Saturday, April 27, 2024

ಸತ್ಯ | ನ್ಯಾಯ |ಧರ್ಮ

ಮಲೆ ಮಹದೇಶ್ವರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ

ಚಾಮರಾಜನಗರ : ಮಲೆ ಮಹದೇಶ್ವರದ ಅಭಿವೃದ್ಧಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ರಚಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಲೆ ಮಹದೇಶ್ವರದಲ್ಲಿ ಮಹದೇಶ್ವರ ಪ್ರಾಧಿಕಾರದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಟ್ಟಕ್ಕೆ ಭಕ್ತಾದಿಗಳು ಹೆಚ್ಚಾಗುತ್ತಿದ್ದು, ಪ್ರತಿದಿನ ಹತ್ತರಿಂದ ಇಪ್ಪತ್ತು ಸಾವಿರ ಜನ ಭೇಟಿ ನೀಡುತ್ತಾರೆ. ಅಮಾವಾಸ್ಯೆ, ಹುಣ್ಣಿಮೆಗಳಂದು , ವಾರಾಂತ್ಯಗಳಲ್ಲಿ ಇನ್ನೂ ಹೆಚ್ಚಾಗುತ್ತದೆ. ಆರು ಜಾತ್ರೆಗಳು ನಡೆಯುತ್ತವೆ, ಆಗ ಲಕ್ಷಾಂತರ ಜನ ಸೇರುತ್ತಾರೆ. ಇಲ್ಲಿ 159 ಎಕರೆ ಇದ್ದು, ಇನ್ನೂ 70 ಎಕರೆ ಬಳಕೆಯಾಗಿಲ್ಲ. 80 ಎಕರೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್ ಗಳನ್ನು ತೆಗೆದು ಏನು ಮಾಡಲು ಸಾಧ್ಯವಿದೆ ಎಂದು ಪರಿಶೀಲಿಸಲಾಗುತ್ತದೆ. ಮೂಲ ದೇವಸ್ಥಾನದ 70 ಎಕರೆಗೆ ಮಾಸ್ಟರ್ ಪ್ಲಾನ್ ರಚಿಸಿ ಯೋಜನಾಬದ್ದವಾಗಿ ಅನುಷ್ಠಾನ ಗೊಳಿಸಬೇಕು. ಬಡಜನರು ಇಲ್ಲಿಗೆ ಹೆಚ್ಚು ಬರುವುದರಿಂದ ಡಾರ್ಮಿಟರಿಗಳನ್ನು ನಿರ್ಮಿಸಬೇಕು. ಸುಮಾರು 5 ಸಾವಿರ ಜನ ಒಂದೇ ಬಾರಿಗೆ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಲಾಗಿದೆ ಎಂದರು.

ಮೂರ್ತಿ ಅನಾವರಣ
ಮಲೆ ಮಹಾದೇಶ್ವರನ ಮೂರ್ತಿ ಪೂರ್ಣಗೊಂಡಿದ್ದು ಅದನ್ನು ಮುಂದಿನ ತಿಂಗಳು ಅನಾವರಣವಾಗಲಿದೆ. ಹಲವಾರು ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಿದೆ ಎಂದರು.

ಸಂಪರ್ಕ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ.

ಮಲೆಮಹದೇಶ್ವರ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಬಹಳ ಪ್ರಮುಖವಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಪ್ರದೇಶಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು 100 ಕೋಟಿ ರೂ.ಗಳನ್ನು ಮಲೆಮಹದೇಶ್ವರ ಬೆಟ್ಟ ಹಾಗೂ ಕ್ಷೇತ್ರದ ಎರಡೂ ಬದಿಗಳಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಹಣವನ್ನು ನೀಡಲಾಗುವುದು. ಒಟ್ಟಾರೆ ಮಲೆಮಹದೇಶ್ವರ ಬೆಟ್ಟದ ಯೋಜನಾಬದ್ಧವಾದ ಅಭಿವೃದ್ಧಿ ಸರ್ಕಾರದ ಮುಂದಿರುವ ಗುರಿ. ಕ್ಷೇತ್ರದಲ್ಲಿ ಭಕ್ತಾದಿಗಳ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಶ್ರೀಕ್ಷೇತ್ರದಲ್ಲಿ ದೇವರ ಸನ್ನಿಧಾನಕ್ಕೆ ಸಾಲುಗಟ್ಟಿ ನಿಲ್ಲುವ ಭಕ್ತರಿಗೆ ನೆರಳು ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಅನುಮೋದನೆಯನ್ನು ನೀಡಲಾಗಿದೆ ಎಂದರು.

ಹುಲಿ ಯೋಜನೆ

ಹುಲಿ ಯೋಜನೆಯ ಪ್ರಸ್ತಾಪ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಇಲ್ಲಿನ ಜನವಸತಿಗೆ ಯಾವುದೇ ರೀತಿ ತೊಂದರೆಯಾಗುವ ಬಗ್ಗೆ ಕೆಲವು ಸಂದೇಹಗಳು ವ್ಯಕ್ತವಾಗಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.

ಗಡಿವಿಚಾರದ ಬಗ್ಗೆ ರಾಜ್ಯ ಅಚಲ ನಿಲುವು

ನಾಳೆ ನವದೆಹಲಿಯ ಪ್ರವಾಸ ಕೈಗೊಳ್ಳುತ್ತಿದ್ದು, ಗಡಿವಿಚಾರದ ಬಗ್ಗೆ ಚರ್ಚಿಸಲು ಬೆಳಗಾವಿ ಉಸ್ತುವಾರಿ ಸಚಿವರು, ಎಜಿ, ಗೃಹಸಚಿವರು ಇರಲಿದ್ದಾರೆ. ರಾಜ್ಯ ಪುನರ್ರಚನೆ ನಂತರದ ಎಲ್ಲ ಬೆಳವಣಿಗೆಗಳು , ಗಡಿಗಳ ಬಗ್ಗೆ ರಾಜ್ಯದ ಅಚಲವಾದ ನಿಲುವನ್ನು ನಾಳಿನ ಸಭೆಯಲ್ಲಿ ಪುನ: ಪ್ರತಿಪಾದಿಸಲಾಗುವುದು ಎಂದರು.

ಈಸಂದರ್ಭದಲ್ಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಅಶೋಕ್ , ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು