ಮಲೆನಾಡಿಗರಿಗೆ ಮಾಂಸಾಹಾರ ಆಯ್ಕೆ ಅಲ್ಲವೇ ಅಲ್ಲ ಅದು ಅವರ ನೈಜವಾದ ಆಹಾರ ಗುರುತು. ಬಹುಶಃ ನನ್ನ ತಿಳುವಳಿಕೆಯ ಮಟ್ಟಿಗೆ ಮಲೆನಾಡಿಗರ ಮಾಂಸಾಹಾರ ಸೇವನೆ ವರ್ಷದ ಮುನ್ನೂರು ಅರವತೈದು ದಿನಗಳೂ ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ. ಅದನ್ನ ಪುಷ್ಟಿಕರಿಸುವಂತ ಎಲ್ಲಾ ಆಚಾರ, ವಿಚಾರಗಳು ನಿರಂತರವಾಗಿ ನಡೆಯುತ್ತಾ ಬಂದಿರುವುದರಿಂದ ಇದನ್ನು ಅಲ್ಲಗಳೆಯುವ ಯಾವುದೇ ಪ್ರಮೇಯವೂ ಬರುವುದಿಲ್ಲ ಎನ್ನುವ ಕುರಿತು ಪೀಣ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ, ಶ್ರುತಿ ತಲನೇರಿ ಅವರು ಬರೆದಿರುವ ಲೇಖನ ಪೀಪಲ್ ಮೀಡಿಯಾದಲ್ಲಿ..
ಮಲೆನಾಡಿಗರಿಗೆ ಮಾಂಸಾಹಾರ ಆಯ್ಕೆ ಅಲ್ಲವೇ ಅಲ್ಲ ಅದು ಅವರ ನೈಜವಾದ ಆಹಾರ ಗುರುತು. ಬಹುಶಃ ನನ್ನ ತಿಳುವಳಿಕೆಯ ಮಟ್ಟಿಗೆ ಮಲೆನಾಡಿಗರ ಮಾಂಸಾಹಾರ ಸೇವನೆ ವರ್ಷದ ಮುನ್ನೂರು ಅರವತೈದು ದಿನಗಳೂ ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ. ಅದನ್ನ ಪುಷ್ಟಿಕರಿಸುವಂತ ಎಲ್ಲಾ ಆಚಾರ, ವಿಚಾರಗಳು ನಿರಂತರವಾಗಿ ನಡೆಯುತ್ತಾ ಬಂದಿರುವುದರಿಂದ ಇದನ್ನು ಅಲ್ಲಗಳೆಯುವ ಯಾವುದೇ ಪ್ರಮೇಯವೂ ಬರುವುದಿಲ್ಲ.
ಮಲೆನಾಡು, ಮಳೆಕಾಡು ಒಂದು ಯಕ್ಷ ಲೋಕವೇ ಸರಿ. ಪ್ರಕೃತಿ ಸೌಂದರ್ಯ ಹಾಳು ಮೂಳು ಎಲ್ಲಾ ಬಿಟ್ಟು ಬರೀ ಜೀವನಕ್ರಮವನ್ನೆ ನೋಡಿದರೆ ಅದೆಷ್ಟು ಸುಂದರಾನುಬೂತಿಯನ್ನು ನೀಡುತ್ತದೆ. ಆಹಾರ ಸರಪಳಿಯನ್ನು ಶಾಲೆಯಲ್ಲಿ ಇರುವಾಗ ಓದಿದ್ದೇವೆ. ಅದೇ ತರದಲ್ಲಿ ಮಲೆನಾಡಿಗರ ಆಹಾರ ಸರಪಳಿಯೂ ಕೂಡ ಎನ್ನಬಹುದು.

