ಹೊಸದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು ಆಡಳಿತ ಮತ್ತು ವಿರೋಧಪಕ್ಷಗಳು ತಮ್ಮ ತಮ್ಮ ಆಯುಧಗಳೊಡನೆ ಸಜ್ಜುಗೊಂಡಿವೆ.
ಅಧಿವೇಶನಕ್ಕೆ ಒಂದು ವಾರದ ಹಿಂದಿನಿಂದ ನಡೆಯುತ್ತಿರುವ ರಾಜಕೀಯ ಪಕ್ಷಗಳ ಒಗ್ಗಟ್ಟು ಪ್ರದರ್ಶನ ಒಂದು ಹಂತಕ್ಕೆ ಬಂದಿದ್ದು ಈಗ ಸಂಸತ್ತಿನಲ್ಲಿ ಅದಕ್ಕೆ ವೇದಿಕೆ ಸಿದ್ಧವಾಗಿದೆ.
ನರೇಂದ್ರ ಮೋದಿ ನೇತ್ರತ್ವದ ಎನ್ಡಿಎ ಸರ್ಕಾರವು ಒಟ್ಟು 31 ಮಸೂದೆಗಳನ್ನು ಮಂಡಿಸಲು ತಯಾರಾಗಿದ್ದು, ಇವುಗಳಲ್ಲಿ ಕೆಲವು ಮಸೂದೆಗಳ ಜೊತೆಗೆ ಮಣಿಪುರ ಗಲಭೆಯ ವಿಷಯವೂ ಸಂಸತ್ತಿನಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗುವ ನಿರೀಕ್ಷೆಯಿದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆ, 2023 ಮಸೂದೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು ಇದು ವಿಪಕ್ಷಗಳ ಸಂಘಟಿತ ದಾಳಿಗೆ ತುತ್ತಾಗುವ ಎಲ್ಲಾ ಸಂಭವವಿದೆ. ಇದರ ವಿರುದ್ಧ ನಿಲ್ಲುವುದಾಗಿ ಮೊನ್ನೆಯಷ್ಟೇ ಚಾಲನೆಗೆ ಬಂದ ಇಂಡಿಯಾ ಒಕ್ಕೂಟ ಹೇಳಿತ್ತು. ಹೀಗಾಗಿ ಈ ವಿಷಯವು ಸರ್ಕಾರದ ಪಾಲಿಗೆ ಬಿಸಿ ತುಪ್ಪವಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.
ಇತ್ತ ಮೋದಿ ಕೂಡಾ ತನ್ನ ಹಳೆಯ ಗೆಳೆಯರ ಜೊತೆ ಇನ್ನಷ್ಟು ಹೊಸ ಗೆಳೆಯರನ್ನು ಸೇರಿಸಿಕೊಂಡು ತನ್ನ ತಂಡವನ್ನು ಇನ್ನಷ್ಟು ಬಲಿಷ್ಟಗೊಳಿಸಿದ್ದಾರೆ.
ಈ ಬಾರಿಯ ಅಧಿವೇಶನದಲ್ಲಿ ಒಟ್ಟು 31 ಬಿಲ್ ಮಂಡನೆ ಸಾಧ್ಯತೆ ಇದೆ. ಈ 31 ಬಿಲ್ ಲೋಕಸಭೆಯಲ್ಲಿ ಸರಾಗವಾಗಿ ಪಾಸ್ ಆಗಲಿದ್ದು ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಲು ವಿಪಕ್ಷಗಳು ಅಡ್ಡಿಗೆ ಯತ್ನಿಸಬಹುದು. ಸದ್ಯ ರಾಜ್ಯಸಭೆಯ ಒಟ್ಟು 238 ಸಂಸದರಿದ್ದು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಗಳು ಒಟ್ಟಾಗಿ 111 ಸದಸ್ಯರನ್ನು ಹೊಂದಿವೆ (ನಾಮನಿರ್ದೇಶಿತ ಸಂಸದರು ಸೇರಿದಂತೆ) ಬಿಜೆಡಿ, ವೈಎಸ್ಆರ್ಸಿಪಿ, ಬಿಎಸ್ಪಿ, ಟಿಡಿಪಿ ಮತ್ತು ಜೆಡಿಎಸ್ ಹೊರತುಪಡಿಸಿ ಪ್ರತಿಪಕ್ಷಗಳು 106 ಸದಸ್ಯರನ್ನ ಹೊಂದಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭಗೊಂಡು ಆಗಸ್ಟ್ 11ರ ತನಕ ಮುಂದುವರೆಯಲಿದೆ.