ಸಂವಿಧಾನ ಅಪಾಯದಲ್ಲಿದೆ ಎಂದು ಒಪ್ಪಿಕೊಳ್ಳದೇ ಹೋದರೆ, ಸಂವಿಧಾನದ ರಕ್ಷಣೆಗೆ ಎಂತಹಾ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಮನೋಭಾವನೆಯನ್ನು ಜನಸಮೂಹದಲ್ಲಿ ಗಟ್ಟಿಗೊಳಿಸುವ ಕೆಲಸ ಆಗದೆ ಹೋದರೆ ಮತ್ತು ಇದಕ್ಕೆ ಪೂರಕವಾಗಿ ಸಂವಿಧಾನದ ಕುರಿತಾದ ಅರಿವನ್ನು ಜನರ ಸಾಂಸ್ಕೃತಿಕ ಅರಿವಿನ ಭಾಗವಾಗಿ ಸ್ಥಾಪಿಸದೆ ಹೋದರೆ, ಪರಿಸ್ಥಿತಿ ಬಹುಬೇಗ ಕೈ ಮೀರಿ ಹೋಗಲಿದೆ ಎಂದು ಜನ ಸಮುದಾಯಕ್ಕೆ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ ಲೇಖಕ ಎ. ನಾರಾಯಣ
‘ಧರ್ಮವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ’ ಅಂತ ಕೆಲವರು ಕಂಡ ಕಂಡ ಕಡೆ ಬರೆದರು, ಬೇರೆ ಬೇರೆ ಕಡೆ ಹೇಳಿದರು. ಅದರಲ್ಲಿ ಯಾರಿಗೂ ಏನೂ ದೋಷ ಕಾಣಲಿಲ್ಲ. ಧರ್ಮವನ್ನು ರಕ್ಷಿಸುವಷ್ಟರ ಮಟ್ಟಿಗೆ ಧರ್ಮಕ್ಕೇನು ಅಪಾಯ ಬಂದಿದೆ ಅಂತ ಯಾರೂ ಕೇಳಲಿಲ್ಲ. ಈ ಮೌನದ ನಡುವೆ ‘ಧರ್ಮವನ್ನು ರಕ್ಷಿಸಿ’ ‘ಧರ್ಮವನ್ನು ರಕ್ಷಿಸಿ’ ಎನ್ನುವ ಮಾತೇ ಮತ್ತೆ ಮತ್ತೆ ಎಲ್ಲೆಡೆ ಮಾರ್ದನಿಗೊಂಡು ‘ನಮ್ಮ ಧರ್ಮಕ್ಕೇನೋ’ ಆಗಿದೆ ಎನ್ನುವ ಒಂದು ಭಾವನೆ ದೊಡ್ಡ ಸಂಖ್ಯೆಯ ಜನರಲ್ಲಿ ಮೂಡತೊಡಗಿತು. ಅದನ್ನು ಯಾರೂ ಗಮನಿಸಲಿಲ್ಲ. ಮಾತ್ರವಲ್ಲ, ಅವರು ಹಾಗೆ ಹೇಳುತ್ತಿದ್ದಾಗ ‘ಸಂವಿಧಾನವನ್ನು ರಕ್ಷಿಸಿ. ಅದು ನಮ್ಮನ್ನು ರಕ್ಷಿಸುತ್ತದೆ’ ಅಂತ ಪ್ರತಿ ಹೇಳಿಕೆ ನೀಡಬೇಕು ಅಂತಲೂ ಯಾರಿಗೂ ಅನ್ನಿಸಲಿಲ್ಲ. ಸಂವಿಧಾನ ಪಾಲನೆಯೇ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯ ಧರ್ಮ, ಸಂವಿಧಾನವೇ ಸ್ವತಂತ್ರ ಭಾರತದ ಧರ್ಮ ಗ್ರಂಥ ಅಂತ ಯಾರೂ ಸ್ವಾತಂತ್ರ್ಯಾನಂತರದ ತಲೆಮಾರುಗಳಿಗೆ ಮನವರಿಕೆ ಮಾಡಲಿಲ್ಲ. ಹೊಸ ತಲೆಮಾರಿನ ಮಕ್ಕಳು ಸಂವಿಧಾನವನ್ನು ಸಾಮಾನ್ಯ ಜ್ಞಾನದ ಪುಸ್ತಕ ಓದುವಂತೆ ಓದಿದರು. ಶಿಕ್ಷಕರು ಪಾಠ ಹೇಳುವಾಗಲೂ ಹಾಗೇನೇ ಮಾಡಿದರು.
