Home ರಾಜಕೀಯ ದೇವೇಗೌಡರಿಗೆ ಬಂದ ಆ ಫೋನ್ ಕರೆಯೂ, ಕುಮಾರಸ್ವಾಮಿಯ ದಿಢೀರ್ ಶರಣಾಗತಿ ಪತ್ರಿಕಾಗೋಷ್ಠಿಯೂ

ದೇವೇಗೌಡರಿಗೆ ಬಂದ ಆ ಫೋನ್ ಕರೆಯೂ, ಕುಮಾರಸ್ವಾಮಿಯ ದಿಢೀರ್ ಶರಣಾಗತಿ ಪತ್ರಿಕಾಗೋಷ್ಠಿಯೂ

0

BREAKING NEWS

ಎಲ್ಲರೂ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ? ಎಂದು ತಲೆಕೆಡಿಸಿಕೊಂಡಿದ್ದಾರೆ. ಇಂಟರ್ ಪೋಲ್ ಸಹಾಯ ಕೇಳಿದರೂ ಎಸ್ ಐ ಟಿಯಿಂದ ಆತನ ಜಾಡು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಒಮ್ಮೊಮ್ಮೆ ಜರ್ಮನಿಯತ್ತ ಬೊಟ್ಟು ತೋರಿಸಿದರೆ, ಮತ್ತೊಂದು ಸಲ ಲಂಡನ್ ನಲ್ಲಿ ಓಡಾಡಿಕೊಂಡಿದ್ದಾನೆ ಎಂಬ ಸುದ್ದಿಗಳು ಬರುತ್ತಿವೆ.

ಇಂತದ್ದೊಂದು ದೊಡ್ಡ ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಎಸಗಿರುವ ತಪ್ಪು ಎಷ್ಟು ದೊಡ್ಡದೋ, ಆತನಿಗೆ ರಕ್ಷಣೆ ಕೊಟ್ಟು ಬಚಾವು ಮಾಡುತ್ತಿರುವವರ ಅಪರಾಧ ಕೂಡಾ ಅಷ್ಟೇ ದೊಡ್ಡದು. ಇದರಲ್ಲಿ ಅನುಮಾನವಿಲ್ಲ. ಹಾಗೆ ಬಚಾವು ಮಾಡುತ್ತಿರುವವರು ಯಾರು? ಕೇಂದ್ರ ಸರ್ಕಾರ, ಆತನಿಗೆ ನೀಡಿರುವ ಡಿಪ್ಲೊಮ್ಯಾಟಿಕ್ ಪಾಸ್ ರದ್ದು ಮಾಡದೆ ಆತ ವಿದೇಶದಲ್ಲೆ ತಲೆಮರೆಸಿಕೊಳ್ಳಲು ನೆರವಾಗುತ್ತಿದೆ ಅನ್ನೋದು ರಾಜ್ಯ ಕಾಂಗ್ರೆಸಿಗರ ವಾದ. ಇದು ಎಷ್ಟರಮಟ್ಟಿಗೆ ಸತ್ಯವೋ, ಸಮಂಜಸವೋ ಗೊತ್ತಿಲ್ಲ; ಆದರೆ ಪ್ರಜ್ವಲ್ ರೇವಣ್ಣನ ಕಣ್ಮರೆಯ ಹಿಂದೆ ಸ್ವತಃ ಆತನ ಕುಟುಂಬದ ಪಾತ್ರವನ್ನು ಅನುಮಾನಿಸದೆ ಇರಲು ಸಾಧ್ಯವಿಲ್ಲ.

ಮಾಜಿ ಪ್ರಧಾನಿ, ಮಾಜಿ ಸಿಎಂ, ಮಾಜಿ ಸಚಿವ, ಮಾಜಿ ಶಾಸಕಿಯರ ದಂಡೇ ಇರುವ ಈ ಕುಟುಂಬ ಒಬ್ಬ ಅಪರಾಧಿಯನ್ನು ಹೀಗೆ ನೆಲದ ಕಾನೂನಿಗೆ ವಿರುದ್ಧವಾಗಿ ಬಚ್ಚಿಟ್ಟು ರಕ್ಷಣೆ ಮಾಡುತ್ತಿರುವುದು ಎಷ್ಟು ಸರಿ? ಅವರ್‍ಯಾರಿಗೂ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲವೇ? ಕುಟುಂಬದ ಸಂಪರ್ಕ, ಪ್ರಭಾವ ಕಡಿದುಕೊಂಡು ಆತ ಪರದೇಶಿ ನೆಲದಲ್ಲಿ ಇಷ್ಟು ದಿನಗಳ ಕಾಲ ಉಳಿಯಲು ಸಾಧ್ಯವೇ?

