Friday, April 11, 2025

ಸತ್ಯ | ನ್ಯಾಯ |ಧರ್ಮ

ಮಹಾವೀರರು ಇಡೀ ಜಗತ್ತಿಗೆ ಶಾಂತಿ ಅಹಿಂಸೆ ಮತ್ತು ಕರುಣೆಯನ್ನು ಸಾರಿದ್ದಾರೆ – ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್

ಶ್ರವಣಬೆಳಗೊಳ :  ಮಾನವ ಕುಲದ ಲೋಕ ಕಲ್ಯಾಣಕ್ಕಾಗಿ ಮಹಾಪುರುಷರಾದ ಭ.ಮಹಾವೀರರು ಇಡೀ ಜಗತ್ತಿಗೆ ಶಾಂತಿ ಅಹಿಂಸೆ ಮತ್ತು ಕರುಣೆಯನ್ನುಸಾರಿದ್ದಾರೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಹೇಳಿದರು.

       ಕ್ಷೇತ್ರದ ಚಾವುಂಡರಾಯ ಸಭಾ ಮಂಟಪದಲ್ಲಿ ಶ್ರೀಜೈನ ಮಠದ ಆಡಳಿತ ಮಂಡಳಿ ಆಯೋಜಿಸಿದ್ದ ಭ.ಮಹಾವೀರ ಸ್ವಾಮಿಯ 2624ನೇಯ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ತೀರ್ಥಂಕರರಿಗೆ ಅರ್ಘ್ಯ ಪುಷ್ಪಾರ್ಚನೆ ಸಮರ್ಪಿಸುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಭಗವಾನ್ ಮಹಾವೀರರು ಭಗವಾನ್ ಬಾಹುಬಲಿ ರಾಜಕುಮಾರರಾಗಿ ರಾಜಮನೆತನಗಳಲ್ಲಿ ಜನಿಸಿದರೂ ಸಹ ಎಲ್ಲವನ್ನೂ ತ್ಯಾಗ ಮಾಡಿ ಪರರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಹೃದಯ ಶ್ರೀಮಂತಿಕೆಯ ಮೇರು ವ್ಯಕ್ತಿಗಳಾಗಿ ಸಕಲ ಸಮಾಜದ ಉದ್ಧಾರಕ್ಕಾಗಿ ಶಾಶ್ವತ ಬೆಳಕನ್ನು ಚೆಲ್ಲಿದ್ದಾರೆ ಎಂದರು. ಜಗತ್ತಿನಲ್ಲಿ ಅಶಾಂತಿಯ ವಾತಾವರಣ ಎಲ್ಲೆಡೆ ನಿರ್ಮಾಣವಾಗಿದ್ದು ಕ್ರೋಧಾದಿ ಹಿಂಸೆಗಳು ಸಮಾಜಗಳಲ್ಲಿ ಭುಗಿಲೆದ್ದಿರುವುದರಿಂದ ಶಾಂತಿಯ ಸಂದೇಶದ ಅಗತ್ಯತೆಯನ್ನು ಬಣ್ಣಿಸಿದರು. ಜೈನ ಧರ್ಮವು ಪ್ರಾಚೀನ ಕಾಲದಿಂದಲೂ ಸಹ ಕ್ಷಮಾ ಧರ್ಮ ಮಾರ್ಗದಲ್ಲಿ ಸಾಗಿದ್ದು, ಸಹಬಾಳ್ವೆಯಂತೆ ಎಲ್ಲರೊಂದಿಗೂ ಬದುಕು ಬದುಕಲು ಬಿಡು ಎಂಬ ಮಹಾವೀರರ ವಾಣಿ ಪ್ರಸ್ತುತ ಅಗತ್ಯವಾಗಿದೆ. ಕ್ಷೇತ್ರದ ಮನವಿಗೆ ಸ್ಪಂದಿಸಿದ ರಾಜ್ಯಪಾಲರು ಶ್ರವಣಬೆಳಗೊಳ ಸುತ್ತಮುತ್ತ ಅನೇಕ ಮಾಸದ ಅಂಗಡಿಗಳು ಎಗ್ಗಿಲ್ಲದೇ ತೆರೆದಿದ್ದು, ತ್ಯಾಗಿಗಳ ಸಸ್ಯಹಾರಿಗಳ ಮನಸ್ಸಿಗೆ ತುಂಬಾ ನೋವಾಗಿರುವುದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು. ನಾನು ಸನಾತನ ಧರ್ಮದವರಾಗಿದ್ದು, ಕರ್ಮದಲ್ಲಿ ಜೈನ ಧರ್ಮವನ್ನು ಆಚರಿಸುತ್ತಿದ್ದೇನೆ. ನಾನು ಶುದ್ಧ ಶಾಖಾಹಾರಿಯಾಗಿದ್ದು ರಾಜ್ಯದ ರಾಜ ಭವನದಲ್ಲಿಯೂ ಸಹ ಆಗಮಿಸುವ ಅತಿಥಿ ಸತ್ಕಾರಗಳಿಗೆ ಶುದ್ಧ ಶಾಖಾಹಾರ ಒದಗಿಸುತ್ತಿರುವುದಾಗಿ ಹೇಳಿದರು. ಭ.ಮಹಾವೀರ ಜಯಂತಿಯ ಪ್ರಯುಕ್ತ ಬುಧವಾರ ವಿಶ್ವ ನಮೋಕಾರ ಮಹಾಮಂತ್ರ ದಿನವನ್ನು ಆಚರಿಸಿದ್ದು, ಆ ಮಹಾಮಂತ್ರದಲ್ಲಿ ಯಾವುದೇ ವ್ಯಕ್ತಿಯ ಪ್ರಶಂಸೆ ಮಾಡದೇ ಗುಣದ ಪ್ರಶಂಸೆ ಮಾಡಿದ್ದುಅದನ್ನು ನಾನು ಪ್ರತಿನಿತ್ಯ ಜಪಿಸುತ್ತಿದ್ದೇನೆ . ಹಾಗು ಪ್ರತಿಯೊಬ್ಬರೂ ವ್ಯಸನ ಮುಕ್ತ ಮತ್ತು ಶಾಖಾಹಾರಿಗಳಾಗಬೇಕು ಎಂದರು.

