ಬೆಂಗಳೂರು : ಹಿಜಾಬ್ ತೀರ್ಪಿನ ಕುರಿತು ಅಖಿಲ ಭಾರತ ಮಹಿಳಾ ಸಂಘಟನೆಯು ನ್ಯಾ. ಸುಧಾಂಶು ಧುಲಿಯಾ ಅವರು ಹಿಜಾಬ್ ಪರವಾಗಿ ಕೊಟ್ಟ ತೀರ್ಪನ್ನು ಸ್ವಾಗತಿಸಿದ್ದು, ಮುಂದೆ ವಿಸ್ತ್ರತ ಪೀಠದಲ್ಲಿ ನೀಡುವ ಹಿಜಾಬ್ ಅಂತಿಮ ತೀರ್ಪು, ಮಹಿಳೆಯರ ಶಿಕ್ಷಣದ ಮೂಲ ಭೂತ ಹಕ್ಕನ್ನು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವಂತೆ ನಿರೀಕ್ಷಿಸಿ ಶುಕ್ರವಾರದಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈ ಕೋರ್ಟ್ ನೀಡಿದ್ದ ತೀರ್ಪಿನ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದ್ವಿ ಸದಸ್ಯ ಪೀಠದ ಭಿನ್ನ ಮತದ ತೀರ್ಪು ನೀಡಿದ್ದು, ಅದನ್ನು ವಿಸ್ತ್ರತ ಪೀಠಕ್ಕೆ ಕೊಡಲು ಮುಖ್ಯ ನ್ಯಾಯಾಧೀಶರಿಗೆ ದ್ವಿಸದಸ್ಯ ಪೀಠ ಕೋರಿದೆ.
ಈ ಕುರಿತು ಪತ್ತಿಕಾ ಹೇಳಿಕೆ ಕೊಟ್ಟ ಅಧ್ಯಕ್ಷೆ ಮೀನಾಕ್ಷಿ ಬಾಳಿರವರು ʼಮಹಿಳೆಯರ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿದ ಮಾನ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾರವರ ಅಭಿಪ್ರಾಯವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸ್ವಾಗತಿಸುತ್ತದೆʼ ಎಂದು ಹೇಳಿದ್ದಾರೆ.
ಹೆಣ್ಣು ಮಗುವಿಗೆ ಮನೆಯೊಳಗೆ ಅಥವಾ ಮನೆಯ ಹೊರಗೆ ಹಿಜಾಬ್ ಧರಿಸಲು ಅಧಿಕಾರ ಇದೆ. ಆ ಹಕ್ಕು ಶಾಲೆಯ ದ್ವಾರದ ಬಳಿ ಮೊಟಕುಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸುಧಾಂಶು ದುಲಿಯಾರವರು ಹೇಳಿದ ಮಾತು ಜನವಾದಿಯ ಅಭಿಪ್ರಾಯವನ್ನು ದೃಡೀಕರಿಸಿದಂತಾಗಿದೆ ಎಂದು ಸುಧಾಂಶು ಅವರ ತೀರ್ಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಸಮವಸ್ತ್ರದ ಹೆಸರಿನಲ್ಲಿ ಎದ್ದ ವಿವಾದ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿ ಹತ್ತು ತಿಂಗಳ ನಂತರ ಹೆಣ್ಣು ಮಕ್ಕಳು ಶಿಕ್ಷಣದ ಹಕ್ಕು ಮತ್ತು ಮೂಲಭೂತ ಹಕ್ಕುನ್ನು ಹೊಂದಿರುತ್ತಾರೆ ಎಂಬ ತೀರ್ಪು ನೀಡುವ ಮೂಲಕ ಆಯ್ಕೆಯ ಹಕ್ಕಿನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಂತಾಗಿದೆ ಎಂದು ಸಂಘಟನೆಯ ಅಭಿಪ್ರಾಯ ತಿಳಿಸಿದ್ದಾರೆ.
ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಸ್ತ್ರತ ಪೀಠವು ಮಹಿಳೆಯರ ಶಿಕ್ಷಣದ ಮೂಲ ಭೂತ ಹಕ್ಕನ್ನು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವ ನೆಲೆಯಲ್ಲಿ ಬರುತ್ತದೆ ಎಂಬ ಆಶಾದಾಯಕವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಬಾಳಿ(ದೇವಿ) ಅವರು ಮುಂದಿನ ತೀರ್ಪಿನ ಬಗ್ಗೆ ಮಾತನಾಡಿದರು.