ಇಂತಹ ಪ್ರಶ್ನೆಗಳಿಂದ ಆ ರಾಜಕೀಯ ಪ್ರಭಾವಿ ಕುಟುಂಬವನ್ನು ತಿವಿಯಬೇಕಿದ್ದ ನಮ್ಮ ಮಾಧ್ಯಮಗಳು ಮತ್ತು ಸಮಾಜ, ಅದನ್ನು ಬಿಟ್ಟು ಆ ಪೆನ್ ಡ್ರೈವ್ ಹೊರಗೆ ಬರುವಲ್ಲಿ ಯಾರ ಪಾತ್ರವಿದೆ ಎಂಬ ಸರ್ವಿಸ್ ರಸ್ತೆಗಿಳಿದು ತನಿಖೆಯ ಹೆದ್ದಾರಿಯನ್ನೇ ಮರೆಮಾಚಲು ಯತ್ನಿಸುತ್ತಿವೆ. ಮತ್ತೊಂದೆಡೆ ಯಾರದೋ ಸಂಚಿಗೆ ಬಲಿಯಾಗುತ್ತಿರುವ `ಸಂತ್ರಸ್ತ ಕುಟುಂಬದಂತೆ’ ದೇವೇಗೌಡರ ಫ್ಯಾಮಿಲಿಯನ್ನು ಬಿಂಬಿಸಲಾಗುತ್ತಿದೆ. ಇದು ಯಾವ ಹಂತದವರೆಗೆ ಹೋಗಿದೆಯೆಂದರೆ, ಕಾಂಗ್ರೆಸ್ ಪಕ್ಷವು ದೇವೇಗೌಡರ ಸಾವಿಗೆ ಸಂಚು ನಡೆಸಿದೆ ಎಂದು ಜೆಡಿಎಸ್ ಪಕ್ಷ, ತನ್ನ ಘನತೆಯನ್ನು ಮರೆತು ಟ್ವೀಟಿಸಿ ಆರೋಪಕ್ಕಿಳಿದಿದೆ!

ದೇವೇಗೌಡರು ಹಿರಿಯರಿರಬಹುದು; ಅನುಭವಿ ರಾಜಕಾರಣಿಯೂ ಆಗಿರಬಹುದು; ಮಾಜಿ ಪ್ರಧಾನಿ ಅಂತಲೂ ಅನ್ನಿಸಿಕೊಂಡಿರಬಹುದು; ಆದರೆ ಈ ಪೆನ್ ಡ್ರೈವ್ ಪ್ರಕರಣದಲ್ಲಿ ಅವರು ಅಮಾಯಕರೇ? ಈ ನೆಲದ ಕಾನೂನು ಪ್ರಕ್ರಿಯೆಯ ಮೇಲೆ ಒಬ್ಬ ಮಾಜಿ ಪ್ರಧಾನಿಯಾಗಿ ಅವರೇ ವಿಶ್ವಾಸ ಕಳೆದುಕೊಂಡರೇ? ತಮ್ಮ ಮೊಮ್ಮಗ ಎಲ್ಲಿದ್ದಾನೆ ಎಂಬ ಮಾಹಿತಿ ನಿಜಕ್ಕೂ ಈ ಫೀನಿಕ್ಸ್ ರಾಜಕಾರಣಿಗೆ ತಿಳಿದಿಲ್ಲವೇ?

ಇದಕ್ಕೆಲ್ಲ ಕೊನೆಗೂ ಉತ್ತರ ಸಿಗುವ ಕಾಲ ಹತ್ತಿರವಾದಂತೆ ಕಾಣುತ್ತೆ. ಎಸ್ ಐ ಟಿ ತನಿಖೆಗೆ ಪೂರಕವಾಗುವ ಮಹತ್ವದ ಸುಳಿವೊಂದು ಸಿಕ್ಕ ಬಗ್ಗೆ ಈಗ ಸುದ್ದಿಗಳು ಹರಿದಾಡುತ್ತಿವೆ. 92ನೇ ಜನ್ಮದಿನದಂದು ದೇವೇಗೌಡರಿಗೆ ವಿದೇಶದಿಂದ ಕರೆಯೊಂದು ಬಂದ ಬಗ್ಗೆ ಎಸ್ ಐ ಟಿಗೆ ಮಾಹಿತಿ ಸಿಕ್ಕಿದೆಯಂತೆ. ಆ ಐ ಎಸ್ ಡಿ ಕರೆ ಯಾರು ಮಾಡಿದ್ದರು, ಯಾರ ನಂಬರ್ ಮೂಲಕ ಬಂದಿತ್ತು ಅನ್ನೋದಕ್ಕಿಂತ ಆ ಕರೆಯ ಮೂಲಕ ದೇವೇಗೌಡರೊಟ್ಟಿಗೆ ಮಾತಾಡಿದ್ದು ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅನ್ನೋ ಸುದ್ದಿ ಈಗ ತನಿಖೆಯ ವೇಗವನ್ನೇ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನ ಖ್ಯಾತ ಉದ್ಯಮಿ ಹಾಗೂ ಚಿನ್ನದ ವ್ಯಾಪಾರಿಯೂ ಆಗಿರುವ ದೇವೇಗೌಡರ ಕುಟುಂಬದ ಆಪ್ತ ವ್ಯಕ್ತಿಯೊಬ್ಬನ ಸಂಬಂಧಿಯ ವಿದೇಶಿ ಸಂಪರ್ಕ ಸಂಖ್ಯೆಯಿಂದ ಸಂಪರ್ಕಿಸಲಾದ ಆ ದೂರವಾಣಿಯಲ್ಲಿ ದೇವೇಗೌಡರು ಮತ್ತು ಪ್ರಜ್ವಲ್ ರೇವಣ್ಣ ಪರಸ್ಪರ 1.52 ನಿಮಿಷಗಳ ಕಾಲ ಮಾತಾಡಿದ್ದಾರೆ ಎನ್ನುತ್ತಿವೆ ಎಸ್ ಐ ಟಿ ಮೂಲಗಳು.

