Home ರಾಜ್ಯ ಮೈಸೂರು ಬಿಜೆಪಿ ಮೊದಲು ಆರ್‌ಎಸ್‌ಎಸ್‌ ಕೇಳಿರುವ ಪ್ರಶ್ನೆಗೆ ಉತ್ತರಿಸಲಿ: ಪ್ರಿಯಾಂಕ್‌ ಖರ್ಗೆ

ಬಿಜೆಪಿ ಮೊದಲು ಆರ್‌ಎಸ್‌ಎಸ್‌ ಕೇಳಿರುವ ಪ್ರಶ್ನೆಗೆ ಉತ್ತರಿಸಲಿ: ಪ್ರಿಯಾಂಕ್‌ ಖರ್ಗೆ

0

ಮೈಸೂರು: ದೇಶದ ಬಡತನ, ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಅಸಮಾನತೆಯನ್ನು ಸಮಸ್ಯೆಗಳ ಬಗ್ಗೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಕೇಳಿರುವ ಪ್ರಶ್ನೆಗೆ ಸರ್ಕಾರ ಮೊದಲು ಉತ್ತರ ನೀಡಲಿ ನಂತರ ಕಾಂಗ್ರೆಸ್‌ ಪಕ್ಷದವರು ಕೇಳುವ ಪ್ರಶ್ನೆಗೆ ಉತ್ತರಿಸಲಿ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್‌ ಖರ್ಗೆ ಅವರು ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿವಾಸಿಗಳು ರಾಹುಲ್ ಗಾಂಧಿ ಅವರ ಜತೆ ಸಂವಾದ ಮಾಡುವಾಗ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಐಸಿಡಿಎಸ್ ಯೋಜನೆ ಮೂಲಕ ನಮ್ಮ ಮಕ್ಕಳಿಗೆ ವರ್ಷದಲ್ಲಿ ಆರು ತಿಂಗಳ ಕಾಲ ಪೌಷ್ಠಿಕ ಆಹಾರ ಸಿಗುತ್ತಿತ್ತು. ಆದರೆ ಈಗ ಅದು ಸಿಗುತ್ತಿಲ್ಲ. ಈ ಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿ. ಸಂಸತ್ತಿನಲ್ಲಿ ಬುಡಕಟ್ಟು ಜನರ ಧ್ವನಿಯಾಗಿ ಎಂದು ಆದಿವಾಸಿ ಜನರು ರಾಹುಲ್ ಅವರ ಬಳಿ ಮನವಿ ಮಾಡಿಕೊಂಡರು ಎಂದು ತಿಳಿಸಿದರು.

ಬಿಜೆಪಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದೇನಾ? ಬಿಜೆಪಿಯ ಮಾರ್ಗದರ್ಶಕರಾದ ಹೊಸಬಾಳೆ ಅವರು ತಮ್ಮ ಹೇಳಿಕೆಯಲ್ಲಿ ‘ಬಡತನಕ್ಕೆ ಆಯಾ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕಾರಣʼಎಂದು ಹೇಳಿದ್ದಾರೆ. ಕೇಂದ್ರದಲ್ಲಿ 8 ವರ್ಷಗಳಿಂದ ಹಾಗೂ ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದಿವೆ. ಇನ್ನಾದರೂ ಬಿಜೆಪಿಯವರು ತಮ್ಮದೇ ಗುರುಗಳ ಮಾತನ್ನು ಕೇಳಲಿ. ಈ ಬಡತನಕ್ಕೆ ನೇರ ಹೊಣೆ ಸರ್ಕಾರ ಎಂದು ಹೊಸಬಾಳೆ ಅವರು ದೂರಿದ್ದಾರೆ ಎಂದು ಹೇಳಿದರು.