ನನಗೆ ತಿಳಿದ ಮಟ್ಟಿಗೆ ಮಲೆನಾಡಿಗರು ಈ ಪೋಷಕಾಂಶಯುಕ್ತ ತರಕಾರಿಗಳು ಎಂದು ಇದೀಗ ಕರೆಯುವ ಬಹುತೇಕವನ್ನು ಈ ಮೊದಲು ತಿಳಿದಿರಲಿಲ್ಲ ವೆನಿಸುತ್ತದೆ. ಏಕೆಂದರೆ ಕಾರಣ ಇಷ್ಟೆ. ಕಾಡಿನಲ್ಲಿ, ತೋಟದಲ್ಲಿ ಆಯಾ ಕಾಲಕ್ಕೆ ಸಿಗುವ ಸೊಪ್ಪುಗಳು, ಗೆಡ್ಡೆ ಗೆಣಸುಗಳು, ಬಿದಿರಿನ ಚಿಗುರು(ಕಳಲೆ), ಅಣಬೆ ಇವೆಲ್ಲ ಈ ಆಹಾರದ ಪೋಷಕಾಂಶಗಳನ್ನು ಸಮಪ್ರಮಾಣದಲ್ಲಿ ಪೂರಿಸುತಿದ್ದವೇನೋ.?
ಬಿಡಿ ಇವು ಯಾವುದರ ಬಗೆಗೂ ನಾನು ಮಾತನಾಡುತ್ತಿಲ್ಲ ನನ್ನ ಈ ಸಂಪೂರ್ಣ ಬರಹ ಮಲೆನಾಡಿಗರ ಮಾಂಸಾಹಾರ ಪ್ರಿಯತೆಯ ಬಗೆಗೆ ಅಷ್ಟೇ. ಮಾಂಸಾಹಾರಕ್ಕೂ ಹಾಗೂ ಮಲೆನಾಡಿನ ಜನರಿಗೂ ಅವಿನಾಭಾವ ಸಂಬಂಧವಿದೆ. ಯುಗಾದಿ ಹಬ್ಬದ ಆರಂಭದಿಂದ ಮುಂದಿನ ಯುಗಾದಿಯ ವರೆಗೂ ಬಾಡೂಟವನ್ನು ಬಿಡುವ ಯಾವ ತಿಂಗಳುಗಳು ಇಲ್ಲವೇನೋ? ಯುಗಾದಿ ಹಬ್ಬದ ಎಡೆ ಆದ ಕೂಡಲೆ ಬೇಟೆ ಹೊಕ್ಕುವ ಪ್ರವೃತ್ತಿ ಮಲೆನಾಡಿನಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಕೋವಿ ಇರುವವರು ಕೋವಿಯೊಂದಿಗೆ, ಬೇಟೆ ನಾಯಿಗಳಿರುವವರು ನಾಯಿಗಳೊದಿಗೆ ಬೇಟೆ ಹೊಕ್ಕರೆ ಕೊನೆಗೆ ಹಂದಿ ಬೇಟೆಯನ್ನಾದರು ಮಾಡಿಯೇ ತೀರುತಿದ್ದರು. ಅಲ್ಲೋ ಜನದ ಪಾಲು ಒಂದಾದ್ರೆ, ಕೋವಿ ಪಾಲು, ನಾಯಿ ಪಾಲು ಹಿಂಗೆ ಹಬ್ಬದ ಸಂಜೆಯೇ ಬಾಡೂಟ. ಈಗ ಬೇಟೆ ಗೀಟೆ ಇಲ್ಲದಿದ್ದರೂ ಕೊಳಿಯೋ, ಮೀನೋ ಪೇಟೆಯು ಹತ್ತಿರವಿದ್ದರೆ ಕುರಿ ಮಾಂಸವೋ ಒಲೆಯಲ್ಲಿ ಬೇಯುವುದಂತೂ ಶತಸಿದ್ಧ.