ಸಂವಿಧಾನವನ್ನು ಕಡ್ಡಾಯವಾಗಿ ಭೋದಿಸಬೇಕು ಅಂದರೆ ಆದದ್ದೇನು?
ಸಂವಿಧಾನವು ಸಮಾಜ ವಿಜ್ಞಾನದ ಭಾಗವಾಗಿ ಶಾಲಾ ಪಠ್ಯದಲ್ಲಿ ಸೇರಿಕೊಂಡಿದೆ. ಸಮಾಜ ವಿಜ್ಞಾನ ಎಂದರೆ ಅದು ‘ಓದಿ, ಮಾರ್ಕು ಗಳಿಸಿ, ಮರೆತು ಬಿಡಲು’ ಎನ್ನುವ ಧೋರಣೆ ಹೇಗೂ ಇದೆ. ಸಮಾಜ ವಿಜ್ಞಾನದ ಜತೆಗೆ, ಸಂವಿಧಾನದ ಬಗ್ಗೆ ಶಾಲೆಯಲ್ಲಿ ಕಲಿತ ಸಾಮಾನ್ಯ ಜ್ಞಾನವೂ ಮರೆತು ಹೋಗುತ್ತದೆ. ಉನ್ನತ ಶಿಕ್ಷಣದಲ್ಲಿ ಕಲಿಯುವ ವಿಷಯ ಯಾವುದಾದರೂ ಇರಲಿ, ಅದರ ಜತೆಗೆ ಸಂವಿಧಾನವನ್ನು ಕಡ್ಡಾಯ ಭೋದನೆ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿತು. ನಿಜಕ್ಕೂ ಇದು ಸುಪ್ರೀಂ ಕೋರ್ಟ್ ಹೇಳ ಬೇಕಿರುವುದಕ್ಕಿಂತ ಹೆಚ್ಚಾಗಿ ಸಂವಿಧಾನ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಕ್ಷದ ಸರಕಾರ ಹೇಳಿ ಕಡ್ಡಾಯ ಗೊಳಿಸ ಬೇಕಿತ್ತು. ಅಂತೂ ಸುಪ್ರೀಂ ಕೋರ್ಟ್ ಆದರೂ ಹೇಳಿತಲ್ಲ, ಒಳ್ಳೆಯದಾಯಿತು ಅಂದು ಕೊಂಡರೆ, ನಮ್ಮ ಉನ್ನತ ಶಿಕ್ಷಣ ರಂಗದಲ್ಲಿ ನಡೆದದ್ದೇ ಬೇರೆ. ಕಾಟಾಚಾರಕ್ಕೆ ಎಂಬಂತೆ ಏನೋ ಸಂವಿಧಾನದ ಬಗ್ಗೆ ಕೆಲವು ತರಗತಿಗಳನ್ನು ನಡೆಸಿ ಕೈತೊಳೆದುಕೊಳ್ಳುವ ಕೆಲಸವನ್ನು ಒಂದಷ್ಟು ಸಮಯ ಒಂದಷ್ಟು ಸಂಸ್ಥೆಗಳು ಮಾಡಿದವು. ಆ ನಂತರ ಅದೂ ನಿಂತು ಹೋಯಿತು.

ಸಂವಿಧಾನ ಕಲಿಕೆ ಹೇಗಿರಬೇಕು?