ಮಾನ್ಯ ಮುಖ್ಯಮಂತ್ರಿಗಳು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಬಜೆಟ್ ಭಾಷಣದಲ್ಲಿ ನಾನು ಮೂರು E ಗಳ ಮೇಲೆ ಗಮನಹರಿಸುತ್ತೇನೆ. ಅವುಗಳೆಂದರೆ, Education(ಶಿಕ್ಷಣ), Employment(ಉದ್ಯೋಗ), Empowerment( ಸಬಲೀಕರಣ). ಆದರೆ ರಾಜ್ಯದಲ್ಲಿ ಶಿಕ್ಷಣ ಹಳ್ಳಹಿಡಿಯುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ ಏನಾದರೂ ಇದೆಯಾ? ಕೊರೋನಾದಿಂದ ಆರ್ಥಿಕ ನಷ್ಟವಾಗಿ ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಶಾಲೆಗಳು ಮುಚ್ಚುತ್ತಿದ್ದು, ಈ ಬಗ್ಗೆ ಸರ್ಕಾರದ ಬಳಿ ಅಂಕಿ ಅಂಶಗಳು ಇವೆಯಾ? ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗಗಳು ಎಲ್ಲಿವೆ? ಕೆಪಿಎಸ್ ಸಿ ಹಾಗೂ ಕೆಇಎ ಮೂಲಕ ವಿವಿಧ ಇಲಾಖೆಗಳ ಹುದ್ದೆಗೆ ರಾಜ್ಯದ 20 ಲಕ್ಷ ಯುವಕರು ಪರೀಕ್ಷೆ ಬರೆದಿದ್ದು, ಈ ಎಲ್ಲ ಹುದ್ದೆ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿವೆ. ನಿಮ್ಮ ಉದ್ಯೋಗ ಎಲ್ಲಿದೆ? ಆದರೂ ಉದ್ಯೋಗ ನೀಡುತ್ತೇವೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ? ಇಲ್ಲಿ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ, ಸಬಲೀಕರಣ ಆಗಿಲ್ಲ ಎಂದು ನಿಮ್ಮ ಹೊಸಬಾಳೆ ಅವರು ಹೇಳಿದ್ದಾರಲ್ಲ ಎಂದರು.

ಈ ಸರ್ಕಾರ ಬಂದ ನಂತರ ಯಾವ ಸಮುದಾಯಗಳ ಸಬಲೀಕರಣ ಮಾಡಿದ್ದಾರೆ? ಬೋವಿ ಅಭಿವೃದ್ಧಿ ನಿಗಮದಲ್ಲಿ 150 ಕೋಟಿ ಅಕ್ರಮ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 141 ಕೋಟಿ ಅಕ್ರಮ, ವೀರಶೈವ ನಿಗಮ, ಗೊಲ್ಲರ ನಿಗಮ, ಮರಾಠರ ನಿಗಮ ಇನ್ನು ಟೇಕಾಫ್ ಆಗಿಲ್ಲ. ಯಾವುದಾದರೂ ಒಂದು ಸಮುದಾಯದ ಅಭಿವೃದ್ಧಿ ಬಗ್ಗೆ ಸರ್ಕಾರ ಮಾಹಿತಿ ನೀಡಲಿ. ಬಿಜೆಪಿ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಮಾಧ್ಯಮಗಳಲ್ಲಿ ಅವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಅವರು ತಮ್ಮ ವಾಟ್ಸಪ್ ಯೂನಿವರ್ಸಿಟಿಯನ್ನೇ ಪ್ರಪಂಚ ಎಂದುಕೊಂಡು ಅಲ್ಲಿ ನಕಲಿ ಗಾಂಧಿ, ಹಿಂದೂ ವಿರೋಧಿ ಎಂದು ಮಾತನಾಡುತ್ತಾರೆ ಎಂದು ಹೇಳಿದರು.

ನಿನ್ನೆ ರವಿಕುಮಾರ್ ಅವರು ರಾಹುಲ್ ಗಾಂಧಿ ಅವರಿಗೆ 10 ಪ್ರಶ್ನೆ ಕೇಳಿದ್ದಾರೆ. ಅವರು ಪ್ರಶ್ನೆ ಕೇಳುವ ಮುನ್ನ ಅವರ ಗುರುಗಳು ಮಾರ್ಗದರ್ಶಕರಾದ ಹೊಸಬಾಳೆ ಅವರ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಲಿ. ಈ ಪ್ರಶ್ನೆಗಳು ನಿಮಗೆ ಅರಿವಾದರೆ ನೀವೇ ನಿಮ್ಮ ಸರ್ಕಾರದ ವಿರುದ್ಧ ಬಂಡಾಯ ಎದ್ದು, ರಾಹುಲ್ ಗಾಂಧಿ ಅವರ ಜತೆ ಕೈಜೋಡಿಸುತ್ತೀರಿ ಎಂದು ಹೇಳಿದರು.

