ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್ ಮನೆಗೆ ತೆರಳಿ ಅವರನ್ನು ಬಂಧಿಸಿದ್ದಾರೆ.
ಜಾಲತಾಣದಲ್ಲಿ ಮಾತನಾಡುವಾಗ ಜಾತಿ ನಿಂದನೆ ಮಾಡಲಾಗಿದೆ ಎಂದು ಮಂಜುನಾಥ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. ಜಗದೀಶ್ ಅವರ ಬಂಧನಕ್ಕೆ ಸಂಬಂಧಿಸಿದಂತೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಕೀಲ ಜಗದೀಶ್ ಅವರಿಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ನೋಟಿಸ್ ನೀಡಲು ಅವರ ಮನೆಗೆ ತೆರಳಿದ್ದಾಗ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ವಾಪಸ್ ಬಂದಿದ್ದರು. ಪೊಲೀಸರು ಮನೆಗೆ ಬಂದ ಬಗ್ಗೆ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಜಗದೀಶ್ ನಾನು ಮನೆಯಲ್ಲಿ ಇಲ್ಲದಿರುವಾಗ ಕೊಡಿಗೇಹಳ್ಳಿ ಪೊಲೀಸರು ಯಾವುದೇ ನೋಟಿಸ್ ನೀಡದೆ ಮನೆ ಬಳಿ ಬಂದಿದ್ದಾರೆ. ಮನೆಯ ನಾಯಿಗಳಿಗೆ ಮಂಪರು ಔಷಧಿ ನೀಡಿ ಅನಧಿಕೃತವಾಗಿ ಕಾಂಪೌಂಡ್ ಜಿಗಿದು ಬಂದಿದ್ದಾರೆ. ನಮ್ಮ ಕುಟುಂಬದವರನ್ನು ಭಯಪಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.