
ಪ್ರಸ್ತುತ ದಿನದಲ್ಲಿ ಕರಾವಳಿ ಮತ್ತು ಮಲೆನಾಡು ಆಡಳಿತ ಪಕ್ಷ ಬಿಜೆಪಿಯ ಶಕ್ತಿಕೇಂದ್ರವೇ ಆಗಿದೆ. ಈ ಭಾಗದ ಬಹುತೇಕ ಶೇ 95% ಜನಪ್ರತಿನಿಧಿಗಳು ಆಡಳಿತ ಪಕ್ಷ ಬಿಜೆಪಿಯವರೇ ಆಗಿದ್ದಾರೆ. ಆದರೆ ಇಲ್ಲಿನ ಜನರಿಗೆ ಇರುವ ಬಿಜೆಪಿ ಮೇಲಿನ ಕಾಳಜಿ, ಬಿಜೆಪಿ ಪಕ್ಷಕ್ಕೆ ಇಲ್ಲಿನ ಜನರ ಮೇಲೆ ಇದ್ದಂತಿಲ್ಲ. ಅದಕ್ಕೆ ಲೇಟೆಸ್ಟ್ ಉದಾಹರಣೆ ಹೊರದೇಶಗಳಿಂದ ಬರುವ ಅಡಿಕೆಗೆ ಯಾವುದೇ ಸುಂಕವಿಲ್ಲದೆ ಕೇಂದ್ರ ಸರ್ಕಾರ ಆಮದಿಗೆ ಅನುಮತಿ ನೀಡಿದೆ.
ಅಂತೂ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಕೇಂದ್ರದ ಮೋದಿ ಸರ್ಕಾರ ಸರಿಯಾದ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ ಎಂದೇ ಸಾರ್ವಜನಿಕ ಅಭಿಪ್ರಾಯದಿಂದ ಕೇಳಿ ಬರುತ್ತಿರುವ ಮಾತಾಗಿದೆ. ಆ ಮೂಲಕ ಭೂತಾನ್ ನಿಂದ ಬರುವ 17,000 ಟನ್ ಅಡಿಕೆ ಯಾವುದೇ ಆಮದು ಸುಂಕವಿಲ್ಲದೆ ಭಾರತಕ್ಕೆ ಬಂದು ಇಳಿಯಲಿದೆ. ಸಧ್ಯ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮಲೆನಾಡು ಭಾಗದ ಅಡಿಕೆ ಬೆಳೆಗಾರರು ಮುಂಬರುವ ಕರಾಳ ದಿನಗಳನ್ನು ಎದುರು ನೋಡುವಂತಾಗಿದೆ.
ಹೇಳಬೇಕೆಂದರೆ ಕೋವಿಡ್ ಸಾಂಕ್ರಾಮಿಕದ ಭಾರತದ ಅತಿ ಕೆಟ್ಟ ದಿನಗಳಲ್ಲಿಯೂ ಸಹ ಅಡಿಕೆ ಧಾರಣೆಯಲ್ಲಿ ಆ ಮಟ್ಟದ ಏರುಪೇರು ಕಾಣದೇ ಸುಸ್ಥಿರ ಬೆಲೆಯನ್ನೇ ಕಂಡುಕೊಂಡಿತ್ತು. ಎಂತಹ ಸಾಂಕ್ರಾಮಿಕ ಕೂಡಾ ಅಡಿಕೆ ಬೆಲೆಗೆ ಯಾವುದೇ ಹೊಡೆತ ಕೊಡದ ಕಾರಣ ಬೇರೆಲ್ಲಾ ರೈತರಿಗೆ ದೊಡ್ಡ ಹೊಡೆತ ಬಿದ್ದಿದ್ದರೂ ಮಲೆನಾಡಿನ ಅಡಿಕೆ ಬೆಳೆಗಾರರು ಕೊಂಚ ಮಟ್ಟಿಗೆ ನಿರಾಳರಾಗಿದ್ದರು. ಆದರೆ ಈ ವರ್ಷ ಕೇಂದ್ರ ಸರ್ಕಾರ ಭೂತಾನ್ ನಿಂದ ಬರುವ 17,000 ಟನ್ ಅಡಿಕೆಗೆ ಯಾವುದೇ ಆಮದು ಸುಂಕ ವಿಧಿಸದ ಹಿನ್ನೆಲೆಯಲ್ಲಿ ಮಲೆನಾಡಿನ ರೈತ ಸಮುದಾಯ ಕಂಗಾಲಾಗಿ ಹೋಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಂಡ ಕೊರೆಯುವ ರೋಗ, ಮಳೆ ಹೆಚ್ಚಿನ ಕಾರಣಕ್ಕೆ ಬರುವ ಎಲೆ ಚುಕ್ಕೆ ರೋಗ, ಸುಳಿ ಕೊರೆಯುವ ರೋಗ, ಅಡಿಕೆ ಕೊಳೆ ರೋಗದಿಂದ ಬೆಳೆ ಮತ್ತು ಅಡಿಕೆ ಮರಗಳನ್ನೇ ಉಳಿಸಿಕೊಳ್ಳಲು ಹೈರಾಣಾಗಿರುವ ಮಲೆನಾಡಿಗರು ಈಗ ಸರ್ಕಾರದ ಈ ಹೊಡೆತದಿಂದ ಕಂಗೆಟ್ಟಿದ್ದಾರೆ. 