Sunday, June 23, 2024

ಸತ್ಯ | ನ್ಯಾಯ |ಧರ್ಮ

ಜೋಶಿ ಪಟ್ಟಿಗೆ ಬಗ್ಗದ ಲಿಂಗಾಯತ ಮುಖಂಡರು

ಬಿ.ಜೆ.ಪಿ.ಯಿಂದ ಒಂದು ಕಾಲು ಹೊರಗಿಟ್ಟಿರುವ ಕೋರೆ, ಜೋಶಿ ಆಯೋಜಿತ ಸಭೆಗಳಿಗೆ ಬಂದು ಜೋಶಿಯವರನ್ನು ಮಾತ್ರ ಹೊಗಳುತ್ತಿದ್ದಾರೆ; ಜೋಶಿ ಅವರನ್ನು ಬೆಂಬಲಿಸಿ ಎಂದು ಕೇಳುತ್ತಿದ್ದಾರೆ. ಅದರೆ ಅಪ್ಪಿತಪ್ಪಿಯೂ ‘ಟೆಂಗಿನಕಾಯಿ ಅವರನ್ನು ಗೆಲ್ಲಿಸಿ; ಶೆಟ್ಟರನ್ನು ಸೋಲಿಸಿ’ ಎಂದು ಕೇಳುತ್ತಿಲ್ಲ. ಜೋಶಿ ಅವರಿಂದ ಸದಾ ಅಂತರ ಕಾದುಕೊಂಡಿದ್ದ ಸಂಕೇಶ್ವರರು, ಈಗ ಶೆಟ್ಟರ ವಿರುದ್ಧ ಗುಡುಗುತ್ತಿರುವುದರ ಹಿಂದೆ ದೊಡ್ಡ ಒತ್ತಡವೇ ಇದೆ ಎಂದು ಹೇಳಲಾಗುತ್ತಿದೆ… – ಸುನಿಲ್‌ ಕುಲಕರ್ಣಿ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಬೆಳವಣಿಗೆಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಿರ್ಗಮನದಿಂದ ಲಕ್ವಾ ಹೊಡೆದಂತಾಗಿರುವ ಬಿ.ಜೆ.ಪಿ.ಯ ರಾಷ್ಟ್ರೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿಯ ಗೆಲುವಿಗಿಂತ ಶೆಟ್ಟರನ್ನು ಸೋಲಿಸಲು ತಮ್ಮೆಲ್ಲ ಶಕ್ತಿ-ಸಮಯ ವ್ಯಯಿಸುತ್ತಿದ್ದಾರೆ.

ಶೆಟ್ಟರ್, ಕಲಘಟಗಿಯಲ್ಲಿ ಸಿ.ಎಂ.ನಿಂಬಣ್ಣವರ, ಕುಂದಗೋಳದಲ್ಲಿ ಎಸ್.ಐ.ಚಿಕ್ಕಣ್ಣವರ (ಈಗ ಪಕ್ಷೇತರ ಅಭ್ಯರ್ಥಿ), ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ವೀರಭದ್ರಪ್ಪ ಹಾಲಹರವಿ (ಈಗ ಜೆ.ಡಿ.ಎಸ್. ಅಭ್ಯರ್ಥಿ) ಅವರಿಗೆ ಟಿಕೆಟ್ ತಪ್ಪಿಸಿರುವ ಆರೋಪ ಎದುರಿಸುತ್ತಿರುವ ಜೋಶಿ ಅವರು ಈಗ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ ಸೋಲಿಗಾಗಿ ನಾನಾ ವರಸೆಗಳನ್ನು ಶುರು ಮಾಡಿದ್ದಾರೆ. ಟೆಂಗಿನಕಾಯಿ ಜೊತೆಗೆ ತಾವು ಪ್ರಚಾರಕ್ಕೆ ಹೋದಾಗ ಜನರ ನಿರಾಸಕ್ತಿಯನ್ನು ಗಮನಿಸಿದ ಜೋಶಿ, ಈಗ ಮಾಜಿ ಸಂಸದ ಮತ್ತು ಉದ್ಯಮಿ ವಿಜಯ ಸಂಕೇಶ್ವರ, ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕೆ.ಎಲ್.ಇ. ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಪುತ್ರ ವಸಂತ ಹೊರಟ್ಟಿ ಮುಂತಾದ ಲಿಂಗಾಯತ ನಾಯಕರನ್ನು ಮುಂದೆ ಮಾಡಿ ಮತಬೇಟೆ ಶುರು ಮಾಡಿದ್ದಾರೆ.