ಕೆಲವು ರಾಷ್ಟ್ರಗಳಲ್ಲಿ ಸಂವಿಧಾನ ಕಲಿಕೆ ಎನ್ನುವುದೇ ಒಂದು ದೊಡ್ಡ ಅಧ್ಯಯನದ ವಿಷಯ. ದೇಶದ ಸಂವಿಧಾನವನ್ನು ಶಾಲೆಯಲ್ಲಿ ಹೇಗೆ ಕಲಿಸಬೇಕು, ಹೈಸ್ಕೂಲು ಮುಗಿಯುವ ವೇಳೆಗೆ ಮಕ್ಕಳಲ್ಲಿ ಕನಿಷ್ಠ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಎಷ್ಟು ಅರಿವಿರಬೇಕು ಎನ್ನುವ ಬಗ್ಗೆ ನಿಯಮಗಳಿವೆ ಮತ್ತು ಅವುಗಳನ್ನು ಅನುಸರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನವನ್ನು ಮಕ್ಕಳಿಗೆ ಹೇಗೆ ಹೇಳಿಕೊಡಬೇಕು ಎಂದು ಶಿಕ್ಷಕರಿಗೆ ಸರಿಯಾದ ತರಬೇತಿ ಇಲ್ಲ. ಬಿಎಡ್ ಕಲಿಯುವಾಗ ಸಮಾಜ ವಿಜ್ಞಾನವನ್ನು ಹೇಗೆ ಕಲಿಸ ಬೇಕೆಂಬ ಸ್ಥೂಲವಾದ ಮಾರ್ಗದರ್ಶಿ ಸೂತ್ರಗಳಿರುತ್ತವೆಯೇ ಹೊರತು ಸಂವಿಧಾನ ಬೋಧನೆಯ ಬಗ್ಗೆ, ಬೋಧನಾ ವಿಧಾನಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ಇಲ್ಲ. ಸಂವಿಧಾನದ ಬಗ್ಗೆ ಸರಿಯಾಗಿ ಅರಿಯದ, ಸಂವಿಧಾನದ ಮೌಲ್ಯಗಳ ಬಗ್ಗೆ ಭಾವನಾತ್ಮಕ ಸ್ಪಂದನೆಯೇ ಇಲ್ಲದ ಶಿಕ್ಷಕ ವರ್ಗ ಯಾಂತ್ರಿಕವಾಗಿ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಸಂವಿಧಾನವನ್ನು ಕಲಿಸುತ್ತದೆ. ಎಲ್ಲೋ ಒಬ್ಬಿಬ್ಬರು ಶಿಕ್ಷಕರು ವೈಯಕ್ತಿಕ ಆಸಕ್ತಿಯಿಂದ ಇದಕ್ಕಿಂತಾಚೆಗೆ ಏನಾದರೂ ಕಲಿಸುವ ಪ್ರಯತ್ನ ಮಾಡಿರಬಹುದೇನೋ!
‘ಸಂವಿಧಾನ ಓದು’ ಎಂಬ ಸೀಮಿತ ಕಾರ್ಯಕ್ರಮ
ಕೆಲವು ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ‘ಸಂವಿಧಾನ ಓದು’ ಎನ್ನುವ ಕಾರ್ಯಕ್ರಮದ ಮೂಲಕ, ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪುಟ್ಟ ಕೃತಿಗಳನ್ನು ರಚಿಸಿ ಹಂಚುವ ಮೂಲಕ ಈ ಕೊರತೆಯನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೂ, ಅದೂ ತುಂಬಾ ತಡವಾಗಿ ಆದ ತೀರಾ ಸೀಮಿತ ಪ್ರಮಾಣದ ಕೆಲಸ. ಸಾಮಾನ್ಯ ಜ್ಞಾನದ ನೆಲೆಯಾಚೆಗೆ ಸಂವಿಧಾನದ ಬಗ್ಗೆ ಏನೂ ಹೇಳದೆ, ಸಂವಿಧಾನ ಈ ದೇಶದಲ್ಲಿ ತಂದ ಮೌನ ಕ್ರಾಂತಿಯ ಬಗ್ಗೆ ಅಭಿಮಾನ ಮೂಡಿಸದೆ, ಸಂವಿಧಾನದ ಮೌಲ್ಯಗಳನ್ನು ಎಳೆಯ ತಲೆಮಾರಿನ ಹೃದಯಕ್ಕೆ ದಾಟಿಸದೆ, ಸಂವಿಧಾನದ ಬಗ್ಗೆ ಹೇಳಲಾಗುವ ಸುಳ್ಳುಗಳಿಗೆ ಸೂಕ್ತ ಸ್ಪಷ್ಟೀಕರಣ ನೀಡದೆ, ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತದೆ; ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ. ಈಗ್ಗೆ ಕೆಲ ವರ್ಷಗಳಿಂದ ಆ ಪಟ್ಟಿಗೆ ಸಂವಿಧಾನ ದಿನವೂ ಸೇರಿಕೊಂಡಿದೆ.