2017 ರಲ್ಲಿ ದೇಶದ ರೈತರ ರಕ್ಷಣೆ, ಹಿತ ದೃಷ್ಟಿಯಿಂದ ಪ್ರತಿ ಕೆಜಿ ಹಸಿರು ಅಡಿಕೆ ಆಮದಿನ ಮೇಲೆ ರೂ. 251 ಕನಿಷ್ಠ ಆಮದು ಬೆಲೆ ವಿಧಿಸಿತ್ತು. ನಂತರ 2018 ರಲ್ಲಿ ಪ್ರತಿ ಕಿಲೋಗ್ರಾಂಗೆ 251 ರೂ.ಗಿಂತ ಹೆಚ್ಚು ಬೆಲೆ ಇದ್ದರೆ ಯಾವುದೇ ರೂಪದ ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಸರ್ಕಾರ ಹೇಳಿತ್ತು. ಈ ಮಧ್ಯೆ ಬೆಲೆ ಮಿತಿಗಿಂತ ಕಡಿಮೆ ಇದ್ದಲ್ಲಿ ಆಮದು ಮಾಡಿಕೊಳ್ಳುವಂತಿಲ್ಲ ಎಂದು ನಿಷೇಧ ಹೇರಿತ್ತು.
2006 ರಲ್ಲಿ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದವನ್ನು ಜಾರಿಗೆ ತರಲಾಯಿತು. ಈ ಒಪ್ಪಂದದ ಅಡಿಯಲ್ಲಿ ಒದಗಿಸಲಾದ ಕಡಿಮೆ ಆಮದು ಸುಂಕದ ಲಾಭ ಬಳಸಿಕೊಂಡು ವಿದೇಶಗಳಿಂದ ಹೆಚ್ಚೆಚ್ಚು ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ವಿದೇಶಿ ನೀತಿಯ ಬಗ್ಗೆ ಉತ್ಪಾದಕರು ಮತ್ತು ದಲ್ಲಾಳಿಗಳಿಂದ ತೀವ್ರ ವಿರೋಧ ವ್ಯಕ್ತವಾದರೂ ಅಂತರಾಷ್ಟ್ರೀಯ ನೀತಿ ಹಿನ್ನೆಲೆಯಲ್ಲಿ ಇದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಭಾಗದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಭಾರತಕ್ಕೆ ಕಳ್ಳ ಮಾರ್ಗದಲ್ಲಿ ಕಳಪೆ ಅಡಿಕೆ ವಿದೇಶದಿಂದ ಆಮದಾಗುತ್ತಿದ್ದರಿಂದ ದೇಶೀಯ ಅಡಿಕೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡುಬಂದಿತ್ತು. ಈ ಹೊತ್ತಿನಲ್ಲೇ ಸರ್ಕಾರ ಆಮದು ಸುಂಕವಿಲ್ಲದೇ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಮಲೆನಾಡಿನ ರೈತರಿಗೆ ದೊಡ್ಡ ಹೊಡೆತವೇ ಸರಿ. ಬಿಜೆಪಿ ಸರ್ಕಾರದಿಂದ ಮಲೆನಾಡಿಗರಿಗೆ ಇಷ್ಟು ದೊಡ್ಡ ಹೊಡೆತ ಬಿದ್ದರೂ ಬಿಜೆಪಿ ಆಡಳಿತಕ್ಕೆ ಜೈಕಾರ ಹಾಕುವುದು ಆಶ್ಚರ್ಯ ಮತ್ತು ದುರಂತವೇ ಸರಿ.