ಮುಂಬೈ: ಬೆಳಗಾವಿ ನಮ್ಮದು ಎಂದು ಸದಾ ಒಂದಿಲ್ಲೊಂದು ಗಲಾಟೆ ಎಬ್ಬಿಸುವ ಮಹಾರಾಷ್ಟ್ರ ರಾಜಕಾರಣಿಗಳಿಗೆ ಅಲ್ಲಿನ ಕನ್ನಡಿಗರೇ ಸರಿಯಾದ ಉತ್ತರ ನೀಡಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ ಐದು ಜಿಲ್ಲೆಗಳನ್ನು ಸೇರಿಸಿ, ಅಖಂಡ ಕರ್ನಾಟಕದ ಭೂಪಟವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಕೊಲ್ಲಾಪುರ, ಸಾಂಗ್ಲಿ, ಜತ್ತ, ಸೊಲ್ಲಾಪುರ, ಸಾಂಗ್ಲಿ, ಲಾತೂರ್ ಮತ್ತು ಉಸ್ಮಾನಾಬಾದ್ ಗಳನ್ನು ಕರ್ನಾಟಕಕ್ಕೆ ಸೇರುವಂತೆ ಮಹಾರಾಷ್ಟ್ರ ಕನ್ನಡಿಗರು ತಯಾರಿಸಿರುವ ಭೂಪಟ ನಿನ್ನೆಯಿಡೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಬೆಳಗಾವಿ, ಬೀದರ್, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಅಲ್ಲಿನ ಜನಪ್ರತಿನಿಧಿಗಳು ಮೊದಲಿನಿಂದಲೂ ಹಕ್ಕು ಪ್ರತಿಪಾದಿಸುತ್ತಲೇ ಬಂದಿದ್ದು, ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ದಾವೆ ವಿಚಾರಣೆಗೆ ಬಾಕಿ ಇದೆ.
ಗಡಿ ಸಮಸ್ಯೆ ಪರಿಹಾರಕ್ಕೆ ಮಹಾರಾಷ್ಟ್ರ ಸರ್ಕಾರದ ಒತ್ತಡದಿಂದಾಗಿ ಕೇಂದ್ರ ಸರ್ಕಾರ ರಚಿಸಿದ ಮೆಹರ್ ಚಂದ್ ಮಹಾಜನ್ ಆಯೋಗ ಬೆಳಗಾವಿಗೆ ಸೇರಬೇಕು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಯೋಗದ ವರದಿಯನ್ನು ತಿರಸ್ಕರಿಸಿತ್ತು. ಮಹಾರಾಷ್ಟ್ರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು.
ಕರ್ನಾಟಕ ಸರ್ಕಾರ ಮಹಾಜನ್ ವರದಿಯೇ ಅಂತಿಮ ಎಂದು ಪ್ರತಿಪಾದಿಸುತ್ತ ಬಂದಿದ್ದು, ಒಂದು ವೇಳೆ ಮಹಾಜನ್ ವರದಿ ಜಾರಿಗೆ ಬಂದರೆ ಬೆಳಗಾವಿ ಕರ್ನಾಟಕದ ಪಾಲಿಗೆ ಉಳಿಯುವುದಲ್ಲದೆ, ಮಹಾರಾಷ್ಟ್ರ ಸೇರಿರುವ ಹಲವು ಕನ್ನಡ ಪ್ರದೇಶಗಳು ಕರ್ನಾಟಕಕ್ಕೆ ಸೇರುತ್ತವೆ ಮತ್ತು ಕೇರಳದಲ್ಲಿರುವ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾಗುತ್ತದೆ.
ಬೆಳಗಾವಿ ವಿಷಯ ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಬಿಜೆಪಿ, ಎನ್ ಸಿಪಿ ಪಕ್ಷಗಳಿಗೆ ಚುನಾವಣೆಗಳಲ್ಲಿ ಮತ ತರುವ ಭಾವನಾತ್ಮಕ ವಿಷಯವಾದ್ದರಿಂದ, ಅಲ್ಲಿನ ಮರಾಠಿಗರ ಭಾವನೆಗಳನ್ನು ಕೆರಳಿಸಿ ಲಾಭ ಮಾಡಿಕೊಳ್ಳುವ ಕಾರ್ಯವನ್ನು ಮೊದಲಿನಿಂದಲೂ ನಡೆಸುತ್ತಲೇ ಬಂದಿವೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಮರಾಠಿ ಮೂಲಭೂತವಾದಿಗಳ ಸಂಘಟನೆ/ರಾಜಕೀಯ ಪಕ್ಷಕ್ಕೆ ಮಹಾರಾಷ್ಟ್ರದ ರಾಜಕಾರಣಿಗಳು ಹಣಕಾಸಿನ ಸಹಾಯ ನೀಡುತ್ತ ಬಂದಿವೆಯಲ್ಲದೆ, ಎಂಇಎಸ್ ಸಂಘಟಿಸುವ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರದಿಂದ ಸಾವಿರಾರು ಜನರನ್ನು ಕಳುಹಿಸುವುದು, ಅಲ್ಲಿನ ರಾಜಕಾರಣಿಗಳು, ಮಂತ್ರಿಗಳು ಬಂದು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ ಬೆಳಗಾವಿಯ ಶಾಂತಿಯನ್ನು ಕದಡುವ ಕೆಲಸವನ್ನು ಮಾಡಿಕೊಂಡು ಬಂದಿವೆ.
ಇದೀಗ ಮಹಾರಾಷ್ಟ್ರದ ಕನ್ನಡಿಗರು ಅಲ್ಲಿರುವ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇಡುವುದರೊಂದಿಗೆ ಶಾಂತಿಕದಡುವ ಶಕ್ತಿಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ.