ನಿತ್ಯ ಒಂದೊಂದಾಗಿ ಹೊರಬರುತ್ತಿದೆ ಎಂದು ಟೀಕಿಸಿದ್ದಾರೆ.

“ಶ್ರೀಮಂತರ ಮಕ್ಕಳಿಗೆ ಸರ್ಕಾರಿ ಉದ್ಯೋಗ, ಬಡವರ ಮಕ್ಕಳಿಗೆ ತ್ರಿಶೂಲ ಧೀಕ್ಷೆ”….. ಧರ್ಮದ ಹೆಸರಲ್ಲಿ ಹಣ, ಚುನಾವಣೆ ಗೆಲ್ಲಲು ಬೇಕಾದ ಮತ ಎರಡೂ ಬಂದಂತಾಯಿತು ಅಲ್ಲವೇ ಸುನಿಲ್‌ ಕುಮಾರ್‌ ಕಾರ್ಕಾಳ್ ಅವರೇ? ಬಿಜೆಪಿ ಅವರ ಭ್ರಷ್ಟಾಚಾರದ ಸರಣಿಗೆ ಕೊನೆಯೆಂದು?. ಬೊಮ್ಮಾಯಿ ಸರ್ಕಾರದಲ್ಲಿರುವವರೆಲ್ಲರೂ ಸತ್ಯಹರಿಶ್ಚಂದ್ರರಾಗಿದ್ದರೆ ತನಿಖೆಗೆ ಯಾಕೆ ಹೆದರಿಕೊಳ್ಳುತ್ತಿದ್ದಾರೆ? ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಿ. ಆರೋಪಗಳು ಕೇಳಿಬಂದಾಗ ತನಿಖೆ ನಡೆಸಿ ಸತ್ಯಾಸತ್ಯತೆ ಜನತೆಯ ಮುಂದಿಡುವುದು ಸರ್ಕಾರದ ಕರ್ತವ್ಯ ಎಂದು ಪ್ರಶ್ನಿಸಿದ್ದಾರೆ.

ಕಮಿಷನ್ ಹಾವಳಿಗೆ ಬೇಸತ್ತ ಗುತ್ತಿಗೆದಾರರು ಕಳೆದ ವರ್ಷವೇ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದರ ನಂತರ ಸಮಸ್ಯೆ ಬಗೆಹರಿದಿಲ್ಲ, ಕಿರುಕುಳ ಹೆಚ್ಚಾಗಿದೆಯಂತೆ. ತನಿಖೆಗೆ ಆದೇಶಿಸಿದರೆ ಎಲ್ಲ ಪುರಾವೆಗಳನ್ನು ಕೊಡಲು ಸಿದ್ಧನಿದ್ದೇನೆ ಎಂದು ಸಂಘದ ಅಧ್ಯಕ್ಷರೇ ಹೇಳಿರುವಾಗ  ಬಿಜೆಪಿ ಸರ್ಕಾರ ಯಾಕೆ ಒಪ್ಪುತ್ತಿಲ್ಲ? ನಮ್ಮ ಕಾಲದಲ್ಲಿ ಹಗರಣಗಳು ನಡೆದಿಲ್ಲವೇ ಎಂದು ಬೊಮ್ಮಾಯಿ ಅವರು ಕೇಳಿದ್ದಾರೆ. ಮುಖ್ಯಮಂತ್ರಿಯಾಗಿ ನಾನು ಐದು ಪ್ರಕರಣಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹೆದರದೆ ನಿರ್ಧಾರ ಕೈಗೊಂಡಿದ್ದೆ. ನೀವು ಯಾಕೆ ತನಿಖೆಗೆ ಹೆದರುತ್ತೀರಿ? ಎಂದು ವ್ಯಂಗ್ಯವಾಡಿದ್ದಾರೆ.

ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಅಧಿಕಾರಿಯನ್ನು ಮತ್ತೆ ಅದೇ ಸ್ಥಳಕ್ಕೆ ನೇಮಕ ಮಾಡಲು ಶಾಸಕ ಬೋಪಯ್ಯ ಅವರು 2.5 ಕೋಟಿ ಲಂಚ ಪಡೆದಿದ್ದಾರೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚೆಂಗಪ್ಪ ಆರೋಪಿಸಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು ಎಂದು ತಿರುಗೇಟು ನೀಡಿದ್ದಾರೆ.

ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ 22,000 ಕೋಟಿ ಬಿಲ್ ಹಣ ಬಿಡುಗಡೆಗೆ ಬಾಕಿ ಇದೆ. 40% ಸರ್ಕಾರಕ್ಕೆ, 20% ಗುತ್ತಿಗೆದಾರನಿಗೆ, 15% GST ಗೆ, ಉಳಿದ 25% ನಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಿದ್ದಾಗ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯ. ಸಂತೋಷ್ ಪಾಟೀಲ ಎಂಬ ಗುತ್ತಿಗೆದಾರ ಸಚಿವ ಕೆ.ಎಸ್. ಈಶ್ವರಪ್ಪ ಅವರ ಲಂಚದ ಕಿರುಕುಳಕ್ಕೆ ನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ. ಇದರಿಂದ ಕೆ ಎಸ್‌ ಈಶ್ವರಪ್ಪಅವರು ರಾಜೀನಾಮೆ ನೀಡಬೇಕಾಯಿತು. ಆದರೆ ಲಂಚ ಕೊಡುವುದಿಲ್ಲ ಎನ್ನುವವರು ಸಂತೋಷ್ ಪಾಟೀಲ್ ನಂತೆ ಸಾಯಬೇಕಾಗುತ್ತದೆ ಎಂದರು.

ಸರ್ಕಾರವೇ ಭ್ರಷ್ಟವಾಗಿದ್ದರೆ ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳುವವರು ಯಾರು ?. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ, ಅದನ್ನು ಮೃತನ ಸಹೋದರ ಚಾಲೆಂಜ್ ಮಾಡಿದ್ದಾರೆ. ಈ ರೀತಿ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯಬಾರದು.

ಪಿ.ಎಸ್.ಐ ನೇಮಕಾತಿಯಲ್ಲಿ ಮಾತ್ರವಲ್ಲ, ವಿಶ್ವವಿದ್ಯಾಲಯದ ನೇಮಕಾತಿಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಪಿ.ಎಸ್.ಐ ನಲ್ಲಿ 300 ಅಭ್ಯರ್ಥಿಗಳಿಂದ 30 ಲಕ್ಷ ರೂ.ಗಳಿಂದ ಒಂದು ಕೋಟಿ ರೂಪಾಯಿ ವರೆಗೆ ಲಂಚ ಪಡೆದಿದ್ದಾರೆ. ಇದರ ಹಿಂದಿರುವ ಎಲ್ಲಾ ಭ್ರಷ್ಟರ ಹೆಸರು ಹೊರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ ಎಂದು ಗುಡುಗಿದರು.

