Home ರಾಜಕೀಯ ಮಹಾರಾಷ್ಟ – ಝಾರ್ಖಂಡ್ ಚುನಾವಣೆ: ಸಾಮಾಜಿಕ ನ್ಯಾಯದ ವಿರುದ್ಧ ಕೋಮು ಧ್ರುವೀಕರಣ

ಮಹಾರಾಷ್ಟ – ಝಾರ್ಖಂಡ್ ಚುನಾವಣೆ: ಸಾಮಾಜಿಕ ನ್ಯಾಯದ ವಿರುದ್ಧ ಕೋಮು ಧ್ರುವೀಕರಣ

0
ಏಕ್‌ ಹೈ ತೋ  ಸೇಫ್‌ ಹೈ ವರ್ಸಸ್  ಸಾಥ್‌ ಹೈ ತೊ ಸಬ್‌ ಕುಚ್‌ ಹೈಲೇಖನ: ರಾಜೇಶ್‌ ಹೆಬ್ಬಾರ್


ವೆಂಬರ್‌ 20 ರಂದು ಕೊನೆಗೊಂಡ ಮಹಾರಾಷ್ಟ ಮತ್ತು ಝಾರ್ಖಂಡ್ ವಿಧಾನಸಭಾ ಚುನಾವಣೆ  ಹಾಗೂ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆದ ಉಪಚುನಾವಣೆಗಳು ಬಿರುಸು ಮತ್ತು ಅಬ್ಬರದ ಕೋಮು ಧುವೀಕರಣದ ರಾಜಕೀಯ ಪ್ರಚಾರಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್ ನೇತೃತ್ವದ  ಇಂಡಿಯಾ ಮೈತ್ರಿಕೂಟ ತಮ್ಮ ಪ್ರಚಾರವನ್ನು ಸಾಮಾಜಿಕ ನ್ಯಾಯ, ಉಚಿತ ಗ್ಯಾರಂಟಿಗಳು, ಉದ್ಯೋಗ, ರೈತರ ಸಂಕಷ್ಟ ಮತ್ತು ಮಹಿಳಾ ಸಮಸ್ಯೆಗಳಿಗೆ ಪರಿಹಾರದಂತಹ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿದರೆ,  ಇದಕ್ಕೆ ವಿರುದ್ಧವಾಗಿ, ಬಿಜೆಪಿ ನೇತೃತ್ವದ ಎನ್‌ಡಿಎ ಮುಖ್ಯವಾಗಿ ಕೋಮು ದ್ವೇಷ ಮತ್ತು ಧರ್ಮಾಧಾರಿತ ಧ್ರುವೀಕರಣದ ಆಧಾರದಲ್ಲಿ ತನ್ನ ಪ್ರಚಾರ ನಡೆಸಿತು. 

ಬಿಜೆಪಿಯ “ಬಟೇಂಗೆ ತೊ ಕಟೇಂಗೆ” ಮತ್ತು ಪ್ರಧಾನಿ ಮೋದಿಯವರು ʼಏಕ್‌ ಹೈ ತೋ ಸೇಫ್‌ ಹೈʼ ಎಂಬ  ಘೋಷಣೆಯ ಮೂಲಕ ಹಿಂದುತ್ವದ ಪ್ರಚಾರಕ್ಕೆ ಚಾಲನೆ ನೀಡಿದರು, ದಲಿತರು, ಹಿಂದುಳಿದವರು ಮತ್ತು ಮರಾಠ ಸಮುದಾಯವನ್ನು ಧ್ರುವೀಕರಿಸಲು ಪ್ರಯತ್ನಿಸಿದರು.

ಈ ಅಭಿಯಾನದ ಭಾಗವಾಗಿ, ಎನ್‌ಡಿಎ ಅಭ್ಯರ್ಥಿಗಳು ಮತ್ತು ನಾಯಕರು, ಸಂವಿಧಾನ ತತ್ವಗಳನ್ನು ಲೇವಡಿ ಮಾಡುವಂತೆ ತಳಮಟ್ಟದ ಪ್ರಚಾರದಲ್ಲಿ ತೊಡಗಿದ್ದರು. ಅಲ್ಪಸಂಖ್ಯಾತರ ವಿರುದ್ಧದ ತೀಕ್ಷಣ ದ್ವೇಷ ಉಸಿರಿಸುತ್ತಾ,  ಸೌಹಾರ್ದತೆಯನ್ನು ನಾಶಮಾಡುವ ರಾಜಕೀಯ ತಂತ್ರಗಳನ್ನು ಅಳವಡಿಸಿಕೊಂಡರು. ಬಿಜೆಪಿಯ ರವಿ ರಾಣಾ ಮತ್ತು ನವನೀತ್ ರಾಣಾ ಮುಂತಾದ ಪ್ರಮುಖ ನಾಯಕರು, ಮುಸ್ಲಿಂ ಸಮುದಾಯದ ವಿರುದ್ಧ ನೇರ ದಾಳಿ ಪ್ರಚೋದನೆ ನೀಡಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭಾರತದ ಜಾತ್ಯಾತೀತತ ತತ್ವಕ್ಕೆ ವಿರುದ್ಧವಾದ ಅಪಾಯಕಾರಿ ದ್ವೇಷ ರಾಜಕೀಯ  ಪ್ರಚಾರದ ಸಾಗಿದ ರೀತಿ ಮತ್ತು ಅದು ಸಮಾಜದ ಮೇಲೆ ಬೀರಬಹುದಾದ ದೀರ್ಘಕಾಲಿಕ ಪರಿಣಾಮವನ್ನು ನಾವು ಅರಿತುಕೊಳ್ಳಬೇಕಾಗಿದೆ 

ಬಿಜೆಪಿ ಮಹಾರಾಷ್ಟ್ರ ಮತ್ತು ಝಾರ್ಖಂಡದ ಚುನಾವಣಾ ಪ್ರಚಾರದಲ್ಲಿ ಎನ್‌ಆರ್‌ಸಿ ಮತ್ತು ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಏಕರೂಪ ನಾಗರಿಕ ಸಂಹಿತೆ ಮತ್ತು ಎನ್‌ಆರ್‌ಸಿ ಯಿಂದ ಅತಿಹೆಚ್ಚು ತೊಂದರೆಗೊಳಗಾಗುವುದು ಝಾರ್ಖಂಡಿನ ಬಹುಸಂಖ್ಯಾತ ಆದಿವಾಸಿ ಸಮುದಾಯ. ಬಿಜೆಪಿಯ ಮುಖ್ಯ ಉದ್ದೇಶ ಇಂಡಿಯಾ ಒಕ್ಕೂಟವನ್ನು ಬೆಂಬಲಿಸುತ್ತಿದ್ದ ಆದಿವಾಸಿ ಮತದಾರರು, ಆದಿವಾಸಿಯೇತರ ಓಬಿಸಿ-ಸಾಮಾನ್ಯ ಮತ್ತು ಇತರ ಮತದಾರರನ್ನು ಬಿಜೆಪಿಯ ಕಡೆ ಧ್ರುವೀಕರಿಸುವುದೇ ಆಗಿತ್ತು. 

