ಮಣಿಪುರದಲ್ಲಿ ಮಹಿಳೆಯರನ್ನು ಅಮಾನುಷವಾಗಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಮೆರವಣಿಗೆ ಮಾಡಿದವನ ಮನೆಗೆ ಇನ್ನೊಂದು ಗುಂಪು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಘಟನೆಯ ಪ್ರಮುಖ ಆರೋಪಿಯಾದ ಹೇರಾದಾಸ್ ಮೈತೇಯಿ ಮನೆಗೆ ಇನ್ನೊಂದು ಗುಂಪು ಹೋಗಿ ಬೆಂಕಿ ಹಚ್ಚಿದ ಬಗ್ಗೆ ವರದಿ ಲಭ್ಯವಾಗಿದೆ. ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಈ ಘಟನೆ ನಡೆದು ಒಂದು ದಿನದ ನಂತರ ಕಾಂಗ್ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಬ್ಬರು ಮಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಆದರೆ ಬುಧವಾರವಷ್ಟೇ ಈ ಭಯಾನಕ ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಈ ವಿಡಿಯೋ ವೈರಲ್ ಆದ ಕೂಡಲೇ ದೇಶಾದ್ಯಂತ ಆಕ್ರೋಶ ಹೆಚ್ಚಾಗಿದೆ.
ಮೇ 3 ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ದುರ್ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.