Saturday, May 4, 2024

ಸತ್ಯ | ನ್ಯಾಯ |ಧರ್ಮ

ಲಾರಿ ಮತ್ತು ಕಾರು ಡಿಕ್ಕಿ: 6 ಮಂದಿ ಸಾವು

ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ಅರಕೇರಾ  ಬಳಿ ಗುರುವಾರ ರಾತ್ರಿ ನಡೆದ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ  ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

ತೆಲಂಗಾಣದ ಕೊಡಂಗಲ್ ಸಮೀಪದ ಚಿತ್ಲಾಪಲ್ಲಿಯ ಹಜರತ್ ಅಬ್ದುಲ್ ಷಾ ದರ್ಗಾದಲ್ಲಿ, ಜವಳ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ, ಅರಕೇರಾ ಸಿದ್ಧಾರೂಢ ಮಠದ ಬಳಿ  ಈ ಘಟನೆ ನಡೆದಿದೆ. ಪೈಪ್‌ ಸಾಗಿಸುತ್ತಿದ್ದ ಟಾಟಾ ಗೂಡ್ಸ್ ಲಾರಿಗೆ, ಕುಟುಂಬಸ್ಥರಿದ್ದ ಹುಂಡೈ ಸ್ಯಾಂಟ್ರೊ ಕಾರು ಡಿಕ್ಕಿ ಹೊಡೆದ ಕಾರಣ ಈ ದುರ್ಘಟನೆ ಸಂಭವಿಸಿದ್ದು 6 ಜನ ಸಾವನ್ನಪ್ಪಿದ್ದಾರೆ.

ಈ ಘಟನೆ ನಡೆದ ತಕ್ಷಣ ಲಾರಿ ಡ್ರೈವರ್‌ ಪರಾರಿಯಾಗಿದ್ದಾನೆ. ಅಪಘಾತದ ಮಾಹಿತಿ ತಿಳಿದಾಕ್ಷಣ ಇಆರ್‌ಎಸ್‌ಎಸ್‌ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸ್ಥಳದಲ್ಲಿ 4 ಜನ ಸಾವನ್ನಪ್ಪಿದ್ದು, ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ದುರಾದೃಷ್ಟವಶಾತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಅವರು ಕೂಡ ಕೊನೆಯುಸಿರೆಳೆದಿದ್ದಾರೆ.

 ಮಹ್ಮದ್ ವಾಜೀದ್ ಹುಸೇನ್(40), ಮಹ್ಮದ್ ನಜರ್ ಹುಸೇನ್ (76), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ (30), ಇಮ್ರಾನ್ (22), ಉಮೇಜಾ (5 ತಿಂಗಳು) ಎಂಬುವವರು ಮೃತಪಟ್ಟವರಾಗಿದ್ದು, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಗ್ರಾಮದ ಎಂಜಿ ರಸ್ತೆ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌, ಪಿಐ ದೌವಲತ್ ಕುರಿ ಭೇಟಿ ನೀಡಿದ್ದು, ಘಟನೆಯಬಗ್ಗೆ ಪರಿಶೀಲಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು