Friday, June 20, 2025

ಸತ್ಯ | ನ್ಯಾಯ |ಧರ್ಮ

ಮಲೆನಾಡ ಸಾರಥಿ ʼಸಹಕಾರ ಸಾರಿಗೆʼ

2019 ರಲ್ಲಿ ಸಹಕಾರ ಸಾರಿಗೆ ಸಂಸ್ಥೆ ಸದ್ದಿಲ್ಲದೇ ತನ್ನ  ಸಂಸ್ಥೆಯಲ್ಲಿದ್ದ 75 ಕ್ಕೂ ಹೆಚ್ಚು ಬಸ್ಸುಗಳ ಓಡಾಟವನ್ನು ಸ್ಥಗಿತಗೊಳಿಸಿ 300 ಕ್ಕೂ ಅಧಿಕ ಕಾರ್ಮಿಕರನ್ನು ಕರೆದು ಆರ್ಥಿಕ ಹಿಂಜರಿಕೆಯ ಕಾರಣದಿಂದಾಗಿ ಸಂಸ್ಥೆಗೆ ಬೀಗ ಬೀಳುತ್ತಿರುವುದನ್ನು ಹೇಳುತ್ತದೆ. ಅಂದೇ ಕೊನೆ, ಅಂದಿನಿಂದ ಇಂದಿನವರೆಗೂ ನಿಂತ ಜಾಗದಿಂದ ಬಸ್ಸುಗಳು ಒಂದಿಂಚು ಮುಂದೆಯೂ ಹೋಗಿಲ್ಲ, ಹಿಂದೆಯೂ ಬರಲಿಲ್ಲ – ರಾಹುಲ್‌ ಆರ್‌ ಸುವರ್ಣ, ಪತ್ರಿಕೋದ್ಯಮ ವಿದ್ಯಾರ್ಥಿ

ಈ ಕಥೆ ಹೇಳುವಾಗ ಎಷ್ಟು ಹೆಮ್ಮೆಯಾಗುತ್ತದೆಯೋ ಅಷ್ಟೆ ದುಃಖವೂ ಆಗುತ್ತದೆ. ಇಂದು ವಿಜಯಾನಂದ ರೋಡ್ ಲೈನ್ಸ್ ನಂತಹ ದೊಡ್ಡ ದೊಡ್ಡ ಸಾರಿಗೆ ಸಂಸ್ಥೆಯ ಕಥೆಯನ್ನು ಹಲವಾರು ಜನ ಕೇಳಿದ್ದೀರಿ, ನೋಡಿದ್ದೀರಿ. ಆದರೆ, ಸಹಕಾರ ಸಾರಿಗೆಯಂತಹ ಸಂಸ್ಥೆಯೊಂದು ಆರು ಬಸ್ಸುಗಳಿಂದ ಆರಂಭವಾಗಿ ಎಪ್ಪತೈದಕ್ಕೂ ಹೆಚ್ಚು ಬಸ್‌ಗಳನ್ನು  ಹೊಂದಿ, ಮಲೆನಾಡು ಮಾತ್ರವಲ್ಲದೆ ಹೊರ ಜಿಲ್ಲೆಗಳಿಗೂ ಸಂಚರಿಸಿ ಹಲವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಸೇವೆಯೊದಗಿಸಿದ ಸುದೀರ್ಘ ಕಥೆ ಮಾತ್ರ ಮಲೆನಾಡಿಗರಲ್ಲೇ ಉಳಿದು ಹೋಗಿದೆ. ಎಲ್ಲ ಬಸ್ಸುಗಳಂತೆ  ಲಾಭಕ್ಕಾಗಿ ರಸ್ತೆಗಿಳಿದ ಬಸ್ಸುಗಳು ಇವಲ್ಲ, ಡ್ರೈವರ್ ಹಾಗೂ ಕಂಡಕ್ಟರ್ ಗಳಿಂದ ಹುಟ್ಟಿಕೊಂಡು ಮಲೆನಾಡಿನ ಜನರ ಬದುಕಿಗೆ ದಾರಿಯಾಗಿ ಬೆಳೆದ ಬಸ್ಸುಗಳು ಇವಾಗಿವೆ.

