Home ದೇಶ ‘ಗಂಗಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ, ನೀವು ಸ್ವರ್ಗಕ್ಕೆ ಹೋಗುತ್ತೀರಿ’ – ನೆರೆ ಸಂತ್ರಸ್ತರ ಕುರಿತು ಬೇಜವಾಬ್ದಾರಿ...

‘ಗಂಗಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ, ನೀವು ಸ್ವರ್ಗಕ್ಕೆ ಹೋಗುತ್ತೀರಿ’ – ನೆರೆ ಸಂತ್ರಸ್ತರ ಕುರಿತು ಬೇಜವಾಬ್ದಾರಿ ಮಾತುಗಳನ್ನಾಡಿದ ಸಚಿವ

0

ಲಕ್ನೋ: ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿರುವುದು ಮತ್ತು ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರನ್ನು ಸಮಾಧಾನಪಡಿಸುವ ಬದಲು, ಉತ್ತರ ಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಯುಪಿ ಸಚಿವ ಸಂಜಯ್ ನಿಷಾದ್ ಅವರ ಮುಂದೆ ಸಂತ್ರಸ್ತರು ತಮ್ಮ ಕಷ್ಟಗಳನ್ನು ತೋಡಿಕೊಂಡಿದ್ದಾರೆ. ಪ್ರವಾಹದಿಂದಾಗಿ ಮನೆಗಳು ನಾಶವಾಗಿವೆ, ಎಲ್ಲವೂ ಜಲಾವೃತಗೊಂಡಿದೆ, ಎಲ್ಲಿಗೆ ಹೋಗಬೇಕೆಂದು ತಿಳಿಯುತ್ತಿಲ್ಲ ಎಂದು ಗೋಳಾಡಿದ್ದಾರೆ.

ಸಂತ್ರಸ್ತರ ಕಷ್ಟಗಳನ್ನು ಕೇಳಿದ ನಂತರವೂ ಸಚಿವ ಸಂಜಯ್ ನಿಷಾದ್ ನಿರ್ಲಕ್ಷ್ಯದ ಧೋರಣೆ ತೋರಿ, “ಗಂಗಮ್ಮ ತನ್ನ ಮಕ್ಕಳ ಪಾದಗಳನ್ನು ತೊಳೆಯಲು ಬಂದಿದ್ದಾಳೆ. ಆ ಗಂಗೆಯ ದರ್ಶನದಿಂದ ಮಕ್ಕಳು ಸ್ವರ್ಗಕ್ಕೆ ಹೋಗುತ್ತಾರೆ. ಪ್ರತಿಪಕ್ಷಗಳು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮಾತುಗಳನ್ನು ಕೇಳಿ ಸಂತ್ರಸ್ತರು ಆಘಾತಕ್ಕೊಳಗಾದರು. ಸಚಿವರ ಈ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಿಷಾದ್ ಅವರ ಪಕ್ಷವು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಪಾಲುದಾರನಾಗಿದ್ದು, ಸಂಜಯ್ ನಿಷಾದ್ ಅವರು ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಪ್ರಸ್ತುತ, ಆಗ್ರಾ, ಚಿತ್ರಕೂಟ ಮತ್ತು ಲಖಿಂಪುರ ಖೇರಿ ಸೇರಿದಂತೆ ಸುಮಾರು 17 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಗಂಗಾ ಮತ್ತು ಯಮುನಾ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆದಾಗ್ಯೂ, ನಂತರ ಸಚಿವರು ಸಂತ್ರಸ್ತರಿಗೆ ಪರಿಹಾರ ವಿತರಿಸಿದ್ದಾರೆ.

You cannot copy content of this page

Exit mobile version