ಸಂಜೆ ಒಂದು ಗೌಲು (ಮಾಂಸಾಹಾರವನ್ನು ಮಲೆನಾಡಿನಲ್ಲಿ ಕರೆಯುವುದು) ಮಾಡಿ ಸಣ್ಣದಾಗಿ ಕಡ್ಬೋ, ರೊಟ್ಟಿನೋ ಮಾಡಿ ಯಡೆ ಹಾಕಿಬಿಟ್ಟರೆ ಮುಗೀತು. ವರ್ಷಾವಧಿ ಹಬ್ಬದಲ್ಲಿ ಬಾಡೂಟಕ್ಕೆ ನಾಂದಿ ಹಾಡಿದ ಹಾಗೆ. ಮಳೆಗಾಲ ಬರುವವರೆಗೂ ಒಂದಿಲ್ಲೊಂದು ದೆಯ್ಯದ ಹರ್ಕೆಗಳು, ಚೌಡಿ ಪೂಜೆ, ಬೂತನ ಹರಕೆ ಹಿಂಗೆ ಸಾಲು ಸಾಲು ಕಾರಣಗಳು ಕೋಳಿ ಕುರಿ ತಿನ್ನೋಕೆ. ಈ ಹರಕೆ ಪೂಜೆಗಳ ವಿಶೇಷವೇನೆಂದರೆ ಈ ಎಲ್ಲಾ ದೇವರುಗಳು ಚೌಡಿ ಆದಿಯಾಗಿ ಗಂಡಸರಿಗೆ ಮಾತ್ರ ತಮ್ಮನ್ನು ಪೂಜೆ ಗ್ಹೈಯುವ ಹಕ್ಕನ್ನು ಕೊಟ್ಟಿರುವುದು. ಅವುಗಳ ವಾಸ ಸ್ಥಾನವನ್ನು ಸ್ವಚ್ಛವಾಗಿಸಿಕೊಂಡು ಪೂಜಿಸಿಕೊಳ್ಳುವುದಲ್ಲದೆ ಅವರೇ ಹರಕೆ ಜಾಗದಲ್ಲಿ ಅಡುಗೆಯನ್ನು ಮಾಡಬೇಕು. ಎಡೆ ಹಾಕಿದಮೇಲೆ ಅವರೇ ಊಟ ಬಡಿಸಬೇಕು. ಹರಕೆ ಜಾಗದಲ್ಲಿನ ಅಡುಗೆಯ ವಿಶೇಷವೇನೆಂದರೆ ಕುರಿಯ ಮಂಡೆ ಹಾಗೂ ಕೋಳಿ ಮಂಡೆಯ ಸಾರು, ಕೋಳಿಯ ತೊಳ್ಳೆ(ಲಿವರ್)ಯನ್ನು ಸುಟ್ಟು ಅದನ್ನು ಎಡೆ ಇಡುವುದು. ಇನ್ನು ಸಂಜೆಗೆ ಹತ್ತಿರದ ನೆಂಟರಿಷ್ಟರಿಗೆ ಕರೆ ಹೋಗೇ ಹೋಗುತ್ತದೆ. ಅಂತೂ ಒಂದು ಹಬ್ಬದ ವಾತಾವರಣ.
ಇನ್ನು ಮಳೆಗಾಲ ಹತ್ತಿರವಾಗುವಾಗ ಬರುವುದೇ ಕೊಡೆಮಾಸೆ ಹಬ್ಬ. ಇದನ್ನು ನಮ್ಮ ಕಡೆ ಮಾವುಳ ಎಂದು ಕರೆಯುತ್ತೇವೆ. ಹಲಸಿನ ಹಣ್ಣಿನ ಕಡಬು ಹಲಸಿನ ಬೀಜದ ಪಲ್ಯ, ಹಲಸಿನ ಹಣ್ಣಿನ ಗಾರ್ಗಿ ಮಾಡಿ ತುಳಸಿಗೆ ಒಂದು ಶನಿವಾರ ಎಡೆ ಮಾಡಿದರೆ ಮುಂದೆ ಮಳೆ ಹಿಡಿಯುವುದರಲ್ಲಿ ಸುತ್ತಲಿನ ಗಿಡ ಮರದ ಬುಡದ ದೆಯ್ಯ, ಭೂತಗಳ ಹರಕೆ. ಕುರಿ ಕಡಿದು ಎಲ್ಲಾ ಮನೆಗಳಿಂದ ಬರುವ ರೊಟ್ಟಿ ಹಿಟ್ಟಿಂದ ರೊಟ್ಟಿ ತಟ್ಟಿ, ಹರ್ವೆ ಸೊಪ್ಪಿನ ಪಲ್ಯವನ್ನು ಮಾಡಿ, ಎಲ್ಲರ ಮನೆಯ ಕಾಯನ್ನು ಕಡೆದು ಕಾರ ಮಾಡಿ ಬುಟ್ಟಿಗೆ ತುಂಬಿ ಕಳುಹಿಸಿದರೆ ನಾಲ್ಕು ದಿಕ್ಕುಗಳಿಗೆ ಹೋದ ಗಂಡಸರುಗಳು ಅಲ್ಲಿ ಕುರಿ ಮಂಡೆ ಸಾರು ಮಾಡಿ ಉಂಡು ಮನೆಗಿಷ್ಟು ತರುವುದು ರೂಡಿ. ಹೀಗೆ ಎಲ್ಲಿಯೂ ತಡೆ ಇಲ್ಲದೆ ನಿರಂತರವಾಗಿ ಮಾಂಸದ ಊಟಗಳು ನಡೆಯುತ್ತಲೇ ಇರುತ್ತವೆ ನಮ್ಮ ಮಲೆನಾಡಿನಲ್ಲಿ. ಅದೂ ಮಾಂಸಾಹಾರ ಕೇಳುವ ದೈವಗಳ ಹೆಸರಿನಲ್ಲೇ.
