ಪ್ರಾಮಾಣಿಕತೆ ಮತ್ತು ಸತ್ಯ ತಡವಾಗಿ ಗೆದ್ದಿದೆ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಬಂಧಿತರಾಗಿ 570 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಮನೀಶ್ ಸಿಸೋಡಿಯಾ ಅವರಿಗೆ ನಿನ್ನೆ ಜಾಮೀನು ಸಿಕ್ಕಿದೆ.
ಅವರು ಶುಕ್ರವಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಇಂದು ಮುಂಜಾನೆ ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನೀಶ್ ಸಿಸೋಡಿಯಾ ಅವರೊಂದಿಗೆ ಹಲವು ಎಎಪಿ ನಾಯಕರು ಉಪಸ್ಥಿತರಿದ್ದರು. ಬಜರಂಗ ಬಲಿಯ ಆಶೀರ್ವಾದದಿಂದ ಜೈಲಿನಿಂದ ಹೊರಬಂದಿದ್ದೇನೆ ಎಂದು ಸಿಸೋಡಿಯಾ ಹೇಳಿದ್ದಾರೆ. ಶೀಘ್ರದಲ್ಲೇ ಸಿಎಂ ಕೇಜ್ರಿವಾಲ್ ಕೂಡ ಭಜರಂಗಬಲಿಯ ಆಶೀರ್ವಾದದಿಂದ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದರು. ಆ ಬಳಿಕ ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರೆಲ್ಲರೂ ಮಹಾತ್ಮಾ ಗಾಂಧಿ ಅವರ ಸ್ಮಾರಕ ರಾಜ್ಘಾಟ್ಗೆ ತೆರಳಿ ಗಾಂಧೀಜಿಗೆ ನಮನ ಸಲ್ಲಿಸಿದರು.
ನಂತರ ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಸೋಡಿಯಾ, ತಡವಾದರೂ ಪ್ರಾಮಾಣಿಕತೆ ಮತ್ತು ಸತ್ಯವೇ ಅಂತಿಮವಾಗಿ ಗೆದ್ದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕಷ್ಟದ ಅವಧಿ ತನ್ನನ್ನು ಮಾನಸಿಕವಾಗಿ ಗಟ್ಟಿಗೊಳಿಸಿದೆ ಎಂದರು ಸಿಸೋಡಿಯಾ.
ಏಳೆಂಟು ತಿಂಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೆ ಆದರೆ 17 ತಿಂಗಳು ಬೇಕಾಯಿತು ಎಂದರು. ತಡವಾಗಿಯಾದರೂ ಸತ್ಯ ಗೆದ್ದಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಪ್ರತಿಪಕ್ಷಗಳ ಮೈತ್ರಿಕೂಟ ಒಗ್ಗೂಡಿ ಹೋರಾಡುವ ಅಗತ್ಯವಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಎಎಪಿ ಕಾರ್ಯಕರ್ತರು ಮತ್ತು ಮುಖಂಡರು ಇಂದು ಜೈಲಿನಲ್ಲಿದ್ದಾರೆ, ನಮಗೇಕೆ ಎಂದುಕೊಂಡು ಸುಮ್ಮನಿದ್ದರೆ ನಾಳೆ ನಿಮ್ಮ ಸರದಿಯೂ ಬರುತ್ತದೆ. ಎಲ್ಲರೂ ಒಗ್ಗೂಡಿ ಹೋರಾಟ ನಡೆಸಿದರೆ ಸರ್ವಾಧಿಕಾರ ಕೊನೆಗೊಂಡು ಕೇಜ್ರಿವಾಲ್ ಕೇವಲ 24 ಗಂಟೆಯಲ್ಲಿ ಜೈಲಿನಿಂದ ಹೊರಬರಲಿದ್ದಾರೆ ಎಂದು ಅವರು ಹೇಳಿದರು.