ಮಂಗಳೂರು: ಮಹಿಳೆಯರ ಮೇಲಿನ ಹಿಂಸೆಯುಹೆಚ್ಚಾಗುತ್ತಿದ್ದು ಅದನ್ನು ತಡೆಯಲು ಇಲಾಖೆಯು ಸಾಕಷ್ಟು ಶ್ರಮಿಸುತ್ತಿದೆ, ಸಾಂತ್ವನ ಸಖಿ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ಹಿಂಸೆಗೊಳಗಾದ ಮಹಿಳೆಯರು ನ್ಯಾಯವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಟಿ ಪಾಪಾ ಬೋವಿಯವರು ಹೇಳಿದರು.
ಸಮಾನತೆಯ, ಹಿಂಸಾರಹಿತ, ಸೌಹಾರ್ದಯುತ ಸಮಾಜ ನಮ್ಮದಾಗಲಿ ಎನ್ನುವ ಆಶಯ ನುಡಿಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶ್ವಮಹಿಳಾ ದೌರ್ಜನ್ಯ ವಿರೋಧಿ ದಿನದ (ನ. 25) ಅಂಗವಾಗಿ ಇಲಾಖೆ, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಅರಿವಿನ ಜಾಥಾ ಮತ್ತು ಮಹಿಳಾ ಸಮಾವೇಶವನ್ನು ಮಂಗಳೂರಿನ ಉಳ್ಳಾಲದ ಗಟ್ಟಿ ಸಮಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರತೀ 11 ನಿಮಿಷಗಳಿಗೊಮ್ಮೆ ಜಗತ್ತಿನಲ್ಲಿ ಸಂಗಾತಿಯಿಂದಲೇ ಮಹಿಳೆಯರ ಹತ್ಯೆ ನಡೆಯುತ್ತದೆ ಎಂಬ ಘೋರ ಸತ್ಯವನ್ನು ವಿಶ್ವಸಂಸ್ಥೆ ಈ ದಿನಗಳಲ್ಲೇ ತೆರೆದಿಟ್ಟಿದೆ.ಲಿಂಗ ಅಸಮಾನತೆ ಇದರ ಮೂಲವಾಗಿದೆ. ಜತೆಗೆ ಮಹಿಳೆಯರಲ್ಲಿ ಲಿಂಗ ಸೂಕ್ಷ್ಮತೆಯ ಕೊರತೆ, ಕಾನೂನು ಜಾಗೃತಿ ಇಲ್ಲದಿರುವುದು, ಮತ್ತು ಸರಕಾರಿ ನ್ಯಾಯ ವ್ಯವಸ್ಥೆಗಳ ಮಾಹಿತಿಗಳ ಕೊರತೆಯೂ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಕಾನೂನನ್ನು ಜನರ ಬಳಿಗೊಯ್ಯುವ ಉದ್ದೇಶದೊಂದಿಗೆ ಈ ಪ್ರಚಾರಾಂದೋಲನವನ್ನು ನಡೆಸಲಾಗಿದೆ ಎಂದರು.
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಸಬಿಹಾ ಭೂಮಿಗೌಡರವರು ಆಶಯ ಮಾತುಗಳನ್ನಾಡುತ್ತಾ, ಹೆಣ್ಮಕ್ಕಳು, ಮಹಿಳೆಯರ ಮೇಲೆ ಹಿಂಸೆ ಜಾಸ್ತಿಯಾಗುತ್ತಿದೆ. ಇದಕ್ಕಿರುವ ಕಾರಣಗಳ ಬಗ್ಗೆ ನಾವೆಲ್ಲರೂ ಚಿಂತಿಸಿ ಕಾರ್ಯಾಚರಿಸಬೇಕಾದ ಕಾಲ ಬಂದಿದೆ. ಹೆಣ್ಮಕ್ಕಳ ಮೇಲಿನ ಹಿಂಸೆಗೆ ನಮ್ಮ ಸ್ಪಂದನೆ ಸಾಲದು. ನಮ್ಮ ಗಂಡುಮಕ್ಕಳಿಗೂ ಈ ಬಗ್ಗೆ ಅರಿವನ್ನು ನೀಡಬೇಕಿದೆ ಎಂದರು.