ಬಹಿರಂಗವಾಗಿ ಆದಿವಾಸಿ ಸಮುದಾಯವನ್ನು ವಿರೋಧಿಸಲು ಸಾಧ್ಯವಾಗದೇ ಪರೋಕ್ಷ ರಾಜಕಾರಣದ ಮೂಲಕ ಆದಿವಾಸಿ-ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯವನ್ನು ಹೊರಗಿಟ್ಟು ಇತರ ಸಮುದಾಯವನ್ನು ಧ್ರುವೀಕರಿಸುವ ರಾಜಕಾರಣವನ್ನು ಮಹರಾಷ್ಟ್ರ ಮತ್ತು ಝಾರ್ಖಂಡ ಚುನಾವಣೆಯಲ್ಲಿ ಬಿಜೆಪಿ ಕೈಗೊಂಡಿತು. ಇಂದಿಗೂ ಆರ್‌ಎಸ್‌ಎಸ್‌ ಗೆ ಜೀರ್ಣಿಸಿಕೊಳ್ಳಲಾಗದ ಮತ್ತು ತಮ್ಮ ಏಕರೂಪದ ಸಂಸ್ಕೃತಿಯ ನರೇಟಿವ್‌ ಒಳಗೆ ತರಲಾಗದಿದ್ದೆಂದರೆ ಅದು ಆದಿವಾಸಿಗಳು. 

ಮುಸ್ಲೀಂ ಸಮುದಾಯ ಏನಕೇನ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಂಬಲಿಸುವುದಿಲ್ಲ. ದಲಿತರನ್ನು ಸ್ಪೃಶ್ಯ – ಅಸ್ಪೃಶ್ಯ ದಲಿತ, ಮಹಾದಲಿತ ಮತ್ತು ಎಡ -ಬಲಗಳಾಗಿ ಒಡೆದು ಸೋಷಿಯಲ್‌ ಇಂಜಿನಿಯರಿಂಗ್‌ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ಸಂವಿಧಾನ ಮತ್ತು ಅಂಬೇಡ್ಕರ್‌ ವಿಚಾರದಲ್ಲಿ ದಲಿತ ಸಮುದಾಯಲ್ಲಿ ಹೆಚ್ಚುತ್ತಿರುವ ಜಾಗೃತಿ ಮತ್ತು ಬಿಜೆಪಿಯ ಅಜೆಂಡಾಗಳ ಕುರಿತಾದ ಆತಂಕದಿಂದ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿ ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿತು. ಈ 2024 ರ ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆಯ ದ್ವೇಷ ಮಹಾರಾಷ್ಟ್ರದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರ ಹೇಳಿಕೆಯಲ್ಲಿ ಪ್ರತಿಧ್ವನಿಸಿತು. ನಿರ್ದಿಷ್ಟ ಸಮುದಾಯಗಳು ಬಿಜೆಪಿ ಸೋಲಿಸಲು ವಿರೋಧಿಗಳ ಜೊತೆ ಸೇರಿದರು ಎಂದು ಬಿಜೆಪಿ ಮುಖಂಡ ಅಲ್ಲದೇ ಮಹರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅನೇಕ ಸಂದರ್ಭದಲ್ಲಿ ದ್ವೇಷವನ್ನು ಹೊರಹಾಕಿದರು.  ಆದಿವಾಸಿ-ದಲಿತರನ್ನು ಹಿಂದುತ್ವದ ನರೆಟಿವ್‌ ಒಳಗೆ ತಂದು ಸುಮಾರು ಶೇ. 15-25್ ನಷ್ಟು ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತು.

ಮೂರು ದಶಕಗಳ ಹಿಂದೆ ಮುಂಬೈ (ಆಗಿನ ಬಾಂಬೆ) ಭಾರತದ ಅತ್ಯಂತ ಭೀಕರ ಕೋಮುಗಲಭೆಗೆ ಸಾಕ್ಷಿಯಾಗಿತ್ತು. 1992 ರಲ್ಲಿ ಸುಮಾರು ಒಂದು ತಿಂಗಳ ಕಾಲ, ದ್ವೇಷದ ಜ್ವಾಲೆಯು ದೇಶದ ಆರ್ಥಿಕ  ರಾಜಧಾನಿಯನ್ನು ನಲುಗಿಸಿತ್ತು. ಈ ಕರಾಳ ಘಟನೆಯ ನಂತರ ಮುಂಬೈ ಮತ್ತೊಮ್ಮೆ ಕೋಮು-ದ್ವೇಷದ ಜಗಳಕ್ಕೆ ಅವಕಾಶ ಕೊಟ್ಟಿರಲಿಲ್ಲ. 1992  ನಂತರ ಧಾರ್ಮಿಕ ದ್ವೇಷದ ಘರ್ಷಣೆಗಳು ಇಲ್ಲಿ  ಪುನರಾವರ್ತನೆಯಾಗಿಲ್ಲ. ಆ ಕರಾಳ ಕಾಲದಲ್ಲಿಯೂ ಸಹ, ಎಲ್ಲಾ ಜಾತಿ ಧರ್ಮದ ರಾಜಕಾರಣಿಗಳು ಭಕ್ತಿ, ಶ್ರದ್ಧೆ ಮತ್ತು ಪವಿತ್ರವೆಂದು ಪರಿಗಣಿಸಲಾದ ಅನೇಕ ವಿಚಾರಗಳನ್ನು ದ್ವೇಷ ರಾಜಕಾರಣದಿಂದ ಹೊರಗಿಟ್ಟಿದ್ದರು. ಗಣೇಶನ ಪೂಜೆಗೆ ಖ್ಯಾತವಾಗಿರುವ ಮುಂಬೈನ  ಸಿದ್ಧಿವಿನಾಯಕ ದೇವಾಲಯವು ಇದುವರೆಗೆ ಕೋಮು ರಾಜಕಾರಣಕ್ಕೆ ಬಳಕೆಯಾಗದೇ ಎಲ್ಲಾ ಜಾತಿ-ಧರ್ಮಗಳ ಆಸ್ಥೆಯ ಕೇಂದ್ರ ಬಿಂದುವಾಗಿ ತನ್ನನ್ನು ಉಳಿಸಿಕೊಂಡಿತ್ತು.   

ದಶಕಗಳಿಂದ ಹಿಂದೂ ಧರ್ಮದ ಸಿದ್ಧಿವಿನಾಯಕ ದೇವರು ಮುಂಬೈನ ಐಕ್ಯತೆ ಮತ್ತು ಅಸ್ಮಿತೆಯಾಗಿ  ಉಳಿದಿದೆ. ಆದರೆ ಈ ಚುನಾವಣೆಯು ಕ್ಷುಲ್ಲಕ ಕೋಮು ಪ್ರಚಾರದ ಕೊಳಕು ಜಗತ್ತಿಗೆ ದೇವರನ್ನೂ ಎಳೆದು ತಂದಿದೆ.  ನವೆಂಬರ್ 18 ರಂದು ಸಂಜೆ 6 ಗಂಟೆಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಮುಗಿದ ತಕ್ಷಣ, ಕೋಮು ವಿಷ ಬಿತ್ತುವ ನೂರಾರು ಸಂದೇಶಗಳು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರವಾಹೋಪಾದಿಯಲ್ಲಿ ಹರಿದು ಬಂದವು. 

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಖಾತೆ @MrSinha_ ನಂತಹ ಒಂದು ಪೋಸ್ಟ್, ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು  ಸಾಧಿಸಿದೆ, ವಕ್ಫ್‌ ಬೋರ್ಡ್‌ ಸಿದ್ಧಿವಿನಾಯಕ ದೇವಸ್ಥಾನದ ಜಮೀನನ್ನು ಕಬಳಿಸಲಿದೆ ಎಂಬ ಸಂದೇಶವನ್ನು ಹಂಚಿಕೊಂಡರು. ಕೆಲವೇ ಕ್ಷಣಗಳಲ್ಲಿ ಈ ಪೋಸ್ಟ್‌ ಸಾವಿರ ಸಂಖ್ಯೆಯಲ್ಲಿ ರಿಪೋಸ್ಟ್‌ ಆಯಿತು. ವಾಟ್ಸಾಪ್‌ ಮಾಧ್ಯಮದಲ್ಲಿ ಲಕ್ಷೋಪಾದಿಯಲ್ಲಿ ಬಿತ್ತರವಾಯಿತು. ಎಕ್ಸ್‌ನಲ್ಲಿನ ಖಾತೆ Mr Sinha ಬಿಜೆಪಿಯ ಬೆಂಬಲಿತ ಅನೇಕ ವಿಚಾರಗಳನ್ನು ಸತತವಾಗಿ ಹಂಚಿಕೊಂಡಿದೆ.  ಬಲಪಂಥೀಯ ಸಿದ್ಧಾಂತಕ್ಕೆ ಹೊಂದಿಕೊಂಡಿರುವ ವಿಷಯವನ್ನು ಸತತವಾಗಿ ಇದೇ ಎಕ್ಸ್‌ ಖಾತೆಯ ಮೂಲಕ  ಪ್ರಚಾರ ನಡೆದಿದೆ.

ಕೋಮು ಪ್ರಚಾರದ ಈ ಹಠಾತ್ ಬೆಳವಣಿಗೆಯನ್ನು ವಿರೋಧ ಪಕ್ಷದ ನಾಯಕರು ಕಠುವಾಗಿ ಟೀಕಿಸಿದರು. ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಇದನ್ನು “ಬಿಜೆಪಿಯ ಹತಾಶ ಮತ್ತು ಲಜ್ಜೆಗೆಟ್ಟ ನಡೆ” ಎಂದು ಕರೆದರು, “ಬಿಜೆಪಿ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದೆ” ಎಂದು ಅವರು ತಮ್ಮ ಎಕ್ಸ್‌ ಖಾತೆಯ ಮೂಲಕ ಹಂಚಿಕೊಂಡರು. ಶಿವಸೇನೆ (ಯುಬಿಟಿ)  ಪಕ್ಷ ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿತು. ನಂತರ, @MrSinha_ ಎಕ್ಸ್‌ ಖಾತೆಯಲ್ಲಿನ ತನ್ನ ಪೋಸ್ಟನ್ನು ತಕ್ಷಣ ಅಳಿಸಿ ಹಾಕಿದ, ಆದರೆ  ಚುನಾವಣಾ ಆಯೋಗ ಮಾತ್ರ ಮೂಕ ಪ್ರೇಕ್ಷಕರಂತೆ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. 

2024 ರ ಮಹರಾಷ್ಟ್ರ ವಿಧಾನಸಭಾ ಚುನಾವಣೆಯು ಆ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಕೋಮುವಾದಿ ಪ್ರಚಾರಕ್ಕೆ ಸಾಕ್ಷಿಯಾಗಿದೆ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ನಿಧಾನವಾಗಿ ಬಿಜೆಪಿ ತನ್ನ ಧಾರ್ಮಿಕ ದ್ವೇಷದ ತಂತ್ರಗಾರಿಕೆಯನ್ನು ಹಂತ ಹಂತವಾಗಿ ಮುನ್ನೆಲೆ ತಂದಿತು. ವಿರೋಧ ಪಕ್ಷಗಳು ಇದನ್ನು ಆರಂಭದ ದಿನಗಳಲ್ಲಿ ಪರಿಗಣಿಸಿರಲಿಲ್ಲ, ಆದರೆ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೋಮು ದ್ವೇಷದ  ಪ್ರಚಾರ ವ್ಯಾಪಿಸಿದ ಪರಿಯನ್ನು ಕಂಡು ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಒಂದು ರೀತಿಯಲ್ಲಿ ಅಸಹಾಯಕ ಹಂತವನ್ನು ತಲುಪಿದವು. 

ಬಿಜೆಪಿಯ ಕೋಮುತಂತ್ರ ಕುತಂತ್ರಕ್ಕೆ ಪ್ರಬಲ ಪ್ರತಿರೋಧವನ್ನು ಒಡ್ಡುವ ಪ್ರುಯತ್ನ ವಿಕಾಸ್‌ ಅಘಾಡಿಯಿಂದ ಕಂಡು ಬರಲಿಲ್ಲ. ಬಿಜೆಪಿಯ ಅಬ್ಭರದ ಮುಂದೆ  ಉದ್ಧವ್‌ ಠಾಕ್ರೆ ಮತ್ತು ಅವರ ವಿಭಜಿತ ಶಿವಸೇನೆ ಒಂದು ಹಂತದಲ್ಲಿ ಯುದ್ಧಕ್ಕೂ ಮೊದಲೇ ಶಸ್ತ್ರ ತ್ಯಾಗವನ್ನು ಮಾಡಿತು.  ಬಿಜೆಪಿ ನಾಯಕ ಮತ್ತು ವಕ್ತಾರ ಕಿರೀಟ್ ಸೋಮಯ್ಯ ಅವರು “ವೋಟ್ ಜೆಹಾದ್” ಎಂದು ಚುನಾವಣೆಯ ಸಂದರ್ಭದಲ್ಲಿ  ಎಕ್ಸ್‌ನಲ್ಲಿ ಹಲವಾರು ಪೋಸ್ಟ್‌ಗಳನ್ನು ಮಾಡಿದ್ದರು. ಅವರ ಪ್ರಕಾರ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಮಹಾಯುತಿ ಎಂದೂ ಕರೆಯುತ್ತಾರೆ) ಸೋಲಿಸಲು ಮುಸ್ಲಿಂ ಸಮುದಾಯವು  ತಂತ್ರಗಾರಿಕೆಯಿಂದ ಒಂದು ಕಡೆ ಬೆಂಬಲಿಸಲು ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆದ ಅನಾಹುತಕ್ಕೆ ಮತ್ತೆ ಅವಕಾಶಕೊಡಬೇಡಿ, ಎಚ್ಚರಗೊಳ್ಳಿ ಎಂಬ ಸಂದೇಶ ಸಾರುವ ಅನೇಕ ಸಂದೇಶಗಳನ್ನು ಅವರು ತಮ್ಮ ಎಕ್ಸ್‌ ಖಾತೆಯ ಮೂಲಕ ಹಂಚಿಕೊಳ್ಳ ತೊಡಗಿದರು. ಧುಲೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನು ಎದುರಿಸಿದೆ ಏಕೆಂದರೆ ಅದರ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು (ಮಾಲೆಗಾಂವ್ ಸೆಂಟ್ರಲ್) ಕಾಂಗ್ರೆಸ್ ಪರವಾಗಿ ಅತಿಹೆಚ್ಚು ಮತ ಚಲಾಯಿಸಿದೆ,  ಉಳಿದವು ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ತಂದುಕೊಟ್ಟಿದೆ ಎಂದು ಅವರು ಟ್ವೀಟ್‌ ಮಾಡಿದ್ದರು. ಮಾಲೆಗಾಂವ್ ಸೆಂಟ್ರಲ್ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾಗಿದೆ, ಮುಸ್ಲೀಂ ಸಮುದಾಯವನ್ನೇ ಕೇಂದ್ರವಾಗಿಸಿ ಟ್ವೀಟ್‌ ಮಾಡಿರುವುದು ಸ್ಪಷ್ಟ. 

