ಅತಿಥಿ ಉಪನ್ಯಾಸಕರ ಕೊರತೆಯಿಂದ ಕುವೆಂಪು ವಿಶ್ವವಿದ್ಯಾಲಯದ 2023-24 ರ ಪ್ರಸಕ್ತ ಶೈಕ್ಷಣಿಕ ವರ್ಷದ ವಿಧ್ಯಾರ್ಥಿಗಳಿಗೆ ಸುಮಾರು 40 ದಿನಗಳಿಂದ ಯಾವುದೇ ಪಾಠ ಪ್ರವಚನ ನಡೆಯುತ್ತಿಲ್ಲ ಎಂದು ಶಿವಮೊಗ್ಗದ ವಕೀಲರು, ಪೇಪಲ್ಸ್ ಲಾಯರ್ಸ್ ಗಿಲ್ಡ್ ಮುಖ್ಯಸ್ಥರು ಆದ ಕೆ.ಪಿ.ಶ್ರೀಪಾಲ್ ಹಾಗೂ ವಿಜಯಕುಮಾರ್ ರವರು, ಕುವೆಂಪು ವಿವಿ ಬೇಜವಾಬ್ದಾರಿತನವನ್ನು ಉಲ್ಲೇಖಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2022-23 ಸಾಲಿನ ಶೈಕ್ಷಣಿಕ ವರ್ಷ ಮುಗಿದಿದ್ದು, 2023-24 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸೆಪ್ಟೆಂಬರ್ 19 ಕ್ಕೆ ತರಗತಿಗಳು ಆರಂಭವಾಗಿವೆ. ತರಗತಿಗಳು ಪ್ರಾರಂಭವಾಗಿ 45 ದಿನಗಳು ಕಳೆದರೂ ಕುವೆಂಪು ವಿಶ್ವವಿದ್ಯಾಲಯದ ಈ ವರೆಗೆ ಅತಿಥಿ ಉಪನ್ಯಾಸಕರ ನೇಮಕ ಮಾಡದೇ ಬೇಜವಾಬ್ದಾರಿ ತೋರಿದೆ ಎಂದು ದೂರಿದ್ದಾರೆ.
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿವಿ ಯ ಎಲ್ಲಾ ಡಿಗ್ರಿ ಕಾಲೇಜುಗಳ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳು ಆಗಸ್ಟ್ 23 ಕ್ಕೆ ಮುಗಿದಿದೆ. ಸೆಪ್ಟೆಂಬರ್ 23 ರ ವರೆಗೆ ಪರೀಕ್ಷಾ ಕಾರ್ಯ ಸೇರಿದಂತೆ ಎಲ್ಲಾ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಸೇವೆ ಪಡೆದು ಸೆಪ್ಟೆಂಬರ್ 23 ಕ್ಕೆ ಅವರನ್ನು ರಿಲೀವ್ ಮಾಡಲಾಗಿದೆ. ಇದರ ನಡುವೆ ವಿಧ್ಯಾರ್ಥಿಗಳಿಗೆ ಉಪನ್ಯಾಸ ಮಾಡಬೇಕಾಗಿದ್ದ ಖಾಯಂ ಉಪನ್ಯಾಸಕರು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯ ಮೌಲ್ಯಮಾಪನಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳು ಪಾಠವೇ ಇಲ್ಲದೆ ಪರಿತಪಿಸುವಂತಾಗಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ನಡುವೆ ಹಬ್ಬದ ರಜೆಗಳು ಬಂದ ಹಿನ್ನೆಲೆಯಲ್ಲಿ ಒಟ್ಟಾರೆ 40 ದಿನಗಳಿಗೂ ಹೆಚ್ಚು ದಿನ ಪಾಠವೇ ಶುರುವಾಗಿಲ್ಲ. 3 ಮತ್ತು 5 ನೇ ಸೆಮಿಸ್ಟರ್ ವಿಧ್ಯಾರ್ಥಿಗಳಿಗೆ ಸೆಪ್ಟೆಂಬರ್ 5 ಕ್ಕೆ ತರಗತಿಗಳು ಆರಂಭವಾದರೂ ಈ ವರೆಗೂ ಪಾಠವೇ ನಡೆದಿಲ್ಲ. ನಿಯಮಾವಳಿಗಳಂತೆ 8 ನೇ ವಾರಕ್ಕೆ ಈ ತರಗತಿಗಳಿಗೆ ಕಿರು ಪರೀಕ್ಷೆ ನಡೆಯಬೇಕಿದೆ. ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳು ನವೆಂಬರ್ 15 ರಿಂದ ಕಿರು ಪರೀಕ್ಷೆ ಆಯೋಜಿಸಿವೆ. ಪಾಠವೇ ನಡೆಯದೇ ವಿಧ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆ.ಪಿ.ಶ್ರೀಪಾಲ್ ಹಾಗೂ ವಿಜಯಕುಮಾರ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ನಡುವೆ ಹೊಸ ಶೈಕ್ಷಣಿಕ ವರ್ಷಕ್ಕೆ ಅಕ್ಟೋಬರ್ 27 ಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ವರೆಗೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಸಧ್ಯ ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ನೇಮಕವೂ ಆಗಿಲ್ಲ, ಹಂಗಾಮಿ ಇರುವವರು ಮತ್ತು ಹಂಗಾಮಿ ರಿಜಿಸ್ಟರ್ ಈ ವರೆಗೆ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತ ಎಂದಿದ್ದಾರೆ.
ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ ಅತಿಥಿ ಉಪನ್ಯಾಸಕರ ನೇಮಕ ಮಾಡಲು ಕುವೆಂಪು ವಿವಿಗೆ ನಿರ್ದೇಶಿಸಬೇಕು. ವಿಧ್ಯಾರ್ಥಿಗಳು ಕುವೆಂಪು ವಿವಿ ಮೇಲಿನ ನಂಬಿಕೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.