ವರ್ಗಾವಣೆಗೆ ಹೋಟೆಲ್ ತಿಂಡಿಯ ಹಾಗೆ ಬೆಲೆ ನಿಗದಿ ಮಾಡಿದ್ದಾರೆ. ಎಸ್.ಪಿ ಇಂದ ಹಿಡಿದು ಪೊಲೀಸ್ ಪೇದೆಗಳ ವರೆಗೆ ಒಂದೊಂದು ಬೆಲೆ ನಿಗದಿ ಮಾಡಿದ್ದಾರೆ. ವರ್ಗಾವಣೆಯಾದ ಒಂದು ವರ್ಷದಲ್ಲಿ ಎಷ್ಟಾದರೂ ಹಣ ಹೊಡೆಯಿರಿ ಎಂದು ಬಿಜೆಪಿ ಸರ್ಕಾರದವರು ಅವರಿಗೆ ಅವಕಾಶ ಕೊಟ್ಟಿದ್ದಾರೆ. ಮೂರು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಸರ್ಕಾರದ ಸಾಧನೆ ಬಗ್ಗೆ ಮಾತನಾಡಬೇಕು. ಆದರೆ ಬಿಜೆಪಿ ನಾಯಕರು ಹಲಾಲ್, ಹಿಜಾಬ್, ಮೀನು-ಮಾಂಸ, ಸಾವರ್ಕರ್, ಜಾತಿ, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆ ಕಡೆ ಸೆಳೆಯುವ ಕುತಂತ್ರ ಎಂದು ಹೇಳಿದರು.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ರೂ.1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮತ್ತು ರೈತರ ಬೆಳೆಗೆ ಉತ್ಪಾದನಾ ವೆಚ್ಚದ ಒಂದುವರೆ ಪಟ್ಟು ಬೆಂಬಲ ಬೆಲೆ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು. ನುಡಿದಂತೆ ನಡೆದಿದೆಯೇ? ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 5 ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. 4 ವರ್ಷದಲ್ಲಿ ಖರ್ಚು ಮಾಡಿದ್ದೆಷ್ಟು? ಮುಖ್ಯಮಂತ್ರಿಗಳ ಹೆಸರಲ್ಲಿ ಪ್ರತೀ ತಾಲೂಕಿಗೆ ಒಂದರಂತೆ ಒಟ್ಟು 300 ಕ್ಯಾಂಟೀನ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದರು ಎಲ್ಲಿದೆ  ಬಿಜೆಪಿ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

2013ರಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಎಲ್ಲ 165 ಭರವಸೆಗಳನ್ನು ನಾವು ಈಡೇರಿಸಿದ್ದೆವು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿನ 90% ಭರವಸೆಗಳನ್ನು ಈಡೇರಿಸಿಲ್ಲ. ಇದಕ್ಕೆ ದುಡ್ಡಿನ ಕೊರತೆ ಕೂಡಾ ಕಾರಣ. ಸದನದೊಳಗೆ ಈ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಎಸಿಬಿ ದೇಶಕ್ಕೆ ಹೊಸದೇನಲ್ಲ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಕೇರಳ, ಪಶ್ಚಿಮ ಬಂಗಾಳಗಳಲ್ಲಿಯೂ ಲೋಕಾಯುಕ್ತ ಜೊತೆ ಎಸಿಬಿ ಕಾರ್ಯನಿರ್ವಹಿಸುತ್ತಿದೆ. ಆ ಹಿನ್ನೆಲೆಯಲ್ಲಿಯೇ ನಾವು ಎಸಿಬಿ ಸ್ಥಾಪಿಸಿದ್ದೆವು. ಅದಕ್ಕೆ ಸದುದ್ದೇಶ ಇತ್ತೇ ಹೊರತು ದುರುದ್ದೇಶ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವ ಯಕಶ್ಚಿತ್ ರಾಜಕಾರಣಿ. ಅವರಿಗೆ ಧೈರ್ಯವಿದ್ದರೆ ನಮ್ಮ ಪಕ್ಷದ ವಕ್ತಾರ ಲಕ್ಷ್ಮಣ್ ಸೇರಿದಂತೆ ಅನೇಕರು ಹಾಕಿರುವ ಸವಾಲನ್ನು ಸ್ವೀಕರಿಸಿ ಚರ್ಚೆಗೆ ಬರಲಿ. ಮುಖ್ಯಮಂತ್ರಿಯಾಗಿ ನಾನು ಮೈಸೂರು ನಗರಕ್ಕೆ ಏನು ಮಾಡಿದ್ದೇನೆ? ಪ್ರತಾಪ್ ಸಿಂಹ ಏನು ಮಾಡಿದ್ದಾರೆ? ಎಂದು ಚರ್ಚೆಯಾಗಲಿ ಎಂದು ಸವಾಲ್‌ ಹಾಕಿದರು.

You cannot copy content of this page

Exit mobile version