Wednesday, June 19, 2024

ಸತ್ಯ | ನ್ಯಾಯ |ಧರ್ಮ

ನವೆಂಬರ್‌ 6ಕ್ಕೆ ʼಮಾಧ್ಯಮ ಆತ್ಮಾವಲೋಕನ ಮತ್ತು ಜಾಗೃತಿ ಸತ್ಯಾಗ್ರಹʼ ಕಾರ್ಯಕ್ರಮ

ಬೆಂಗಳೂರು: ಮಾಧ್ಯಮ ಭ್ರಷ್ಟಾಚಾರದ ಸತ್ಯ ಮಿಥ್ಯಗಳ ಕುರಿತು ಪ್ರಬುದ್ಧ ಮನಸ್ಸು,ಪ್ರಬುದ್ಧ ಸಮಾಜ ವೇದಿಕೆ ವತಿಯಿಂದ ದಿನಾಂಕ 06-11-22 ರಂದು ಚರ್ಚೆ–ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಿವೇಕಾನಂದ ಹೆಚ್‌ ಅವರು, ಇತ್ತೀಚಿನ ದಿನಗಳಲ್ಲಿ ನಾವುಗಳು ಕಂಡಂತೆ ಸುದ್ದಿ ಮಾಧ್ಯಮಗಳೇ ಸುದ್ದಿಯಾಗಿವೆ. ಹೀಗಾಗಿ ಸಾರ್ವಜನಿಕರು ಇದಕ್ಕೆ ಪ್ರತಿಕ್ರಿಯಿಸಲೇ ಬೇಕಾದಂತಹ ಸಂದರ್ಭ ಹುಟ್ಟಿಕೊಂಡಿದೆ ಎಂದು ತಿಳಿಸಿದ್ದಾರೆ. ಭಾನುವಾರದಂದು, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಸಂವಾದ ನಡೆಯಲಿದ್ದು, ಚರ್ಚೆಯಲ್ಲಿ ಎಲ್ಲಾ ಕ್ಷೇತ್ರಗಳ, ಎಲ್ಲಾ ವರ್ಗಗಳ, ಎಲ್ಲಾ ವಯಸ್ಸಿನವರು ಕೂಡ ಭಾಗವಹಿಸಬಹುದು ಎಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯ ಸೋಗಿನಲ್ಲಿ ಲಕ್ಷಗಟ್ಟಲೆ ನಗದು ಹಣ ನೀಡಿರುವ ಸಂಗತಿ ಬಯಲಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮ ಕ್ಷೇತ್ರದ ಭ್ರಷ್ಟಾಚಾರದ ಕುರಿತು ಅಲ್ಲಲ್ಲಿ ಚರ್ಚೆ ನಡೆಯುತ್ತಿದೆ. ಈ ಭ್ರಷ್ಟಾಚಾರ ಹಗರಣವನ್ನು ʻಪೀಪಲ್‌ ಮೀಡಿಯಾʼ ಬಯಲು ಮಾಡಿದ ಬಳಿಕ ಲೋಕಾಯುಕ್ತದಲ್ಲಿ ಸಹ ದೂರು ದಾಖಲಾಗಿದೆ.

ʼಸಮಾಜದ ಎಲ್ಲ ರಂಗಗಳ ಭ್ರಷ್ಟಾಚಾರದ ಕುರಿತು ಮಾತನಾಡುವ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಕೂಡ ಸಮಾಜಕ್ಕೆ ಲೆಕ್ಕ ಕೊಡಬೇಕುʼ ಎಂಬ ನಿಟ್ಟಿನಲ್ಲಿ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ವೇದಿಕೆ ಈ ಕಾಯ್ರಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಆಯೋಜಕರಾದ ಎಂ. ಯುವರಾಜ್. +91 80508 02019, ವಿವೇಕಾನಂದ ಎಚ್.ಕೆ. 9844013068 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು