Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಾತಿನ ಮಲ್ಲರ ಪಂಚಾಯತಿಕೆ

ಅವರಿಬ್ಬರೂ ಐದೇ ನಿಮಿಷಕ್ಕೆ ಅದೆಷ್ಟೋ ವರ್ಷಗಳಿಂದ ಪರಿಚಿತರೆಂಬಂತೆ ಮಾತಾಡುತ್ತಿದ್ದರು. ಬಸ್‌ನಲ್ಲಿ ಇದ್ದವರಿಗೆ ಒಂದು ರೀತಿ ಬಿಟ್ಟಿ ಸಮಾಚಾರ ಕೇಳಿದ ಭಾವ. ನಮಗೋ ನಮ್ಮ ಚೆಂದದ ನಿದ್ದೆ ಹಾಳಾಯಿತು ಎನ್ನುವ ಕೋಪ. ಅವರು ಯಾರು? ಕುಂದಾಪುರದ ನವ್ಯಶ್ರೀ ಶೆಟ್ಟಿ ಬರೆದಿರುವ ಈ ಬರಹ ಓದಿ…

ನಾವು ನಮ್ಮ ನಿತ್ಯದ ಜೀವನದಲ್ಲಿ ಹಲವು ಬಾರಿ ಭಿನ್ನ ವಿಭಿನ್ನ ಕಥೆಗಳಿಗೆ ಸಾಕ್ಷಿಯಾಗುತ್ತೇವೆ.  ಕಥೆಯೆಂದರೆ ನಾವು ಪುಸ್ತಕದಲ್ಲಿ ಓದುವ ಕಥೆಗಳೋ, ಅಥವಾ ನಮ್ಮ ಕಾಲ್ಪನಿಕ ಕಥೆಗಳೋ ಮಾತ್ರವಲ್ಲ. ನಮ್ಮ ನಿತ್ಯದ ಜೀವನದಲ್ಲಿ ನಡೆಯುವ, ನಮಗೆ ಕೊಂಚ ಭಿನ್ನ ಎನಿಸುವ ಘಟನೆಗಳು ಕೂಡ ಒಂದರ್ಥದಲ್ಲಿ ನನ್ನ ಪ್ರಕಾರ ಕಥೆಗಳೇ. ಕೆಲವೊಮ್ಮೆ ಅಂತಹ ಘಟನೆಗಳೇ ಬರಹ ರೂಪಕ್ಕೆ ಇಳಿದರೆ, ಇನ್ನೂ ಕೆಲವೊಮ್ಮೆ ಅವು ನಮ್ಮ ಮನಸ್ಸಿನಲ್ಲಿಯೇ ಹಾಗೆಯೇ ಅಚ್ಚೊತ್ತಿರುತ್ತವೆ..

ನಿತ್ಯದ ಜೀವನದಲ್ಲಿ ನಮಗೆ ಕೆಲವೊಬ್ಬರು ಕಥೆಯಾದರೆ, ಇನ್ನೂ ಕೆಲವರಿಗೆ ನಾವು ಕಥಾ ವಸ್ತು ಆಗುತ್ತೇವೆ. ಕಥೆಗೆ ಇಂತಹದೇ ಅನ್ನುವ ವ್ಯಾಖ್ಯಾನವಿಲ್ಲ. ಮೂರ್ತರೂಪ ಕೂಡ ಇಲ್ಲ. ಕಥೆಯನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ, ಅದನ್ನು ಹೇಗೆ ವ್ಯಾಖ್ಯಾನಿಸಬೇಕು ಅನ್ನುವುದು ನಮ್ಮ ಇಚ್ಛೆ.