ಸೋಮಯ್ಯ ನಂತರ ಮಹಾರಾಷ್ಟ್ರದಲ್ಲಿ ಪಕ್ಷದ ಮುಖ  ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಇತರ ಬಿಜೆಪಿ ನಾಯಕರು ಈ ಅಭಿಯಾನದಲ್ಲಿ ಸೇರಿಕೊಂಡರು.  “ವೋಟ್ ಜೆಹಾದ್” ನಿಂದಾಗಿ ಮಹಾ ವಿಕಾಸ್ ಅಘಾಡಿ (ಎಂವಿಎ)-ಶಿವಸೇನೆ (ಯುಬಿಟಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)-ಶರದ್ ಪವಾರ್, ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿರುವ ವಿರೋಧ ಪಕ್ಷದ ಮೈತ್ರಿಕೂಟ 18 ಸ್ಥಾನಗಳನ್ನು ಗೆದ್ದಿದೆ ಎಂದು ಫಡ್ನವಿಸ್ ತಮ್ಮ ರ್ಯಾಲಿಯೊಂದರಲ್ಲಿ ಹೇಳಿದರು. ಕೋಮು ಪ್ರಚಾರದ ನಡುವೆಯೇ  ಚುನಾವಣಾ ಆಯೋಗವು ತುಂಬಾ ಸಮಯದ ನಂತರ ತನ್ನ ನಿದ್ದೆಯಿಂದ ಎಚ್ಚೆತ್ತು ಒಂದು ದಿನ “ವೋಟ್ ಜೆಹಾದ್” ಎಂಬ ಪದವನ್ನು ಸಹಿಸುವುದಿಲ್ಲ ಎಂದು ಹೇಳಿ ಸುಮ್ಮನಾಯಿತು.

‘ಬಟೇಂಗೆ ತೋ ಕಟೇಂಗೆ’ ಯಿಂದ ‘ಏಕ್ ಹೈ ತೋ ಸೇಫ್ ಹೈ’

ʼವೋಟ್‌ ಜಿಹಾದ್‌ʼ ನರೇಟಿವ್‌ ಬಳೆಕೆಗೆ ಚುನಾವಣಾ ಆಯೋಗ ತಡೆಯೊಡ್ಡಿದ ಕಾರಣ ಬಿಜೆಪಿ ಮತ್ತೊಂದು ನುಡಿಗಟ್ಟನ್ನು ಮಹಾರಾಷ್ಟ್ರದಲ್ಲಿ ಚಲಾವಣೆಗೆ ತಂದಿತು. ಉತ್ತರ ಪ್ರದೇಶದಲ್ಲಿ  ಅದಾಗಾಗಲೇ ಚಲಾವಣೆಯಲ್ಲಿ ಚಾಲ್ತಿಯಲ್ಲಿದ್ದ: “ಬಟೆಂಗೆ ತೋ ಕಟೆಂಗೆ” (ನಾವು ಒಡೆದು ಹೋದರೆ ನಮ್ಮ ಅಂತ್ಯವಾದಂತೆ) ಮಹಾರಾಷ್ಟ್ರದ ಚುನಾವಣಾ ಪ್ರಚಾರಲ್ಲಿ ವ್ಯಾಪಕವಾಗಿ ಬಳಸಲಾಯಿತು. 

ಇದು ಮೂಲದಲ್ಲಿ ಉಗ್ರ ಹಿಂದುತ್ವದ ಸಂಕೇತ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಅವರು ಲೋಕಸಭೆ ಚುನಾವಣೆಯ ಪೆಟ್ಟಿನಿಂದ ಸುಧಾರಿಸಿಕೊಳ್ಳಲು  ಈ ಪದವನ್ನು ಚಾಲ್ತಿಗೆ ತಂದಿದ್ದರು. ಅವರು ತಮ್ಮ ರಾಜ್ಯದಲ್ಲಿ ಮಾಡಿದ ಈ ಘೋಷಣೆಯನ್ನು ಮಹಾರಾಷ್ಟ್ರದ ಬಿಜೆಪಿ  ನಾಯಕರು ತೆಗೆದುಕೊಂಡರು. ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರಕ್ಕೆ ಬಂದಿದ್ದ ಆದಿತ್ಯನಾಥ್ ಈ ಘೋಷಣೆಯನ್ನು ಪುನರುಚ್ಚರಿಸಿದರು. ಇದು ಹಿಂದೂ ಮತದಾರರನ್ನು ಕ್ರೋಢೀಕರಿಸುವ ಮತ್ತು ಕೋಮುವಾದದ ಆಧಾರದ ಮೇಲೆ ಚುನಾವಣೆಯನ್ನು ಧ್ರುವೀಕರಿಸುವ ಗುರಿಯನ್ನು ಪರಿಣಾಮಕಾರಿಯಾಗಿ ಸಾಧಿಸಲು ಬಿಜೆಪಿಗ ಮತ್ತು ಮಿತ್ರ ಪಕ್ಷಗಳಿಗೆ ನೆರವಾಯಿತು.  

ಅಲ್ಲದೆ, ಮಹಾರಾಷ್ಟ್ರದಲ್ಲಿ ಮುಸ್ಲೀಂ ಬಾಹುಳ್ಯದ 47 ವಿಧಾನಸಭಾ ಕ್ಷೇತ್ರಗಳಿವೆ, ಅಲ್ಲಿ ಆಡಳಿತಾರೂಢ ಮಹಾಯುತಿ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮುಸ್ಲಿಂ ಸಮುದಾಯವನ್ನು ವಿರೋಧಿಸಲು ಸಾಧ್ಯವಿಲ್ಲ. ಇವುಗಳಲ್ಲಿ 12 ಕ್ಷೇತ್ರಗಳು ಬಿಜೆಪಿ ಪ್ರಾಬಲ್ಯ ಹೊಂದಿದ್ದರೆ, 8 ಶಿವಸೇನೆ (ಏಕನಾಥ್ ಶಿಂಧೆ) ಮತ್ತು 27 ಎನ್‌ಸಿಪಿ (ಅಜಿತ್ ಪವಾರ್) ಹಾಗಾಗಿ, “ಬಟೆಂಗೆ ತೋ ಕಟೆಂಗೆ” ಎಂಬ ಪ್ರಚಾರವನ್ನು  ಪ್ರಾರಂಭಿಸಿದಾಗ, ಈ ಕ್ಷೇತ್ರಗಳ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಇದರ ಪರಿಣಾಮವಾಗಿ ಮುಸ್ಲೀಂ ಮತವನ್ನು ಕಳೆದುಕೊಳ್ಳುವ ಭಯದಿಂದ “ಇಂತಹ ನರೇಟಿವ್‌ಗಳನ್ನು ಉತ್ತರ ಭಾರತದಿಂದ ಮಹಾರಾಷ್ಟ್ರಕ್ಕೆ ಆಮದು ಮಾಡಿಕೊಳ್ಳುವ  ಅಗತ್ಯವಿಲ್ಲ” ಎಂದು ಹೇಳಿದ ಮೊದಲ ನಾಯಕ ಅಜಿತ್ ಪವಾರ್.  ಅವರು ತಮ್ಮ ನಿಲುವನ್ನು ಪುನರುಚ್ಚರಿಸಿದರು. ಆದರೆ ತಮ್ಮ ಮಿತ್ರ ಪಕ್ಷವಾದ ಬಿಜೆಪಿ ನಾಯಕರನ್ನು ಇಂತಹ ಪ್ರಚೋದನಕಾರಿ ಹೇಳಿಕೆ ಮತ್ತು ಪ್ರಚಾರಗಳಿಂದ ತಡೆಯುವಷ್ಟು ಅವರು ಸಮರ್ಥರಿರಲಿಲ್ಲ.