ನನಗೆ ತಿಳಿದ ಮಟ್ಟಿಗೆ ನಮ್ಮ ಕಡೆ ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಸಂಪೂರ್ಣ ಬಿಡುವುದಿಲ್ಲ. ಶ್ರಾವಣ ಮಾಸದ ಒಂದು ಶನಿವಾರ ತುಳಸಿಗೆ ಹಣ್ಣಿಟ್ಟರೆ ಮುಗಿಯಿತು. ಮನೆಯಲ್ಲಿ ಹಿರಿತಲೆಗಳಿದ್ದರೆ ಅವರುಗಳಿಗೆ ಸೂರ್ಯ ಮುಳುಗುವವರೆಗೆ ಮಾತ್ರ ಒಪ್ಪೊತ್ತು, ಆಮೇಲೆ ಯಾವುದು ಇಲ್ಲ. ಕೊನೆಗೆ ಒಂದು ಒಣ ಮೀನು ಸುಟ್ಟು ಊಟ ಹಾಕಬೇಕು. ಅದೂ ಇಲ್ಲವಾದರೆ ಒಣಮೀನಿನ ಮಂಡೆ ಕುಟ್ಟಿ ಪುಡಿ ಮಾಡಿದ ಕುಟ್ಟುಂಡೆ ಇದ್ದರೂ ಅಂದಿನ ಊಟ ಸಂತೃಪ್ತ. ಹಾಗಾಗೇ ಮಲೆನಾಡಿನಲ್ಲಿ ‘ಗೌಲ್ ಗೌಲ್ ಇದ್ರೆ ಗೌಡ್ತಿ ಕೂಳು ತಿಂದಿದ್ಲಲಂತೆ’ ಅನ್ನೋದು ರೂಡಿ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿಗರು ಈ ವಾರ, ಮಾಸ, ದಿನದ ಹುಚ್ಚಿಗೆ ಬಿದ್ದು ಯಾರಾದರೂ ನೆಂಟರನ್ನು ಕರೆಯುವಾಗ “ಒಂದು ಫೋನ್ ಮಾಡಿ ಬನ್ನಿ ಮಾರ್ರ ಸೋಮವಾರ, ಗುರುವಾರ ಎಲ್ಲಾ ಬರಕ್ಕೆ ಹೋಗ್ಬೇಡಿ ಮತ್ತೆ ನಾವೆಂತ ಗೌಲು, ಮಾಂಸದಡಿಗೆ ಮಾಡಲ್ಲ ಅತಾ” ಅನ್ನೋದು ಸಾಮಾನ್ಯ ವಾಗಿದೆ. ಈ ಬೇಸಿಗೆಯಲ್ಲಿ ಒಂದಿಷ್ಟು ಒಣಮೀನುಗಳಾದ ಸೋರ್ಲು, ಮಂಡೆಸಾಡೆ, ಬಂಗ್ದೆ, ಕಡ್ಡಿ ಮೀನು, ಸೀಗ್ಡಿ ಇವನೆಲ್ಲ ತಂದು ಅಡ್ಕೆ ಚಪ್ರದ ಮೇಲೆ ಹಾಕಿ ಗರಿ ಗರಿ ಒಣಗಿಸ್ಸ್ಕೊಂಡ್ರೆ ಮಳೆಗಾಲದ ನೆಟ್ಟಿಗೆ ಅವೆ ದೊಡ್ಡ ಬಾಡೂಟ. ಕೆಲವರು ಒಲೆ ಸರುವಿನಲ್ಲಿ ನೇತು ಹಾಕಿದರೆ ಮತ್ತೆ ಕೆಲವರು ಅದನ್ನ ಬಿಸ್ಕೆಟ್ ಡಬ್ಬಿಲಿ ಹಾಕಿ ಇಡುತ್ತಾರೆ. ಇನ್ನು ಶಿಕಾರಿದಾರರ ಮನೇಲಿ ಒಣ ಮಾಂಸದ ಸಂಡಿಗೆಯನ್ನ ಹೊಗೆ ಕಾಯಲು ಒಲೆ ಮುಂದೆ ನೇತು ಹಾಕುವುದು ಅಭ್ಯಾಸ.