ʼಕಥೆʼ ಈ ಪದವನ್ನು ನಾವು ನಿತ್ಯ ಹಲವು ಬಾರಿ ಉಪಯೋಗಿಸುತ್ತೇವೆ. “ಅವನೊಬ್ಬ ಎಷ್ಟು ಕಥೆ ಹೇಳುತ್ತಾನೆ, “ಕಥೆ ಶುರು ಮಾಡಿದ”  “ಸಾಕು ಮಾರಾಯ್ತಿ ನಿನ್ನ ಕಥೆ” ಇಂತಹ ಸಾಲುಗಳನ್ನು ನಾವು ಹಲವು ಬಾರಿ ಹೇಳಿರುತ್ತೇವೆ. ನಮ್ಮ ಆಡು ಮಾತಿನಲ್ಲಿ ಬರುವ ಕಥೆಗಳು, ನಾವು ಪುಸ್ತಕದಲ್ಲಿ ಓದಿದ ಕಥೆಗಳು ಎಲ್ಲವೂ ಒಂದೇ ರೀತಿಯಲ್ಲ. ಸಾಮಾನ್ಯವಾಗಿ ನಾವು ಆಡುಮಾತಿನಲ್ಲಿ ಹೇಳುವ ಕಥೆ ಎನ್ನುವ ಪದವನ್ನು ‘ಜಾಸ್ತಿ ಮಾತನಾಡುವವರನ್ನು’ ‘ತಮ್ಮ ಬಗ್ಗೆ ಪುರಾಣಗಳನ್ನು ಹೇಳುವವರʼ ಕುರಿತಾಗಿ ಹೇಳುವುದೇ ಜಾಸ್ತಿ. ಇಂತಹ ಕಥೆಗಾರರು ನಮಗೆ ನಿತ್ಯ ಹಲವು ಕಡೆ ಕಾಣ ಸಿಗುತ್ತಾರೆ. ಬಸ್ ಸ್ಟ್ಯಾಂಡ್, ಮಾರ್ಕೆಟ್, ಹೋಟೆಲ್, ಸಮಾರಂಭಗಳಲ್ಲಿ ಇಂತಹ ಕಥೆಗಾರರಿಗೆ ಕಮ್ಮಿಯಿಲ್ಲ.

ಒಮ್ಮೆ ನಡು ಮಧ್ಯಾಹ್ನ ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ಬಸ್ ಹತ್ತಿದ್ದೆ. ಜೂನಿಯರ್ ಅನುಪಮಾ ಕೂಡ ಜೊತೆಗಿದ್ದಳು. ಬಸ್ ಹತ್ತಿದ ಕೂಡಲೇ ನಿದ್ದೆಯ ಮಂಪರು ಆವರಿಸಿತ್ತು. ಆ ಹೊತ್ತಿಗೆ ಹಿಂಬದಿ ಸೀಟಿನಲ್ಲಿ ಕೂತಿದ್ದ ಇಬ್ಬರ ಧ್ವನಿ ರೇಡಿಯೋ ಸ್ಟೇಷನ್ ರೀತಿ ಒಮ್ಮಲೇ ಪಟ ಪಟ ಅಂತ ಆರಂಭವಾಯಿತು. ಒಬ್ಬ ಮಧ್ಯ ವಯಸ್ಸಿನ ಯುವಕ ಹಾಗೂ ಇನ್ನೊಬ್ಬರು 50-60 ರ ಪ್ರಾಯದ ಮಹಿಳೆ. ಬಸ್ ಹತ್ತುವ ಮುನ್ನ ಇಬ್ಬರೂ ಪರಸ್ಪರ ಅಪರಿಚಿತರು. ಆದರೆ ಬಸ್ ಹತ್ತಿದ ಮೇಲೆನೇ ಶುರುವಾಗಿದ್ದು ಅವರಿಬ್ಬರ ಮಾತುಕತೆ, ಪುರಾಣ.