ಸಮಾವೇಶಕ್ಕೆ ಮುನ್ನ ಮುಡಿಪು, ಅಸೈಗೋಳಿ, ದೇರಳಕಟ್ಟೆ, ಕುತ್ತಾರು, ತೊಕ್ಕೊಟ್ಟು, ತಲಪಾಡಿ, ಕೋಟೆಕಾರು ಬೀರಿ, ಸೋಮೇಶ್ವರ, ಉಳ್ಳಾಲ ಪ್ರದೇಶಗಳಲ್ಲಿ ಪ್ರಚಾರೋಂದಲನ ನಡೆಯಿತು. ಲಿಂಗತ್ವ, ಕೌಟುಂಬಿಕ ದೌರ್ಜನ್ಯ, ಪೋಕ್ಸೊ, ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದ 8 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಮನೆ ಮನೆಗೆ, ಅಂಗಡಿಗಳಿಗೆ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ನ ಪ್ರೊ.ಹಿಲ್ಡಾ ರಾಯಪ್ಪನ್, ಯೇನೆಪೋಯ (ಡೀಮ್ಡ್)ವಿ.ವಿ ಯ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ.ಐರಿನ್ ವೇಗಸ್, ಸಖಿ ಕೇಂದ್ರದ ಪ್ರಿಯಾ, ಸಿಒಡಿಪಿ ನಿರ್ದೇಶಕ ಫಾದರ್ ವಿನ್ಸೆಂಟ್ ಡಿಸೋಜ,ಜಮಾತೆ-ಇ- ಇಸ್ಲಾಮಿ ಹಿಂದ್ನ ಸದಸ್ಯೆ ಸುಮಯ್ಯ ಹಮೀದುಲ್ಲಾ, ಮಹಾಲಕ್ಷ್ಮಿ ಮಹಿಳಾ ಮಂಡಲದ ಕಲಾವತಿ ಉಪಸ್ಥಿತರಿದ್ದರು. ಸಮಾವೇಶದಲ್ಲಿ 400ಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದ್ದರು.
ಮಂಗಳೂರಿನ ಡೀಡ್ಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ವಿ.ವಿಯ ಮಹಿಳಾ ಅಧ್ಯಯನ ಕೇಂದ್ರ, ಸಿಒಡಿಪಿ(ರಿ) ಜಮಾತೆ-ಇ- ಇಸ್ಲಾಮಿ ಹಿಂದ್, ಜನ ಶಿಕ್ಷಣ ಟ್ರಸ್ಟ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್,ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ, ಶ್ರೀ ಪ್ರಶಾಂತಿ ಮಹಿಳಾ ಮಂಡಲ(ರಿ), ಮಹಾಲಕ್ಷ್ಮಿ ಮಹಿಳಾ ಮಂಡಲ, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಸಹೋದಯ, ತರಿಕಿಟ ಕಲಾ ಕಮ್ಮಟ(ರಿ), ರೋಶನಿ ಸಮಾಜ ಸೇವಾ ಕಾಲೇಜು, ಸೈಂಟ್ ಅಲೋಶಿಯಸ್ ಸಮಾಜ ಸೇವಾ ಕಾಲೇಜು, ಸೈಂಟ್ ಅಲೋಶಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ, ಡಾಕ್ಟರ್ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು,ಯೇನೆಪೋಯ (ಡೀಮ್ಡ್)ವಿ.ವಿ.ಯಸಮಾಜ ಕಾರ್ಯ ವಿಭಾಗ, ಇಂಡಿಯನ್ ಕಮ್ಯುನಿಟಿ ಆಕ್ಟಿವಿಸ್ಟ್ ನೆಟ್ ವರ್ಕ್(ICAN), ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಸ್ನೇಹ ಸಂಜೀವಿನಿ ಒಕ್ಕೂಟ, ಉಳ್ಳಾಲ ನಗರ ಸಭೆ, ಸೋಮೇಶ್ವರ ಪುರಸಭೆ,ಕೋಟೆಕಾರು ಪಟ್ಟಣ ಪಂಚಾಯತ್, ಕೊಣಾಜೆ ಗ್ರಾಮ ಪಂಚಾಯತ್, ತಲಪಾಡಿ ಗ್ರಾಮ ಪಂಚಾಯತ್, ಮುನ್ನೂರು ಗ್ರಾಮ ಪಂಚಾಯತ್, ಬೆಳ್ಮ ಗ್ರಾಮ ಪಂಚಾಯತ್, ಕುರ್ನಾಡು ಗ್ರಾಮ ಪಂಚಾಯತ್ ಇವುಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ನಡೆಯಿತು.
ಡೀಡ್ಸ್ ನ ಕಾವ್ಯಶ್ರೀ ಆಶಯ ಗೀತೆ ಹಾಡಿದರು. ಜೆಸಿಂತಾ ಪಿರೇರಾ ಸ್ವಾಗತಿಸಿದರು. ಸಂಚಲನದ ಹರಿಣಿ ಧನ್ಯವಾದವಿತ್ತರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.