ಆಡು ಮುಟ್ಟದ ಸೊಪ್ಪಿಲ್ಲ ಎಂದಂತೆ ಮಲೆನಾಡಿನಲ್ಲಿ ಈ ಬಸ್ಸು  ತಿರುಗದ  ರಸ್ತೆಗಳಿಲ್ಲ. ಮಲೆನಾಡಿನ ಪ್ರತಿ ಹಳ್ಳಿ ಹಳ್ಳಿಗಳಿಗೂ ಸಾಗಿ ಜನರನ್ನು ಪಟ್ಟಣಕ್ಕೆ ಸೇರಿಸುತ್ತಿದ್ದ ಬಸ್ಸು ಯಾವುದೆಂದು ಕೇಳಿದರೆ ಪ್ರತಿಯೊಬ್ಬ ಮಲೆನಾಡಿಗನೂ ಹೇಳುವುದು ಒಂದೆ ಹೆಸರು ಅದು ಬೇರೆ ಯಾವುದು ಅಲ್ಲ ಸಹಕಾರ ಸಾರಿಗೆ ಕೊಪ್ಪ. ಮೂರು ದಶಕಗಳ ಕಾಲ ಮಲೆನಾಡನ್ನಾಳಿದ ಈ ಬಸ್ಸುಗಳು ಇಂದು ಕೈದಿಗಳಂತೆ ನಿರಪರಾಧಿಯಾಗಿ ಸಂಸ್ಥೆಯೊಳಗೆಯೇ ಬಿಡಿಸಲು ಯಾರಾದರೂ ಬರುವರು ಎಂದು ತಾನು ಒಳ ಬಂದ ದಾರಿಯತ್ತ ನೋಡುತ್ತಿವೆ. ಈ ಸಂಸ್ಥೆಗೆ ಬೀಗ ಬಿದ್ದು ಈಗ ಬಸ್ಸುಗಳು ಒಂದೊಂದಾಗಿಯೇ ತುಕ್ಕು ಹಿಡಿಯುತ್ತಿವೆ. ಈ ಬಸ್ಸಿನ ಚರಿತ್ರೆಯನ್ನು ಹುಡುಕುತ್ತ ಹೋದರೆ ಅದರಲ್ಲಿ ಎರಡು ಅಧ್ಯಾಯವಿದೆ. ಮೊದಲನೆಯ ಅಧ್ಯಾಯ ಶಂಕರ್ ಮೋಟರ್ಸ್, ಎರಡನೆಯ  ಸಹಕಾರ ಸಾರಿಗೆ ಕೊಪ್ಪ. ಈ ಎರಡು ಅಧ್ಯಾಯಕ್ಕೂ ಇರುವ ವಿಪರ್ಯಾಸವೆಂದರೆ, ಒಂದು ಹಣಕ್ಕಾಗಿ ಹುಟ್ಟಿಕೊಂಡಿದ್ದು ಮತ್ತೊಂದು ಜನರಿಗಾಗಿ ಬೆಳೆದುಕೊಂಡಿದ್ದು.

