ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಿರಿಯ ಸಹೋದರರಾದ ರಾಮೇಗೌಡರು ನಿನ್ನೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೈಸೂರಿನ ಸಿದ್ದರಾಮನ ಹುಂಡಿ ನಿವಾಸಿಯಾದ ರಾಮೇಗೌಡರು ಕೊನೆಯ ದಿನಗಳ ವರೆಗೂ ಹಳ್ಳಿಯ ಸಾಮಾನ್ಯ ರೈತನಂತೆ ಬದುಕಿ ಬಾಳಿದವರು. ರಾಮೇಗೌಡರಿಗೆ ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಅಣ್ಣ ಸಿದ್ದರಾಮಯ್ಯ ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿ ಆಗಿದ್ದರೂ ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೇ ಸ್ವಲ್ಪ ಕೂಡಾ ಹಮ್ಮು ಬಿಮ್ಮು ತೋರಿಸಿದವರಲ್ಲ. ರಾಜ್ಯದ ಮುಖ್ಯಮಂತ್ರಿ ಆದಾಗಲೂ ಸಹ ಸರ್ಕಾರದ ಕಡೆಯಿಂದ ಲಾಬಿ ಮಾಡಿ ಉಪಕಾರ ಪಡೆದವರಾಗಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ರೈತನಂತೆ ಗುರುತಿಸಿಕೊಂಡಿದ್ದರು ರಾಮೇಗೌಡರು.
ಇಂದು ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ರಾಮೇಗೌಡರ ಅಂತ್ಯಕ್ರಿಯೆ ನಡೆಯಲಿದ್ದು ಸಿದ್ದರಾಮಯ್ಯ ಕುಟುಂಬ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.