ಎಷ್ಟೋ ಬಾರಿ ನಮಗೆ ಇನ್ನೊಬ್ಬರ ವಿಷಯ ಯಾಕೆ? ನಾವು ತುಂಬಾ ಒಳ್ಳೆಯವರಾಗಬೇಕು ಅಂದುಕೊಳ್ಳುತ್ತೇವೆ. ಆದರೆ, ಇಂತಹ ಕಥೆ ಪುರಾಣ ಬೇಡ ಬೇಡ ಎಂದರೂ ಬಹಳ ಬೇಗ ನಮ್ಮ ಕಿವಿಗೆ ಬಂದು ಬೀಳುತ್ತದೆ. ಅವರಿಬ್ಬರೂ ಐದೇ ನಿಮಿಷಕ್ಕೆ ಅದೆಷ್ಟೋ ವರ್ಷಗಳಿಂದ ಪರಿಚಿತರೆಂಬಂತೆ ಮಾತಾಡುತ್ತಿದ್ದರು. ಮಾತಾಡ್ತಾ ಮಾತಾಡ್ತಾ ಹಳ್ಳಿಯ ಚೆಂದದ ಚಿತ್ರಣ, ಊರು-ಕೇರಿ, ನಂಬಿದ ದೇವರ ಮನೆ, ಆಸ್ತಿ, ಮನೆಯವರು, ಮನೆ ಮಂದಿ, ಹವ್ಯಾಸ, ಅಭ್ಯಾಸ ಎಲ್ಲವೂ ಅವರ ಮಾತು ಕತೆಯಲ್ಲಿ ಬಂದು ಹಾದು ಹೋಗಿತ್ತು. ಬಸ್‌ನಲ್ಲಿ ಇದ್ದವರಿಗೆ ಒಂದು ರೀತಿ ಬಿಟ್ಟಿ ಸಮಾಚಾರ ಕೇಳಿದ ಭಾವ. ನಮಗೋ ನಮ್ಮ ಚೆಂದದ ನಿದ್ದೆ ಹಾಳಾಯಿತು ಎನ್ನುವ ಕೋಪ. ಆದರೂ ಒಂದು ರೀತಿ ಮಧ್ಯಾಹ್ನದ ಮನೋರಂಜನೆಯಲ್ಲಿ ಗಂಟೆಗಳ ಹಾದಿ ಕ್ರಮಿಸಿದ್ದೂ ಗೊತ್ತಾಗಿಲ್ಲ! ಗಂಟೆಯಾದರೂ ಅವರ ಕಥೆ ನಿಂತಿರಲಿಲ್ಲ ಅನ್ನುವುದು ಬೇರೆ ಮಾತು.

ಇಂತಹ ಹಲವಾರು ಕಥೆಗಾರರು ನಮಗೆ ನಿತ್ಯ ಕಾಣ ಸಿಗುತ್ತಾರೆ. ಎಲ್ಲರನ್ನೂ ನೆನಪಿನಲ್ಲಿಟ್ಟುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಇಂತಹ ಕೆಲವು ಘಟನೆಗಳು ಎಂದಿಗೂ ನೆನಪಿನಲ್ಲಿ ಉಳಿದು ಬಿಡುತ್ತವೆ. ಇಂತಹ ಘಟನೆಗಳು ಹೆಚ್ಚಾಗಿ ಕಂಡು ಬರುವುದು ಹಳ್ಳಿಯ ಭಾಗಗಳಲ್ಲಿ. ಕೆಲವೊಮ್ಮೆ ಕಿರಿ ಕಿರಿಯಾದರೂ, ಹಳ್ಳಿಯ ಮುಗ್ಧ ಮನಸ್ಸುಗಳ ಈ ಮಾತು ಕೇಳುವುದೇ ಚೆಂದ. ತಮ್ಮ ಅಕ್ಕ ಪಕ್ಕ ಯಾರಿದ್ದಾರೆ ಅನ್ನುವ ವಿಷಯ ಅವರಿಗೆ ಅಷ್ಟೇನೂ ದೊಡ್ಡ ಸಂಗತಿಯಲ್ಲ. ನಮ್ಮ ಜೊತೆ ಮಾತನಾಡುವವರ ಜೊತೆ ನಾವು ಮಾತನಾಡಬೇಕು ಎನ್ನುವುದಷ್ಟೇ ಅವರಿಗೆ ಗೊತ್ತು. ಅದು ಅವರ ಒಳ್ಳೆಯತನ. ನಾವು ಕೂಡ ಸಮಯ ಸಿಕ್ಕಾಗ ಇಂತಹ ಹಳ್ಳಿಯ ಜೀವಗಳ ಜೊತೆ ಮಾತನಾಡಬೇಕು. ಅವರ ಜೊತೆ ಮಾತನಾಡುತ್ತಾ ಹೋದಂತೆ ನಮಗೂ ಒಳ್ಳೆಯ ಕಥೆಗಳು ಸಿಗಬಹುದು. ಹಾಗಂದ ಮಾತ್ರಕ್ಕೆ ಪೊಳ್ಳು ಮಾತುಗಳನ್ನಾಡುವುದಲ್ಲ. 