1980 ರಲ್ಲಿ ಶಂಕರ್ ಮೋಟರ್ಸ್ ಎಂಬ ಬಸ್ ಸಂಸ್ಥೆಯೊಂದು ಹುಟ್ಟಿಕೊಂಡಿತು. ನಿರಂತರವಾಗಿ ಹನ್ನೊಂದು ವರ್ಷ ಸೇವೆಯೊದಗಿಸಿದ ಈ ಸಂಸ್ಥೆ ಇದ್ದಕ್ಕಿದ್ದಂತೆ 1991 ರಲ್ಲಿ ಕಾರ್ಮಿಕರಿಗೆ ಸಂಬಳ ಹೆಚ್ಚಳ ಮಾಡುವ ವಿಷಯದಲ್ಲಿ ಸಿಹಿ ಸುದ್ದಿ ನೀಡುವ ಬದಲಿಗೆ  ಸಂಸ್ಥೆಯನ್ನೇ ಮುಚ್ಚುವ ಕಹಿ ಸತ್ಯವೊಂದನ್ನು ಅವರ ಮುಂದಿಟ್ಟಿತು. ಆದರೆ ಎದೆ ಗುಂದದ ಕಾರ್ಮಿಕರು ಸಂಸ್ಥೆಯಿಂದ ಬರುವ ಪರಿಹಾರ ಧನದಿಂದ  ಅದೇ ಸಂಸ್ಥೆಯಿಂದ ಮಾರಲ್ಪಡುವ ಬಸ್ಸುಗಳನ್ನು ಕೊಂಡುಕೊಳ್ಳುವ ನಿರ್ಧಾರ ಮಾಡುತ್ತಾರೆ. ಮುಂದೆ ನಡೆದಿದ್ದು ಇತಿಹಾಸ. ಯಾವ ವರ್ಷದಲ್ಲಿ ಶಂಕರ್ ಮೋಟರ್ಸ್ ತನ್ನ ಸೇವೆಯನ್ನು ನಿಲ್ಲಿಸಿತೋ ಅದೇ ವರ್ಷ ಆರು ಬಸ್ಸ್ ಗಳೊಂದಿಗೆ ಹೊಸ ಸಂಸ್ಥೆಯೊಂದು ಚಿಗುರೊಡೆಯುತ್ತದೆ, ಅದೇ ಸಹಕಾರ ಸಾರಿಗೆ ಕೊಪ್ಪ. ಮೊದ ಮೊದಲು ಸುತ್ತ ಮುತ್ತಲಿನ ಊರುಗಳಿಗೆ ಸಂಚರಿಸುತ್ತಿದ್ದ ಈ ಬಸ್ಸುಗಳು ಬರ ಬರುತ್ತಾ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸುತ್ತಿದ್ದವಲ್ಲದೆ, ಸಣ್ಣ ಸಣ್ಣ ಹಳ್ಳಿಗಳಿಗೂ ಹೋಗಿ ಜನರನ್ನು ಪಟ್ಟಣಕ್ಕೆ ಸೇರಿಸುತ್ತಿದ್ದವು. ಮೈ ತುಂಬಾ ಹಸಿರು ಬಣ್ಣ ತುಂಬಿಕೊಂಡಿದ್ದ ಈ ಬಸ್ಸುಗಳಲ್ಲಿ ಮಲೆನಾಡನ್ನು ನೋಡುವುದೆಂದರೆ ಸ್ವರ್ಗ.

ಆರು ಬಸ್ಸುಗಳೊಂದಿಗೆ ಆರಂಭವಾದ ಈ ಸಂಸ್ಥೆ ಕೆಲವೇ ವರ್ಷಗಳಲ್ಲಿ ಅರುವತ್ತಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿ,  ಹಿರಿಯರಿಗೆ, ವಿದ್ಯಾರ್ಥಿಗಳಿಗೆ, ಪ್ರತಿದಿನ ಸಂಚರಿಸುವ ಬ್ಯಾಂಕ್ ಉದ್ಯೋಗಿಗಳಿಗೆ, ಸರ್ಕಾರಿ ನೌಕರರಿಗೆ ರಿಯಾಯಿತಿ ಪಾಸ್ ನೀಡುತ್ತಿತ್ತು. ಅಷ್ಟು ಮಾತ್ರವಲ್ಲದೆ ಅಂಗವಿಕಲ ವಿದ್ಯಾರ್ಥಿಗಳಿಗೆ, ಹಾಗೂ ಸಂಸ್ಥೆಯ ಕಾರ್ಮಿಕರ  ಮಕ್ಕಳಿಗೆ ಉಚಿತವಾಗಿ ಸೇವೆ ನೀಡುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ಚಿಗುರಾಗಿದ್ದು ಹೆಮ್ಮರವಾಗಿಬಿಟ್ಟಿತ್ತು. ಎಷ್ಟರ ಮಟ್ಟಿಗೆಂದರೆ ಮಲೆನಾಡಿನಲ್ಲಿ ಸಹಕಾರ ಸಾರಿಗೆ ಎಂದರೆ ಒಂದು ರೀತಿಯಲ್ಲಿ ಬ್ರ್ಯಾಂಡ್ ಆಗಿ ಪರಿವರ್ತನೆಗೊಂಡಿತ್ತು ಅನ್ನಬಹುದು. ಸಾರಿಗೆ ಸಂಸ್ಥೆಯ ಕೆಲವೊಂದು ವಿಷಯಗಳು ಸಾಕಷ್ಟು ಜನರಿಗೆ ಇಂದೂ ಗೊತ್ತಿಲ್ಲ.