ಬಿಜೆಪಿಯ ಈ ಅಬ್ಬರದ ಪ್ರಚಾರದಿಂದ ಅತಿಹೆಚ್ಚು ನಷ್ಟ ಅನುಭವಿಸಿರುವುದು ಮತ್ತು ಹೊಡೆತ ತಿಂದಿರುವುದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ. ಈ ಮಹರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಕಡಿಮೆ ಸ್ಥಾನಗಳನ್ನು ಪಡೆದುಕೊಂಡರೆ ಇದಕ್ಕೆ ಬಿಜೆಪಿಯ ಅಬ್ಬರದ ಪ್ರಚಾರ ಮುಖ್ಯ ಕಾರಣವಾಗಲಿದೆ ಮತ್ತು ಅಜಿತ್‌ ಪವಾರ್‌ ತಮ್ಮ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳಲಿದ್ದು, ಎನ್‌ಡಿಎ ಒಕ್ಕೂಟದಲ್ಲಿ ಮೂಲೆಗುಂಪಾಗುವ ಸಾಧ್ಯತೆ ಇದೆ. ಈ ಎಲ್ಲ ರಾಜಕೀಯ ಕಾರಣದಿಂದ ಅವರು ಮಹಾರಾಷ್ಟ್ರವು ಪ್ರಗತಿಪರ ರಾಜ್ಯವಾಗಿದೆ ಮತ್ತು  ಕೋಮು ದ್ವೇಷದ ವಿಷಯಗಳು ಅಲ್ಲಿ ಕೆಲಸ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ಅಜಿತ್‌ ಪವಾರ್‌ ನಂತರದಲ್ಲಿ ಬಿಜೆಪಿಯ ಇನ್ನೋರ್ವ ಪ್ರಭಾವಿ ನಾಯಕಿ ಮತ್ತು ಹಿಂದುಳಿದ ಸಮುದಾಯಗಳನ್ನು ಪ್ರತಿನಿಧಿಸುವ ಪಂಕಜಾ ಮುಂಡೆ ʼಬಟೇಂಗೆ ತೊ ಕಟೆಂಗೆʼ ಎಂಬ ಬಿಜೆಪಿಯ ಪ್ರಚಾರದ ವಿರುದ್ಧ ತಮ್ಮ ಅಸಮಾಧಾನಗಳನ್ನು ಹೊರಹಾಕಿದರು. ಬೀಡ್ ಜಿಲ್ಲೆಯವರಾದ ಪಂಕಜಾ ಮುಂಡೆ ಮರಾಠವಾಡ ಮತ್ತು ವಿದರ್ಭ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಮತ್ತು ಪ್ರಭಾವವನ್ನು ಹೊಂದಿದ್ದಾರೆ. ಇಲ್ಲಿ ಎನ್‌ಸಿಪಿ ಬೆಂಬಲಿಸುವ ಮುಸ್ಲೀಮ್‌ ಮತ್ತು ದಲಿತ ಮತಗಳು ಮಹಾಯುತಿ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ವರ್ಗಾವಣೆಯಾಗುವುದು ಬಿಜೆಪಿ ಗೆಲುವಿಗೆ ನಿರ್ಣಾಯಕವಾಗಿದೆ. ಈ ಭಯದಿಂದ ಅವರು ತಮ್ಮ ಪಕ್ಷದ ಮುಖಂಡರಿಗೆ ಈ ಭಾಗದಲ್ಲಿ ಉಗ್ರ ಸಮುದಾಯ ದ್ವೇಷದಿಂದ ದೂರ ಇರುವಂತೆ ಮನವಿ ಮಾಡಿದ್ದರು. 

ಪಂಕಜಾ ಮುಂಡೆ ಅವರ ನಂತರ ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಗೊಂಡಿರುವ ಮಹರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಬಿಜೆಪಿಯ ಚುನಾವಣಾ ಘೋಷವಾಕ್ಯವನ್ನು ಬಹಿರಂಗವಾಗಿ ಖಂಡಿಸಿದರು. ಅವರ ಪುತ್ರಿ ಶ್ರೀಜಯಾ ಚವಾಣ್‌ ಕುಟಂಬದ ಪ್ರಭಾವ ಇರುವ ಭೋಕರ್‌ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಇಲ್ಲಿ ಸುಮಾರು 60000 ದಷ್ಟು ಮುಸ್ಲೀಂ ಸಮುದಾಯದ ಮತದಾರರಿದ್ದಾರೆ. 

ಬಿಜೆಪಿಯ ರಾಷ್ಟ್ರೀಯ ನಾಯಕರು  ತಮ್ಮದೇ ಪಕ್ಷ ಮತ್ತು ಮೈತ್ರಿಕೂಟದ ನಾಯಕರಲ್ಲಿನ ಅಸಮಾಧಾನಕ್ಕೆ ಗುರಿಯಾಗುವಂತಾಯಿತು.  ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಒಂದು ವಾರ ಇರುವಂತೆ  “ಏಕ್ ಹೈ ತೋ ಸೇಫ್ ಹೈ” (ಒಗ್ಗಟ್ಟಾಗಿದ್ದರೆ ಸುರಕ್ಷಿತರು) ಎಂಬ ಹೊಸ ಚುನಾವಣಾ ಘೋಷವಾಕ್ಯವನ್ನು ತಮ್ಮ ಭಾಷಣದ ಮೂಲಕ ಮುನ್ನೆಲೆಗೆ ತಂದರು. ಕ್ರಮೇಣ “ಬಟೇಂಗೆ ತೋ ಕಟೇಂಗೆ” ಎಂಬ ವಾಕ್ಯದ ಬದಲಾಗಿ ಈ ಘೋಷನೆ ಚುನಾವಣೆಯಲ್ಲಿ ಬಳಕೆಯಾಯಿತು. 