ಪರಸ್ಪರ ಸಂವಹನ ನಮ್ಮ ಜೀವನದ ಬಹುಮುಖ್ಯ ಭಾಗ. ಪರಿಚಿತರು ಅಪರಿಚಿತರಾಗುವುದು, ಅಪರಿಚಿತರು ಪರಿಚಿತರಾಗುವುದು ಹಲವು ಬಾರಿ ನಮ್ಮ ಮಾತುಗಳಿಂದ. ಹಾಗಾಗಿ ನಾವಾಡುವ ಮಾತು ಕೆಲವೊಮ್ಮೆ ಮಹತ್ವದ ಸ್ಥಾನ ವಹಿಸುತ್ತದೆ. ಮನುಷ್ಯ ಸಂಘ ಜೀವಿ. ನಾವು ಸಮಾಜದ ಜೊತೆಗೆ ನಂಟು ಬೆಸೆದುಕೊಂಡು ಬೆಳೆದು ಬಂದಿದ್ದೇವೆ. ಈ ಹಾದಿಯಲ್ಲಿ ಹಲವರ ಪರಿಚಯವಾಗುತ್ತದೆ.  ಕೆಲವರು ಸದಾ ನೆನಪಿನಲ್ಲಿ ಉಳಿಯುವವರು, ಇನ್ನೂ ಕೆಲವರು ಅರೆ ಕ್ಷಣಕ್ಕೆ ನೆನಪಿನಿಂದ ಮರೆಯಾಗುವವರು. ಆದರೆ ಎಲ್ಲರನ್ನೂ ಸಂಧಿಸುವುದು ನಮ್ಮ ಮಾತುಗಳು.

ಎಲ್ಲರೂ  ಮಾತಿನ ಮಲ್ಲರು. ಕೆಲವರು ಆತ್ಮೀಯರ ಜೊತೆ ಮಾತ್ರ ಮಾತನಾಡುತ್ತಾರೆ. ವಿಷಯಗಳನ್ನು ಹಂಚಿಕೊಂಡು, ತಮ್ಮವರ ಮಾತುಗಳಿಗೆ ಕಿವಿಯಾಗುತ್ತಾರೆ. ಇನ್ನೂ ಕೆಲವರು ಪರಿಚಯ ಇರದಿದ್ದರೂ ಮಾತನಾಡಿ ಸ್ನೇಹ ಸಂಪಾದನೆ ಮಾಡುತ್ತಾರೆ. ಹೊಸ ಕಥೆಗಳನ್ನು ಆಲಿಸಿ ಖುಷಿಯಾಗುತ್ತಾರೆ.

ಅತಿಯಾದ ಮೌನ ನಮಗೆ ಕೆಲವೊಮ್ಮೆ ಅಸಹನೀಯ. ಅದೇ ರೀತಿ ಅತಿಯಾದ ಮಾತು ಕೂಡ. ವಟ ವಟ ಮಾತನಾಡುವವರು ಕೆಲವೊಮ್ಮೆ ನಮಗೆ ಕಿರಿ ಕಿರಿ ಅನಿಸಬಹುದು. ಇನ್ನೂ ಕೆಲವೊಮ್ಮೆ ಅವರ ಮಾತುಗಳು ನಮ್ಮಲ್ಲಿ ಏನೋ ಒಂದು ಹೊಸ ಬದಲಾವಣೆಗೆ ನಾಂದಿ ಕೂಡ ಹಾಡಬಹುದು. ಹಾಗಾಗಿ ನಮ್ಮ ಮಾತಿಗೆ ಅದೇನೋ ಶಕ್ತಿಯಿದೆ. ನಮ್ಮ ಮಾತು ಮಾಧುರ್ಯದಂತೆ ಇರಬೇಕು. ಇನ್ನೊಬ್ಬರಿಗೆ ತೊಂದರೆ ಕೊಡುವ ಮಟ್ಟಿಗೆ ಅದು ಇರಬಾರದು. ಮಾತಿನ ಮಲ್ಲರ ಪಂಚಾಯತಿಕೆ ಯಾವತ್ತೂ ಅರ್ಥಪೂರ್ಣ ಮಾತುಗಳ ವೇದಿಕೆಯಾಗಿರಬೇಕೇ ಹೊರತು ಗಾಸಿಪ್‌ಗಳದ್ದಲ್ಲ ಎಂಬುದು ಬಹಳ ಮುಖ್ಯ.

ನವ್ಯಶ್ರೀ ಶೆಟ್ಟಿ

ಉಡುಪಿಯ ಎಂ ಜಿ ಎಮ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪೂರೈಸಿ ಇದೀಗ ಬರವಣಿಗೆಯತ್ತ ಹೆಜ್ಜೆ ಇಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು