Saturday, June 21, 2025

ಸತ್ಯ | ನ್ಯಾಯ |ಧರ್ಮ

ಚಿಕ್ಕ ಮಕ್ಕಳಿಂದಲೇ ಮಾನವೀಯ ಮೌಲ್ಯ ಕಲಿಸೋಣ ಲೋಕಾಯುಕ್ತ ಎಸ್‌ಪಿ ನಂದಿನಿ ಸಲಹೆ

ಹಾಸನ : ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವಿಯ ಮೌಲ್ಯಗಳನ್ನು ಪೋಷಕರು ಕಲಿಸಬೇಕಿದೆ. ಆದರೆ ಈ ವಿಷಯದಲ್ಲಿ ಪಾಲಕರು ಒಂದು ಕಡೆ ವಿಫಲರಾಗುತ್ತಿದ್ದೇವೆ ಎಂದೆನಿಸುತ್ತದೆ ಎಂದು ಲೋಕಾಯುಕ್ತ ಎಸ್‌ಪಿ ಬಿ.ಎನ್. ನಂದಿನಿ ಬೇಸರ ವ್ಯಕ್ತಪಡಿಸಿದರು.ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧಿ ಭವನದಲ್ಲಿ ಬುಧವಾರ ನಡೆದ ಕಲಾ ಸಂಗಮ ನಾಟ್ಯ ವೈಭವದ ಚಿಣ್ಣರ ಚಿತ್ತರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಮಕ್ಕಳಿಗೆ ಬಣ್ಣ ಹಾಕುವ ಮೂಲಕ ಉದ್ಘಾಟಿಸಿದ ಅವರು, ಮನೆಯಲ್ಲಿ ನಾವು ಹೇಗೆ ಇರುತ್ತೇವೆಯೋ ಹಾಗೆಯೇ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ. ನಮ್ಮ ನಡೆ-ನುಡಿಗಳು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ನಾವು ಸಕಾರಾತ್ಮಕವಾಗಿ ಆಗಿದ್ದರೆ ಮಕ್ಕಳು ಸಕಾರಾತ್ಮಕವಾಗಿ ಬೆಳೆಯುತ್ತಾರೆ ಎಂದರು. ನಾವು ಕಳೆದ ಒಂದು ವಾರದಿಂದ ದೇಶದಲ್ಲಿ ನಡೆದ ಘಟನೆಯನ್ನು ಗಮನಿಸುತ್ತಿದ್ದೇವೆ. ಇಂದು ಬಸವ ಜಯಂತಿ ಆಚರಣೆ ಮಾಡಿದ್ದೇವೆ. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು 12ನೇ ಶತಮಾನದಲ್ಲಿ ಹೇಳಿದರು. ಆದರೆ, ಇಂದು ನಡೆಯುತ್ತಿರುವ ಘಟನೆಗಳಾದರೂ ಏನು ? ಅದಕ್ಕಾಗಿಯೇ ಮಕ್ಕಳಿಗೆ ನಾವು ಇಂದಿನಿಂದಲೇ ದಯೆ, ನಿಷ್ಠೆ, ಪ್ರಾಮಾಣಿಕತೆ, ನೈತಿಕ ಮೌಲ್ಯಗಳನ್ನು ಕಲಿಸಿಕೊಟ್ಟು ದೇಶದ ಉತ್ತಮ ಪ್ರಜೆಯನ್ನಾಗಿ, ನಾಗರಿಕರನ್ನಾಗಿ ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಕಷ್ಟು ಅಂತರ, ವ್ಯತ್ಯಾಸಗಳಾಗುತ್ತಿವೆ. ಹೀಗಾಗಿ ಮಕ್ಕಳನ್ನು ನಾವು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲವನ್ನೂ ಕಲಿಸುವ ಗುರುಗಳಾಗಬೇಕು. ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಕೇವಲ ಪಠ್ಯಕ್ಕೆ ಸೀಮಿತವಾದ ಶಿಬಿರಗಳಿಗೆ ಸೇರಿಸದೆ ಭಾರತೀಯ ಸಂಸ್ಕತಿಯನ್ನು, ಸಾಂಸ್ಕತಿಕ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡುವ ಶಿಬಿರಗಳಿಗೆ ಸೇರಿಸಬೇಕು ಎಂದು ಹೇಳಿದರು.


ಶಿಬಿರದ ನಿರ್ದೇಶಕ ಉಮೇಶ್ ತೆಂಕನಹಳ್ಳಿ ಮಾತನಾಡಿ, ನಾವು ಮಕ್ಕಳ ಮನೋಭಾವವನ್ನು ಸೂಕ್ಷವಾಗಿ ಗಮನಿಸಬೇಕು. ಮಕ್ಕಳ ಜತೆಗೆ ಮಕ್ಕಳಾಗಿ ಇರಬೇಕು. ಪೋಷಕರು ತೆರೆದ ಪುಸ್ತಕದ ರೀತಿಯಲ್ಲಿ ಇರಬೇಕು. ನಿಮ್ಮ ಒತ್ತಡಗಳನ್ನು ಮರೆತು ಮಕ್ಕಳಿಗೆ ನಿಮ್ಮ ಅಮೂಲ್ಯವಾದ ಸಮಯವನ್ನು ನೀಡಿ ಅವರೊಂದಿಗೆ ಸಂತೋಷವಾಗಿ ಸಮಯ ಕಳೆಯಿರಿ. ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಸಿದಾಗ ಮಾತ್ರವೇ ಮಕ್ಕಳು ಸಮತೋಲನದಿಂದ ಬೆಳೆಯಲು ಸಾಧ್ಯ ಎಂದರು. ಇಂದು ಪೋಷಕರು ಮಕ್ಕಳಿಗೆ ಸಾಕಷ್ಟು ಮಾನಸಿಕವಾಗಿ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಕೇವಲ ಓದಿನ ಕಡೆಗೆ ಹೆಚ್ಚು ಗಮನ ಹರಿಸುವಂತೆ ಅವರನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿ, ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗುವಂತೆ ಮಾಡಲಾಗುತ್ತಿದೆ. ಮಕ್ಕಳನ್ನು ಒಂದೇ ಚೌಕಟ್ಟಿನೊಳಗೆ ಕೂಡಿ ಹಾಕುವ ಬದಲಿಗೆ ಅವರ ನೋವು-ನಲಿವುಗಳನ್ನು ಅರ್ಥ ಮಾಡಿಕೊಂಡು ಅವರು ಸಂತೋಷದಿಂದ ಬೆಳೆಯುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಇಂದು ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಹೀಗಾಗಿ ಎಷ್ಟೋ ಮಕ್ಕಳಿಗೆ ಮಾತೃ ಭಾಷೆಯನ್ನು ಸರಿಯಾಗಿ ಉಚ್ಚಾರಣೆ ಕೂಡ ಮಾಡಲು ಬರುತ್ತಿಲ್ಲ. ಮಕ್ಕಳಿಗೆ ಎಷ್ಟು ಭಾಷೆಗಳನ್ನು ಬೇಕಾದರೂ ಕಲಿಸಿ. ಆದರೆ, ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡಿ. ಹಾಗೆಯೇ ಮಕ್ಕಳಿಗೆ ಬೇಕರಿ ಪದಾರ್ಥಗಳನ್ನು ತಿನ್ನಿಸುವುದನ್ನು ಬಿಟ್ಟು ಮನೆಯ ಆಹಾರವನ್ನು ನೀಡಿ. ಮಕ್ಕಳಿಗೆ ಬಲವಂತವಾಗಿ ಆಹಾರ ತಿನ್ನಿಸಬೇಡಿ. ಹಸಿವು ಹೆಚ್ಚಿಸಿ ಆಗ ಮಕ್ಕಳೇ ಇಷ್ಟ ಪಟ್ಟು ಊಟ ಮಾಡುತ್ತಾರೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿ ಮಕ್ಕಳು ವಿವಿಧ ಸಾಂಸ್ಕಂತಿಕ ಚಟುವಟಿಕೆಗಳು, ನಾಟಕಗಳನ್ನು ಅಭಿನಯಿಸಿದರು. ಕಾರ್ಯಕ್ರಮದಲ್ಲಿ ರಂಗಸಿರಿ ಅಧ್ಯಕ್ಷರು ಕೆ. ರಂಗಸ್ವಾಮಿ, ಕಾರ್ಯದರ್ಶಿ ಪಿ. ಶಾಡ್ರಾಕ್, ಯುನಿಕ್ ಅಕಾಡೆಮಿ ಕಾರ್ಯದರ್ಶಿ ಶ್ವೇತಾ ಪ್ರದೀಪ್, ಕಲಾವಿದೆ ಎಸ್. ಚಿತ್ರಲೇಖಾ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page