ಸಾನಿಧ್ಯ ವಹಿಸಿದ್ದ ಕ್ಷೇತ್ರದ ಶ್ರೀಗಳು ಮಾತನಾಡಿ ಜೈನ ಧರ್ಮದ ಸ್ಥಾಪಕ 24ನೇ ತೀರ್ಥಂಕರ ಮಹಾವೀರನೆಂದು ಉಲ್ಲೇಖಿಸುತ್ತಿರುವುದು ತಪ್ಪು ಎಂದು ಸ್ಪಷ್ಟನೆ ಕೊಡುತ್ತಾ ಜೈನ ಧರ್ಮದ ರಥವನ್ನು ಎಳೆಯುತ್ತಾ ದೇಶವ್ಯಾಪ್ತಿ ಹೆಚ್ಚಾಗಿ ಪ್ರಚಾರ ಮಾಡಿದರು. ಪ್ರತಿಯೊಂದು ಧರ್ಮದ ಮೂಲ ಉದ್ದೇಶ ಮೋಕ್ಷ ಪಡೆಯುವುದಾಗಿದ್ದು ಮನ ವಚನ ಕಾಯಗಳಿಂದ ಯಾರಿಗೂ ಹಿಂಸೆ ಮಾಡದೇ ಇರುವುದು ಅಹಿಂಸೆ ಎಂದರು. ಇಂದು ಎಲ್ಲಾ ದೇಶಗಳಲ್ಲಿ ಅಣ್ವಸ್ತ್ರಗಳನ್ನು ಬಳಸಲು ಇಟ್ಟುಕೊಂಡಿದ್ದರೆ ಭಾರತದಲ್ಲಿ ಇಡೀ ವಿಶ್ವಕ್ಕೆ ಶಾಂತಿಯನ್ನು ಸ್ಥಾಪಿಸುವ ಅಹಿಂಸೆ ಅನೇಕಾಂತವಾದ ಎಂಬ ಅಸ್ತ್ರವನ್ನು ಹೊಂದಿದೆ. ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲು ಜೈನ ಧರ್ಮದ ಅಹಿಂಸೆ ಮತ್ತು ಅನೇಕಾಂತವಾದ ಪಾಲನೆಯಿಂದ ಸಾಧ್ಯ ಎಂದರು.

