ಬೆಂಗಳೂರು: ನಿನ್ನೆ ಬೆಂಗಳೂರಿನ ದೊಡ್ಡ ಕಲ್ಲಸಂದ್ರದ ಅಪಾರ್ಟ್ಮೆಂಟ್ ಒಂದರಲ್ಲಿ ಕೊಲೆಯಾದ ಗಣಿ ಇಲಾಖೆಯ ಹಿರಿಯ ಅಧಿಕಾರಿ ಪ್ರತಿಮಾ ಅವರ ಕೊಲೆಗೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಪೊಲೀಸರು ಕಾರ್ಯನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಆರು ತಂಡಗಳನ್ನು ರಚಿಸಿದ್ದು ಈ ತಂಡಗಳು ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿತ್ತು.
ಈ ನಿಟ್ಟಿನಲ್ಲಿ ಪೊಲೀಸರ ತನಿಖೆ ಪ್ರಸ್ತುತ ಒಂದು ಹಂತಕ್ಕೆ ಮುಗಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಮಾ ಅವರ ಹಿಂದಿನ ಡ್ರೈವರ್ ಕಿರಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದೆ. ಈತನನ್ನು ಒಂದು ವಾರದ ಹಿಂದೆ ಪ್ರತಿಮಾ ಕೆಲಸದಿಂದ ತೆಗೆದಿದ್ದರು. ಕೆಲ ವಿಚಾರಗಳಿಗೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಕೋಪಗೊಂಡಿದ್ದ ಕಿರಣ್, ಮನೆಗೆ ಬಂದು ಕೊಲೆ ಮಾಡಿದ್ದಾನೆ. ಸದ್ಯ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಹಲವು ಆಯಾಮಾಗಳಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಪ್ರತಿಮಾ ಅವರ ಮೊಬೈಲ್ ವಶಕ್ಕೆ ಪಡೆದು ಅದರಲ್ಲಿನ ವಿವರಗಳನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ ಪ್ರತಿಮಾ ಅವರನ್ನು ಮೊದಲಿಗೆ ಉಸಿರುಗಟ್ಟಿಸಿ ನಂತರ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ವಿಧಾನಸೌಧದ ಬಳಿ ಇರುವ ವಿಶ್ವೇಶ್ವರಯ್ಯ ಟವರ್ಸ್ನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರತಿಮಾ ಕೆ.ಎಸ್ ಅವರು ಶನಿವಾರ ಸಂಜೆ 6:30ರವರೆಗೆ ತಮ್ಮ ಕಚೇರಿಯಲ್ಲಿ ಹಾಜರಿದ್ದರು. ನಂತರ ಅವರನ್ನು ಅವರ ಚಾಲಕ ಮನೆಗೆ ತಲುಪಿಸಿದ್ದ.
ಬೆಂಗಳೂರಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಪ್ರತಿಮಾ ಅವರ ಸಹೋದರ ಪ್ರತೀಷ್ ಅವರು ಭಾನುವಾರದಂದು ಅವರು ಭಾಗವಹಿಸಬೇಕಿದ್ದ ಮದುವೆಯ ಬಗ್ಗೆ ನೆನಪಿಸಲು ಶನಿವಾರ ರಾತ್ರಿ ಅವರಿಗೆ ಕರೆ ಮಾಡಿದರು, ಆದರೆ ಅವರು ಕರೆ ಸ್ವೀಕರಿಸಿರಲಿಲ್ಲ. ಭಾನುವಾರ ಬೆಳಗ್ಗೆ ಮತ್ತೆ ಆಕೆಗೆ ಕರೆ ಮಾಡಿದರೂ ಆಕೆ ಕರೆ ಮಾಡದೇ ಇದ್ದಾಗ ಅನುಮಾನಗೊಂಡು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದರು. ಅವರು ನೋಡಿದಾಗ ಪ್ರತಿಮಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದ್ದು, ಕೂಡಲೇ ಅವರು ಪ್ರತೀಷ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪ್ರತೀಷ್ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತನಿಖೆಯ ಭಾಗವಾಗಿ ಸುಬ್ರಹ್ಮಣ್ಯಪುರ ಪೊಲೀಸರು ಭಾನುವಾರ ಬೆಳಗ್ಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಫೋರೆನ್ಸಿಕ್ ತಜ್ಞರು ಸೇರಿದಂತೆ ಅಪರಾಧ ನಡೆದ ಸ್ಥಳದ ವಿವಿಧ ತಂಡಗಳು ಹೆಚ್ಚಿನ ತನಿಖೆಗಾಗಿ ಸ್ಥಳದಿಂದ ಮಾದರಿಗಳನ್ನು ತೆಗೆದುಕೊಂಡವು. ಪ್ರತಿಮಾ ಅವರ ಕತ್ತು ಸೀಳುವ ಮೊದಲು ಕತ್ತು ಹಿಸುಕಿ ಉಸಿರುಗಟ್ಟಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ರಾಹುಲ್ ಕುಮಾರ್ ಶಹಾಪುರವಾಡ್ ಹೇಳಿದ್ದಾರೆ. ಮನೆಯಲ್ಲಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ಪೊಲೀಸ್ ಮೂಲಗಳು ಹೇಳುವಂತೆ ಪ್ರತಿಮಾ ಅವರ ಮನೆಗೆ ಆರೋಪಿಗಳು ಬಲವಂತವಾಗಿ ನುಗ್ಗಿರುವ ಯಾವುದೇ ಲಕ್ಷಣಗಳು ಕಂಡುಬರುತ್ತಿರಲಿಲ್ಲ. ಪರಿಚಿತರೇ ಈ ಕೆಲಸವನ್ನು ಮಾಡಿರುವ ಕುರಿತಾಗಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಆಕೆಯ ಚಲನವಲನದ ಉತ್ತಮ ಪರಿಚಯವಿರುವ ಸಂತ್ರಸ್ತೆಯ ಪರಿಚಿತರೇ ಈ ಕೆಲಸ ಮಾಡಿರುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲಿ ಸುತ್ತಲಿನ ಸಿಸಿ ಕೆಮೆರಾಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದರು.
ಮೂಲತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಪ್ರತಿಮಾ ಶಿವಮೊಗ್ಗದಲ್ಲಿ ಎಂಎಸ್ಸಿ ಪದವಿ ಮುಗಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೇರಿದ್ದರು. ಅವರ ಪತಿ ಮತ್ತು ಒಬ್ಬ ಮಗ ತೀರ್ಥಹಳ್ಳಿಯಲ್ಲೇ ಇದ್ದರು. ಪ್ರತಿಮಾ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ಈ ನಡುವೆ ಶಾಸಕರೊಬ್ಬರಿಗೆ ಸಂಬಂಧಿಸಿದ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕುರಿತಾಗಿಯೂ ಅಧಿಕಾರಿ ವರದಿ ನೀಡಿದ್ದು, ಆ ಕುರಿತು ಈಗಾಗಲೇ ಎಫ್ಐಆರ್ ದಾಖಲಾಗಿತ್ತು.
ಇಲಾಖೆಯ ಸಹೋದ್ಯೋಗಿಗಳು ಹೇಳುವಂತೆ ಪ್ರತಿಮಾ ಚಟುವಟಿಕೆಯ ಅಧಿಕಾರಿಯಾಗಿದ್ದರು ಮತ್ತು ಶತ್ರುಗಳಿರಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.
ಇಂದು ಪ್ರತಿಮಾ ಅವರ ಹುಟ್ಟೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.