ಬಟೇಂಗೆ ತೋ ಕಟೇಂಗೆ ಎಂಬ ಆಕ್ರಮಣಕಾರಿ ಭಾಷೆಯಿಂದ ಆಗಬಹುದಾದ ನಷ್ಟದಿಂದ ಬಿಜೆಪಿ ಒಕ್ಕೂಟವನ್ನು ತಪ್ಪಿಸಬಹುದು. ಆದರೆ ಆಂತರ್ಯದಲ್ಲಿ   ಅದರ ಒಳಾರ್ಥವು ಕೋಮುವಾದಿಯಾಗಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಏಕ್‌ ಹೈ ತೊ ಸೇಫ್‌ ಹೈ ಎಂಬುದನ್ನು ಸುಲಭವಾಗಿ ಸಮರ್ಥಿಸಿಕೊಳ್ಳಲು ಸಾಧ್ಯ. ಈ ವಾಕ್ಯವು ಬಿಜೆಪಿಯ ಮಿತ್ರ ಪಕ್ಷಗಳಿಗೆ, ಮುಖ್ಯವಾಗಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಪಕ್ಷಕ್ಕೆ, ಹೆಚ್ಚು ಮೃದುವಾಗಿ ಮತ್ತು ತನ್ನ ಮತದಾರರ ಮನಸ್ಸನ್ನು ಘಾಸಿಗೊಳಿಸುವುದಿಲ್ಲ ಎಂಬಂತೆ ತೋರಿಸಿತು. ಇದಾದ ನಂತರ ಬಿಜೆಪಿ 3-4 ದಿನಗಳ ಕಾಲ ದೇಶದ ಎಲ್ಲಾ ಮಾಧ್ಯಮ, ಪತ್ರಿಕೆ, ರೆಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ʼಏಕ್‌ ಹೈ ತೋ ಸೇಫ್‌ ಹೈʼ ಎಂಬ ಜಾಹೀರಾತುಗಳನ್ನು ಪ್ರವಾಹೋಪಾದಿಯುಲ್ಲಿ ಬಿತ್ತರಿಸಿತು. ಈ ಒಂದು ನರೇಟಿವ್‌ ಜನಪ್ರಿಯಗೊಳಿಸಲು ಬಿಜೆಪಿ ಕೋಟ್ಯಾಂತರ ರುಪಾಯಿಗಳನ್ನು ವ್ಯಯಿಸಿತು ಮತ್ತು ಈಗಲೂ ವ್ಯಯಿಸುತ್ತಿದೆ. 

ಮಾರ್ಧನಿಸಿದ ಇಸ್ಲಾಮೋಫೋಬಿಯಾ!

ಬಿಜೆಪಿ ಇಸ್ಲಾಮಿಕ್ ಪಂಡಿತ ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ಮುಖ್ಯಸ್ಥ  ಸಜ್ಜಾದ್ ನೋಮಾನಿ ಅವರ  ವಿಷಯವನ್ನು ಪ್ರಚಾರದಲ್ಲಿ ಎತ್ತಿತ್ತು. ಎಂವಿಎ ನಾಯಕರು ನೋಮಾನಿ ಅವರ 17 ಒತ್ತಾಯಗಳನ್ನು ಒಪ್ಪಿಕೊಂಡಿದ್ದಾರೆ, ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷೇಧವನ್ನು ಸೇರಿಸಲಾಗಿದೆ,  ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳು ಮುಸ್ಲೀಂ ಬೋರ್ಡ್‌ ಪರವಾಗಿ ಕೆಲಸಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಪ್ರವೀಣ್ ಡರೆಕರ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿದ್ದರು.  ಆದರೆ, AIMPLB ನ ಮೂಲ ಪತ್ರದಲ್ಲಿ ಆರ್‌ಎಸ್‌ಎಸ್ ನಿಷೇಧಿಸುವ ಬೇಡಿಕೆ ಸೇರಿ, ಬಿಜೆಪಿ ಹೇಳಿದ  ಯಾವ ಬೇಡಿಕೆಯೂ ಇರಲಿಲ್ಲ. ಜೊತೆಗೆ ಎಮ್‌ವಿಎ ಮುಸ್ಲೀಂ ವಯಕ್ತಿಕ ಕಾನೂನು ಮಂಡಳಿಯ ಬೇಡಿಕೆಯ ಯಾವ ವಿಚಾರವನ್ನೂ ಪ್ರಸ್ತಾಪಿಸಿರಲಿಲ್ಲ. 

 ನೋಮಾನಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೇ ಅವರನ್ನು “ಜಿಹಾದಿನ ಯೋಧರು” ಎಂದು ಕರೆಯುತ್ತಿರುವಂತೆ ತೋರಿಸಲಾದ  ದ್ವೇಷ ಪೂರಿತ ಮತ್ತು ವಯಕ್ತಿಕ ನಿಂದನೆಯ ನಕಲಿ ವಿಡಿಯೋ ಒಂದನ್ನು ಮುಂಬೈ ಬಿಜೆಪಿ ಅಧ್ಯಕ್ಷ ಆಶಿಷ್ ಶೆಲಾರ್ X  ನಲ್ಲಿ ಹಂಚಿಕೊಂಡಿದ್ದರು,. ಆದರೆ, ಈ ಕ್ಲಿಪ್ ನಕಲಿ ಎಂದು ನಂತರ ಬಯಲಾಯಿತು.; ವಾಸ್ತವದಲ್ಲಿ ನೋಮಾನಿ ಬಿಜೆಪಿ ಯ “ವೋಟ್ ಜಿಹಾದ್” ಅಭಿಯಾನವನ್ನು ವಿರೋಧಿಸುತ್ತಾ  ಠಾಕ್ರೇ ಅಥವಾ ಶರದ್ ಪವಾರ್ ಇಸ್ಲಾಮಿಕ್ ಉದ್ದೇಶಗಳ ಯೋಧರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು.‌ ಅವರ ಹೇಳಿಕೆಯನ್ನು ತಿರುಚಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಲಾಯಿತು. ಇದನ್ನು ಬಿಜೆಪಿ ತನ್ನ ಐಟಿಸೆಲ್‌ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಿತು. 

ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಬಿಜೆಪಿ ಶಾಸಕರಾದ ನಿತೀಶ್ ರಾನೆ X ನಲ್ಲಿ ಸುದ್ದಿ ಕ್ಲಿಪ್ ಅನ್ನು ಹಂಚಿದರು. ಇದರಲ್ಲಿ ಉದ್ಧವ್ ಠಾಕ್ರೇ ಮುಸ್ಲಿಂ ಸಮುದಾಯದವರೊಂದಿಗೆ 1992ರ ಗಲಭೆಗಳಲ್ಲಿ ಶಿವಸೇನೆ ಭಾಗವಹಿಸಿದ ಬಗ್ಗೆ ಕ್ಷಮೆಯಾಚನೆ ಮಾಡಿದ್ದಾರೆ ಎಂದು ಉಲ್ಲೇಖಿತವಾಗಿತ್ತು. ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹಂಚಲ್ಪಟ್ಟಿತ್ತು.  ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕರು ಹಂಚಿಕೊಂಡಿದ್ದಾರೆ. ಕೆಲವು ಪತ್ರಕರ್ತರು ಸಹ ಅದನ್ನು ಹಂಚಿಕೊಂಡಿದ್ದಾರೆ. ಆದರೆ, ಶಿವಸೇನೆ ನಾಯಕ ಆದಿತ್ಯ ಠಾಕ್ರೇ ಇದನ್ನು ತೀವ್ರವಾಗಿ ವಿರೋಧಿಸಿದ ನಂತರ, ಕೆಲವು ಪತ್ರಕರ್ತರು   ದ್ವೇಷಪೂರಿತವಾದ ಈ ಪೋಸ್ಟ್ ಅನ್ನು ಅಳಿಸಿದರು. ಆದಾಗ್ಯೂ, ರಾಣೆ  ಈ ಕುರಿತು ಇದುವರೆಗೆ ತಮ್ಮ ಪೋಸ್ಟ್‌ ಅನ್ನು ಅಳಿಸಿಲ್ಲ.  

