Home ಜನ-ಗಣ-ಮನ ಧರ್ಮ- ಸಂಸ್ಕೃತಿ ಕೊಲೆ ಆರೋಪಿ ಪರವಾಗಿ ಕಲಾಪ ಹಾಳುಗೆಡವಲು ಬಿಜೆಪಿ ಸದಸ್ಯರ ಪ್ರಯತ್ನ, ಸಚಿವ ಕೃಷ್ಣಬೈರೇಗೌಡ ಆಕ್ರೋಶ

ಕೊಲೆ ಆರೋಪಿ ಪರವಾಗಿ ಕಲಾಪ ಹಾಳುಗೆಡವಲು ಬಿಜೆಪಿ ಸದಸ್ಯರ ಪ್ರಯತ್ನ, ಸಚಿವ ಕೃಷ್ಣಬೈರೇಗೌಡ ಆಕ್ರೋಶ

0

ಗೋರಕ್ಷಣೆ ಹೆಸರಿನಲ್ಲಿ ಕೊಲೆ, ಹಲ್ಲೆ, ಶಾಂತಿಗೆ ಧಕ್ಕೆ, ಜೀವ ಬೆದರಿಕೆ, ದೊಂಬಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಪುಡಿರೌಡಿ ಹಾಗೂ ಇದ್ರಿಷ್ ಪಾಷಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಪರವಾಗಿ ಬಿಜೆಪಿ ನಾಯಕರು ಸದನದ ಕಲಾಪ ಹಾಳುಗೆಡವಲು ಪ್ರಯತ್ನಿಸಿದ ಪ್ರಸಂಗಕ್ಕೆ ಈ ದಿನದ ವಿಧಾನ ಪರಿಷತ್ ಕಲಾಪ ಸಾಕ್ಷಿಯಾಯಿತು.

ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಎಂಬ ವ್ಯಕ್ತಿಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ಅಧಿಕಾರಿಗಳು ಇತ್ತೀಚೆಗೆ ನೋಟೀಸ್ ಜಾರಿ ಮಾಡಿ, ‘ಮೆಜೆಸ್ಟಿಕ್ ಬಳಿ ಇರುವ ನಾಗರ ಕಟ್ಟೆಗೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವಂತೆ’ ಸೂಚಿಸಲಾಗಿತ್ತು.

ಆತನಿಗೆ ನೋಟಿಸ್ ಜಾರಿ ಮಾಡಿದ್ದರ ಬಗ್ಗೆ ಹಾಗೂ ಆತನಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿ ಆಗಲು ಅನುಮತಿ ನೀಡಬೇಕು ಎಂದು ಬಿಜೆಪಿ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದಾರೆ.

ಬುಧವಾರ ವಿಧಾನ ಪರಿಷತ್ ಶೂನ್ಯ ವೇಳೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಪ್ರಕರಣ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, “ಪುನೀತ್ ಕೆರೆಹಳ್ಳಿ ಹಿಂದೂ ದೇವರಿಗೆ ಕೈಮುಗಿಯಲು ಪೋಲಿಸರ ಅನುಮತಿ ಪಡೆಯಬೇಕೆ?” ಎಂದು ಆಕ್ರೋಶ ಹೊರಹಾಕಿದರು. ಹಾಗೆಯೇ ಸರ್ಕಾರ ಇದಕ್ಕೆ ಉತ್ತರಿಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಸರ್ಕಾರದ ಪರವಾಗಿ ಉತ್ತರ ನೀಡಲು ಮುಂದಾದ ಸಚಿವ ಕೃಷ್ಣಭೈರೇಗೌಡ ಅವರು, “ಈ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ.‌ ಸಂಬಂಧಿಸಿ ಅಧಿಕಾರಿಯಿಂದ ಮಾಹಿತಿ ಪಡೆದು ಎರಡು ದಿನಗಳಲ್ಲಿ ಸದನಕ್ಕೆ ಉತ್ತರ ನೀಡಲಾಗುವುದು” ಎಂದು ಸ್ಪಷ್ಟೀಕರಣ ನೀಡಿದರು.

ಆದರೆ ಇಷ್ಟಕ್ಕೆ ಸುಮ್ಮನಾಗದ ವಿರೋಧ ಪಕ್ಷದ ನಾಯಕರು ಈಗಲೇ ನಮಗೆ ಉತ್ತರ ಬೇಕು‌ ಎಂದು ಪಟ್ಟುಹಿಡಿದರು. ಈ ವೇಳೆ ಸದನದ ನೀತಿ ನಿಯಮಗಳನ್ನು ಉಲ್ಲೇಖಿಸಿದ ಕೃಷ್ಣಭೈರೇಗೌಡ ” ಸದನದ ನಿಯಮ 51ಡಿ ಪ್ರಕಾರ ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಎರಡು ದಿನಗಳ ಅವಕಾಶ ಇದೆ. ವಿರೋಧ ಪಕ್ಷದ ನಾಯಕರು ದಯವಿಟ್ಟು ನಿಯಮಗಳ ಅನುಸಾರ ಕಲಾಪ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಭಾಪತಿಗಳಾದ ಬಸವರಾಜ ಹೊರಟ್ಟಿ ಸಹ ಸಚಿವ ಕೃಷ್ಣಭೈರೇಗೌಡ ಅವರ ಮಾತಿಗೆ ದನಿಗೂಡಿಸಿದರು. ಬಿಜೆಪಿಗರು ಗದ್ದಲ ಎಬ್ಬಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ಸೂಚಿಸಿದರು.

ಸಭಾಪತಿಗಳ ಮಾತಿಗೂ ಕಿವಿಗೊಡದ ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಸಚಿವರು ಈಗಲೇ ಉತ್ತರ ನೀಡಬೇಕು ಎಂದು ಪಟ್ಟುಹಿಡಿದರು. ಸದನದಲ್ಲಿ ಗದ್ದಲ ಉಂಟಾಗಿತ್ತು.

ಈ ವೇಳೆ ವಿರೋಧ ಪಕ್ಷದ ಸದಸ್ಯರ ವರ್ತನೆಯ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣಭೈರೇಗೌಡ, ” ನಿಮಯದ ಅನುಸಾರ ಎರಡು ದಿನಗಳಲ್ಲಿ ಉತ್ತರ ನೀಡುವುದಾಗಿ ಹೇಳಿದರೂ ವಿರೋಧ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ರಾಜ್ಯವನ್ನು ಲೂಟಿ ಮಾಡುವುದು, ಜನಸಾಮಾನ್ಯರಿಗೆ ಅನ್ಯಾಯ ಮಾಡುವುದು ಮತ್ತು ಅನವಶ್ಯಕ ಕೂಗಾಟಗಳ ಮೂಲಕ ಸದನ ಕಲಾಪದ ಸಮಯ ವ್ಯರ್ಥ ಮಾಡುವುದೊಂದೆ ಬಿಜೆಪಿ ನಾಯಕರ ಕೆಲಸ ಎಂದು ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದರು.

ಮುಂದುವರಿದು “ಇವರಿಗೆ ಸದನ ನಡೆಯುವುದು ಅಗತ್ಯವಿಲ್ಲ. ರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ ಮಾಡುವುದೊಂದೇ ಇವರ ಗುರಿ. ಇವರು ಏನೇ ಗದ್ದಲ ಎಬ್ಬಿಸಿದರು ಸತ್ಯವೇನು? ಎಂಬುದು ಜನರಿಗೆ ಗೊತ್ತು” ಎಂದು ವಾಗ್ದಾಳಿ ನಡೆಸಿದರು.

You cannot copy content of this page

Exit mobile version