ಲೋಕ ಸಭಾ ಸದಸ್ಯ ಶ್ರೇಯಸ್ ಪಟೇಲ್ ಶಾಸಕ ಸಿ.ಎನ್.ಬಾಲಕೃಷ್ಣ, ಕ್ಷೇತ್ರದ ಪ್ರಸಾದ ಭವನಕ್ಕೆ ಕೇಂದ್ರದ ಬಳಿ ಸಹಕಾರಕ್ಕೆ ಸಚಿವರಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು. ಇದರ ಬಗ್ಗೆ ಎಚ್.ಡಿ.ದೇವೇಗೌಡರು ಸಹ ಕೇಂದ್ರದ ಸಚಿವರಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒತ್ತಾಯಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ಕ್ಷೇತ್ರದ ವತಿಯಿಂದ ಶ್ರೀಗಳು ರಜತದ ಮಂಗಲ ಕಲಶ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮಕ್ಕೂ ಮೊದಲು ಭಗವಾನ್ ಮಹಾವೀರ ಜನ್ಮ ಕಲ್ಯಾಣದ ಪ್ರಯುಕ್ತ ಪುಷ್ಪಾಲಂಕಾರ ಮಾಡಿದ ರಜತದ ಪಲ್ಲಕ್ಕಿಯಲ್ಲಿ ಜಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಈ ಅದ್ದೂರಿಯ ಶೋಭಾ ಯಾತ್ರೆಯಲ್ಲಿ ಮೈಸೂರು ಬ್ಯಾಂಡ್ ವಾದನ, ವಿವಿಧ ಮಂಗಲ ವಾಧ್ಯಗಳು, ಜುಂಜುಂ ಪಥಕ, ಚಂಡೇ ವಾಧ್ಯಗಳು ಧರ್ಮಧ್ವಜ ಹಿಡಿದ ಬಾಲಕ ಬಾಲಕಿಯರು ಶ್ರಾವಕ ಶ್ರಾವಕಿಯರು ಇದ್ದರು.ನಂತರ ವೇದಿಕೆಯಲ್ಲಿ ಭಗವಾನ್ ಮಹಾವೀರ ಸ್ವಾಮಿಗೆ ಜಲ ಗಂಧಾಭಿಷೇಕ ನೆರವೇರಿಸಿ ಪುಷ್ಪವೃಷ್ಠಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಚಿವ ಡಿ.ಸುಧಾಕರ್, ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಜಿಲ್ಲಾಧಿಕಾರಿ ಸತ್ಯಭಾಮ, ಸಿಇಒ ಪೂರ್ಣಿಮಾ ಎಸ್.ಪಿ.ಮಹಮದ್ ಸುಜಿತ್, ಇದ್ದರು.

ಲೋಕ ಕಲ್ಯಾಣಕ್ಕಾಗಿ ಜಗತ್ತಿಗೆ ಶಾಂತಿ ಅಹಿಂಸೆ ಕರುಣೆ ಸಾರಿದ ಮಹಾಪುರುಷ ಭ.ಮಹಾವೀರರು : ಥಾವರ್ ಚಂದ್ ಗೆಹ್ಲೋಟ್

ಶ್ರವಣಬೆಳಗೊಳದಲ್ಲಿ ಗುರುವಾರ ಜರುಗಿದೆ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ ಸಂದರ್ಭದಲ್ಲಿ ಅಭಿನವ ಶ್ರೀಗಳು ಶ್ರೇಯಸ್ ಪಟೇಲ್ ಡಿ.ಸುಧಾಕರ್, ಬಾಲಕೃಷ್ಣ ಪುರುಷೋತ್ತಮ ಬಿಳಿಮಲೆ, ಗೋಪಾಲಸ್ವಾಮಿ ಆಫ್ತಾಬ್ ಪಾಷಾ ಇದ್ದರು.

ಶ್ರವಣಬೆಳಗೊಳದಲ್ಲಿ ಗುರುವಾರ ಜರುಗಿದ ಮಹಾವೀರ ಜನ್ಮ ಕಲ್ಯಾಣ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಬ ಗೆಹ್ಲೋಟ್ ರವರನ್ನು ಕ್ಷೇತ್ರದ ವತಿಯಿಂದ ರಜತದ ಕಲಶ ನೀಡಿ ಗೌರವಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page