ಒಂದು ಕಾಲದಲ್ಲಿ ಜೋಶಿ ಅವರ ಹೆಸರನ್ನು ತಮ್ಮ ಪತ್ರಿಕೆ ‘ವಿಜಯವಾಣಿ’ಯಲ್ಲಿ ಪ್ರಕಟಿಸದೇ, ತೀರ ಅನಿವಾರ್ಯ ಇದ್ದಾಗ ಮಾತ್ರ  ‘ಧಾರವಾಡ ಸಂಸದ’ ಎಂದಷ್ಟೇ ಪ್ರಕಟಿಸಿ, ತಮ್ಮ ಕೋಪ ಪ್ರದರ್ಶಿಸುತ್ತಿದ್ದ ಸಂಕೇಶ್ವರ ಈಗ ಜೋಶಿ ಅವರನ್ನು ಹೊಗಳುತ್ತ ಶೆಟ್ಟರನ್ನು ಸಿಕ್ಕಾಪಟ್ಟೆ ಹೀಗಳೆಯುತ್ತಿದ್ದಾರೆ. “ಬಿ.ಆರ್.ಟಿ.ಎಸ್. ಎಂಬ ಯೂಸ್‌ಲೆಸ್ ಯೋಜನೆಯನ್ನು ತಂದ ಪುಣ್ಯಾತ್ಮ” ಎಂದು ಶೆಟ್ಟರನ್ನು ಜೋಶಿಯವರ ಸಮ್ಮುಖದಲ್ಲೇ ನಿಂದಿಸುತ್ತಿದ್ದಾರೆ.  ಬಿ.ಅರ್.ಟಿ.ಎಸ್. ಯೋಜನೆ ನನ್ನದು ಎಂದು ೨೦೧೯ ಲೋಕಸಭೆ ಚುನಾವಣೆಯಲ್ಲಿ ತಮ್ಮ ಕರಪತ್ರಗಳಲ್ಲಿ ಮುದ್ರಿಸಿಕೊಂಡಿದ್ದ ಜೋಶಿ, ಈಗ ಬಿ.ಆರ್.ಟಿ.ಎಸ್. ತಮಗೆ ಸಂಬಂಧವೇ ಇಲ್ಲ ಎಂಬಂತೆ ವೇದಿಕೆಯ ಮೇಲೆ ಕುಳಿತು ನಗುತ್ತಿದ್ದಾರೆ. ಬಿ.ಆರ್.ಟಿ.ಎಸ್. ಬಗೆಗಿನ ಸಂಕೇಶ್ವರರ ಹೇಳಿಕೆ-ಜೋಶಿಯವರ ಮೌನದ ಬಗ್ಗೆ ಹುಬ್ಬಳ್ಳಿ-ಧಾರವಾಡದ ಜನ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಬಗೆಯ ವ್ಯಂಗ್ಯ ಮಾಡುತ್ತಿದ್ದಾರೆ.

ತೀರ ಇತ್ತೀಚಿನವರೆಗೂ ಬಿ.ಆರ್.ಟಿ.ಎಸ್. ಯೋಜನೆ ಶೆಟ್ಟರ್-ಜೋಶಿ ಜೋಡಿಯ ಕೊಡುಗೆ ಎಂದೇ ಜನಜನಿತವಾಗಿತ್ತು. 