ವಾಟ್ಸಪ್ಪ್ ಯೂನಿವರ್ಸಿಟಿ ಮಾಡಿದ್ದೇನು?
ಈ ಮಧ್ಯೆ ವಾಟ್ಸಪ್ಪ್ ಯೂನಿವರ್ಸಿಟಿ ಅಂಗಡಿ ತೆರೆದುಕೊಳ್ಳುತ್ತಲೇ ‘ಧರ್ಮವನ್ನು ರಕ್ಷಿಸಿ, ಧರ್ಮ ನಿಮ್ಮನ್ನು ರಕ್ಷಿಸುತ್ತದೆ’ ಅಂತ ಹೇಳುತ್ತಿದ್ದವರೆಲ್ಲಾ ಅಲ್ಲಿ ತಮ್ಮ ವರಸೆ ಬದಲಿಸಿದರು. ಧರ್ಮವನ್ನು ನಾವು ರಕ್ಷಿ ಬೇಕಾದ ಸ್ಥಿತಿ ಬರಲು ಸಂವಿಧಾನವೂ ಕಾರಣ ಎನ್ನುವ ಅರ್ಥದ ಬಗೆಬಗೆಯ ಸಾಹಿತ್ಯ ಸೃಷ್ಟಿಸಿ ಜಾಲತಾಣ ಪೂರ್ತಿ ಹರಡಿದರು. ವಿಡಿಯೋಗಳನ್ನೂ ಮಾಡಿ ಯಥೇಚ್ಛ ಹರಿಬಿಟ್ಟರು. ಈ ರೀತಿಯ ಸಾಹಿತ್ಯ ಮತ್ತು ವಿಡಿಯೋಗಳ ಮೂಲಕ ‘ಸಂವಿಧಾನ’ ದೇಶಕ್ಕೇನೋ ಕೆಟ್ಟದ್ದು ಮಾಡಿದೆ, ಅಪಚಾರ ಬಗೆದಿದೆ, ಬಹುಸಂಖ್ಯಾತರ ಧರ್ಮಕ್ಕೆ ಅನ್ಯಾಯ ಮಾಡಿದೆ, ಅಲ್ಪಸಂಖ್ಯಾತರ ಧರ್ಮಗಳಿಗೆ ಎಲ್ಲಾ ಸೌಲಭ್ಯಗಳನ್ನೂ ನೀಡಿದೆ ಎನ್ನುವ ರೀತಿಯ ಭಾವನೆ ಜನರಲ್ಲಿ ನಿಧಾನವಾಗಿ ಮೂಡುವಂತೆ ಮಾಡುವ ಪ್ರಯತ್ನಗಳನ್ನು ನಿರಂತರವಾಗಿ ಕೈಗೊಂಡರು. ಈ ಪ್ರಯತ್ನದ ಭಾಗವಾಗಿ ವೈರಲ್ ಆದ ಒಂದು ವಿಡಿಯೋದ ಉದಾಹರಣೆ ಹೀಗಿದೆ:
ಆ ವಿಡಿಯೋದಲ್ಲಿ ಕಾವಿಧಾರಿ ವ್ಯಕ್ತಿಯೊಬ್ಬರು ಕಿಕ್ಕಿರಿದ ಸಭಾಂಗಣ ಒಂದರಲ್ಲಿ ಭಾಷಣ ಮಾಡುವುದು ಕಾಣಿಸುತ್ತದೆ. ಆ ಭಾಷಣದಲ್ಲಿ ಅವರು ಹೇಳಿದ್ದು ಹೀಗೆ: ನಾನೊಬ್ಬ ಸನ್ಯಾಸಿ… ಒಂದು ದಿನ ನನ್ನ ಬಳಿ ಎರಡು ಅನ್ಯ ಧರ್ಮಗಳಿಗೆ ಸೇರಿದ ಧರ್ಮಗುರುಗಳು ಬಂದರು. ನನ್ನ ಜತೆ ವೃಥಾ ಜಗಳಕ್ಕಿಳಿದು ನನ್ನನ್ನು ಒಂದೇ ಸಮನೆ ಥಳಿಸ ತೊಡಗಿದರು (ಈ ಹಂತದಲ್ಲಿ ಇದು ನಿಜ ಘಟನೆಯಲ್ಲ, ಕಲ್ಪನೆ ಎಂದೂ ಹೇಳುತ್ತಾರೆ) ನನಗೆ ಅವರು ಥಳಿಸುತ್ತಿದ್ದಾಗ ಪಕ್ಕದಲ್ಲಿ ಒಬ್ಬ ಪೊಲೀಸ್ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ. ನೋವು ತಡೆಯಲಾರದೆ ನಾನು ಆ ಪೊಲೀಸ್ ನವನ ಜತೆ ನನ್ನ ಸಹಾಯಕ್ಕೆ ಬರುವಂತೆ ಅಂಗಲಾಚಿದೆ. ಆತ ‘’ನೀವು ಧಾರ್ಮಿಕ ಮುಖಂಡರು. ಜಗಳವಾಡುವಾಗ ನಾನು ಮಧ್ಯೆ ಪ್ರವೇಶಿಸಲಾರೆ. ನಾನು ಸೆಕ್ಯುಲರ್ ಆಗಿ ಕೆಲಸ ಮಾಡಬೇಕು’ ಎಂದು ಹೇಳಿದ (ಸಭಿಕರಿಂದ ಚಪ್ಪಾಳೆ). ನಾನು ಬೇರೆ ದಾರಿ ಕಾಣದೆ ಆತ್ಮ ರಕ್ಷಣೆಗೆಂದು ನನಗೆ ಹೊಡೆಯುತ್ತಿರುವವರನ್ನು ತಿರುಗಿ ಹೊಡೆಯಲಾರಂಭಿಸಿದೆ. ನಾನು ತಿರುಗಿ ಯಾವಾಗ ಹೊಡೆಯಲಾರಂಭಿಸಿದೆನೋ ಆಗ ಪಕ್ಕದಲ್ಲಿದ್ದ ಪೊಲೀಸಿನವ ಬಂದು ನನ್ನನ್ನು ತಡೆದ. ನೀವು ಅವರಿಗೆ ಹೊಡೆಯುವಂತಿಲ್ಲ ಎಂದ. ನನ್ನ ರಕ್ಷಣೆಗೆ ಬಾರದ ನೀನು ಈಗ್ಯಾಕೆ ಬಂದೆ ಅಂತ ನಾನು ಕೇಳಿದರೆ ಆತ ‘ನಾನು ಅಲ್ಪಸಂಖ್ಯಾತರನ್ನು ರಕ್ಷಿಸಬೇಕು’ ಎಂದ. ಇದು ನಮ್ಮ ಸಂವಿಧಾನ…
ಇದನ್ನು ಕೇಳಿಸಿಕೊಂಡ ಸಭೆಗೆ ಸಭೆಯೇ ಚಪ್ಪಾಳೆ ತಟ್ಟುತ್ತದೆ. ಆಗ ಭಾಷಣಕಾರ ಹೇಳುತ್ತಾರೆ: ‘LET US BLOODY CHANGE THIS CONSTITUTION’… ಮತ್ತೆ ಚಪ್ಪಾಳೆ. ಈ ವಿಡಿಯೋ ಲಿಂಕ್ ಇಲ್ಲಿದೆ:
ಜನರ ಸ್ವಾಭಿಮಾನ ಕೆರಳಿಸುವಂತೆ ಪ್ರಚಾರ
ಸಂವಿಧಾನ ಮತ್ತು ಸಂವಿಧಾನ ಮೌಲ್ಯಗಳನ್ನು ಪರಿಹಾಸ್ಯ ಮಾಡುವ ಮತ್ತು ಸಂವಿಧಾನ ಬದಲಿಸಬೇಕೆಂಬ ಸಂದೇಶವಿರುವ ಇಂತಹ ವಿಡಿಯೋಗಳ ಮೂಲಕ ಜನಸಾಮಾನ್ಯರ ಮನಸ್ಸುಗಳನ್ನು ಸಂವಿಧಾನ ಬದಲಾವಣೆಗಾಗಿ ನಿಧಾನವಾಗಿ ತಯಾರಿಸುವ ಕೆಲಸ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ವಿದ್ಯಾವಂತರ, ಯೋಚಿಸುವವರ ಮನಸ್ಸನ್ನು ಮುಟ್ಟಲು ಇನ್ನೊಂದು ರೀತಿಯ ಕೆಲಸ ನಡೆಯುತ್ತಿದೆ. ಜನಸಾಮಾನ್ಯರಿಗೆ ಹೇಳುವಾಗ ಸಂವಿಧಾನ ಧರ್ಮ ವಿರೋಧಿ ಎನ್ನುವ ಸಂದೇಶವನ್ನು ನೀಡಿದರೆ, ಮೇಲ್ಸ್ತರದ ಜನರ ಮಧ್ಯೆ ‘ಸಂವಿಧಾನದಲ್ಲಿ ಭಾರತೀಯ ಎನ್ನುವಂತದ್ದು ಏನೂ ಇಲ್ಲ, ಅದರಲ್ಲಿ ಪಾಶ್ಚಿಮಾತ್ಯ ವಿಚಾರಗಳೇ ತುಂಬಿವೆ’ ಅಂತ ಅವರ ಸ್ವಾಭಿಮಾನವನ್ನು ಕೆರಳಿಸುವ ಪ್ರಚಾರ ನಡೆಯುತ್ತದೆ. ಉದಾಹರಣೆಗೆ ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ಸಂವಿಧಾನದ ಬಗ್ಗೆ ಚರ್ಚಿಸಲು ದೊಡ್ಡ ಮಟ್ಟದ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಆಳುವ ಪಕ್ಷದ ಜತೆಗೆ ಕೆಲಸ ಮಾಡುವ ವಿದ್ವತ್ ಲೋಕದ ಹಲವಾರು ಭಾಷಣಕಾರರು ಅಲ್ಲಿದ್ದರು. ಅಲ್ಲಿ ಕುಹಕವಿಲ್ಲ. ಪರಿಹಾಸ್ಯವಿಲ್ಲ. ನೇರವಾಗಿ ಧಾಳಿ ಇಲ್ಲ. ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ನೀಡಿದ ಸಂದೇಶ ಏನೆಂದರೆ, ಈಗಿನ ಸಂವಿಧಾನವನ್ನು ಬರೆದದ್ದು ಪಾಶ್ಚಿಮಾತ್ಯ ಶಿಕ್ಷಣ ಪಡೆದು, ಪಾಶ್ಚಿಮಾತ್ಯ ಮೌಲ್ಯಗಳನ್ನು ಆರಾಧಿಸುವ ಮಂದಿ, ಭಾರತ ಈಗ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ನಮಗೆ ನಮ್ಮದೇ ಆದ ಸಂವಿಧಾನ ಇರಬೇಕು ಎಂದು.
ದಲಿತ ವರ್ಗದ ಪ್ರತಿರೋಧದ ಭಯ
ಸಂವಿಧಾನ ವಿರೋಧಿಗಳಿಗೆ ಮತ್ತು ಒಂದಲ್ಲ ಒಂದು ದಿನ ಅದನ್ನು ಬದಲಿಸಿಯೇ ತೀರುತ್ತೇವೆ ಅಂತ ಹೊರಟವರಿಗೆ ದೊಡ್ಡ ತೊಡಕಾಗಿರುವುದು ಈ ದೇಶದ ದಲಿತ ವರ್ಗ ಸಂವಿಧಾನದ ಜತೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದು. ದಲಿತ ರಾಜಕೀಯದ ಬಹುದೊಡ್ಡ ಐಕಾನ್ ಆಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಆಗಿರುವ ಕಾರಣಕ್ಕೆ ಈ ದೇಶದಲ್ಲಿ ಉಳಿದೆಲ್ಲಾ ಜನ ಸಮುದಾಯಗಳಿಗಿಂತ ಹೆಚ್ಚಾಗಿ ಸಂವಿಧಾನವನ್ನು ಒಪ್ಪಿಕೊಂಡು ಅಪ್ಪಿಕೊಂಡು ಇರುವುದು ದಲಿತರು. ಅಂಬೇಡ್ಕರ್ ಅವರ ಮುಂದಾಳುತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಏಕಾಏಕಿ ಕಿತ್ತು ಅದರ ಜಾಗದಲ್ಲಿ ಹೊಸತೊಂದು ಸಂವಿಧಾನ ತರುತ್ತೇವೆ ಅಂತ ನೇರವಾಗಿ ಮುಂದುವರಿದರೆ ಬಹುದೊಡ್ಡ ಮಟ್ಟಿಗೆ ದಲಿತರ ಕೋಪವನ್ನು ಎದುರಿಸಬೇಕಾಗುತ್ತದೆ ಮತ್ತು ದಲಿತರ ಮತಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಸಂವಿಧಾನ ವಿರೋಧಿಗಳಿಗೆ ಇದೆ. ಹಾಗಾಗಿ ಈ ವಿಚಾರದಲ್ಲಿ ಬಹಳ ನಾಜೂಕಿನಿಂದ ಮುಂದುವರಿಯುವುದರ ಜತೆಗೆ ದಲಿತರನ್ನು ಕೂಡಾ ನಿಧಾನವಾಗಿ ಈ ಉದ್ದೇಶಕ್ಕಾಗಿ ಒಲಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ದಲಿತ ರಾಜಕೀಯ ನಾಯಕರಿಗೆ ಆಯಕಟ್ಟಿನ ಹುದ್ದೆಗಳನ್ನು ಕೊಡುವಲ್ಲಿಂದ ಹಿಡಿದು, ಅಂಬೇಡ್ಕರ್ ಅವರ ಎಲ್ಲಾ ಸ್ಮಾರಕಗಳನ್ನು ಭವ್ಯವಾಗಿ ಪುನರ್ ನಿರ್ಮಾಣ ಮಾಡುವುದರಿಂದ ಹಿಡಿದು, ದಲಿತ-ಬುಡಕಟ್ಟು ಜನಾಂಗದ ಮಕ್ಕಳ ಮನಸ್ಸುಗಳನ್ನು ಶಾಲಾ ಹಂತದಿಂದಲೇ ‘ಧಾರ್ಮಿಕವಾಗಿ ಹದ’ಗೊಳಿಸಲು ತಮ್ಮದೇ ಶಾಲೆಗಳನ್ನು ತೆರೆಯುವುದರಿಂದ ಹಿಡಿದು ಎಲ್ಲವೂ ನಡೆಯುತ್ತಿದೆ. ಮೇಲ್ನೋಟಕ್ಕೆ ಇವೆಲ್ಲ ಸಹಜವಾದ ಅಧಿಕಾರ ಹಂಚಿಕೆಯ ಮತ್ತು ಆಡಳಿತದ ಭಾಗ ಅಂತ ಅನ್ನಿಸ ಬಹುದು. ಆದರೆ ಇದರ ಹಿಂದೆ ಲೆಕ್ಕಾಚಾರ ಬೇರೆ ಇದ್ದಂತಿದೆ. ‘ದೊಡ್ಡ ಪ್ರಮಾಣದ ದಲಿತ ನಾಯಕ ವರ್ಗವನ್ನು ತಮ್ಮ ಕಡೆಗೆ ಒಲಿಸಿ ಕೊಂಡರೆ ಅಷ್ಟರ ಮಟ್ಟಿಗೆ ಸಂವಿಧಾನ ಬದಲಾವಣೆಗೆ ದಲಿತ ವರ್ಗದ ಪ್ರತಿರೋಧ ಕಡಿಮೆ ಆದಂತೆ ಆಗುತ್ತದೆ’ ಎನ್ನುವ ಲೆಕ್ಕಾಚಾರ ಅದು. ಅಲ್ಲದೆ, ಸ್ವತಃ ಅಂಬೇಡ್ಕರ್ ಅವರೇ ಮುಂದಿನ ತಲೆಮಾರು ಬೇಕಾದರೆ ಸಂವಿಧಾನವನ್ನು ಬದಲಿಸಿಕೊಳ್ಳಲಿ ಎಂಬ ಅರ್ಥದ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಜನರನ್ನು ನಂಬಿಸಲು ಅವರ ಬರಹ ಮತ್ತು ಭಾಷಣಗಳ ಕೆಲವು ಅಂಶಗಳನ್ನು ಸನ್ನಿವೇಶದಿಂದ ಪ್ರತ್ಯೇಕಿಸಿ ಎತ್ತಿ ತೋರಿಸುವ ಕೆಲಸವೂ ನಡೆದಿದೆ.
