Friday, February 13, 2026

ಸತ್ಯ | ನ್ಯಾಯ |ಧರ್ಮ

ಬೆಂಗಾಲಿ ಮಾತನಾಡಿದ್ದಕ್ಕೆ ಪುಣೆಯಲ್ಲಿ ವಲಸೆ ಕಾರ್ಮಿಕನ ಹತ್ಯೆ: ಇದು ‘ದ್ವೇಷ ಅಪರಾಧ’ ಎಂದು ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪುಣೆಯಲ್ಲಿ 24 ವರ್ಷದ ಬೆಂಗಾಲಿ ವಲಸೆ ಕಾರ್ಮಿಕನ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಹತ್ಯೆಯು ಕೇವಲ ಬೆಂಗಾಲಿ ಮಾತನಾಡಿದ್ದಕ್ಕಾಗಿ ನಡೆದಿದೆ ಎಂದು ಪ್ರತಿಪಾದಿಸಿರುವ ಅವರು, ಇದೊಂದು ದ್ವೇಷದ ಅಪರಾಧ‌ ಎಂದು ಬಣ್ಣಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಹತ್ಯೆಗೀಡಾದ ಪುರುಲಿಯಾ ಜಿಲ್ಲೆಯ ಬಂದ್ವಾನ್ ಮೂಲದ ಸುಖೇನ್ ಮಹತೋ ಅವರ ಕುಟುಂಬದ ಏಕೈಕ ಆಧಾರವಾಗಿದ್ದರು ಎಂದು ಮಮತಾ ಬ್ಯಾನರ್ಜಿ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಯುವಕನ ಭಾಷೆ, ಗುರುತು ಮತ್ತು ಮೂಲದ ಕಾರಣಕ್ಕಾಗಿ ಆತನನ್ನು ಬೇಟೆಯಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಸಮಾಜದಲ್ಲಿ ಪರಕೀಯ ದ್ವೇಷವನ್ನು ಅಸ್ತ್ರವನ್ನಾಗಿ ಬಳಸಿ ಅಮಾಯಕರನ್ನು ಗುರಿ ಮಾಡುತ್ತಿರುವ ವಾತಾವರಣದ ನೇರ ಪರಿಣಾಮವೇ ಈ ಹತ್ಯೆ ಎಂದು ಅವರು ಆರೋಪಿಸಿದ್ದಾರೆ. ಸುಖೇನ್ ಕುಟುಂಬಕ್ಕೆ ನ್ಯಾಯ ಒದಗಿಸಲು ಪಶ್ಚಿಮ ಬಂಗಾಳ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಈ ಹಿಂದೆಯೂ ಕೂಡ ಮಮತಾ ಬ್ಯಾನರ್ಜಿ ಅವರು ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ವರದಿಗಳ ಪ್ರಕಾರ, ಸುಖೇನ್ ಮಹತೋ ಅವರ ಮೃತದೇಹವು ಪುಣೆಯ ಶಿಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೊರೆಗಾಂವ್ ಭೀಮಾ ಪ್ರದೇಶದಲ್ಲಿ ಪತ್ತೆಯಾಗಿದೆ. ಅವರು ಬೆಂಗಾಲಿ ಮಾತನಾಡಿದ್ದಕ್ಕಾಗಿ ಹಲ್ಲೆ ನಡೆಸಿ ಕೊಲ್ಲಲಾಗಿದೆ ಎಂದು ದೃಢಪಡದ ವರದಿಗಳು ತಿಳಿಸಿದ್ದು, ಈ ಸಂಬಂಧ ಅವರ ಸಹೋದರ ತುಳಸಿರಾಮ್ ಮಹತೋ ಶಿಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page