ಮಲೆನಾಡಿನಲ್ಲಿ ಬಹುಶಃ ಬಹುತೇಕ ಸಸ್ಯಹಾರದ ಜೊತೆ ಮಾಂಸಾಹಾರವನ್ನು ಸೇರಿಸುವ ಅಭ್ಯಾಸವಿದೆ. ಬಸಳೆ ಸೊಪ್ಪಿನ ಜೊತೆ ಕಡ್ಡಿಮೀನು, ಹಸಿ ಗೇರುಬೀಜದ ಜೊತೆ ಮೊಟ್ಟೆ, ಬಣ್ಣದ ಸೌತೆ ಸಾರಿನ ಜೊತೆ ಕಡ್ಡಿ ಮೀನೋ, ಸೊರಲು ಮೀನಿನ ಒಂದೆರಡು ತುಂಡೋ, ಜೊತೆಗೆ ಕಡುಬು ಇಲ್ಲ ರೊಟ್ಟಿ ಇದ್ದರಂತೂ ಆಹಾ! ಅದ್ಬುತ ರುಚಿ. ಹಿಂದೆಲ್ಲಾ ಎಲ್ಲರ ಮನೆಯಲ್ಲೂ ಕಂತ್ರಿ ಕೋಳಿಗಳು(Country, ನಾಟಿ) ಇರುತ್ತಿದ್ದವು. ನೆಂಟರು ಬಂದರೆ ಯಾವುದಾದ್ರೂ ಕೋಳಿಗೆ ಗ್ರಚಾರ ಕೆಟ್ಟಿರುತಿತ್ತು. ಗಂಡಸರೇ ಕುಯ್ಯ ಬೇಕೆಂದೇನಿಲ್ಲ ಹೆಂಗಸರೂ ಕೋಳಿ ಕುಯ್ದು ಹಸಿಗೆ ಮಾಡುತಿದ್ದರು. ಇಲ್ಲವೋ ಹಿಂಗೆ ಒಣಮೀನಿನ ಚಟ್ನಿಯನ್ನೋ ಮಾಡಿ ಹಾಕಿದರೆ ಅದೇ ಬೂರಿ ಬೋಜನ.