ಏನೇನು ಮಾತಾಡಿದ್ದಾರೆ ಅನ್ನುವುದು ಬೇರೆ ಸಂಗತಿ. ತಮ್ಮ ತಾತನ ಜನ್ಮದಿನಕ್ಕೆ ಪ್ರಜ್ವಲ್ ಶುಭಾಶಯ ಕೋರಿರಬಹುದು ಅಥವಾ ಈ ಕೇಸಿನ ಬಗ್ಗೆ, ತಮ್ಮ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿರಬಹುದು. ತನಿಖೆಯ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ತಿಳಿಯಬಹುದು. ಆದರೆ ವಿಷಯ ಅದಲ್ಲ. ಪ್ರಮುಖ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ತಮ್ಮ ಮೊಮ್ಮಗ ಎಲ್ಲಿದ್ದಾನೆ ಎಂಬ ಮಾಹಿತಿ ದೇವೇಗೌಡರನ್ನೂ ಒಳಗೊಂಡಂತೆ ಅವರ ಕುಟುಂಬದ ಪ್ರತಿಯೊಬ್ಬರಿಗೂ ತಿಳಿದಿದೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ. ಆಪಾದಿತನೊಬ್ಬನನ್ನು ಮುಚ್ಚಿಡುತ್ತಿರುವ ಅಪರಾಧದಲ್ಲಿ ಈ ಕುಟುಂಬ ಭಾಗಿಯಾಗಿರುವುದು ಸತ್ಯವಾದಂತಾಗುತ್ತೆ. ಎಸ್ ಐ ಟಿ ತನಿಖಾಧಿಕಾರಿಗಳಿಗೆ ಅದೇಗೋ ಈ ಫೋನ್ ಕಾಲ್ ಮಾತುಕತೆಯ ಮಾಹಿತಿ ಸಿಕ್ಕಿರುವುದು ದೇವೇಗೌಡರ ಕುಟುಂಬಕ್ಕೆ ಗೊತ್ತಾಗಿರುವುದರಿಂದಲೇ ಎಚ್ ಡಿ ಕುಮಾರಸ್ವಾಮಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ‘ದೇವೇಗೌಡರ ಮೇಲೆ ಗೌರವವಿದ್ದರೆ ಇನ್ನು ಇಪ್ಪತ್ನಾಲ್ಕರಿಂದ ನಲವತ್ತೆಂಟು ತಾಸುಗಳ ಒಳಗೆ ತನಿಖಾಧಿಕಾರಿಗಳ ಮುಂದೆ ಶರಣಾಗು’ ಎಂದು ಪ್ರಜ್ವಲ್ ಗೆ ಮನವಿ ಮಾಡಿಕೊಂಡಿದ್ದು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಒಂದು ಅಪರಾಧದ ತನಿಖೆಯ ದಿಕ್ಕನ್ನೇ ಡಿ-ರೇಲ್ ಮಾಡುವ, ಅಪರಾಧಿಯನ್ನೇ ನಿಗೂಢವಾಗಿ ಬಚ್ಚಿಟ್ಟು ರಕ್ಷಿಸುವ, ತನಿಖಾ ಸಂಸ್ಥೆಯನ್ನೇ ಅವಮಾನಿಸುವ, ಅಪರಾಧ ಪ್ರಕರಣಕ್ಕೆ ರಾಜಕೀಯ ಲೇಪ ಬಳಿಯುತ್ತಿರುವ, ಕುಟುಂಬದ ಕುಡಿಯ ರಕ್ಷಣೆಗೋಸ್ಕರ ಮಹಿಳಾ ಸಂತ್ರಸ್ತೆಯರಿಗೆ, ಇಡೀ ಸ್ತ್ರೀ ಕುಲಕ್ಕೇ ದ್ರೋಹಗೈಯುತ್ತಿರುವ ಆ ಕುಟುಂಬಕ್ಕೆ `ಹುತಾತ್ಮ’ ಪಟ್ಟ ಕಟ್ಟಲು ಯತ್ನಿಸುತ್ತಿರುವವರು ಈ ನೆಲದ ಕಾನೂನಿಗಷ್ಟೇ ದ್ರೋಹ ಎಸಗುತ್ತಿಲ್ಲ; ತಾವು ಹುಟ್ಟಿಬಂದ ತಾಯಿಗರ್ಭಕ್ಕೂ ಅಪಮಾನಗೈಯುತ್ತಿದ್ದಾರೆ.

  • ವಿಶ್ವಾರಾಧ್ಯ ಸಿ ಕನ್ನಿಗಾನಹಳ್ಳಿ

You cannot copy content of this page

Exit mobile version