ಚುನಾವಣೆ ಸಂದರ್ಭದಲ್ಲಿ ಬೆಳಕಿಗೆ ಬಂದ ಮತ್ತೊಂದು ನಕಲಿ ಅಭಿಯಾನವು ವಕ್ಫ್ ಬೋರ್ಡ್ ಸಂಬಂಧಿತವಾಗಿತ್ತು. ಪುಣೆಯ ಮಹಾನಗರ ಪಾಲಿಕೆಯ 80% ಭೂಮಿಯನ್ನು ವಕ್ಫ್ ಬೋರ್ಡ್ ಆಕ್ರಮಿಸಲು ಪ್ರಯತ್ನಿಸುತ್ತಿದೆ ಎಂಬ ವಿಡಿಯೋ ಒಂದನ್ನು ವ್ಯಾಪಕವಾಗಿ ಹರಿಬಿಡಲಾಯಿತು. 

ಮಹಾರಾಷ್ಟ್ರದ ಮತದಾರರು ಈ ಪ್ರಚಾರವನ್ನು ಎಷ್ಟು ಒಪ್ಪಿಕೊಳ್ಳುತ್ತಾರೆ ಎಂಬುದು ಚುನಾವಣಾ ಫಲಿತಾಂಶಗಳಿಂದ ಮಾತ್ರ ಸ್ಪಷ್ಟವಾಗುತ್ತದೆ. ಆದರೆ ಈ ದುಷ್ಪ್ರಚಾರ ಮಹಾರಾಷ್ಟ್ರದ ಸಾಮಾಜಿಕ ಸೌಹಾರ್ದತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಮಹಾರಾಷ್ಟ್ರ ಚುನಾವಣೆ: ಸಾಮಾಜಿಕ ನ್ಯಾಯದ ವಿರುದ್ಧ ಕೋಮು ಧ್ರುವೀಕರಣದ ಆಕ್ರಮಣಕಾರಿ ಪ್ರಚಾರ

ಒಂದು ವೇಳೆ ಮಹರಾಷ್ಟ್ರದ ಜನರು ಬಿಜೆಪಿ‌ ಅಭಿಯಾನವನ್ನು ಒಪ್ಪಿ ಮತ ನೀಡಿದರೆ ಮುಂದೆ ಅಲ್ಲಿನ ಸರ್ಕಾರ ಅದೇ ಮಾದರಿಯ ಆಡಳಿತವನ್ನು ನೀಡಬೇಕಾಗುತ್ತದೆ. ಜನಸಮುದಾಯದ ಜ್ವಲಂತ ಸಮಸ್ಯೆಗಳು ಕರಿತು ಚರ್ಚಿಸುವ ಬಗೆಹರಿಸುವ ಪ್ರಯತ್ನ ಕೂಡ ಅವಶ್ಯವಿರುವುದಿಲ್ಲ‌

.‌‌ಮತದಾನೋತ್ತರ ಸಮೀಕ್ಷೆಗಳ ವರದಿಯನ್ನು ಗಮನಿಸಿದರೆ ಬಹುತೇಕ ಸಮೀಕ್ಷಾ ‌ಸಂಸ್ಥೆಗಳು ಬಿಜೆಪಿ ‌ನೇತೃತ್ವದ ಮಹಾಯುತಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನೇ ವರದಿ ಮಾಡಿವೆ. ಹೀಗಿದ್ದಾಗ ಪ್ರಜಾಪ್ರಭುತ್ವಕ್ಕೆ ಪೂರಕವಾಗಿರುವ, ದಲಿತ-ಅಲ್ಪಸಂಖ್ಯಾತ-ಆದಿವಾಸಿ-ಹಿಂದುಳಿದ ಸಮುದಾಯ ಸೇರಿದಂತೆ ಎಲ್ಲಾ ವರ್ಗಗಳ ಆಶೋತ್ತರಗಳು‌ ಮತ್ತು ಕಲ್ಯಾಣಕ್ಕೆ ಅನುಕೂಲವಾದ ಸರ್ಕಾರ ಇರಲು ಸಾಧ್ಯವಿಲ್ ಲ.‌ಸರ್ಕಾರದ ಕೆಲಸವೆಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡಗಳ ಕಟ್ಟುವುದು ಮಾತ್ರವಲ್ಲ.‌

ಅಷ್ಟೇ ಆಗಿದ್ದರೆ ಚುನಾಯಿತ ಸರ್ಕಾರದ ಅಗತ್ಯವೇ ಇರುತ್ತಿರಲಿಲ್ಲ. ಕಾರ್ಪೊರೇಟ್ ಬಂಡವಾಳ ಷಾಹಿ, ಗುತ್ತಿಗೆದಾರರ ಗುಂಪು ಮತ್ತು ಅಧಿಕಾರ ವರ್ಗ ಮೂರು ಕೂಡಿ ಸರ್ಕಾರ ನಡೆಸಬಹುದು. ಸಂವಿಧಾನದಾನದ ಆಶಯವೆಂದರೆ ಸರ್ಕಾರವೆಂಬುದು ದೇಹದಲ್ಲಿರುವ ಮೆದುಳಿನಂತೆ. ಸಮಾಜದಲ್ಲಿರುವ ಎಲ್ಲ ಅಂಗಗಳಿಗೂ ಅಗತ್ಯಕ್ಕೆ, ಅದರ ಸ್ವಭಾವ, ಗುಣ ವಿಶೇಷಣ,ಕಷ್ಟನಷ್ಟ ‌ಸಮಸ್ಯೆಗಳಿಗೆ ಅನುಗುಣವಾಗಿ ಸ್ಪಂದಿಸುವುದು. ದೇಹದ ಯಾವುದೇ  ಅಂಗಾಗಕ್ಕೆ ನೋವಾದರೂ, ಪೆಟ್ಟು ಬಿದ್ದರೂ ಮೆದುಳು ಮೊದಲು ನೋವನ್ನು ಅನುಭವಿಸುತ್ತದೆ‌. ಮೆದುಳು ಕೊರಗುತ್ತದೆ. ನಿವಾರಿಸುವ ಉಪಾಯ ಹುಡುಕುತ್ತದೆ. ಸರ್ಕಾರ ಕೂಡ ಸಮಾಜದ ಈ ಓರೆ ಕೋರೆಗಳ‌ನ್ನು ಕಂಡು ಶುದ್ಧ ಅಂತ:ಕರಣದಿಂದ ಮರುಗಬೇಕು. ನಿವಾರಿಸಿ ಇಡೀ ಸಮಾಜದವನ್ನು ಆರೋಗ್ಯಯುಕ್ತ ಗೊಳಿಸಬೇಕು. ಆದರೆ ಈಗ ಮಹರಾಷ್ಟ್ರದ ಚುನಾವಣೆಯಲ್ಲಿ ಆದದ್ದು ಏನು? 