ಸಂವಿಧಾನ ಬದಲಿಸಲು ಜನಮನದ ಸಿದ್ಧತೆ
ಇಷ್ಟೆಲ್ಲಾ ಆಗುತ್ತಿದ್ದರೂ ಸಂವಿಧಾನ ಅಪಾಯದಲ್ಲಿದೆ ಎನ್ನುವ ಅಭಿಪ್ರಾಯ ದಟ್ಟಗೊಳ್ಳುತ್ತಿಲ್ಲ. ‘ಧರ್ಮ ಅಪಾಯದಲ್ಲಿದೆ’ ಎನ್ನುವ ಅಭಿಪ್ರಾಯದ ಮಹಾ ಪ್ರವಾಹದಲ್ಲಿ ಅಲ್ಲಿಲ್ಲಿ ಕೇಳಿಸಿ ಕೊಳ್ಳುತ್ತಿರುವ ‘ಸಂವಿಧಾನ ಅಪಾಯದಲ್ಲಿದೆ’ ಎನ್ನುವ ಕೆಲವರ ಆತಂಕ ಭರಿತ ಮಾತುಗಳೂ ಕೊಚ್ಚಿ ಹೋಗುತ್ತಿವೆ. ಈ ದೇಶದಲ್ಲಿ ಜನತಂತ್ರ ಬಂದದ್ದು, ಸಮಾನತೆಯ ಕಾನೂನು ಬಂದದ್ದು ಸಂವಿಧಾನದ ಮೂಲಕ ಎನ್ನುವ ಸತ್ಯವನ್ನೇ ಅಳಿಸಲೆಂಬಂತೆ, ವೇದಕಾಲದಿಂದಲೂ ದೇಶದಲ್ಲಿ ಪ್ರಜಾತಂತ್ರ ಇತ್ತು ಎನ್ನುವ ಅರ್ಥದ ಸಂಕಥನಗಳನ್ನು ಸೃಷ್ಟಿಸುವ ಸನ್ನಾಹವೂ ನಡೆಯುತ್ತಿದೆ. ಅದಕ್ಕಾಗಿಯೇ ಸಂವಿಧಾನ ದಿನವನ್ನು ‘ಭಾರತ: ಪ್ರಜಾತಂತ್ರದ ಜನನಿ’ ಎನ್ನುವ ಘೋಷಣೆಯೊಂದಿಗೆ ಆಚರಿಸಬೇಕೆಂಬ ಆದೇಶ ಬಂದಿರುವುದು. ಇವೆಲ್ಲವೂ ಸಂವಿಧಾನ ಬದಲಿಸಲು ಜನಮನವನ್ನು ಹದಗೊಳಿಸುವ ಸನ್ನಾಹದ ಭಾಗ.
ಸಂವಿಧಾನ ರಕ್ಷಣೆಗೆ ಸಿದ್ಧರಾಗದಿದ್ದರೆ…
ಹಾಗಾಗಿ ಈಗಲಾದರೂ ಸಂವಿಧಾನ ಅಪಾಯದಲ್ಲಿದೆ ಎಂದು ಒಪ್ಪಿಕೊಳ್ಳದೇ ಹೋದರೆ, ಸಂವಿಧಾನದ ರಕ್ಷಣೆಗೆ ಎಂತಹಾ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಮನೋಭಾವನೆಯನ್ನು ಜನಸಮೂಹದಲ್ಲಿ ಗಟ್ಟಿಗೊಳಿಸುವ ಕೆಲಸ ಆಗದೆ ಹೋದರೆ ಮತ್ತು ಇದಕ್ಕೆ ಪೂರಕವಾಗಿ ಸಂವಿಧಾನದ ಕುರಿತಾದ ಅರಿವನ್ನು ಜನರ ಸಾಂಸ್ಕೃತಿಕ ಅರಿವಿನ ಭಾಗವಾಗಿ ಸ್ಥಾಪಿಸದೆ ಹೋದರೆ, ಪರಿಸ್ಥಿತಿ ಬಹುಬೇಗ ಕೈ ಮೀರಿ ಹೋಗಲಿದೆ. ಈಗ ಮೈಮರೆತರೆ ಊರು ಸೂರೆ ಹೋದ ಮೇಲೆ ಕೋಟೆಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದೀತು.
ಎ ನಾರಾಯಣ
ಲೇಖಕರು