ಮೈಸೂರು: ಟಿಪ್ಪು ಹೆಸರಿನ ರೈಲನ್ನು ಒಡೆಯರ್ ಹೆಸರಿಗೆ ಬದಲಾಯಿಸಿರುವುದರ ಕುರಿತು ಇಂದು ನಗರದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, “ಸಂಸದ ಪ್ರತಾಪ ಸಿಂಹ ಅವರನ್ನ ಆಯ್ಕೆ ಮಾಡಿರುವುದು ರೈಲಿನ ಹೆಸರು ಬದಲಾಯಿಸುವುದಕ್ಕಲ್ಲ. ಅವರು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ ಅದರತ್ತ ಗಮನ ಕೊಡಲಿ,” ಎಂದು ಹರಿಹಾಯ್ದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು SC/ST ಮೀಸಲಾತಿ ಹೆಚ್ಚಳದಿಂದ ಯಾವ ಪಕ್ಷಕ್ಕೂ ಪ್ಲಸ್ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ದೇವೆಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿಈ ವರ್ಗಕ್ಕೆ ಮೀಸಲಾತಿ ದೊರಕಿಸಿಕೊಟ್ಟರು. ಆದರೆ ಈ ಕೆಲಸದ ಕುರಿತು ಅವರನ್ನು ನೆನಪಿಸಿಕೊಳ್ಳುವ ಕೆಲಸವಾಗಿಲ್ಲವೆಂದು ಅವರು ಬೇಸರದಿಂದ ನುಡಿದರು.
ಭಾರತ್ ಜೋಡೋ ಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಅವರು, ʼಯಾತ್ರೆಯಿಂದ ನಮಗೆ ಯಾವುದೇ ನಷ್ಟವಿಲ್ಲ. ಜೆಡಿಎಸ್ ಶಕ್ತಿ ಏನೆಂದು 23ರ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದರು. ಗುಬ್ಬಿ ಶಾಸಕ ಶ್ರೀನಿವಾಸ್ ಈಗ ನಮ್ಮ ಪಕ್ಷದಲ್ಲಿಯೇ ಇಲ್ಲ. ಅವರು ಭಾರತ್ ಜೋಡೋಗೆ ಬೆಂಬಲ ಕೊಟ್ಟರೆ ನಮಗೇನು? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.