ಸಮಾಜದ ಆಗು-ಹೋಗುಗಳಿಗೆ ಎಲ್ಲರೂ ಅವರವರ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕವಿ ಜಿ. ಎಸ್ ಶರಣು ಅವರು ಇಂದಿನ ಸಮಾಜದ ಹಸಿ ವಾಸ್ತವಗಳಿಗೆ ತಮ್ಮ ಕಾವ್ಯದ ಕನ್ನಡಿ ಹಿಡಿದು ತೋರಿಸಿದ್ದಾರೆ. ಈ ಎರಡು ಕವಿತೆಗಳು ನಿಮ್ಮ ಭಾನುವಾರದ ಓದಿಗಾಗಿ ಪೀಪಲ್ ಮೀಡಿಯಾ ಕೊಡುಗೆ
ನರಕದ ಜಾಗಗಳು
ಆಗಾಗ
ಮಸೀದಿ, ಮಂದಿರ, ಚರ್ಚ್ ಗಳಲ್ಲಿ
ಕತ್ತಿ ಮಸಿಯುವ
ಕೆಲಸ ಸಾಮಾನ್ಯವಾಗಿತ್ತು
ದಿನಾಲೂ
ದೊಡ್ಡದಾದ ಯುವಕರ ದಂಡು
ರಾತ್ರಿ ಹೊತ್ತು
ಈ ಮೂರು ಸ್ಥಳಗಳಲ್ಲಿ ಧಾವಿಸುತ್ತಿತ್ತು
ಅಲ್ಲಿ ಧರ್ಮ ಶಿಕ್ಷಣ ಎನ್ನೋದು
ನೆಪ ಮಾತ್ರ, ಅಲ್ಲಿರುತ್ತಿದ್ದುದು
ಅನ್ಯ ಧರ್ಮದವರನ್ನ
ಕೊಲ್ಲುವ ವಿಷಯಗಳು
ಅಗಾಧ ಬುದ್ಧಿವಂತರು ಎನಿಸಿಕೊಂಡ
ಧರ್ಮ ಗುರುಗಳಿಂದ
ಹತ್ತು ಹಲವಾರು ಅರ್ಥವಾಗದ
ಮಾತುಗಳು, ಚರ್ಚೆಗಳು ಇರುತ್ತಿದ್ದವು
“ಅಶಾಂತಿಯನ್ನ ಭೋದಿಸುವವರು
ಧರ್ಮಗುರುಗಳಲ್ಲ ರಾಕ್ಷಸರು,
ಹಿಂಸೆ ಮಾತುಗಳಿಗಾಗಿರುವ
ಜಾಗಗಳು ಜಾಗಗಳಲ್ಲ ನರಕ ಆಗಿವೆ”
ಎಂದುಕೊಂಡು ಮನೆಕಡೆ ಓಡಿಬಂದೆ.
ಮಸಣದ ನಗು
ಚಾಕುವಿಗೆ ಹತ್ತಿದ ರಕ್ತ
ಒಣಗಿರಲಿಲ್ಲ
ಆಗ್ಲೇ, ಮತ್ತೊಂದಿಷ್ಟು
ಬಿಸಿರಕ್ತ ಅಂಟಿಸಿಕೊಂಡಿತ್ತು
ಚಾಕು ಮಾತ್ರ
ಒಣಗುವ ಮುನ್ನವೇ
ಊರೆಲ್ಲ ಸುತ್ತುತಿತ್ತು
ಹಸಿ ರಕ್ತ ಇನ್ನೂ ಹುಡುಕುತ್ತಿತ್ತು
ಹಸಿ ರಕ್ತ ಮತ್ತಷ್ಟು ಪಡೆಯಲು
ಏನಾದರೂ ಮಾಡಬೇಕಲ್ಲ
ಎನ್ನುವ ಯೋಚನೆಯಲ್ಲಿ
ಧರ್ಮದ ಪಟ್ಟಿಯನ್ನು
ಹಣೆಗೆ ಕಟ್ಟಿಕೊಂಡು
ಸಿದ್ಧವಾಗಿ ನಿಂತಿತ್ತು
ಇದೇ ಸಮಯದಲ್ಲಿ
ನನ್ನ ಹಸಿವು ನೀಗಿತು
ಸ್ವಲ್ಪ ಹೊಟ್ಟೆ ತಣ್ಣಗಾತು
ಹಿಂಗನ್ನುತ್ತ ಮಸಣ ಬಿದ್ದು ನಗುತಿತ್ತು
ಎದ್ದು ಎದ್ದು ಕುಣಿತಿತ್ತು
ಜಿ.ಎಸ್.ಶರಣು
ಕವಿ