ಪತ್ನಿಯನ್ನು ನಂಬಿಸಿ ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದ ಪತಿ, ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ವಿವಾಹೇತರ ಸಂಬಂಧವನ್ನು ಮರೆಮಾಡಲು ಒಂದು ದೊಡ್ಡ ಕಥೆಯನ್ನು ಹೆಣೆದಿದ್ದಾನೆ.
ಕೊನೆಗೆ, ಉತ್ತರ ಪ್ರದೇಶ ಪೊಲೀಸರು 48 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿ, ಕೊಲೆಯ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದರು. ದೆಹಲಿಯ ತ್ರಿಲೋಕ್ ಪುರಿಯ ದಂಪತಿಗಳು ಕುಂಭಮೇಳಕ್ಕಾಗಿ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಬಂದಿದ್ದರು. ಅವರು ಅಲ್ಲಿನ ಹೋಂಸ್ಟೇ ಒಂದರಲ್ಲಿ ಉಳಿದುಕೊಂಡಿದ್ದರು.
ಫೆಬ್ರವರಿ 18 ರ ರಾತ್ರಿ, ಪ್ರಯಾಗ್ರಾಜ್ನ ಝಾನ್ಸಿ ಪ್ರದೇಶದಲ್ಲಿ ತನ್ನ ಹೆಂಡತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಪ್ರಯಾಗ್ರಾಜ್ ಕಮಿಷನರೇಟ್ ಪೊಲೀಸರು 48 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಫೆಬ್ರವರಿ 19ರ ಬೆಳಿಗ್ಗೆ, ಝುನ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರ ಕಾಲೋನಿಯಲ್ಲಿರುವ ಹೋಂಸ್ಟೇಯ ಸ್ನಾನಗೃಹದಲ್ಲಿ 40 ವರ್ಷದ ಮಹಿಳೆಯ ರಕ್ತಸಿಕ್ತ ಶವ ಪತ್ತೆಯಾಗಿತ್ತು. ಆಕೆಯ ಕತ್ತನ್ನು ಹರಿತವಾದ ಆಯುಧ ಬಳಸಿ ಕತ್ತರಿಸಿರುವುದು ಪೊಲೀಸರಿಗೆ ತಿಳಿದುಬಂತು.
ಆರಂಭಿಕ ತನಿಖೆಯ ಸಮಯದಲ್ಲಿ, ಹೋಂಸ್ಟೇ ವ್ಯವಸ್ಥಾಪಕರು ಕೋಣೆಯಲ್ಲಿ ದಂಪತಿಗಳು ತಂಗಿದ್ದರು ಎಂದು ಬಹಿರಂಗಪಡಿಸಿದರು. ಆದರೆ, ಹೋಂ ಸ್ಟೇ ಮ್ಯಾನೇಜರ್ ಅವರಿಂದ ಯಾವುದೇ ಗುರುತಿನ ದಾಖಲೆಗಳನ್ನು ತೆಗೆದುಕೊಂಡಿಲ್ಲ ಎಂಬುದು ಗಮನಾರ್ಹ.
ಫೆಬ್ರವರಿ 18ರ ರಾತ್ರಿ ದಂಪತಿಗಳು ದೆಹಲಿಯಿಂದ ಪ್ರಯಾಗ್ರಾಜ್ಗೆ ಬಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಆ ಮಹಿಳೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡರು.
ಕೊನೆಗೂ ಸಂಬಂಧಿಕರು ಸಂತ್ರಸ್ತೆಯನ್ನು ದೆಹಲಿ ನಿವಾಸಿ ಅಶೋಕ್ ಕುಮಾರ್ ಅವರ ಪತ್ನಿ ಮೀನಾಕ್ಷಿ ಎಂದು ಗುರುತಿಸಿದರು. ಆಕೆಯ ಸಹೋದರ ಪ್ರವೇಶ್ ಕುಮಾರ್ ಮತ್ತು ಇಬ್ಬರು ಪುತ್ರರಾದ ಅಶ್ವನಿ ಮತ್ತು ಆದರ್ಶ್ ಆಕೆಯ ಫೋಟೋ ನೋಡಿದ ನಂತರ ಆಕೆಯ ಗುರುತನ್ನು ದೃಢಪಡಿಸಿದರು.
ವಿವಾಹೇತರ ಸಂಬಂಧಕ್ಕಾಗಿ ಕೊಲೆ
ತನಿಖೆಯ ಸಮಯದಲ್ಲಿ, ಸಂತ್ರಸ್ತೆಯ ಪತಿ ಅಶೋಕ್ ಕುಮಾರ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೂರ್ವ ದೆಹಲಿಯ ತ್ರಿಲೋಕ್ ಪುರಿಯಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಅಶೋಕ್, ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು.
ಪತ್ನಿಯನ್ನು ಕೊಂದು ಅಕ್ರಮ ಸಂಬಂಧ ಮುಂದುವರಿಸಲು ಯೋಜನೆ ರೂಪಿಸಿದ್ದ. ಫೆಬ್ರವರಿ 17ರಂದು, ಅಶೋಕ್ ಕುಮಾರ್ ಮೀನಾಕ್ಷಿ ಜೊತೆ ದೆಹಲಿಯಿಂದ ಪ್ರಯಾಗ್ರಾಜ್ಗೆ ಹೊರಟರು. ಮರುದಿನ ಅವರು ಹೋಂಸ್ಟೇಯಲ್ಲಿ ತಂಗಿದರು. ಮೀನಾಕ್ಷಿ ಸ್ನಾನಕ್ಕೆ ಹೋಗುತ್ತಿದ್ದಾಗ, ಅಶೋಕ್ ಹಿಂದಿನಿಂದ ಚಾಕುವಿನಿಂದ ಇರಿದು ಕೊಂದು ಆಯುಧವನ್ನು ಮರೆಮಾಡಿದ್ದ.
ಕೊಲೆಯನ್ನು ಮುಚ್ಚಿಡಲು, ಅವನು ತನ್ನ ಮಗ ಆಶಿಶ್ಗೆ ಕರೆ ಮಾಡಿ ತನ್ನ ತಾಯಿ ಕುಂಭಮೇಳದಲ್ಲಿ ಕಾಣೆಯಾಗಿದ್ದಾಳೆಂದು ಹೇಳಿದ್ದ. ಆದರೆ, ಹಿರಿಯ ಮಗ ಅಶ್ವಿನ್ ಫೆಬ್ರವರಿ 20ರಂದು ಪ್ರಯಾಗ್ರಾಜ್ನಲ್ಲಿ ತನ್ನ ತಾಯಿಯನ್ನು ಫೋಟೋದೊಂದಿಗೆ ಹುಡುಕಲು ಪ್ರಾರಂಭಿಸಿದ.
ಕೊಲೆಗೆ ಒಂದು ದಿನ ಮೊದಲು, ಫೆಬ್ರವರಿ 18ರಂದು, ಅಶೋಕ್ ತಾನು ಮತ್ತು ಮೀನಾಕ್ಷಿ ಪವಿತ್ರ ಸ್ನಾನ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದ. ಕಣ್ಗಾವಲು ದೃಶ್ಯಾವಳಿಗಳು ಮತ್ತು ವಿಧಿವಿಜ್ಞಾನ ವರದಿಗಳ ಸಹಾಯದಿಂದ ಪೊಲೀಸರು ಆರೋಪಿ ಅಶೋಕ್ ಕುಮಾರ್ನನ್ನು ಬಂಧಿಸಿದರು.