“ನಾನೀಗ ಸಕ್ರಿಯ ರಾಜಕೀಯದಿಂದ ದೂರ. ಯಡಿಯೂರಪ್ಪನವರ ಬೆಂಬಲಿಗನಾಗಿ ಮಾತ್ರ ನನ್ನ ಜೀವಿತದ ಕೊನೆಯವರೆಗೂ ಇರ್ತೀನಿ” ಎನ್ನುತ್ತಿದ್ದ ಸಂಕೇಶ್ವರರು, ಜೋಶಿ ಅವರಿಂದ ಸದಾ ಅಂತರ ಕಾದುಕೊಂಡಿದ್ದ ಸಂಕೇಶ್ವರರು, ಮೋದಿ ಸರಕಾರದ ವೈಫಲ್ಯದಿಂದ ದೇಶದ ಆರ್ಥಿಕತೆ ಕುಸಿಯುತ್ತಿದೆ; ಉದ್ಯಮ ಕ್ಷೇತ್ರ ನಲುಗುತ್ತಿದೆ ಎಂದು ತಮ್ಮ ಒಡೆತನದ ‘ವಿಜಯವಾಣಿ’ಯ ಮುಖಪುಟದಲ್ಲೇ ಪ್ರಕಟಿಸಿದ್ದ ಸಂಕೇಶ್ವರರು ಈಗ ಶೆಟ್ಟರ ವಿರುದ್ಧ ಗುಡುಗುತ್ತಿರುವುದರ ಹಿಂದೆ ದೊಡ್ಡ ಒತ್ತಡವೇ ಇದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಣತಿಯಂತೆ ಈಗ ಪ್ರಚಾರಕ್ಕೆ ಧುಮುಕಿದ್ದಾರೆ ಎಂದು ಅವರದೇ ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ವಾಹಿನಿಯಲ್ಲಿ ಹರಿದಾಡುತ್ತಿರುವ ಮಾತು.

ಇನ್ನು ಬಿ.ಜೆ.ಪಿ.ಯಿಂದ ಒಂದು ಕಾಲು ಹೊರಗಿಟ್ಟಿರುವ ಕೋರೆ, ಜೋಶಿ ಆಯೋಜಿತ ಸಭೆಗಳಿಗೆ ಬಂದು ಜೋಶಿಯವರನ್ನು ಮಾತ್ರ ಹೊಗಳುತ್ತಿದ್ದಾರೆ; ಜೋಶಿ ಅವರನ್ನು ಬೆಂಬಲಿಸಿ ಎಂದು ಕೇಳುತ್ತಿದ್ದಾರೆ. ಅದರೆ ಅಪ್ಪಿತಪ್ಪಿಯೂ ‘ಟೆಂಗಿನಕಾಯಿ ಅವರನ್ನು ಗೆಲ್ಲಿಸಿ; ಶೆಟ್ಟರನ್ನು ಸೋಲಿಸಿ’ ಎಂದು ಕೇಳುತ್ತಿಲ್ಲ. ಅಷ್ಟೇ ಅಲ್ಲ, ತಮ್ಮ ಮಾತು ಮುಗಿಯುತ್ತಿದ್ದಂತೆ ಜೋಶಿ ಅವರ ಮಾತಿಗೂ ಕಿವಿಯಾಗದೇ ಸಭೆಯಿಂದ ನಿರ್ಗಮಿಸುತ್ತಿದ್ದಾರೆ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆ ವೇಳೆ ಬಿ.ಜೆ.ಪಿ. ತೊರೆಯಲು ಸಿದ್ಧರಾಗಿದ್ದ ಮುನವಳ್ಳಿಯವರೂ ಕಾಟಾಚಾರಕ್ಕೆಂಬಂತೆ ಜೋಶಿ ಪ್ರಾಯೋಜಿತ ಸಭೆಗಳಿಗೆ ಹಾಜರಿ ಹಾಕಿ, ತಮ್ಮ ಮಾತು ಮುಗಿಯುತ್ತಲೇ, “ಇನ್ನೊಂದು ಕಾರ್ಯಕ್ರಮ ಐತ್ರಿ…” ಎನ್ನುತ್ತ ಮೆಲ್ಲನೆ ಜಾರಿಜೊಳ್ಳುತ್ತಿದ್ದಾರೆ.

“ಅವರಷ್ಟೇ ಅಲ್ಲ, ಇನ್ನೂ ಅನೇಕರು ಜೋಶಿ ಪಟ್ಟಿಗೆ ಮಣಿದು ಸಭೆಗೆ ಹೋಗುತ್ತಾರೆ; ಕಾಟಾಚಾರಕ್ಕೆ ಎರಡು ಮಾತು ಹೇಳುತ್ತಾರೆ. ಇಲ್ಲವಾದರೆ ಐ.ಟಿ.ದಾಳಿ ಕಟ್ಟಿಟ್ಟ ಬುತ್ತಿ. ಲಿಂಗಾಯತ-ಲಿಂಗಾಯತರ ಮಧ್ಯೆಯೇ ಜಗಳ ತಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಜೋಶಿ ಆಟ ಇನ್ನೇನು ಬಹಳ ದಿನ ನಡೆಯಲ್ಲ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಲಿಂಗಾಯತ ಮುಖಂಡರೊಬ್ಬರು.

