ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ದೇಶದ ಎಲ್ಲಾ ಮನೆಬಳಕೆಯ ಎಲ್ಪಿಜಿ ಗ್ರಾಹಕರು ಇನ್ನು ಮುಂದೆ ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಆದೇಶಿಸಲಾಗಿದೆ.
ಗ್ಯಾಸ್ ಸಿಲಿಂಡರ್ಗಳ ದುರುಪಯೋಗವನ್ನು ತಡೆಯಲು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಪೂರೈಕೆ ಖಚಿತಪಡಿಸಿಕೊಳ್ಳಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಗ್ರಾಹಕರು ಈ ಪ್ರಕ್ರಿಯೆಗಾಗಿ ವಿತರಕರ ಬಳಿ ಅಲೆಯುವ ಅಗತ್ಯವಿಲ್ಲದೆ, ತೈಲ ಮಾರುಕಟ್ಟೆ ಕಂಪನಿಗಳ ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್.ಡಿ ಆ್ಯಪ್ ಬಳಸಿ ಮನೆಯಲ್ಲೇ ಕುಳಿತು ತಮ್ಮ ಇ-ಕೆವೈಸಿ ಪೂರ್ಣಗೊಳಿಸಬಹುದು.
ಭಾರತವು ಎದುರಿಸುತ್ತಿರುವ ಈ ಅನಿಲ ಬಿಕ್ಕಟ್ಟಿಗೆ ಮುಖ್ಯ ಕಾರಣ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅದರ ಪರಿಣಾಮವಾಗಿ ಮುಚ್ಚಲ್ಪಟ್ಟಿರುವ ಹಾರ್ಮುಜ್ ಜಲಸಂಧಿ. ಭಾರತವು ಆಮದು ಮಾಡಿಕೊಳ್ಳುವ ಎಲ್ಪಿಜಿಯ ಸುಮಾರು ಶೇಕಡಾ 90 ರಷ್ಟು ಪಾಲು ಈ ಜಲಸಂಧಿಯ ಮೂಲಕವೇ ಬರಬೇಕಿದೆ. ಈಗ ರವಾಣೆ ಮಾರ್ಗ ಸ್ಥಗಿತಗೊಂಡಿರುವುದರಿಂದ ದೇಶಾದ್ಯಂತ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಪೂರೈಕೆ ಕುಂಠಿತವಾಗಿರುವ ಸುದ್ದಿಯಿಂದಾಗಿ ಗ್ರಾಹಕರು ಗಾಬರಿಗೊಂಡು ದೊಡ್ಡ ಪ್ರಮಾಣದಲ್ಲಿ ಸಿಲಿಂಡರ್ ಕಾಯ್ದಿರಿಸುತ್ತಿರುವುದು (ಪ್ಯಾನಿಕ್ ಬೈಯಿಂಗ್) ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇದು ಮಾರುಕಟ್ಟೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸಿದ್ದು, ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಭಾರೀ ಹೊಡೆತ ನೀಡಿದೆ.
ಈ ಬಿಕ್ಕಟ್ಟಿನ ನೇರ ಪರಿಣಾಮ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದ ಮೇಲೆ ಬಿದ್ದಿದೆ. ವಾಣಿಜ್ಯ ಉದ್ದೇಶದ 19 ಕೆಜಿ ಸಿಲಿಂಡರ್ಗಳ ಕೊರತೆಯಿಂದಾಗಿ ಅನೇಕ ಸಣ್ಣ ಹೋಟೆಲ್ಗಳು ಈಗಾಗಲೇ ಬಾಗಿಲು ಮುಚ್ಚಿವೆ. ದೊಡ್ಡ ರೆಸ್ಟೋರೆಂಟ್ಗಳು ಅನಿಲದ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಅನಿವಾರ್ಯವಾಗಿ ಗ್ರಾಹಕರ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿವೆ.
ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ನಿಂಬೆ ಹಣ್ಣಿನ ರಸದಂತಹ ಸಾಮಾನ್ಯ ಪಾನೀಯಕ್ಕೂ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಿರುವುದು ಈ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ. ಹೈ-ಸ್ಪೀಡ್ ಅಡುಗೆ ಉಪಕರಣಗಳಿಗೆ ಗ್ಯಾಸ್ ಅನಿವಾರ್ಯವಾಗಿರುವುದರಿಂದ ಹೋಟೆಲ್ ಮಾಲೀಕರು ಈಗ ಪರ್ಯಾಯ ಇಂಧನಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