ಈ ರಾಜಜಕೀಯ ಪ್ರಚಾರ ತಂತ್ರಗಳಿಂದ ತಕ್ಷಣಕ್ಕೆ ಅಧಿಕಾರ ಸಿಗಬಹುದು. ಆದರೆ ದೀರ್ಘ ಕಾಲದಲ್ಲಿ ಇದರ ಪರಿಣಾಮ ? ಅಂಬೇಡ್ಕರ್, ಸಾಹು ಮಹರಾಜ್, ಜ್ಯೋತಿಭಾ ಫುಲೆ ಮುಂತಾದವರ ಜನ್ಮ ಕರ್ಮ ಭೂಮಿಯೆಂದು‌ ಪ್ರಗತಿ ಪರ ಚಿಂತನೆಗಳಿಗೆ ಖ್ಯಾತಿ ಪಡೆದ ನೆಲದಲ್ಲಿ ಮುಂದೆ ಸಾಮಾಜಿಕ‌ ನ್ಯಾಯದ ಧ್ವನಿಗೆ ಅವಕಾಶ ಸಾಧ್ಯವಿದೆಯೇ ?  

ಅಲ್ಪ ಸಂಖ್ಯಾತರ ಸುರಕ್ಷತೆ,  ದಲಿತರ ಸ್ವಾಭಿಮಾನ, ಹಿಂದುಳಿದ ವರ್ಗಗಳ ನ್ಯಾಯೋಚಿತ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ಸ್ಥಾನಮಾನ ಇವೆಲ್ಲವನ್ನೂ ತಿರಸ್ಕರಿಸುವ ಮತ್ತು ಜಾತಿ ಜನಗಣತಿಯಂತಹ ಮಹತ್ವದ ವಿಚಾರಗಳನ್ನು ವಿರೋಧಿಸಿ ಹಿಂದುತ್ವದ ನೆಲೆಯಲ್ಲಿ ಜಾತಿ ಅಸಮಾನತೆಗಳ ಕಠು ವಾಸ್ತವವನ್ನು ಮರೆಮಾಚುವ ಉದ್ದೇಶದಿಂದ ಕೂಡಿತ್ತು‌. ರವಿ ರಾಣಾ, ನವನೀತ್ ರಾಣಾ ರಂತಹ ಬಿಜೆಪಿಯ ಅಭ್ಯರ್ಥಿಗಳು ಮುಸ್ಲೀಂ ಸಮುದಾಯದ ವಿರುದ್ಧ ಧಾಳಿಗೆ ನೇರವಾಗಿ ಪ್ರಚೋದಿಸಿದ ಘಟನೆಗಳು ನಡೆದವು‌. ಮಹಾಯುತಿ ಅದರಲ್ಲೂ ಮುಖ್ಯವಾಗಿ ಬೆಜೆಪಿ ಪ್ರಚಾರ ಅಭಿಯಾನ ಸಂಪೂರ್ಣವಾಗಿ ಭಾರತ ಸಂವಿಧಾನವನ್ನು ಲೇವಡಿ ಮಾಡುವ ರೀತಿಯಲ್ಲಿ ಇತ್ತು. ಮಹರಾಷ್ಟ್ರ ಹಿಂದೆಂದೂ ಇಷ್ಟು ಆಕ್ರಮಣಕಾರಿ ಹಿಂದುತ್ವದ ಪ್ರಚಾರ ತಂತ್ರವನ್ನು ಕಂಡಿರಲಿಲ್ಲ.

ಐದು ವರ್ಷಗಳಿಗೊಮ್ಮೆ ಚುನಾವಣೆ ಬರುತ್ತದೆ ಮತ್ತು ಹೋಗುತ್ತದೆ. ಸಮಾಜ ಸದಾ ಇರುತ್ತದೆ. ಸಮಾಜದಲ್ಲಿ ಉಂಟಾದ ಒಡಕು ಮಾಯುವುದು ಸುಲಭವಲ್ಲ. ಒಂದು ಚುನಾವಣೆಯಲ್ಲಿ ಗೆಲ್ಲಲು, ರಾಜಕೀಯ ಶಕ್ತಿಗಳು ಶಾಂತಿ ಮತ್ತು ಸೌಹಾರ್ದತೆಯನ್ನು ಛಿಧ್ರಗೊಳಿಸಿದರೆ ಅದು ಅಂತಿಮವಾಗಿ ಕೋಮುಗಲಭೆಗೆ ಕಾರಣವಾಗುತ್ತದೆ. ತಕ್ಷಣದ ರಾಜಕೀಯ ಲಾಭಕ್ಕೋಸ್ಕರ ಪರಸ್ಪರ ಜಾತಿ ಧರ್ಮಗಳಲ್ಲಿ ಅಪನಂಬಿಕೆಯ ಬೀಜ ಭಿತ್ತುವುದರಿಂದ ದೀರ್ಘಕಾಲದಲ್ಲಿ ಸಮಾಜದಲ್ಲಿ ಉಂಟಾಗುವ ಒಡಕು ಈ ದೇಶವನ್ನು ಮತ್ತು ಸಮಾಜದ ಐಕ್ಯತೆಗೆ ಧಕ್ಕೆ ತರಲಿದೆ. ಈ ಹಂತದ ಬಳಿಕ ಮತ್ತೆ ಸಹಜ ಹಿಂತಿರುಗುವುದು ಅಸಾಧ್ಯ. ಅಂತಹ ಪರಿಸ್ಥಿತಿಯನ್ನು ಇಸ್ರೇಲ್‌-ಪ್ಯಾಲಿಸ್ತೇನ್‌, ಮಧ್ಯ ಏಷ್ಯಾ ಸೇರಿದಂತೆ ಅನೇಕ ನಾಗರಿಕ ಯುದ್ಧಗಳಲ್ಲಿ ನೋಡುತ್ತಿದ್ದೇವೆ. ಅಮೆರಿಕಾದಲ್ಲಿ ಅಂದು ನಡೆದ ನಾಗರಿಕ ಯುದ್ಧ ಕೂಡ ಅಧಿಕಾರ ಕೇಂದ್ರ ಅಹಿತಕ ಪೈಪೋಟಿಯ ಪರಿಣಾಮವೇ ಆಗಿತ್ತು ಎಂಬುದನ್ನು ನಾವಿಲ್ಲಿ ನೆನೆಪಿಸಿಕೊಳ್ಳಬೇಕು.  ಈ ಹಿಂದೆ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಲ್ಲಿಈ ವಿಷಯದ ಬಗ್ಗೆ ಕನಿಷ್ಠ ಅರಿವು ಇತ್ತು. ಆದರೆ ಈಗ, ಈ ಚುನಾವಣೆಯಲ್ಲಿ ರಾಜಕೀಯ ಪ್ರಜ್ಞೆ ನಿರ್ನಾಮವಾಗಿ ಹೋಗಿದೆ. ಶಾಂತಿ ಮತ್ತು ಸಾಮರಸ್ಯವನ್ನು ಕದಡುತ್ತ, ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣಾ ವ್ಯವಸ್ಥೆಯನ್ನು ಕೀಳುಮಟ್ಟಕ್ಕೆ ಎಳೆದು ಸಾವಿನ ಮೆರವಣಿಗೆಯಾಶಗಿಸಲು ಹೊರರಟಿರುವ  ಈ ರೀತಿಯ ರಾಜಕೀಯ ತಂತ್ರಗಳು, ನಮ್ಮ ಸಮಾಜವನ್ನು ಅತ್ಯಂತ ಹೀನ ಸ್ಥಿತಿಯ ಕಡೆಗೆ ಒಯ್ಯಬಹುದು.‌

ಲೇಖನ: ರಾಜೇಶ್‌ ಹೆಬ್ಬಾರ್

You cannot copy content of this page

Exit mobile version