ಇದೆಲ್ಲವನ್ನು ಗಮನಿಸಿದರೆ ಜೋಶಿ ಅವರ ನಾನಾ ಕರಾಮತ್ತುಗಳಿಗೆ ಲಿಂಗಾಯತರು ಮಣಿದಂತೆ ಕಂಡರೂ, ಅಂತರಂಗದಲ್ಲಿ ಶೀಘ್ರದಲ್ಲೇ ಪಾಠ ಕಲಿಸುವ ತಯಾರಿಯಲ್ಲಿರುವುದು ಕಂಡುಬರುತ್ತದೆ.

ಇದನ್ನೂ ಓದಿ-

ಪಿ.ಜೆ.ಬಾಸ್ ಅಬ್ಬರ!https://peepalmedia.com/shettara-melata-joshige-sankata/ http://ಶೆಟ್ಟರ ಮೇಲಾಟ ಜೋಶಿಗೆ ಸಂಕಟ?

ಧಾರವಾಡ ಜಿಲ್ಲೆಯಲ್ಲಿ ಐ.ಟಿ.ದಾಳಿಗಳು ಜೋಶಿ ಅಣತಿಯಂತೆ ನಡೆಯುತ್ತಿವೆಯೇ ಎಂಬ ಅನುಮಾನ ಇದೀಗ ದಟ್ಟವಾಗತೊಡಗಿದೆ. ಗುರುವಾರ ಸಂಜೆಯಿಂದ ೧೬ ಗಂಟೆಗಳ ಕಾಲ ತಮ್ಮ ಮನೆಯಲ್ಲಿ ನಡೆದ ದಾಳಿ ವೇಳೆ ಐ.ಟಿ. ಅಧಿಕಾರಿಗಳು ‘ಪಿ.ಜೆ.ಬಾಸ್’ ಎಂಬ ಶಬ್ದ ಬಳಸುತ್ತಿದ್ದರು ಎಂದು ವಿನಯ ಕುಲಕರ್ಣಿ ಆಪ್ತ ಪ್ರಶಾಂತ ಕೇಕರೆ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿ.ಜೆ.ಪಿ. ತ್ಯಜಿಸಿ, ಕಾಂಗ್ರೆಸ್ ಸೇರಿರುವ ಈಶ್ವರ ಶಿವಳ್ಳಿಯವರು, ಬಿ.ಜೆ.ಪಿ.ಯ ದೊಡ್ಡ ದೊಡ್ಡ ವ್ಯಾಪಾರಿಗಳಿಗಿಂತ ತಾವು ಸಣ್ಣ ವ್ಯಾಪಾರಿ; ಆದರೆ ತಾವು ಕಾಂಗ್ರೆಸ್ ಸೇರಿದ್ದಕ್ಕೇ ‘ಪಿ.ಜೆ.ಬಾಸ್’ ಈ ದಾಳಿ ನಡೆಸಲು ಐ.ಟಿ. ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಹಿರಂಗವಾಗಿಯೇ ದೂರಿದ್ದಾರೆ. “ದಾಳಿ ವೇಳೆ ಅಧಿಕಾರಿಗಳು,  ನಾನು ಹಿಂದೆ ಇದ್ದ ಬಿ.ಜೆ.ಪಿ.ಯನ್ನು ಯಾಕೆ ಬಿಟ್ಟೆ, ಹಾಗೆ ಮಾಡಿದ್ದು ಒಳ್ಳೆಯದಲ್ಲ ಎಂದೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ” ಎಂದು ಶಿವಳ್ಳಿ ಅಲವತ್ತುಕೊಂಡಿದ್ದಾರೆ.

ಸುನಿಲ್‌ ಕುಲಕರ್ಣಿ, ಹುಬ್ಬಳ್ಳಿ

ರಾಜಕೀಯಾಸಕ್ತರು

ಇದನ್ನೂ ಓದಿ-https://peepalmedia.com/bjp-shocked-by-puttur-rebellion/ http://ಪುತ್ತೂರಿನ ಬಂಡಾಯಕ್ಕೆ ಬೆಚ್ಚಿಬಿದ್ದ ಬಿಜೆಪಿ

Related Articles

ಇತ್ತೀಚಿನ ಸುದ್ದಿಗಳು