ಜಪಾನಿನ ಕ್ಯೂಟೊ ನಗರದ ಯೂನಿವರ್ಸಿಟಿಯ ತಂಡವೊಂದು ನಮ್ಮ ಸಹಕಾರ ಸಾರಿಗೆ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ನಮ್ಮ ಆಡಳಿತ ವ್ಯವಸ್ಥೆಯ ಮಾದರಿಯನ್ನು ಅಳವಡಿಸಿಕೊಂಡಿದೆ. ಇದು ಮಾತ್ರವಲ್ಲದೆ ಸಹಕಾರ ಸಾರಿಗೆಯ ಯಶೋಗಾಥೆ ಮಣಿಪಾಲದ ಇನ್ಸ್ಟಿಟ್ಯೂಟ್ ಓಫ್ ಮ್ಯಾನೇಜ್ ಮೆಂಟ್‌ಗೆ ಪಠ್ಯವಾಗಿದೆ. ಆದರೆ ಇದ್ದಕ್ಕಿದ್ದಂತೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ 2019 ರಲ್ಲಿ ಈ ಸಂಸ್ಥೆ ಸದ್ದಿಲ್ಲದೇ ತನ್ನ  ಸಂಸ್ಥೆಯಲ್ಲಿದ್ದ 75 ಕ್ಕೂ ಹೆಚ್ಚು ಬಸ್ಸುಗಳ ಓಡಾಟವನ್ನು ಸ್ಥಗಿತ ಗೊಳಿಸಿ 300 ಕ್ಕೂ ಅಧಿಕ ಕಾರ್ಮಿಕರನ್ನು ಕರೆದು ಆರ್ಥಿಕ ಹಿಂಜರಿಕೆಯ ಕಾರಣದಿಂದಾಗಿ ಸಂಸ್ಥೆಗೆ ಬೀಗ ಬೀಳುತ್ತಿರುವುದನ್ನು ಹೇಳುತ್ತದೆ. ಅಂದೆ ಕೊನೆ ಅಂದಿನಿಂದ ಇಂದಿನವರೆಗೂ ನಿಂತ ಜಾಗದಿಂದ ಬಸ್ಸುಗಳು ಇಂದಿಗೂ ಒಂದಿಂಚು ಮುಂದೆಯೂ ಹೋಗಿಲ್ಲ, ಹಿಂದೆಯೂ ಬರಲಿಲ್ಲ.

ಸಾಕಷ್ಟು ಜನರು ಈ ಸಂಸ್ಥೆಯ ಮೇಲಿನ ಪ್ರೀತಿಯಿಂದ ಬಸ್ಸುಗಳನ್ನು ಕೊಂಡುಕೊಳ್ಳಲು ಬಂದಿದ್ದರು. ಆದರೆ ಅದ್ಯಾವುದು ಕೂಡ ಪ್ರಯೋಜನಕ್ಕೆ ಬಾರಲಿಲ್ಲ.

ಇಂದಿಗೂ ಕೂಡ ಮಲೆನಾಡಿನ ಜನರು ಇಂದಲ್ಲ ನಾಳೆ ನಮ್ಮ ಬಸ್ಸುಗಳು ರಸ್ತೆಗಿಳಿಯಬಹುದು ಎಂದು ನಂಬಿ ಬದುಕು ಸಾಗಿಸುತ್ತಿದ್ದಾರೆ. ಏಕೆಂದರೆ ಈ ಬಸ್ಸುಗಳು ಬಸ್ಸು ಮಾತ್ರವಾಗಿರಲಿಲ್ಲ ಬದುಕಿಗೆ ಬಣ್ಣ ತುಂಬಿದ ಭಾವನೆಯಾಗಿತ್ತು.

ರಾಹುಲ್‌ ಆರ್‌ ಸುವರ್ಣ

ಪತ್ರಿಕೋದ್ಯಮ ವಿದ್ಯಾರ್ಥಿ

ಎಂ ಜಿ ಎಮ್‌ ಕಾಲೇಜ್‌, ಉಡುಪಿ.

ಇದನ್ನೂ ಓದಿ ಫ್ರೀ ಬಸ್ಸಿನ ಸುತ್ತಾ..

Related Articles

ಇತ್ತೀಚಿನ ಸುದ್ದಿಗಳು

You cannot copy content of this page