ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ್ದಕ್ಕೆ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದೆ.
ಸಿಬಿಐ ತನಿಖೆಯಲ್ಲಿ ಏನು ಕಂಡು ಬಂದಿದೆ ಎಂದು ಪ್ರಶ್ನಿಸಿ, ಆಮ್ ಆದ್ಮಿ ಪಕ್ಷದ(ಎಎಪಿ)ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ದೆಹಲಿಯ ಭಾರತೀಯ ಜನತಾ ಪಕ್ಷದ(ಬಿಜೆಪಿ)ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಎಎಪಿ ನಾಯಕ ದುರ್ಗೇಶ್ ಪಾಠಕ್ ಅವರು, ಇತರ ಪಕ್ಷದ ಸದಸ್ಯರೊಂದಿಗೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ರಾಷ್ಟ್ರ ರಾಜಧಾನಿಯ ಬಿಜೆಪಿ ಕಚೇರಿಯಲ್ಲಿ ಜಮಾಯಿಸಿ ಕೇಸರಿ ಪಕ್ಷದ ವಿರುದ್ಧ ಘೋಷಣೆಗಳನ್ನು ಎತ್ತಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೀಶ್ ಸಿಸೋಡಿಯಾ ಅವರ ಪೂರ್ವಜರ ಹಳ್ಳಿಯ ಮೇಲೂ ಸಿಬಿಐ ದಾಳಿ ನಡೆಸಿದೆ.ಸಿಬಿಐ ದಾಳಿಯಲ್ಲಿ ಏನು ಕಂಡು ಬಂತು ಎಂದು ದೇಶ ಒಂದು ವಾರದಿಂದ ಕೇಳುತ್ತಿದೆ. ಈ ಹಿಂದೆ ಇತರರ ಮೇಲೆ ದಾಳಿ ನಡೆದಾಗ ಅವರನ್ನು ರಕ್ಷಿಸುವಂತೆ ಕೇಳುತ್ತಿದ್ದರು. ದೇಶದಲ್ಲಿ ಮೊದಲ ಬಾರಿಗೆ ಪ್ರಾಮಾಣಿಕ ಪಕ್ಷವೊಂದು ಬಂದಿದ್ದು, ಅದು ಸಿಬಿಐಗೆ ದಾಳಿಯಲ್ಲಿ ಏನು ಸಿಕ್ಕಿತು ಎಂದು ಕೇಳುತ್ತಿದೆ ಎಂದು ಪಾಠಕ್ ಹೇಳಿದರು.