 ಇನ್ನಾದರೂ ಬಿಜೆಪಿ ನಿದ್ರಾವಸ್ಥೆಯಿಂದ ಏಳಬೇಕು.  ರಾಜ್ಯದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಇದೆ ಎಂದು ಅಂಕಿ ಅಂಶಗಳು ಹೇಳುತ್ತಿದ್ದು, ಇವುಗಳನ್ನು ಬಿಟ್ಟು ಬಿಜೆಪಿ ಪಕ್ಷದವರು, ರಾಹುಲ್ ಗಾಂಧಿ ಏನು ಧರಿಸುತ್ತಾರೆ, ಡಿ.ಕೆ. ಶಿವಕುಮಾರ್ ನಡೆಯುವ ಶೈಲಿ ಹೇಗೆ, ಸಿದ್ದರಾಮಯ್ಯ ಬಿಟ್ಟು ಊಟ ಮಾಡಿದರು ಅಂತಾ ಮಾತನಾಡುತ್ತಾರೆ ಎಂದು ಟೀಕಿಸಿದರು.

ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎನ್ನುತ್ತೀರಿ. ಎಲ್ಲಿದೆ ನಿಮ್ಮ ಡಬಲ್ ಇಂಜಿನ್ ಸರ್ಕಾರ? ನಿಮ್ಮ ಇಂಜಿನ್ ಕೆಟ್ಟು ನಿಂತು ಸಾಕಷ್ಟು ದಿನಗಳಾಗಿವೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪ್ರಶ್ನೆಗೆ ನಿಮ್ಮಿಂದ ಉತ್ತರ ನೀಡಲು ಸಾಧ್ಯವಿಲ್ಲ ಎಂದು ನಮಗೆ ಗೊತ್ತಿದೆ. ಭಾರತ ಐಕ್ಯತಾ ಯಾತ್ರೆ ನಡೆಯುತ್ತಿರುವುದೇಕೆ ಎಂದು ನಿಮ್ಮ ತಲೆಗೆ ಬಂದಿಲ್ಲ, ಆದರೆ ಆರ್ ಎಸ್ಎಸ್ ಅವರ ತಲೆಗೆ ಬಂದಿದೆ. ಹೀಗಾಗಿ ಆರ್ ಎಸ್ಎಸ್ ಕೇಳುತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ಜನರಿಗೆ ಉತ್ತರಿಸಿ, ಅದಾದ ಮೇಲೆ ಕಾಂಗ್ರೆಸ್ ಪ್ರಶ್ನೆಗಳಿಗೆ ಉತ್ತರಿಸಿ. ಅದನ್ನು ಬಿಟ್ಟು ಅನಗತ್ಯ ವಿಚಾರ ಮಾತನಾಡಬೇಡಿ. ಬಿಜೆಪಿಯವರು ನಿಮ್ಮ ಪಕ್ಕದಲ್ಲಿನ ಸಮಸ್ಯೆ ನಿಮ್ಮ ಸಂಘಟನೆ ಬಗ್ಗೆ ಮೊದಲು ನೋಡಿಕೊಳ್ಳಿ. ಅದನ್ನು ಬಿಟ್ಟು ನಮ್ಮ ಸಂಘಟನೆ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಲುತ್ತೀರಿ. ಪಾದಯಾತ್ರೆ ಮಾಡುವುದು ನಮ್ಮ ಹಕ್ಕು. ನೀವು ಕೂಡ ಪಾದಯಾತ್ರೆ ಮಾಡಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ಮೊದಲು ಜನೋತ್ಸವ ಮಾಡಲು ಮುಂದಾಗಿದ್ದರು, ಆಮೇಲೆ ಜನಾಕ್ರೋಶದಿಂದ ಮೂರ್ನಾಲ್ಕು ಬಾರಿ ರದ್ದಾಗಿ ನಂತರ ಜನಸ್ಪಂದನ ಮಾಡಿದರು. ಅಲ್ಲಿ ಖಾಲಿ ಖುರ್ಚಿಗಳ ಉತ್ಸವ ಮಾಡಿದರು. ಅಲ್ಲಿ ಜನ ಕುರ್ಚಿಗೂ ಸಂಪದಿಸಲಿಲ್ಲ. ಇವರು ಹೇಳುವ ಮೂರು ವರ್ಷದ ಸಾಧನೆ ಹೇಳಲು ಬಿದರ್ ನಿಂದ ಚಾಮರಾಜನಗರದವರೆಗೂ ಪಾದಯಾತ್ರೆ ಮಾಡಲಿ. ಇದನ್ನು ಮಾಡುವ ಧೈರ್ಯ ಇದೆಯಾ? ಫಲಾನುಭವಿ ಸೇರಿಸಿ ಮಾಡಿ ನೋಡೋಣ. ಇದು ಆಗುವುದಿಲ್ಲ. ಕಾರಣ ಒಂದೇ ಒಂದು ಫಲಾನುಭವಿಗಳು ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ರಾಜ್ಯ ಸರ್ಕಾರ ಈ ಭಾರತ ಐಕ್ಯತಾ ಯಾತ್ರೆಯ ಭದ್ರತೆ ಕುರಿತು ತೀವ್ರ ನಿರ್ಲಕ್ಷ್ಯ ವಹಿಸಿದೆ. ನಾನು ಪೊಲೀಸರ ಕಡೆ ಬೆಟ್ಟು ಮಾಡಿ ತೋರಿಸುತ್ತಿಲ್ಲ. ನಿನ್ನೆ ಧಾರಾಕಾರ ಮಳೆಯಿಂದ ರಾಹುಲ್ ಗಾಂಧಿ ಅವರು ಅರ್ಧಗಂಟೆಗಳ ಕಾಲ ಸಂಚಾರಿ ದಟ್ಟಣೆಯಲ್ಲಿ ಸಿಲುಕಿದ್ದರು. ರಾಹುಲ್ ಗಾಂಧಿ ಅಥವಾ ಯಾವುದೇ ವಿಐಪಿ ಆಗಿದ್ದರೂ ಅವರಿಗೆ ಭದ್ರತೆ ಇಲ್ಲದಿದ್ದಾಗ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ. ಅದರ ಬದಲು ರಾಹುಲ ಗಾಂಧಿ ಅವರನ್ನು ಟ್ರಾಫಿಕ್ ನಲ್ಲಿ ನಿಲ್ಲಿಸಿದರೆ ಅದಕ್ಕೆ ಯಾರು ಹೊಣೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಇಂದು ಮೈಸೂರಿನಿಂದ ಮಂಡ್ಯಕ್ಕೆ ಪಾದಯಾತ್ರೆ ಸಾಗಲಿದೆ. ಪೊಲೀಸ್ ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಪಾದಯಾತ್ರೆ ಸಮಯದಲ್ಲಿ ಅವರ ಸುತ್ತ ಭದ್ರತೆಗೆ ಹಗ್ಗವನ್ನು ಬಳಸುತ್ತಾರೆ. ಮಂಡ್ಯ ಪೊಲೀಸರು ಈ ಹಗ್ಗ ತಂದಿಲ್ಲ, ಆದರೆ ಮೈಸೂರು ಪೊಲೀಸರು ಈ ಹಗ್ಗವನ್ನು ಮಂಡ್ಯ ಪೊಲೀಸರಿಗೆ ನೀಡಿಲ್ಲ. ಈ ಸರ್ಕಾರಕ್ಕೆ ಒಂದು ಹಗ್ಗ ನೀಡುವ ಯೋಗ್ಯತೆಯೂ ಇಲ್ಲವಾಗಿದೆಯೇ? ಇದರಲ್ಲೂ ಕಮಿಷನ್ ಪಡೆಯುತ್ತಾರಾ? ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲ, ವೇಣುಗೋಪಾಲ್ ಸೇರಿದಂತೆ ಸಂಸತ್ ಸದಸ್ಯರು ಎಲ್ಲ ನಡೆಯುತ್ತಿದ್ದು, ಭದ್ರತೆಗೆ ಹಗ್ಗ ನೀಡಲು ಆಗಿಲ್ಲವೆ. ಇಷ್ಟು ದೊಡ್ಡ ನಿರ್ಲಕ್ಷ್ಯವೆ. ನಾನು ಕರ್ನಾಟಕ ಪೊಲೀಸ್ ಮೇಲೆ ಆರೋಪ ಮಾಡುವುದಿಲ್ಲ, ರಾಜ್ಯ ಸರ್ಕಾರ ಈ ಯಾತ್ರೆ ಹತ್ತಿಕ್ಕಲು ಹೀಗೆಲ್ಲ ಮಾಡುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

You cannot copy content of this page

Exit mobile version