ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಕಾರಣಕ್ಕೆ ಇಂದು ಜೆ.ಎಮ್.ಎಮ್ ಪಕ್ಷದ ನಾಯಕ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಶಾಸಕ ಸ್ಥಾನ ಅನರ್ಹಗೊಳ್ಳುವ ಸಾಧ್ಯತೆ ಇದೆ.
ಚುನಾವಣಾ ಆಯೋಗವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜಾರ್ಖಂಡ್ ರಾಜ್ಯಪಾಲರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇಂದು ರಾಜಭವನದಿಂದ ರಾಜಿನಾಮೆಗೆ ಸೂಚನೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೋರೆನ್ ರಾಜೀನಾಮೆ ನೀಡಬೇಕಾಗುತ್ತದೆ.

ತಮ್ಮ ಅಧಿಕಾರಾವಧಿಯಲ್ಲೇ ತಮಗೆ ಗಣಿಗಾರಿಕೆ ಗುತ್ತಿಗೆ ಪಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಆರೋಪ ಸಾಭೀತಾಗುವ ಸಾಧ್ಯತೆ ಇದ್ದ ಕಾರಣ ಚುನಾವಣಾ ಆಯೋಗ ಜಾರ್ಖಂಡ್ ರಾಜ್ಯಪಾಲರಾದ ರಮೇಶ್ ಬೈಸ್ ಅವರಿಗೆ ಸೋರೆನ್ ಅವರ ಶಾಸಕ ಸ್ಥಾನ ಅನರ್ಹಗೊಳಿಸುವ ಬಗ್ಗೆ ಅಧಿಕೃತ ದಾಖಲೆ ಒದಗಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಟ್ವಿಟ್ ಮಾಡಿ “ನಾನು ಬುಡಕಟ್ಟು ಜನಾಂಗದ ಮಗ, ಅವರ ತಂತ್ರ ಕುತಂತ್ರಗಳಿಗೆ ಭಯ ಪಡುವವನಲ್ಲ. ನಮ್ಮ ಪೂರ್ವಜರು ನಮ್ಮಿಂದ ಭಯದ ಭಾವನೆಯನ್ನು ಎಂದಿಗೋ ತಗೆದುಹಾಕಿದ್ದಾರೆ. ನಾವು ಆದಿವಾಸಿಗಳ DNA ಯಲ್ಲಿ ಭಯಕ್ಕೆ ಜಾಗವಿಲ್ಲ” ಎಂದು ಟ್ವಿಟ್ ಮೂಲಕ ಸಂದೇಶ ರವಾನಿಸಿದ್ದಾರೆ.
ಸಧ್ಯ ಹೇಮಂತ್ ಸೋರೆನ್ ಶಾಸಕ ಸ್ಥಾನ ಅನರ್ಹಗೊಂಡರೆ ಇನ್ನು ಆರು ತಿಂಗಳ ನಂತರ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಈ ಬಗ್ಗೆ ಸಂವಿಧಾನಿಕ ತಜ್ಞರ ಜೊತೆಗೆ ಹೇಮಂತ್ ಸೋರೆನ್ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.