ನೆಟ್ಟಿ ಸಮಯದಲ್ಲಂತು ಅದೆಲ್ಲಿ ತರಕಾರಿಗೆ ಹೋಗೋದು. ಯರ್ಡು ಬಣ್ಣದ ಸೌತೆ ಕಾಯಿಗೆ ನಾಲಕ್ಕು ತೆಂಗಿನ ಕಾಯಿ ಕಡೆದು ಹಾಕಿ ಒಂದಿಷ್ಟು ಕಡ್ಡಿ ಮೀನ್ ಉದ್ರುಸಿದ್ರೆ ಅದಕ್ಕಿಂತ ಕಡಕಟ್ಲು (ಕೊನೆ ದಿನದ ನಾಟಿ) ಬೇರೊಂದು ಇರೋದಕ್ಕೆ ಸಾದ್ಯವಿಲ್ಲ. ಇನ್ನು ಮಹಲಾಯ ಅದಂತೂ ಕೇಳುವುದೇ ಬೇಡ. ಊಟಕ್ಕೆ ಕರೆಯೋ ಕರೆ ಅದೆಷ್ಟು ಮಾಂಸ ಧೂಟವೆಂದರೆ ಅರ್ವೆ ಆಗೋಷ್ಟು. ಮಳೆಗಾಲದಲ್ಲಿ ಒಂದಷ್ಟು ಹತ್ತುಮೀನು ಕಡಿದೋ ಇಲ್ಲ ಒಂದಿಷ್ಟು ಜಬ್ಬುಮೀನು ಹಿಡಿದು ಅಗ್ಗಷ್ಟಿಗೆಯಲ್ಲಿ ಒಣಗಿಸಿ ಇಟ್ಟು ಕೊಂಡ್ರೆ ಬೇಸಿಗೆ ಪೂರ್ತಿ ಅದರಲ್ಲೇ ಮುಗಿದ ಹಾಗೆ. ಇನ್ನ ಮೀನು ಹಿಡಿದರೂ ಅಷ್ಟೇ, ಕೊಂಡು ತಂದರು ಅಷ್ಟೇ ಅದನ್ನು ಅಡ್ಡುಳಿ(ಕಾಡಲ್ಲಿ ಸಿಗೋ ಒಂದು ಹುಳಿ ಜಾತಿಯ ಹಣ್ಣು. ಅದನ್ನು ಕುಯ್ದು, ಬಿಸಿಲಿನಲ್ಲಿ ಒಣಗಿಸಿ ನಂತರ ಬೇಯಿಸಿ, ಕೊನೆಗೆ ಸಿಗುವ ಅಂಟು ಮಡ್ಡಿ) ಹಾಕಿ ಇಂಗಿಸಿ ಇಟ್ಟರೆ ಏನಿಲ್ಲವೆಂದರೂ ಒಂದು ವಾರದ ಮೇಲೆ ತಿನ್ನಬಹುದು.
ಮಲೆನಾಡಿಗರು ಅದೆಷ್ಟೇ ಮಾಂಸಾಹಾರ ಪ್ರಿಯರಾದರೂ ಹೊಟ್ಟೆ ಬಿರಿಯುವಂತೆ ಒಂದೇ ಬಾರಿ ತಿನ್ನುವವರಲ್ಲ. ಒಂದು ದೇಯ್ಯದ ಹರಕೆಯ ಕುರಿ ಮಾಂಸ ಒಂದು ಹದಿನೈದು ದಿನಗಟ್ಟಲೆ ಇಟ್ಟು ಅದರ ರುಚಿಯನ್ನು ಆಸ್ವಾದಿಸುವ ಜಾಯ ಮಾನದವರು. ನಮ್ಮ ಮಲೆನಾಡಿನ ಹೆಮ್ಮೆ ಮಾಂಸಾಹಾರ ಕಡಬು, ಅಕ್ಕಿರೊಟ್ಟಿ, ಶಾವಿಗೆ ಇವೇ ಎಲ್ಲಾ. ಯಾವ ಮಾಸವೂ ಇಲ್ಲ ಬರೀ ಮಾಂಸವಷ್ಟೆ. ಈ ಆಧುನಿಕತೆಯಲ್ಲಿ ನಮ್ಮ ಮೂಲ ಸಂಸ್ಕೃತಿ ಮರೆಯಾಗದಿರಲಿ ಅಷ್ಟೆ.
(ಲೇಖನಕ್ಕೆ ಬಳಸಿದ ಅಷ್ಟೂ ಚಿತ್ರಗಳು “ನಲ್ಮೆಯ ಮಲೆನಾಡು” ಟ್ವಿಟ್ಟರ್ ಖಾತೆಯಿಂದ ಪಡೆದವು)
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಶ್ರುತಿ ತಲನೇರಿ
ಸಹಾಯಕ ಪ್ರಾಧ್ಯಾಪಕಿ,
ಆಂಗ್ಲಭಾಷಾ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪೀಣ್ಯ